ಶ್ರೀರಾಮ ಕಥಾ ಲೇಖನ ಅಭಿಯಾನ-12: ಜೀವವನ್ನೇ ಶ್ರೀರಾಮನ ಸೇವೆಗೆ ಮುಡಿಪಾಗಿಟ್ಟ ನವಿಲಿನ ಕಥಾಪ್ರಸಂಗ

Upayuktha
0


- ನಾರಾಯಣ್ ಸತ್ಯೇಂದ್ರ ಕುಮಾರ್

ರಾಮಾಯಣದಲ್ಲಿ ನವಿಲಿನ ಸೇವೆ ಕುರಿತಾದ ಘಟನೆಗಳು ಹಲವಾರು. ಈ ವಿಷಯ ಸುಮಾರು ಜನರ ಅರಿವಿಗೆ ಬಂದಿರುವುದಿಲ್ಲ. ಶ್ರೀರಾಮ ತ್ರೇತಾಯುಗದಲ್ಲಿ ತನ್ನ ವನವಾಸದ ಸಮಯದಲ್ಲಿ ಸೇವೆ ಮಾಡಿದ ನವಿಲಿಗೆ ತನ್ನ ಮುಂದಿನ ಜನ್ಮದಲ್ಲಿ ಅಂದರೆ ದ್ವಾಪರಯುಗದಲ್ಲಿ ಶ್ರೀಕೃಷ್ಣನಾಗಿ ಜನಿಸಿ ಜನ್ಮಾಂತರದ ನವಿಲಿನ ಸೇವೆಯ ಋಣವನ್ನು ತೀರಿಸಿದ ಶ್ರೀರಾಮಚಂದ್ರ ಪ್ರಭುವಿನ ಜೀವನ ಚರಿತ್ರೆಯ ಒಂದು ಮುಖ್ಯ ನೈತಿಕ ಪಾಠವನ್ನು ಪರಾಂಬರಿಸೋಣ. 


ನವಿಲುಗಳಿಗೆ ಪುರಾಣಗಳಲ್ಲಿ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಅದರ ಪ್ರಕಾರ ಮಯೂರ ಅಥವಾ ನವಿಲನ್ನು ಗರುಡನ ರೆಕ್ಕೆಗಳಿಂದ ರಚಿಸಲಾಗಿದೆ. ಹೀಗಾಗಿ ಮಯೂರವೂ ಪೌರಾಣಿಕ ಪಕ್ಷಿಯೆಂದು ಗುರುತಿಸಲಾಗಿದೆ. ನವಿಲಿಗೆ ಸಂಸ್ಕೃತದಲ್ಲಿ ಮಯೂರ ಎನ್ನುತ್ತಾರೆ. ಹಿಂದೂ ಸಂಸ್ಕೃತಿಯಲ್ಲಿ ಮಯೂರವನ್ನು ಕೆಲವು ಪವಿತ್ರ ಪಕ್ಷಿಗಳ ಸಾಲಿನಲ್ಲಿ ಮಹತ್ವದ್ದದಾಗಿ ಇಡಲಾಗಿದೆ. ಅನೇಕ ಹಿಂದೂ ಪುರಾಣಗಳ ಪ್ರಕಾರ ಈ ನವಿಲು ಕಾಲಚಕ್ರದ ಸಂಕೇತವಾಗಿದೆ. ನವಿಲು ಸರಸ್ವತಿ ಮಾತಾ, ಹಾಗೂ ಸುಬ್ರಹ್ಮಣ್ಯ ಸ್ವಾಮಿಯ ವಾಹನ ಎಂಬುದನ್ನು ಪುರಾಣಗಳಲ್ಲಿ ಓದಿದ್ದೇವೆ.


