ಬಂಟ್ವಾಳ: ಮಕ್ಕಳು ಪಠ್ಯಕ್ಕೆ ಸಂಬಂಧಿಸಿದ ಕಲಿಕೆ ಮಾಡುವ ಜೊತೆಗೆ ಪಠ್ಯೇತರವಾಗಿ ಸ್ಕೌಟ್ಸ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಜೀವನ ಕೌಶಲಗಳ ಬಗ್ಗೆ ಅನುಭವವನ್ನು ಪಡೆಯುತ್ತಾರೆ. ಇಂತಹ ಕಲಿಕೆಯು ಭದ್ರವಾಗಿ ಸೇವಾ ಮನೋಭಾವವನ್ನು ಬೆಳೆಸುತ್ತದೆ. ಈ ರೀತಿಯ ಕಲಿಕೆಯು ಬೆಳೆಯಲು ಸ್ಕೌಟ್ ಸಂಸ್ಥೆ ಪೂರಕವಾಗಿ ಕೆಲಸ ಮಾಡುತ್ತಿದೆ. ಸಮುದಾಯವನ್ನು ಶಾಲೆಯ ಜೊತೆಗೆ ಸೇರಿಸಿಕೊಂಡು ಎಮಾಜೆ ಶಾಲೆಯನ್ನು ಇಲಾಖೆಯು ಗುರುತಿಸುವಂತೆ ಮಾಡಿದ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿಯವರ ಕರ್ತವ್ಯ ನಿಷ್ಠೆ ಪ್ರಶಂಸನೀಯ ಎಂದು ಕಲ್ಲಡ್ಕ ವಲಯ ಶಿಕ್ಷಣ ಸಂಯೋಜಕರಾದ ಪ್ರತಿಮಾ ವೈ ವಿ ರವರು ಹೇಳಿದರು.
ಅವರು ಬಂಟ್ವಾಳ ತಾಲೂಕಿನ ನೆಟ್ಲ ಮೂಡ್ನೂರು ಗ್ರಾಮದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕಿರಿಯ ಪ್ರಾಥಮಿಕ ಶಾಲೆ ಏಮಾಜೆ ಇಲ್ಲಿ ನಡೆದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ 15 ನೇ ವರ್ಷದ ವಾರ್ಷಿಕ ಸ್ಕೌಟ್ಸ್ -ಗೈಡ್ಸ್ ಹಾಗೂ ಕಬ್ಸ್, ಬುಲ್ -ಬುಲ್ಸ್ ಉತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಮಾಣಿ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ಸ್ಕೌಟ್ ಮಾಸ್ಟರ್ ಶಿಕ್ಷಕಿ ಸ್ವಪ್ನ ಸ್ಕೌಟ್ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ನೆಟ್ಲ ಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಮಿತಾ.ಡಿ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ದ್ವಿಪ ಪ್ರಜ್ವಲನೆ ಮೂಲಕ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಭಯೋತ್ಪಾದಕರಿಂದ ಹತ್ಯೆಗಿಡಾದ ವೀರಯೋಧ ಕ್ಯಾಪ್ಟನ್ ಎಂ ವಿ ಪ್ರಾಂಚಲ್ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮೌನ ಪ್ರಾರ್ಥನೆ ಮಾಡಿ ನಮನ ಸಲ್ಲಿಸಲಾಯಿತು.
ವೇದಿಕೆಯಲ್ಲಿ ಪಂಚಾಯತ್ ಸದಸ್ಯರಾದ ಧನಂಜಯ ಗೌಡ, ಭಾರತ್ ಸ್ಕೌಟ್ಸ್ -ಗೈಡ್ಸ್ ಸ್ಥಳೀಯ ಸಂಸ್ಥೆ ಮಾಣಿ ಇದರ ಅಧ್ಯಕ್ಷ ಜೆ ಪ್ರಹ್ಲಾದ್ ಶೆಟ್ಟಿ, ಕೋಶಾಧಿಕಾರಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಜಿ ಇಬ್ರಾಹಿಂ ಕೆ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಮಲ್ಲಿಕಾ ಗಣೇಶ್, ಉಪಾಧ್ಯಕ್ಷರಾದ ಪ್ರಸಾದ್ ಆಚಾರ್ಯ, ಸ್ವಾಗತ ಸಮಿತಿಯ ಅಧ್ಯಕ್ಷರಾದ ಜಯರಾಮ್ ರೈ ಕರಿಂಕ ಹೊಸಮನೆ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮುರಳೀದರ ಶೆಟ್ಟಿ, ಐಈಆರ್ಟಿ ಸುರೇಖಾ, ಮಾಣಿ ಕ್ಲಸ್ಟರ್ ಸಿಅರ್ಪಿ ಸತೀಶ್ ರಾವ್, ಸ್ಥಳೀಯ ಸ್ಕೌಟ್ಸ್ -ಗೈಡ್ಸ್ ಕಾರ್ಯದರ್ಶಿ ಉಮ್ಮರಗಿ ಶರಣಪ್ಪ, ಸ್ಕೌಟ್ಸ್ -ಗೈಡ್ಸ್ ನಿರ್ದೇಶಕರಾದ ಏಮಾಜೆ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಮೊದಲಾದವರು ವೇದಿಕೆಯಲ್ಲಿದ್ದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಸ್ಕೌಟ್ಸ್ -ಗೈಡ್ಸ್ ಹಾಗೂ ಕಬ್ಸ್, ಬುಲ್ -ಬುಲ್ಸ್ ಮಕ್ಕಳ ವಿವಿಧ ಘೋಷಣೆಗಳೊಂದಿಗೆ ನಗರ ಮೆರವಣಿಗೆ ಮಾಡಲಾಯಿತು. ನಂತರ ವಿದ್ಯಾರ್ಥಿಗಳಿಗೆ ಬೆಂಕಿ ಇಲ್ಲದೆ ಆಹಾರ ಹಾಗೂ ಪಾನೀಯ ತಯಾರಿಕೆ, ರಸದಿಂದ ಕಸ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರುಗಳು, ಮಕ್ಕಳ ಪೋಷಕರು, ಶಿಕ್ಷಣ ಪ್ರೇಮಿಗಳು, ಸಂಘ ಸಂಸ್ಥೆಯ ಅಧ್ಯಕ್ಷರುಗಳು, ಸದಸ್ಯರುಗಳು ಕಾರ್ಯಕ್ರಮಕ್ಕೆ ಆಗಮಿಸಿ ಪ್ರೋತ್ಸಾಹ ನೀಡಿದರು.
ಕೆದಿಲ ಗಡಿಯಾರ ಶಾಲಾ ಶಿಕ್ಷಕ ಸದಾನಂದ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