ಬೆಂಗಳೂರು: ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಅಂಕಿತ ಪುಸ್ತಕ ವತಿಯಿಂದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಆತ್ಮಕಥನ ‘ದಿಟದ ದೀವಟಿಗೆ’ ಕೃತಿಯ ಲೋಕಾರ್ಪಣೆ ಮತ್ತು ಗಣ್ಯರಿಗೆ ಸನ್ಮಾನ ಕಾರ್ಯಕ್ರಮವು ನಗರದ ಮಹದೇವ ದೇಸಾಯಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟನೆಗೊಳಿಸಿ ಮಾತನಾಡಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಸಿ. ಸೋಮಶೇಖರ, “ಅನೇಕ ಮಹಾನುಭವರು ಹೋರಾಟದ ಹಾದಿಯಲ್ಲಿ ತಮ್ಮ ಬದುಕನ್ನು ರೂಪಿಸಿಕೊಂಡವರು. ಇವರ ಬದುಕಿನ ಸಾಧನೆಗೆ ಮೂಲ ಕಾರಣ ಅವರ ಕಠಿಣ ಪರಿಶ್ರಮ ಗುರು ಕಾರುಣ್ಯ ಮತ್ತು ಅವರ ತಂದೆ ತಾಯಿಯ ಆಶೀರ್ವಾದ. ಹೀಗೆ ತಂದೆ ತಾಯಿಗಳ ಸ್ಫೂರ್ತಿಯಿಂದ ತಮ್ಮ ಬದುಕನ್ನು ರೂಪಿಸಿದವರಲ್ಲಿ ಮಲ್ಲೇಪುರಂ ಸಹ ಒಬ್ಬರು. ಸತ್ಯದ ಬೆಳಕಿನಲ್ಲಿ ಪ್ರಕರತೆಯ ಹೋರಾಟ ಇದೆ ಎಂದು ತಿಳಿಸುವ ಕೃತಿ ‘ದಿವದ ದೀವಟಿಗೆ’. ನೋವು ದುಃಖಗಳ ಸಹಜ ಅಭಿವ್ಯಕ್ತಿ ಹಾಗೂ ಸತ್ಯದ ದರ್ಶನವನ್ನು ನಾವು ಇಲ್ಲಿ ಕಾಣಬಹುದು. ಇನ್ನು ಅವರ ಇಡೀ ಜೀವನದ ಮೂಲ ದ್ರವ್ಯ ಏನೆಂದರೆ ಅವರ ಅಧ್ಯಯನಶೀಲತೆ,” ಎಂದು ತಿಳಿಸಿದರು.
‘ದಿಟದ ದೀವಟಿಗೆ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಮಾನ್ಯ ಕುಲಪತಿಗಳು, ಪ್ರೊ. ಶ್ರೀನಿವಾಸ್, “ದಿಟದ ದೀವಟಿಗೆ ಮಲ್ಲೇಪುರಂ ಅವರ ನಿಜವಾದ ಆತ್ಮಕಥನವಾಗಿದೆ. ಏಕೆಂದರೆ ಇಲ್ಲಿ ತಾನು ಆ ಪಾತ್ರದೊಳಗೆ ಇದ್ದೇನೆ, ಆದನ್ನೇ ನಾನು ಜೀವಿಸುತ್ತಿದ್ದೇನೆ ಎನ್ನುವಂತಹ ವಿಚಾರವನ್ನು ನಾವು ಇಲ್ಲಿ ಕಾಣಬಹುದು. ಆತ್ಮಕಥನವೆನ್ನುವುದು ಇತಿಹಾಸ, ಪ್ರವಾಸ ಕಥನವಾಗಬಾರದು. ಅಂತಹ ಕಥನವಾದಗ ಅಲ್ಲಿ ವ್ಯಕ್ತಿ ಮರೆಯಾಗುತ್ತಾನೆ. ಅಷ್ಟೇ ಅಲ್ಲದೆ ಸಾಹಿತ್ಯ ಗದ್ಯ ಕೃತಿಯು ಆಗಬಾರದು. ಆಗ ಅದೊಂದು