ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆ
ಕನ್ನಡಕೆ ಕೊರಳೆತ್ತು ಪಾಂಚಜನ್ಯ
ಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸು
ಕನ್ನಡವೆ ಚೆನ್ನುಡಿಯು ಲಕ್ಷ್ಮಿದೇವಿ...
ಈ ಮೇಲಿನ ಮುಕ್ತಕದಂತೆ ನಮ್ಮ ಕನ್ನಡವನ್ನು ನಾವೇ ಉಳಿಸುವ ಕಾರ್ಯ ಮಾಡಬೇಕಿದೆ. ಕನ್ನಡಕ್ಕೆ ಕೈ ಎತ್ತು ಗೌರಿ ಶಿಖರದ ಹಾಗೆ ಕನ್ನಡಕ್ಕೆ ಕೊರಳೆತು ಪಾಂಚಜನ್ಯ ನಮ್ಮ ಕನ್ನಡವನ್ನು ನೆನೆಯುತ್ತಾ ಕನ್ನಡ ಬಗ್ಗೆ ಕೈ ಮುಗಿದು ನಮಿಸಬೇಕಿದೆ. ಕನ್ನಡವೇ ಚೆನ್ನುಡಿಯು ಎಂದು ದೇವರಿಗೆ ಕೈಮುಗಿಯುವುದು ಮುಖ್ಯ. ಪ್ರತಿಯೊಬ್ಬರೂ ಕನ್ನಡವನ್ನು ಉಳಿಸುತ, ಬೆಳೆಸುತ ಕಾರ್ಯವನ್ನು ಮಾಡಬೇಕಿದೆ. ಜನಸಾಮಾನ್ಯರ ಜೀವನದಲ್ಲಿ ಕೆಲಸ ಎಂಬುದು ಬಹಳ ಮುಖ್ಯ. ಇಂತಹ ಕೆಲಸವನ್ನು ಪಡೆಯಬೇಕಾದರೆ ಅನ್ಯ ಭಾಷೆಗಳಲ್ಲಿ ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ಕಲಿತಿರಬೇಕು. ಇಲ್ಲದಿದ್ದರೆ ಕೆಲಸವೇ ಸಿಗದಿರುವ ಪರಿಸ್ಥಿತಿ ಇದೆ. ನಮ್ಮ ಮಾತೃಭಾಷೆ ಕನ್ನಡವನ್ನು ಪ್ರಾಮುಖ್ಯತೆ ನೀಡದಿರುವುದು ಈ ವಿಷಯದಲ್ಲಿ ನಾವು ನೋಡಬಹುದು. ದಯಮಾಡಿ ಕನ್ನಡಕ್ಕೆ ಪ್ರಾಮುಖ್ಯತೆಯನ್ನು ನೀಡಿ. ನಮ್ಮ ಸರ್ಕಾರ ಕನ್ನಡ ಮಾಧ್ಯಮದಲ್ಲಿ ಓದಿದಂತಹ ಮಕ್ಕಳಿಗೆ ಹಲವಾರು ವ್ಯವಸ್ಥೆಯನ್ನು ಮಾಡುತ್ತಿದೆ. ಅಂತಹದ್ದನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿದೆ.
"ಉಳಿದೆಲ್ಲ ಭಾಷೆಗಿಂತಲು ಕನ್ನಡವೆ ಅಂಟು
ಬಳುವಳಿಯ ನೀಡೆ ಸಂಸ್ಕೃತದ ಗಂಟು
ಕಳವಳವ ಪಡಬೇಡ ಜ್ಞಾನ ಪೀಠವು ಎಂಟು
ಕಳಸ ಹಿಡಿದರೆ ನಂಟು ಲಕ್ಷ್ಮಿ ದೇವಿ"...
ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡವೇ ನಮಗೆ ಅಂಟು. ನಮಗೆ ಬಳುವಳಿಯಾಗಿ ನೀಡುತ್ತಿದೆ ಈ ಸಂಸ್ಕೃತದ ಗಂಟು. ಯಾರು ಯಾವಾಗಲೂ ಸಹ ಗೊಂದಲಮಯವಾಗಿ ಗೊಂದಲಕ್ಕೆ ಒಳಗಾಗದೆ. ನಮ್ಮ ಜ್ಞಾನಪೀಠ ಎಂಟು ಎಂಬುದನ್ನು ನೆನೆಯಬೇಕಿದೆ. ಕಳಸ ಹಿಡಿದರೆ ಬಹಳಷ್ಟು ಹತ್ತಿರದ ನಂಟಾಗುತ್ತದೆ. ಅದಕ್ಕೆ ನಮ್ಮ ಕನ್ನಡಿಗರ ಹೊಂದಾಣಿಕೆ ಬೇಕಾಗಿದೆ.