ಒಂದು ಪುರಾತನ ಗ್ರಂಥದ ಪ್ರಕಾರ, ಬಹಳ ಹಿಂದೆ, ಸಂಧ್ಯಾಸುರ, ಎನ್ನುವ ರಾಕ್ಷಸ ಶಿವ ಭಗವಾನನ ಪರಮ ಭಕ್ತ. ಶಿವನನ್ನು ಕುರಿತಾಗಿ ಕಠೋರ ತಪಸ್ಸನ್ನು ಆಚರಿಸಿ ಶಿವನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ಅವನ ಕೋರಿಕೆಯಂತೆ ಶಿವನು ಅವನಿಗೆ ಸೋಲು ಮತ್ತು ಸಾವು ಯಾರಿಂದಲೂ ಬರಬಾರದೆನ್ನುವ ವರವನ್ನು ಕರುಣಿಸಿರುತ್ತಾನೆ. ಈ ವರ ಪ್ರಭಾವದಿಂದ ತನ್ನ ಎದುರಿಗೆ ಸಿಕ್ಕುವ ಋಷಿಮುನಿಗಳನ್ನು ಹಿ೦ಸಿಸುತ್ತಾ, ಅವರ ತಪಸ್ಸಿಗೆ ಅಡ್ಡಿಪಡಿಸುತ್ತಾ, ಅವರ ಆಶ್ರಮಗಳನ್ನು ಧ್ವಂಸ ಮಾಡುತ್ತಾ ಬರುತ್ತಾನೆ. ಅದೇ ರೀತಿ, ದೇವಲೋಕಕ್ಕೆ ಹೋಗಿ ದೇವತೆಗಳ ಜೊತೆ ಹೋರಾಡಿ ಅವರನ್ನು ಪರಾಭವಗೊಳಿಸಿ, ಕೆಲವರನ್ನು ಬಂಧಿಗಳನ್ನಾಗಿ ಮಾಡುತ್ತಾನೆ.


ಈ ವಿಚಾರವಾಗಿ ಸ್ವಯಂ ವಿಷ್ಣುವು ಅಸಹಾಯಕನಾಗುತ್ತಾನೆ. ಕೊನೆಗೆ ಋಷಿಮುನಿಗಳು, ದೇವತೆಗಳೆಲ್ಲರೂ ಒಟ್ಟುಗೂಡಿ ಲೋಕಮಾಯೆಯ ಹತ್ತಿರ ಹೋಗಿ ಭಕ್ತಿಯಿಂದ ಪ್ರಾರ್ಥಿಸಿ ತಮಗೊದಗಿರುವ ವಿಪತ್ತಿನಿಂದ ಪಾರುಮಾಡಬೇಕೆಂದು ಬೇಡಿಕೊಳ್ಳುತ್ತಾರೆ. ಆಗ ಲೋಕಮಾಯೆ ತನ್ನೆಲ್ಲಾ ಶಕ್ತಿಗಳು, ಆಯುಧಗಳ ಜೊತೆಗೆ, ಸಮಸ್ತ ದೇವತೆಗಳ ದಿವ್ಯ ಶಕ್ತಿ ಮತ್ತು ಆಯುಧಗಳನ್ನು ಒಟ್ಟುಗೂಡಿಸುತ್ತಾಳೆ ಮತ್ತು ನವಗ್ರಹಗಳ ಕೃಪೆ ಒದಗುವಂತೆ ಮಾಡಿ, ಒಂದು ದಿವ್ಯವಾದ ಅಸೀಮ ಶಕ್ತಿಗಳನ್ನು ಹೊ೦ದಿರುವ ಪಕ್ಷಿಯನ್ನು ಸೃಷ್ಟಿಸುತ್ತಾಳೆ. ಅದೇ ಮಯೂರ ಅರ್ಥಾತ್ ನವಿಲು. ಲೋಕಮಾಯೆಯ ಹಾಗೂ ದೇವತೆಗಳ ಕೃಪೆಯನ್ನು ದಿವ್ಯ ಶಕ್ತಿಗಳೊಂದಿಗೆ ಸಂಧ್ಯಾಸುರನ ಮುಂದೆ ಪ್ರಕಟವಾಗುತ್ತದೆ. ಇಬ್ಬರಿಗೂ ಘನಘೋರ ಯುದ್ಧವಾಗುತ್ತದೆ. ಕೊನೆಗೆ ಅಂತಿಮವಾಗಿ ಅಸುರ ಹತನಾಗುತ್ತಾನೆ. ದೇವತೆಗಳ ಹಾಗೂ ಋಷಿ ಮುನಿಗಳ ಕಷ್ಟಗಳು ಪರಿಹಾರವಾಗುತ್ತದೆ. ಹೀಗೆ ದೈವ ಕೃಪೆ ಹೊಂದಿರುವ ನವಿಲು ತಾನು ಇರುವ ಕಡೆಯೆಲ್ಲಾ ಸಕಾರಾತ್ಮಕ ಶಕ್ತಿ ಹರಡುವಂತೆ ಮಾಡುತ್ತದೆ. 