ಕಲ್ಪನಾ ಲೋಕವಾಗಿ ಹೊರಹೊಮ್ಮುತ್ತದೆ. ಆದರಿಂದ ಅದನ್ನೆಲ್ಲಾ ಮೀರಿದ ಕಥನವನ್ನು ಬರೆಯಬೇಕು. ಅಂತಹ ಕಥನವನ್ನು ಆತ್ಮಕಥನವಾಗಿ ಬರೆಯಬೇಕಾದರೆ ಮೊದಲು ಆ ವ್ಯಕ್ತಿಯು ಸಾಕ್ಷಿಯಾಗಬೇಕು. ಏಕೆಂದರೆ ತಾನು ಲೇಖಕನಾಗಿ ತನ್ನನ್ನು ತಾನು ಕಾಣದೇ ಒಬ್ಬ ಸಾಕ್ಷಿಯಾಗಿ ತನ್ನ ಜೀವನವನ್ನು ನೊಡಬೇಕಾಗುತ್ತದೆ. ಇದು ಬಹಳ ಸೂಕ್ಷ. ಇಂತಹ ವಿಚಾರವನ್ನು ನಾನು ಮಲ್ಲೇಪುರಂ ಅವರ ಆತ್ಮಕಥನದಲ್ಲಿ ಕಂಡಿದ್ದೇನೆ,” ಎಂದರು.
ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, “ನನ್ನ ಎಲ್ಲಾ ಸಾಹಿತ್ಯ ಸೇವೆಯಲ್ಲಿಯೂ ಹಲವಾರು ಸಾಹಿತ್ಯಿಕ ಗೆಳೆಯರ ಬೆಂಬಲವಿದೆ. ‘ದಿಟದ ದೀವಟಿಗೆ’ ಆತ್ಮಕಥನವನ್ನು ಹೊರತರಲು ಬಹಳಷ್ಟು ಮಂದಿ ಪ್ರೋತ್ಸಾಹವನ್ನು ನೀಡಿದ್ದಾರೆ. ಅನಾದಿಕಾಲದ ಗುರುಗಳಿಂದ ಹಿಡಿದು ಇತ್ತೀಚಿನ ಬರಹಗಾರರು ನನಗೆ ಪ್ರೀತಿಯನ್ನು ತೋರಿಸಿದ್ದಾರೆ ಈ ಸಂದರ್ಭದಲ್ಲಿ ಅವರೆಲ್ಲರಿಗೂ ನಾನು ಕೃತಜ್ಞತೆ ತಿಳಿಸುತ್ತೇನೆ,” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಾಡೋಜ ವೂಡೇ ಪಿ. ಕೃಷ್ಣ ಮಾತನಾಡಿ. ತಮ್ಮ ಜೊತೆ ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗುವ ಮನಸ್ಥಿತಿ ಮಲ್ಲೇಪುರಂ ಅವರದ್ದು. ತಾನು ಬೆಳೆಯುದರ ಜೊತೆಗೆ ಇತರರನ್ನು ಬೆಳೆಸುವ ಪ್ರವೃತ್ತಿಯನ್ನು ಹೊಂದಿದ್ದಾರೆ. ಇಂದಿನ ಈ ಕಾರ್ಯಕ್ರಮವು ರಾಜ್ಯಮಟ್ಟದ ಕಾರ್ಯಕ್ರಮವಾಗಿ ಹೊರಮ್ಮುತಿದೆ ಅದು ಬಹಳಷ್ಟು ಖುಷಿ ತಂದಿದೆ " ಎಂದರು.
ಕಾರ್ಯಕ್ರಮದಲ್ಲಿ ವಿದ್ವಾಂಸ ಮಲ್ಲೇಪುರಂ ಜಿ. ವೆಂಕಟೇಶ ಸೇರಿದಂತೆ ಹಲವಾರು ಗಣ್ಯರಿಗೆ ಗೌರವ ಸಮರ್ಪಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ವಿಸ್ತಾರ ವಾಹಿನಿಯ ಸ್ಥಾಪಕ ಹರಿಪ್ರಕಾಶ್ ಕೋಣೆಮನೆ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