ಕನ್ನಡದ ಕಂಪನ್ನು ಬೀರುವ ಪ್ರತಿಯೊಬ್ಬರು ಕನ್ನಡಮ್ಮನ ಮಕ್ಕಳೇ, ಕನ್ನಡದ ಕಸ್ತೂರಿ ಕರುನಾಡ ಕುವರರು ನಮ್ಮ ಕನ್ನಡವನ್ನು ಉಳಿಸುವಂತಹ ಕಾರ್ಯವನ್ನು ಮಾಡಬೇಕಿದೆ. ಮಾತೃಭಾಷೆ ಕನ್ನಡ, ನಾವು ಆಡುವ ಮಾತು ಕನ್ನಡ, ನಾವಿರುವುದು ಕನ್ನಡ ನಾಡಿನಲ್ಲಿ ಅಂದಮೇಲೆ ಜೀವನವನ್ನು ಸಾಗಿಸುವುದು ತಾಯಿ ಕನ್ನಡಾಂಬೆಯ ಆಶೀರ್ವಾದದಿಂದ ತಾನೇ ನನ್ನೊಲವ ಕನ್ನಡವನ್ನು ಮರೆತರೆ ನನಗೆ ಒಳಿತಾಗುವುದೇನು. ಕನ್ನಡದ ಕಂಪನ್ನು ಬೀಸುವ ಕೆಲಸವನ್ನು ಕನ್ನಡ ಕಲಿಸುವುದರ ಮುಖಾಂತರ, ಕನ್ನಡವನ್ನು ಬರೆಯಲು ತಿಳಿಸುವ ಮುಖಾಂತರ ಕನ್ನಡದ ಫಲಕಗಳನ್ನು ಹಾಕುವುದರ ಮುಖಾಂತರ, ನಮ್ಮ ಮನಸ್ಸು ಒಳ್ಳೆಯ ಕಾರ್ಯ ಮಾಡಲು ದಾರಿ ತೋರುತ್ತದೋ ಹಾಗೆ ಕನ್ನಡವನ್ನು ಉಳಿಸುವ ಕಾರ್ಯವನ್ನು ಮಾಡಬೇಕಿದೆ. ಪ್ರತಿಯೊಬ್ಬರಿಗೂ, ಪ್ರತಿಯೊಂದು ಮಗುವಿಗೂ ಕನ್ನಡವನ್ನು ಕಲಿಸುವಂತಹ ಕೆಲಸ ಮಾಡಬೇಕು.
ಕನ್ನಡವನ್ನು ಎಲ್ಲರೂ ತಿಳಿದಂತೆ ದಕ್ಷಿಣ ಭಾರತದ ಪ್ರತಿಯೊಂದು ಕಡೆಯೂ ಕನ್ನಡ ಭಾಷೆಯನ್ನು ಮಾತನಾಡಿಸುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯವನ್ನು ಘೋಷಣೆ ಮಾಡಬೇಕೆಂದು ಅರಿತು ಘೋಷಣೆ ಮಾಡಿದ ದಿನವನ್ನು ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವ ದಿನವೆಂದು ಆಚರಿಸುತ್ತೇವೆ. ಆ ದಿನವನ್ನು ಕನ್ನಡ ರಾಜ್ಯೋತ್ಸವಕ್ಕಾಗಿ ಸರ್ಕಾರಿ ರಜೆಯನ್ನು ನೀಡುವಂತೆ ತಿಳಿಸಿದ್ದಾರೆ. ಕನ್ನಡಿಗರು ಇದನ್ನು ಬಹಳ ವಿಜೃಂಭಣೆಯಿಂದ ವಿಶ್ವದಾದ್ಯಂತ ಆಚರಿಸುವ ದಿನವಾಗಿದೆ. ನಾವು ಎಂದೆಂದಿಗೂ ನವೆಂಬರ್ 1 ದಿನದಂದು ಕನ್ನಡವನ್ನು ನೆನೆದು ತೋರಿಕೆಗೆ ಕನ್ನಡ ರಾಜ್ಯೋತ್ಸವ ಆಚರಿಸದೆ. ನಮಗೆ 1956 ರಲ್ಲಿ ದಕ್ಷಿಣ ಭಾರತದ ಎಲ್ಲಾ ಕನ್ನಡ ಭಾಷೆಯ ಮಾತನಾಡುವ ಪ್ರದೇಶಗಳನ್ನು ಒಂದುಗೂಡಿಸಿ ಕರ್ನಾಟಕ ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಪದ್ಧತಿ ಬಂದಿತು ಎಂಬುದು ಪ್ರತಿಯೊಬ್ಬರಿಗೂ ತಿಳಿದಂತಹ ವಿಷಯವಾಗಿದೆ. ನಾವು ಎಂದಿಗೂ ನಂಬರ್ 1 ಕನ್ನಡಿಗರಾಗಬೇಕೆ ಹೊರತು, ಕನ್ನಡ ರಾಜ್ಯೋತ್ಸವ ದಿನದಂದು ಮಾತ್ರ ನವೆಂಬರ್ ಒಂದರ ದಿನದಂದು ಆಚರಣೆ ಮಾಡಿ, ಕನ್ನಡಿಗರೆಂದು ಹೇಳಿಕೊಳ್ಳುವುದು ಸರಿಯಲ್ಲ. ಪ್ರತಿಯೊಂದು ದಿನವು ನಮ್ಮ ಕನ್ನಡಕ್ಕೆ ನಾವು ಸೇವೆಯನ್ನು ಸಲ್ಲಿಸುವಂತಹ ಮನೋಭಾವವನ್ನು ಒಳಗೊಂಡಿರಬೇಕು. ನಮ್ಮ ಕರ್ನಾಟಕದ ಏಕೀಕರಣಕ್ಕೆ ಮನ್ನಣೆಯನ್ನು ನೀಡಿ ಹಲವಾರು ಸಾಹಿತಿಗಳು ತಮ್ಮದೇ ಆದಂತಹ ಸೇವೆಗಳನ್ನು ಸಲ್ಲಿಸಿದ್ದಾರೆ. ಶಿವರಾಂ ಕಾರಂತ್, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಇನ್ನು ಹಲವಾರು ಸಾಹಿತಿಗಳು ತಮ್ಮದೇ ಆದಂತಹ ಸೇವೆಯನ್ನು ಸಲ್ಲಿಸಿರುವುದು ಶ್ಲಾಘನೀಯ. ಕನ್ನಡಿಗರಾಗಲು ಜಾತಿ ಇಲ್ಲ, ಭೇದವಿಲ್ಲ, ಪಕ್ಷ ವಿಲ್ಲ, ನಾವೆಲ್ಲರೂ ಒಂದೇ ಎನ್ನುವ ಮನೋಭಾವವನ್ನು ಒಳಗೊಂಡಂತೆ ಕನ್ನಡ ತಾಯಿಯ ಸೇವೆಯನ್ನು ಮಾಡುವುದು ಬಹಳ ಮುಖ್ಯ. ನಮ್ಮ ಕನ್ನಡವನ್ನು ಉಳಿಸಲು ಹಲವಾರು ಜನರು ಹಲವಾರು ರೀತಿಯಲ್ಲಿ ತನ್ನದೇ ಆದಂತಹ ಸೇವೆಯನ್ನು ಸಂಘಟನೆಗಳ ಮುಖಾಂತರ ಸಂಸ್ಥೆಗಳ ಮುಖಾಂತರ ಸಾಹಿತಿಗಳಾಗಿ ಹಲವಾರು ರೀತಿಯ ಪಾತ್ರಗಳನ್ನು ಒಳಗೊಂಡಂತೆ ಕನ್ನಡಕ್ಕಾಗಿ ಹೋರಾಟ ಮಾಡುತ್ತಿರುವುದು ಕನ್ನಡವನ್ನು ಉಳಿಸಲು ಪ್ರಯತ್ನವನ್ನು ಮಾಡುತ್ತಿರುವುದನ್ನು ದಿನನಿತ್ಯ ನಾವು ನೋಡುತ್ತಿದ್ದೇವೆ. ಇಂದು ನಮ್ಮ ಕನ್ನಡವನ್ನು ಕನ್ನಡಿಗರೇ ಮಾತನಾಡಲು ಹಿಂಜರಿಯದೆ ಕನ್ನಡವನ್ನು ಹೆಮ್ಮೆಯಿಂದ ಮಾತನಾಡಲು ಮುಂದಾಗಬೇಕು. ನಮ್ಮ ಮನೆಯಲ್ಲಿ ಹುಟ್ಟಿದಂತಹ ಮಗುವಿಗೆ ಮೊದಲಿನಿಂದಲೂ ಕನ್ನಡದ ಅಭ್ಯಾಸ ಮಾಡಿಸಿ ಕನ್ನಡ ಕಲಿಸುವ ಕಾರ್ಯ ಪ್ರತಿಯೊಂದು ಮನೆಯಿಂದ ಪ್ರಾರಂಭ ಮಾಡಿದರೆ ಕನ್ನಡವನ್ನು ಉಳಿಸಿ,ಬೆಳೆಸಿ ಎಂದು ಹೇಳುವ ಪ್ರಮೇಯವೆ ಬರುವುದಿಲ್ಲ. ಕನ್ನಡವನ್ನು ಕಲಿಸುವುದರಲ್ಲಿ ನಾವು ಸೋಲುವುದಿಲ್ಲ.