ಇದರ ಜೊತೆಗೆ, ನವಿಲಿಗೆ ಮತ್ತಷ್ಟು ಅಮೋಘವಾದ ಶಕ್ತಿ ಹಾಗೂ ಅನುಪಮ ಸೌಂರ‍್ಯ ಬರಲು ಕಾರಣ ದೇವಲೋಕದ ದೇವೇಂದ್ರ. ಮೊದಲಿಗೆ ನವಿಲುಗಳು ಅಷ್ಟೇನೂ ಆಕರ್ಷಕವಲ್ಲದ ರೆಕ್ಕೆಗಳನ್ನು ಮತ್ತು ಗರಿಗಳನ್ನು ಹೊಂದಿದ್ದವು. ಉತ್ತರ ರಾಮಾಯಣದ ಪ್ರಸಂಗವೊ೦ದರ ಪ್ರಕಾರ ನವಿಲು ದೇವೇಂದ್ರನ ಜೀವವನ್ನು ಕಾಪಾಡಿ ಅವನ ಕೃಪೆಗೆ ಪಾತ್ರವಾಯಿತು. ಅದು ಹೇಗೆ? ಎನ್ನುವುದಾದರೆ ನಾವು ಸಹಸ್ರಾರು ವರ್ಷಗಳ ಹಿಂದಿನ ಘಟನೆಯನ್ನು ಮೆಲುಕು ಹಾಕಬೇಕು. ಬನ್ನಿ ಅದೇನೆಂದು ನೋಡೋಣ.


ಒಮ್ಮೆ ರಾವಣ ಮತ್ತು ದೇವೇಂದ್ರನ ಜೊತೆ ಭಾರಿ ಕದನವೇರ್ಪಟ್ಟಿತು. ಆ ಸಮಯದಲ್ಲಿ ರಾವಣನನ್ನು ಸೋಲಿಸಲು ಯುಕ್ತಿಯಿಂದ ಯುದ್ಧ ಮಾಡಬೇಕಾಗಿತ್ತು. ಆದರೆ ಇಂದ್ರನಿಗೆ ಅಷ್ಟು ಸಮಯವಿರಲಿಲ್ಲ. ಆಗಿನ ಕಾಲದಲ್ಲಿ ನವಿಲುಗಳು ಭಾರಿ ಗಾತ್ರದಲ್ಲಿದ್ದು ಅತ್ಯಂತ ದೊಡ್ಡದಾದ ರೆಕ್ಕೆ ಪುಕ್ಕಗಳನ್ನು ಹೊಂದಿದ್ದವು. ತನ್ನ ಶರೀರದ ರೆಕ್ಕೆಗಳನ್ನು ದೊಡ್ಡದಾಗಿ ಆಗಲಿಸಿತು ಮತ್ತು ತನ್ನ ಹಿಂದೆ ಇಂದ್ರನು ಅಡಗಿಕೊಳ್ಳಲು ಅನುವು ಮಾಡಿಕೊಟ್ಟಿತು. ಹೀಗೆ ತ್ವರಿತ ಗತಿಯಲ್ಲಿ ರಾವಣನ ಆಕ್ರಮಣದಿಂದ ಪಾರಾಗಲು ಇಂದ್ರನಿಗೆ ಸಹಾಯವಾಯಿತು. ಇದರಿಂದ ಸಂತುಷ್ಟನಾದ ದೇವೇಂದ್ರ ಪ್ರತಿಯಾಗಿ ನವಿಲಿಗೆ ಅದರ ಗರಿಗಳನ್ನು ವರ್ಣ ವೈವಿಧ್ಯಮಯವಾಗುವಂತೆ ಮಾಡಿದನು. ಅಂತೆಯೇ ನವಿಲುಗರಿಗಳನ್ನು ತನ್ನ ಸಿಂಹಾಸನದಲ್ಲಿ ಇರುವಂತೆ ಚಿತ್ರಿಸಿ ಅದರಲ್ಲಿ ಆಸೀನನಾಗುವಂತೆ ವ್ಯವಸ್ಥೆ ಮಾಡಿಕೊಂಡನು. ನವಿಲುಗಳಿಗೆ ಸಾವಿರ ಕಣ್ಣುಗಳನ್ನು ಪ್ರದಾನಿಸಿದನು ಮತ್ತು ಸರ್ಪಗಳಿಂದ ಯಾವುದೇ ರೀತಿಯ ಭಯವು ಇಲ್ಲದಂತೆ ಶಕ್ತಿಯನ್ನು ಪ್ರಸಾದಿಸಿದನು. ಹೀಗಾಗಿ ಚಿತ್ರಪಟಗಳಲ್ಲಿ ಹಾವನ್ನು ಕೊಲ್ಲುತ್ತಿರುವಂತೆ ನವಿಲನ್ನು ಚಿತ್ರಿಸಲಾಗಿರುತ್ತದೆ.


