ಮಂಗಳೂರು: ಮಾತಾ ಅಮೃತಾನಂದಮಯಿ ಮಠದ ಅಮೃತ ಸಂಸ್ಕೃತಿ ಮತ್ತು ಶ್ರೇಷ್ಠತಾ ಕೇಂದ್ರದ ವತಿಯಿಂದ ಜರಗಿದ ಯುವ ಸಾಹಿತ್ಯ ಸಮ್ಮೇಳನದ ಸಮಾರೋಪ ಕಾರ್ಯಕ್ರಮವು ದಿನಾಂಕ 13 ರಂದು ಅಮೃತೇಶ್ವರಿ ಸಭಾಂಗಣದಲ್ಲಿ ಜರುಗಿತು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಪ್ರೊ. ಎಂ. ಬಿ. ಪುರಾಣಿಕ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಯುವಜನರನ್ನು ಉದ್ದೇಶಿಸಿ ಮಾಡಲಾದ ಈ ಸಾಹಿತ್ಯ ಸಮ್ಮೇಳನ ಒಂದು ಹೊಸ ಪ್ರಯತ್ನ ಎಂದರು.
ಮಠದ ಮುಖ್ಯಸ್ಥರಾದ ಸ್ವಾಮಿನಿ ಮಂಗಳಾಮೃತ ಪ್ರಾಣ ಇವರ ಉಪಸ್ಥಿತಿಯಲ್ಲಿ ಸಮಾರೋಪ ಭಾಷಣ ಮಾಡಿದ ಮಂಗಳೂರಿನ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಅಧ್ಯಕ್ಷರಾದ ಡಾ.ಜ್ಯೋತಿ ಚೇಳ್ಯಾರು ಸಮಾರೋಪದ ನುಡಿಗಳೊಂದಿಗೆ ವಿದ್ಯಾರ್ಥಿಗಳಿಗೆ ಸಾಹಿತ್ಯಾಸಕ್ತಿ ಬೆಳೆಸಲು ಕರೆಯಿತ್ತರು. ಓದುವ ಮತ್ತು ಬರೆಯುವ ಅಭ್ಯಾಸದಿಂದ ಆರೋಗ್ಯ ಪೂರ್ಣ ಮನಸ್ಸು ಹೊಂದಲು ಸಹಕಾರಿ ಎಂದರು. ಹಲವರ ಕಾವ್ಯದ ವಸ್ತು ಅಮ್ಮ, ಬರಹಗಳ ಮೂಲಕ ಪ್ರೀತಿ, ಕರುಣೆ ಮತ್ತು ಶಾಂತಿ ವ್ಯಕ್ತಪಡಿಸಲಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ವಸಂತಕುಮಾರ ಪೆರ್ಲರವರು ಇಡೀ ದಿನ ಜರುಗಿದ ಕಾರ್ಯಕ್ರಮದಲ್ಲಿ ಯುವ ವಿದ್ವಾಂಸರು ಅತ್ಯುತ್ತಮವಾಗಿ ವಿಷಯ ಮಂಡನೆ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯುವಜನರ ಬರವಣಿಗೆಯಲ್ಲಿ ವಸ್ತು, ನೋಟ ಮತ್ತು ನಿರೂಪಣೆಯಲ್ಲಿ ಹೊಸತನ ಕಾಣಿಸುತ್ತಿದೆ. ಸಾಹಿತ್ಯವು ಅನೇಕರ ಪಾಲಿಗೆ ಜೀವನದಲ್ಲಿ ಶ್ರೇಷ್ಠ ಸ್ಥಾನಮಾನಗಳನ್ನು ಕಲ್ಪಿಸಿಕೊಟ್ಟ ಮಾಧ್ಯಮ ಎಂದರು.
ಸದಸ್ಯ ಪ್ರವೀಣ್ ಚಂದ್ರ ಶರ್ಮ ಸ್ವಾಗತಿಸಿದರು, ಡಾ.ದೇವದಾಸ್ ಪುತ್ರನ್ ವಂದಿಸಿದರು. ಸಂಚಾಲಕಿ ವೀಣಾ ಟಿ ಶೆಟ್ಟಿ ನಿರೂಪಣೆ ಮಾಡಿದರು. ವೇದಿಕೆಯಲ್ಲಿ ಡಾ.ಬಾಲಕೃಷ್ಣ ಭಾರದ್ವಾಜ್ ಉಪಸ್ಥಿತರಿದ್ದರು. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳು ಮತ್ತು ಯುವಜನರು ಭಾಗವಹಿಸಿದ್ದರು. ಅಮೃತ ವಿದ್ಯಾಲಯಂ ಶಿಕ್ಷಕರು, ಸಿಬ್ಬಂದಿ ವರ್ಗದವರು ಶಿಬಿರದ ಯಶಸ್ಸಿಗೆ ಶ್ರಮಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