ಹೊರ ರಾಜ್ಯಗಳಿಂದ ಬಂದಂತಹ ಜನರೆಲ್ಲ ಕನ್ನಡವನ್ನು ಕಲಿತು ಕನ್ನಡವನ್ನು ಬಳಸಿಕೊಂಡು ತನ್ನ ಜೀವನವನ್ನು ಸಾಗಿಸುವಂತಹ ದಿನಗಳು ಇಲ್ಲಿ ಇರುವಾಗ. ನಮ್ಮವರು ಏಕೆ ಕನ್ನಡವನ್ನು ಬಿಟ್ಟು ಪರಭಾಷೆಯ ವ್ಯಾಮೋಹಕ್ಕೆ ಹೋಗುತ್ತಿದ್ದಾರೆ. ಕನ್ನಡವನ್ನು ಮಾತನಾಡಲು ಹಿಂಜರಿಯುತ್ತಿದ್ದಾರೆ.
"ನಮ್ಮ ಕನ್ನಡ ನಮ್ಮ ಹೆಮ್ಮೆ" ಇಂತಹ ಕನ್ನಡವನ್ನು ಸಂತಸದಲ್ಲಿ ಖುಷಿಯಿಂದ ಮಾತನಾಡಬೇಕು. ನಮ್ಮ ಕನ್ನಡ ಭಾಷೆಯು ಕಲಿಯಲು ಸಹ ಬಹಳ ಸರಳವಾದದ್ದು. ಎಂತಹವರು ಬೇಕಾದರೂ ಕಲಿಯುವಂತಹ ರೀತಿಯ ಪ್ರಕ್ರಿಯೆಯನ್ನು ಒಳಗೊಂಡಿದೆ.
"ಕನ್ನಡವೇ ನಮ್ಮ ಉಸಿರಾಗಿರಲಿ
ಮರೆಯದಿರಿ ಕನ್ನಡವನ್ನು
ಜರಿಯದಿರಿ ನಮ್ಮವರನ್ನು
ಅವಕಾಶ ನೀಡಿರಿ ಎಲ್ಲೆಡೆ
ಪರಭಾಷೆ ತಳ್ಳಿರಿ ಮೂಲೆಗೆ
ನೀಡಿರಿ ಕೆಲಸದ ಅವಕಾಶ ನಮ್ಮವರಿಗೆ
ಆರ್ಥಿಕವಾಗಿ ಪ್ರಬಲಗೊಳ್ಳಿಸಿರಿ ನಮ್ಮವರನ್ನು
ದೇಶದ ಉದ್ದಾರಕ್ಕೆ ಕರ್ನಾಟಕ ಬಲಗೊಳ್ಳಲಿ
ಪ್ರೀತಿ- ಪ್ರೇಮ- ಸೌಹಾರ್ದ ಎಲ್ಲರಲ್ಲೂ ಮೂಡಲಿ
ಕನ್ನಡವೇ ನಮ್ಮಮ್ಮ ಎಂದು ತಿಳಿಯಮ್ಮ
ಅವಳಿಗೆ ಕೈ ಮುಗಿಯುತ ನಡೆಯಮ್ಮ
ಎಂದು ಹೇಳುತ್ತಾ ಕನ್ನಡಾಂಬೆಗೆ ಜೈ ಎನ್ನುವೆ
ಜೀವನಪೂರ್ತಿ ಅವಳ ಸೇವೆ ಮಾಡುವೆ"....
ನಾವು ಹುಟ್ಟಿರುವುದು ನಮ್ಮ ಕರ್ನಾಟಕದ ನೆಲದಲ್ಲಿ. ಕನ್ನಡಾಂಬೆಯೇ ನನ್ನ ತಾಯಿಯಾದರೆ ತಾಯಿ ಭಾಷೆ ಕನ್ನಡವಾದ ಮೇಲೆ ಕನ್ನಡಕ್ಕೆ ಚಿರಋಣಿಯಾಗಬೇಕೆ ಹೊರತು. ನಮ್ಮ ಕನ್ನಡ ನಾಡಿಗೆ ಎಂದಿಗೂ ದ್ರೋಹವನ್ನು ಬಗೆಯುವ ಕೆಲಸ ಮಾಡಬಾರದು. ನಮ್ಮ ನೆಲ, ನಮ್ಮ ಜಲ, ನಮ್ಮ ಗಾಳಿ ಕನ್ನಡದಿಂದ ಕೂಡಿದೆ. ನಾವು ಎಂದೆಂದಿಗೂ ನಮ್ಮ ಕರುನಾಡಿಗೆ ಕೃತಜ್ಞರಾಗಬೇಕು.