ರಾಮಾಯಣದಲ್ಲಿ ನವಿಲಿನ ಕುರಿತಾದ ಹಲವು ಘಟನೆಗಳು ನಡೆದಿದ್ದು ಅವುಗಳಲ್ಲಿ ಪ್ರಮುಖವಾದ ಈ ಘಟನೆಯನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ. ಸಮರ್ಥ ರಾಮದಾಸರಿಂದ ರಚಿಸಲ್ಪಟ್ಟ ರಾಮಾಯಣದಲ್ಲಿ ಬಂದಿರುವ ಪ್ರಸಂಗ ಈ ಕೆಳಗಿನಂತೆ: ಒಮ್ಮೆ ವನವಾಸದ ಸಮಯದಲ್ಲಿ ರಾಮ ಲಕ್ಷ್ಮಣ ಸೀತೆಯರು ಕಾಡಿನಲ್ಲಿ ನಡೆದುಕೊಂಡು ಹೋಗುವಾಗ ಮರ‍್ಗ ಮಧ್ಯದಲ್ಲಿ ಬಿಸಿಲಿನ ತಾಪದಿಂದ ಸೀತೆಗೆ ವಿಪರೀತ ಬಾಯಾರಿಕೆಯಾಯಿತು. ಇದನ್ನು ಕಂಡ ರಾಮನಿಗೆ ಸುತ್ತ ಮುತ್ತ ಎಲ್ಲಿ ನೋಡಿದರೂ ಕಾಡೇ.. ನೀರಿರುವ ಸುಳಿವು ತಿಳಿಯಲೇ ಇಲ್ಲ. ಆಗ ರಾಮನು ಭೂಮಾತೆಯನ್ನು ಪ್ರಾರ್ಥಿಸಿ ‘ಎಲ್ಲಿ ನೀರಿದೆಯೋ ಅಲ್ಲಿಗೆ ಹೋಗಲು ದಾರಿಯನ್ನು ತೋರಿಸು’ ಎಂದು ಬಿನ್ನವಿಸಿಕೊಂಡನು. ಆಗ ನವಿಲೊಂದು ಅಲ್ಲಿಗೆ ಬಂದು ರಾಮನಲ್ಲಿ ಇಲ್ಲಿಯೇ ನೀರಿರುವ ಜಲಾಶಯವೊಂದಿದೆ. ನಾನು ಅಲ್ಲಿಗೆ ತಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಆದರೆ ನಾನು ಹಾರುತ್ತಾ ಹಾರುತ್ತಾ ಹೋಗುವುದರಿಂದ ನೀವುಗಳು ನನ್ನನ್ನು ಹಿಂಬಾಲಿಸುವ ಸಮಯದಲ್ಲಿ ದಾರಿ ತಪ್ಪಬಹುದು ಅದಕ್ಕಾಗಿ ನಾನು ಸ್ವಲ್ಪ ಸ್ವಲ್ಪ ದೂರಕ್ಕೆ ಒಂದಾವರ‍್ತಿಯಂತೆ ನನ್ನ ರೆಕ್ಕೆಗಳನ್ನು ಕಿತ್ತು ಹಾಕುತ್ತಾ ಬರುತ್ತೇನೆ. ನೀವುಗಳು ಅದನ್ನನುಸರಿಸುತ್ತಾ ಬನ್ನಿ. ಜಲಾಶಯದ ಹತ್ತಿರ ಬರುತ್ತೀರ ಎಂದಿತು. ಅದೇ ರೀತಿ ಜಲಾಶಯದ ಹತ್ತಿರ ಬಂದ ರಾಮ ಲಕ್ಷ್ಮಣ ಸೀತೆಯರು ನೀರನ್ನು ಕುಡಿದು ದಣಿವಾರಿಸಿಕೊಂಡರು.


