ಧರ್ಮಸ್ಥಳ: ಶಿವನು ನಾದ ಪ್ರಿಯನೋ ಅಥವಾ ವೇದ ಪ್ರಿಯನೋ? ಈ ಪ್ರಶ್ನೆಗೆ ಪ್ರತಿಕ್ರಿಯೆಯನ್ನು ತಮ್ಮ ಕಲಾತ್ಮಕ ನೃತ್ಯಪ್ರತಿಭೆಯ ಮೂಲಕ ಡಾ.ರಕ್ಷಾ ಕಾರ್ತಿಕ್ ಅನಾವರಣಗೊಳಿಸಿದರು. ಶ್ರೀ ಕ್ಷೇತ್ರಧರ್ಮಸ್ಥಳ ಮಂಜುನಾಥೇಸ್ವರ ದೇವಸ್ಥಾನದಲ್ಲಿ ಲಕ್ಷದೀಪೋತ್ಸವದ ಪ್ರಯುಕ್ತ ಭಾನುವಾರ ವಸ್ತು ಪ್ರದರ್ಶನ ಮಂಟಪದ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆಯಲ್ಲಿ ಶಿವನ ವಿವಿಧ ಅವತಾರಗಳು ನಾಟ್ಯದ ಮೂಲಕ ಅನಾವರಣಗೊಂಡವು.
ಭಕ್ತಿಭಂಡಾರಿ ಬಸವಣ್ಣ ರಚಿಸಿದ ‘ನಾದಪ್ರಿಯ ಶಿವನೆಂಬರು’ ವಚನವನ್ನು ಆಧರಿಸಿ ಡಾ. ರಕ್ಷಾ ಕಾರ್ತಿಕ್ ನೃತ್ಯಗೈದರು. ಶಿವನನ್ನು ನಾದಪ್ರೀಯನೋ ಅಥವಾ ವೇದಪ್ರೀಯನೋ ಎಂಬ ಪ್ರಶ್ನೆಗೆ ಕಲಾತ್ಮಕ ಉತ್ತರವನ್ನು ತಮ್ಮ ಪ್ರತಿಭೆಯಿಂದ ಕಾಣಿಸಿದರು. ಶಿವನು ಭಕ್ತಿಪ್ರಿಯ ಎನ್ನುತ್ತಾ ಕರುಳನ್ನು ವೀಣೆಯ ತಂತಿಗಳಾಗಿನ್ನಾಗಿಸಿ ರಾವಣನಿಗೆ ಒಲಿಯದ ಶಿವ ಮುಗ್ಧ ಬೇಡರ ಕಣ್ಣಪ್ಪನಿಗೆ ಒಲಿದ ಎನ್ನುವುದನ್ನು ಆಪ್ತವಾಗಿ ನೃತ್ಯದ ಮೂಲಕ ಸಾಬೀತುಪಡಿಸಿದರು.
ಮುತ್ತಯ್ಯ ಭಾಗವತಳ್ ರಚಿಸಿದ ‘ಹಿಮಗಿರಿ’ ಗೀತೆ ಆಧರಿಸಿ ದಿವ್ಯ, ಸಿಂಚನ, ದಿಯಾ, ರಿಶಿಕಾ ನೃತ್ಯ ಪ್ರಸ್ತುತಪಡಿಸಿದರು. ದೇವಿ ಹೇಗೆ ವಿವಿಧ ಆಯುಧಗಳನ್ನು ಹಿಡಿದು ಪ್ರಕಾಶಿಸುತ್ತಾಳೆ. ಆಕೆಯ ವೇಷ ಭೂಷಣ ಯಾವುದರ ಪ್ರತೀಕವಾಗಿದೆ ಎಂಬುವುದನ್ನು ಶುಧ ದನ್ಯಾತಿ ರಾಗ, ಆದಿ ತಾಳದಲ್ಲಿ ಪುಸ್ತುತ ಪಡಿಸಿದರು.