"ತೊರೆಯಲಾರೆ, ಮರೆಯಲಾರೆ,
ಇರಲಿ ಒಳಿತಿನ ದೃಷ್ಟಿ, ಆಗುವುದು ಹೊಸ ಸೃಷ್ಟಿ.
ಶ್ರಮಿಕನ ಜೀವನ, ಆಗುವುದು ಸಾಧನ,
ಮರೆಯಬೇಡ ನಿನ್ನತನ,
ಮಾಡಬೇಕಿದೆ ಕನ್ನಡಾಂಬೆಯ ಸ್ನಾನ.
ಅರಿಯದೆಲೆ ಮಾಡದಿರು ದೋಷವ
ಮಾಡಿ ತೋರಿಸಬೇಕಿದೆ ಬಹಳಷ್ಟು ಕಾರ್ಯವ"...
ಎಲ್ಲಿಂದ ಬಂದಿದ್ದರೂ ನಮ್ಮ ಕನ್ನಡ ನಾಡಿನ ಅನ್ನವನ್ನು ತಿನ್ನುವುದರಿಂದ ಕನ್ನಡಕ್ಕೆ ಬೆಲೆಯನ್ನು ನೀಡಲೇಬೇಕು. ಜನುಮ ಜನುಮದಲ್ಲೂ ಈ ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿ ಬೆಳೆಯಬೇಕೆಂಬ ಆಸೆ ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕು. ಕನ್ನಡದ ಹೆಸರು ಹೇಳುತ್ತಲೇ, ಕನ್ನಡಾಂಬೆಯನ್ನು ನೆನೆಯುತ್ತಲೇ, ಮೈ ರೋಮಾಂಚನವಾಗುತ್ತದೆ. ನಟಸಾರ್ವಭೌಮ ಡಾ. ರಾಜಕುಮಾರ್ ರವರ ಹಾಡಿ, ನಟಿಸಿರುವ ಹಾಡು "ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು," ಎಂಬ ಹಾಡು ಪ್ರತಿಯೊಬ್ಬ ಕನ್ನಡಿಗನ ಮೆಚ್ಚಿನ ಗಾಯನವಾಗಿದೆ. "ಬದುಕಿನ ದಾರಿಯಲಿ ಕನ್ನಡದ ತೇರನ್ನು ಪ್ರತಿಯೊಬ್ಬರೂ ಹೆಳೆಯಬೇಕು" ಎಂಬುದು ಪ್ರತಿಯೊಬ್ಬರ ಆಸೆ ಆಗಿರಬೇಕು "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಎಂದು ದಿನನಿತ್ಯ ನುಡಿವಂತೆ ಆಗಬೇಕು.ಈ ರೀತಿಯಾಗಿ ಹಲವು ಬಗೆಯಲ್ಲಿ ನನ್ನ ಕನ್ನಡ ತಾಯಿಯನ್ನು ಕನ್ನಡಾಂಬೆಯನ್ನು ವರ್ಣಿಸಬಹುದು. ನಮ್ಮ ಕನ್ನಡಾಂಬೆಯ ವಿಷಯದಲ್ಲಿ ಬಂದರೆ ಆಚರಣೆಗೆ ಸೀಮಿತಗೊಳ್ಳದೆ ಕಾರ್ಯಗಳಲ್ಲಿ ಸೀಮಿತಗೊಳಿಸಿ ನನ್ನ ಕನ್ನಡ ನಮ್ಮೆಲ್ಲರ ಉಸಿರಾಗಿರಲಿ ಎಂದು ಹಾರೈಸುತ್ತ ನನ್ನ ಈ ಲೇಖನಕ್ಕೆ ವಿರಾಮವನ್ನು ಹೇಳುತ್ತಿದ್ದೇನೆ. ಜೈ ಹಿಂದ್ ಜೈ ಕರ್ನಾಟಕ ಮಾತೆ.
ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ್.
ಸಾಮಾಜಿಕ ಚಿಂತಕಿ, ಸಾಹಿತಿ.ಶಿಕ್ಷಕಿ. ಹಾಸನ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