ಇಲ್ಲಿ ನವಿಲಿನ ನಿಸ್ವಾರ್ಥ ಸೇವಾ ಮನೋಭಾವ ಎಂತಹವರಿಗೂ ಕಣ್ಣಲ್ಲಿ ನೀರು ತರಿಸುತ್ತದೆ. ಸಾಮಾನ್ಯವಾಗಿ ನವಿಲಿನ ಗರಿಗಳು ನಿಗದಿತ ಋತುವಿನಲ್ಲಿ ಮಾತ್ರ ತಮ್ಮಷ್ಟಕ್ಕೆ ತಾವೇ ಉದುರುತ್ತವೆ. ಮತ್ತೆ ಶೀಘ್ರದಲ್ಲಿಯೇ ನವಿಲುಗರಿಗಳು ಮೂಡಿ ಬರುತ್ತವೆ. ಇದು ಅವುಗಳ ಜೀವನದಲ್ಲಿರುವ ಪ್ರಕೃತಿ ಧರ್ಮ. ಆದರೆ ನವಿಲು ಗರಿಗಳನ್ನು ಬಲವಂತವಾಗಿ ಕಿತ್ತು ಹಾಕಿದರೆ ನವಿಲು ಪ್ರಾಣ ಸಂಕಟವನ್ನು ಅನುಭವಿಸುವುದರ ಜೊತೆಗೆ ಶೀಘ್ರವಾಗಿ ಸಾಯುತ್ತವೆ. ಇದ್ಯಾವುದನ್ನು ಪರಿಗಣಿಸದೆ ಕೇವಲ ಸೇವಾ ಮನೋಭಾವದಿಂದ ನೀರಿನ ಸೆಲೆಯನ್ನು ತೋರಿದ ನವಿಲಿನ ಗುಣ ಮನುಷ್ಯರಿಗೆ ಆರ‍್ಶ ಪ್ರಾಯವಾದುದು. ಆ ಸಮಯದಲ್ಲಿ ನವಿಲಿಗೆ ಸಾವು ಹತ್ತಿರವಾಗುತ್ತ ಬಂದಿತ್ತು. ಆಗ ನವಿಲು ಹೇಳಿತು “ಆಹಾ, ನಾನು ಎಂತಹ ಭಾಗ್ಯಶಾಲಿ, ಜಗತ್ತಿನ ದಾಹವನ್ನು ನೀಗಿಸುವಂತಹ ಭಗವಂತನ ಬಾಯಾರಿಕೆಯನ್ನು ನೀಗಿಸುವಂತಹ ಭಾಗ್ಯವು ನನ್ನದಾಯಿತು. ನನ್ನ ಜೀವನ 

ಸಾರ್ಥಕವಾಯಿತು. ನನ್ನ ಸಾವು ಸನಿಹ ಬಂದೆ ಬಿಟ್ಟಿದೆ, ನಾನು ನೆಮ್ಮದಿಯಿಂದ ಸಾಯುತ್ತೇನೆ” ಎಂದು ಪ್ರಾಣತ್ಯಾಗ ಮಾಡಿತು. 