ಶಿವನ ವಿವಿಧ ರೂಪಗಳಾದ ಕಪಾಲ ಹಿಡಿದು ಭೀಕ್ಷೆ ಬೇಡುವುದು, ಕೊರಳಲ್ಲಿ ಹಾವನ್ನು ಧರಿಸಿದವನು, ಕೈಯಲ್ಲಿ ವೀಣೆ ಹಿಡಿದವ, ವಿಷ್ಣುವಿನ ಪ್ರಾಣ ಸ್ನೇಹಿತ ಎಂದೆಲ್ಲಾ ದೇವರನಾಮ ಹೇಳುತ್ತಾ ಪುರಂದರದಾಸರ ಕಿರ್ತನೆಗೆ ರಕ್ಷಾ, ದಿವ್ಯ, ಸಿಂಚನ ಅಭಿನಯದ ಮೂಲಕ ವರ್ಣಿಸಿದರು.
ಸರ್ವೇಶ್ವರ, ಕರುಣಾಕ, ವೇದಪ್ರಿಯ, ಪತಿತ ಪಾವನ, ಪಶುಪತಿ ಎಂದೆಲ್ಲಾ ಶಿವನನ್ನು ವರ್ಣಿಸುತ್ತಾರೆ. ಈ ಕೃತಿಯಲ್ಲಿ ನಟೇಶ ಕೌಶಲ್ಯವನ್ನು ಮಧ್ಯದಲ್ಲಿ ಬಳಸಿಕೊಂಡಿರುವುದು ಇವರ ವಿಶೇಷತೆಯಾಗಿದೆ. ರೇವತಿ ರಾಗ ಮತ್ತು ಆದಿ ತಾಳದಲ್ಲಿ ಮಹಾದೇವ ಶಿವ ಶಂಭೋ ಎಂಬ ಹಾಡಿಗೆ ಡಾ.ರಕ್ಷಾ ಕಾರ್ತಿಕ್ ಶಿಷ್ಯರು ಅಭಿನಯಿಸಿದರು.
ಯಾವುದೇ ರೀತಿಯ ಧ್ವನಿ ಮುದ್ರಿಕೆಯ ಸಂಗೀತ ಬಳಸದೇ ಹಿಮ್ಮೇಳನದೊಂದಿಗೆ ಕಾರ್ಯಕ್ರಮ ನೀಡುವ ಹೆಗ್ಗಳಿಕೆ ಇವರದ್ದಾಗಿದೆ. ವೇದಿಕೆಯಲ್ಲಿ ನೃತ್ಯದ ತಾಳಕ್ಕೆ ತಕ್ಕಂತ ಹಾಡುಗಾರಿಕೆ, ವೀಣಾಲಯಂ, ಮೃದಂಗ, ಕೊಳಲು, ನೃತ್ಯ ಪ್ರೀಯರನ್ನು ಆಕರ್ಷಿಸಿತು. ಹಿನ್ನೆಲೆ ಸಂಗೀತದಲ್ಲಿ ಹಾಡುಗಾರಿಕೆ ಕರ್ನಾಟಕ ಕಲಾಶ್ರೀ ಬಾಲಸುಬ್ರಮಣ್ಯ ಶರ್ಮ, ಮೃದಂಗ ವಿದ್ವಾನ್ ಜನಾರ್ಧನ್ ರಾವ್, ಕೊಳಲು ವಿದ್ವಾನ್ ಜಯರಾಮ್ ರಾವ್ ನಡೆಸಿಕೊಟ್ಟರು. ನೃತ್ಯ ಮತ್ತು ಸಂಗೀತಕ್ಕೆ ತಕ್ಕಂತಹ ಮುಖಭಾವನೆ, ನಾಟ್ಯ ಭಂಗಿಗಳು ನೆರೆದಿದ್ದ ಜನರ ಮೆಚ್ಚುಗೆಗೆ ಪಾತ್ರವಾಯಿತು. ಈ ನಾಟ್ಯ ಪ್ರದರ್ಶನವು ಶಿವಪ್ರಿಯರ ಮನಸೆಳೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