ಆಗ ಮರ‍್ಯಾದ ಪುರುಷೋತ್ತಮನಾದ ಶ್ರೀರಾಮಚಂದ್ರ ಪ್ರಭು ನವಿಲಿಗೆ ಆಶ್ವಾಸನೆ ನೀಡುತ್ತಾ ಇಂತೆ೦ದನು. “ನೀನು ನಮ್ಮ ಬಾಯಾರಿಕೆಯನ್ನು ತೀರಿಸುವುದಕ್ಕಾಗಿ ನಿನ್ನ ಗರಿಗಳನ್ನು ಪ್ರಕೃತಿಗೆ ವಿರುದ್ದವಾಗಿ ಕಿತ್ತು ಮಾರ್ಗ ತೋರಿಸಿ ನೀರನ್ನು ನೀಡಿದ್ದೀಯ. ಈ ನಿನ್ನ ಋಣ ನನ್ನ ತಲೆಯ ಮೇಲಿದೆ. ಆ ಸಾಲವನ್ನು ನಾನು ತೀರಿಸಲೇ ಬೇಕು. ಮುಂದಿನ ಜನ್ಮವಾದ ಕೃಷ್ಣಾವತಾರದಲ್ಲಿ ನಿನ್ನ ಗರಿಯನ್ನು ಸದಾಕಾಲ ಧರಿಸಿ ನಿನಗೆ ಕೃತಜ್ಞತೆಯನ್ನು ತೋರಿಸುತ್ತೇನೆ. ಎಂದು ಹೇಳಿದ. ಅದರಂತೆಯೇ ಮುಂದಿನ ದ್ವಾಪರಯುಗದಲ್ಲಿ, ಶ್ರೀ ಕೃಷ್ಣನಾಗಿ ಜನಿಸಿ ಬಾಲ್ಯದಲ್ಲಿಯೇ ನವಿಲುಗರಿಯನ್ನು ಧರಿಸಿ ಅದರ ಋಣವನ್ನು ತೀರಿಸಿದ. 


ಪ್ರಿಯ ವಾಚಕರೆ, ಈ ಘಟನಾವಳಿಯಿಂದ ನಾವು ಏನನ್ನು ಕಲಿಯಬೇಕು ಎಂದು ಪರಾಮರ್ಶಿಸುವುದಾದರೆ, ಮನುಷ್ಯನಾಗಿ ಹುಟ್ಟುವ ನಾವು ಜನ್ಮ ನೀಡಿ ಬೆಳಸಿ ದೊಡ್ಡವರನ್ನಾಗಿ ಮಾಡಿದ ತಾಯಿಯ ಋಣ, ತಂದೆಯ ಋಣ, ಜೊತೆಯಲ್ಲಿ ಹುಟ್ಟಿದ ಅಣ್ಣ, ತಮ್ಮ ಅಕ್ಕ, ತಂಗಿಯರ ಋಣ, ವಿದ್ಯಾ ಬುದ್ಧಿಯನ್ನು ನೀಡಿ ಜ್ಞಾನವನ್ನು ನೀಡಿದ ಗುರುವಿನ ಋಣ, ನಮಗೆ ಸದಾ ಕೃಪೆಯನ್ನು ನೀಡುವ ಭಗವಂತನ ಋಣ. ಈ ಭೂಮಿಯಲ್ಲಿ ಹುಟ್ಟಿದ್ದಕ್ಕಾಗಿ ಬೆಳೆದು ಮುಂದೆ ಬರಲು ಆಶ್ರಯ ನೀಡಿದ ಪ್ರಕೃತಿಯ ಋಣ, ಸಮಾಜದ ಋಣ, ದೇಶದ ಋಣ ಕುರಿತಾಗಿ ನಾವು ಎಂದಾದರೂ ಪರಾಮರ್ಶೆ ಮಾಡಿದ್ದೇವೆಯೇ? ಎಂದು ನಮ್ಮನ್ನು ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಖಂಡಿತವಾಗಿ ಇಲ್ಲ ಎಂಬ ಉತ್ತರ ನಮ್ಮ ಅಂತ:ಸಾಕ್ಷಿಯನ್ನು ಚುಚ್ಚುತ್ತದೆ. ದಯಮಾಡಿ ಈ ಪ್ರಸಂಗವನ್ನು ನಿಧಾನವಾಗಿ ಅವಲೋಕಿಸಿ. ಶ್ರೀರಾಮಚಂದ್ರ ಹಾಗೂ ನವಿಲಿನ ಪ್ರಸಂಗವೂ ನಮ್ಮ ಕಣ್ಣನ್ನು ತೆರೆಸಲಿ.. ನಮ್ಮ ನಮ್ಮ ಜವಾಬ್ದಾರಿಗಳನ್ನು ನಾವು ಅರಿಯೋಣ. ಶ್ರೀರಾಮಚಂದ್ರ ಪ್ರಭುವಿನ ಜೀವನದ ಕಥಾನಕವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸೋಣ. ಸಮರ್ಥ ರಾಮದಾಸರ ಚರಣಾರವಿಂದಗಳಿಗೆ ನಮಿಸೋಣ. 

ಜೈ ಶ್ರೀ ರಾಮ್


ಲೇಖಕರ ಕಿರು ಪರಿಚಯ 

ಶ್ರೀ ನಾರಾಯಣ್ ಸತ್ಯೇಂದ್ರ ಕುಮಾರ್ ಅವರು 20-3-1954, ತುಮಕೂರಿನಲ್ಲಿ ಜನನ, ತಂದೆ ಎಸ್. ನಾರಾಯಣ್, ತಾಯಿ ಎನ್. ಸರೋಜಮ್ಮ. ಗ್ರಂಥ ಪಾಲನ ಹಾಗೂ ಮಾಹಿತಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು ಬೆಂಗಳೂರಿನ ಪ್ರತಿಷ್ಟಿತ ಕಿರ್ಲೋಸ್ಕರ್ ವಿದ್ಯುಚ್ಚಕ್ತಿ ಕಾರ್ಖಾನೆಯ ತಾಂತ್ರಿಕ ಮಾಹಿತಿ ಕೇಂದ್ರದಲ್ಲಿ 34 ವರ್ಷಗಳ ಪೂರ್ಣ ಸೇವೆ ಸಲ್ಲಿಸಿ, ಈಗ ನಿವೃತ್ತರಾಗಿ ವಿಶ್ರಾಂತಿ ಜೀವನ ಸಾಗಿಸುತ್ತಿದ್ದಾರೆ. ಈಗ ತಮ್ಮ ಸಮಯವನ್ನು ಧಾರ್ಮಿಕ ಗ್ರಂಥಗಳ ರಚನೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಸುಮಾರು ಗ್ರಂಥಗಳನ್ನು ರಚಿಸಿ ಮುದ್ರಣ ಕಂಡಿವೆ. ಅವು ಯಾವುವೆ೦ದರೆ: ಆತ್ಮ ಮಂಥನದ ಅಮೃತ ಬಿಂದುಗಳು- ಜೀವನದ ಅರ್ಥಪೂರ್ಣ ತುಣುಕುಗಳು; ದೈವೀಕ ವಾಸ ಅರ್ಪಣ; ಶ್ರೀಕೃಷ್ಣ ವೈಭವ; ಧನದಾಯಿ ಶ್ರೀ ಲಕ್ಷ್ಮಿ ಸೂತ್ರಗಳು; ದೇವ ಧನವಂತರಿ ಮತ್ತು ಅಶ್ವಿನಿ ದೇವತೆಗಳ ವೈಭವ; ವರಪ್ರದ ಶ್ರೀ ಕಾರ್ತಿಕೇಯ ವೈಭವ; ವಿಶ್ವವಂದಿತ ಶ್ರೀ ಸೂರ್ಯ ಭಗವಾನ ವೈಭವ. ಅದೇ ರೀತಿ ಹಲವಾರು ನಿಯತ ಕಾಲಿಕಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಇನ್ನು ಕೆಲವು ಗ್ರಂಥಗಳು ಪ್ರಕಟನೆಯ ಹಾದಿಯಲ್ಲಿವೆ .


ವಿಳಾಸ: ನಾರಾಯಣ್ ಸತ್ಯೇಂದ್ರ ಕುಮಾರ್, 

ಸಂಖ್ಯೆ: 9-10-2-1, ಶ್ರೀವರಪ್ರದ, 5ನೇ ಮುಖ್ಯ ರಸ್ತೆ,

ನ್ಯೂ ಕೆಂಪೇಗೌಡ ಬಡಾವಣೆ, ಕತ್ರಿಗುಪ್ಪೆ, ಬನಶಂಕರಿ 3 ನೇ ಹಂತ,

ಬೆಂಗಳೂರು- 560 085 


ಮೊಬೈಲ್ ಫೋನ್ ನಂ: 98456 72946 

ಈಮೇಯ್ಲ್ ವಿಳಾಸ: indfengshui@gmail.com



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top