ಉಜಿರೆ: ವಿಜ್ಞಾನವು ಎಂದೂ ಮಾನವನಿಗೂ ಹಾಗೂ ಪ್ರಕೃತಿಗೆ ಇರುವ ಸಂಬಂಧವನ್ನು ಗಟ್ಟಿಗೊಳಿಸಬೇಕು, ಪ್ರಕೃತಿಯನ್ನು ಹಿತ-ಮಿತದಲ್ಲಿ ಬಳಸಿಕೊಳ್ಳುವ ಗುಣವನ್ನು ಕಲಿಸಿಕೊಡಬೇಕು ಎಂದು ನಾವೂರಿನ ಆರೋಗ್ಯ ಕ್ಲಿನಿಕ್ನ ಡಾ. ಪ್ರದೀಪ್ ಎ. ನಾವೂರು ಅಭಿಪ್ರಾಯಪಟ್ಟರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಪೂರ್ವ ಕಾರ್ಯದರ್ಶಿ ದಿ. ಡಾ. ಬಿ. ಯಶೋವರ್ಮ ಅವರ ಹುಟ್ಟು ಹಬ್ಬದ ಸವಿನೆನಪಿಗಾಗಿ ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗವು ಡಿ.5ರಂದು ಆಯೋಜಿಸಿದ್ದ 'ರೀಸೆಂಟ್ ಅಡ್ವಾನ್ಸ್ ಇನ್ ಪ್ಲಾಂಟ್ ಸೈನ್ಸ್' ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಸ್ಯ ಸಂಕುಲಗಳ ಬಗ್ಗೆ ಬಗೆದಷ್ಟು ಮೊಗೆದಷ್ಟು ವಿಷಯಗಳನ್ನು ತಿಳಿದುಕೊಳ್ಳಲು ಸಸ್ಯಶಾಸ್ತ್ರವು ಸಹಾಯ ಮಾಡುತ್ತದೆ. ಆದರೆ ಅಗತ್ಯಕ್ಕೆ ತಕ್ಕಂತೆ ಪರಿಸರವನ್ನು ಬಳಸಿಕೊಳ್ಳಬೇಕು ಎಂಬುದನ್ನು ಈ ವಿಭಾಗದಲ್ಲಿ ಕೆಲಸ ಮಾಡಿದ ಮಹನೀಯರು ಅರಿವು ಮೂಡಿಸುತ್ತಾರೆ ಎಂದರು.
ಬೇರೆ ಬೇರೆ ಸ್ಥಳಗಳಲ್ಲಿ ಆಧುನಿಕ ವಿಜ್ಞಾನವು ಸಸ್ಯಶಾಸ್ತ್ರದಲ್ಲಿ ಮಾಡಿರುವ ಸಾಧನೆಗಳನ್ನು ನಾವು ಅಧ್ಯಯನದ ಮೂಲಕ ತಿಳಿದುಕೊಳ್ಳುತ್ತೇವೆ. ಆದರೆ ಭಾರತದ ಋಷಿ ಪರಂಪರೆಯು ಸಾವಿರಾರು ವರ್ಷಗಳ ಮೊದಲೇ 'ರಸ ಪಂಚಕ' ಕ್ರಿಯೆಯ ಮೂಲಕ ಸಸ್ಯಗಳು ಮನುಷ್ಯನ ದೇಹದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವುದನ್ನು ಹೇಳುತ್ತಿದ್ದರು. ಇಂತಹ ಮಹನೀಯರ ಜ್ಞಾನವು ವಿದ್ಯಾರ್ಥಿಗಳ ಮೇಲೂ ಪ್ರಭಾವ ಬೀರಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಫಿನ್ಲ್ಯಾಂಡ್ನ ಟಾಂಪರೆ ವಿಶ್ವವಿದ್ಯಾನಿಲಯದ ಫ್ಯಾಕಲ್ಟಿ ಆಫ್ ಇಂಜಿನಿಯರಿಂಗ್ & ನ್ಯಾಚುರಲ್ ಸೈನ್ಸಸ್ ಪ್ರಾಧ್ಯಾಪಕ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ನೋಣಪ್ಪ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾಲೇಜಿನಲ್ಲಿ ಅಧ್ಯಾಪಕರು ವಿದ್ಯಾರ್ಥಿಗಳನ್ನು ಸಸಿಯಂತೆ ಪೋಷಿಸುತ್ತಾರೆ. ಅದನ್ನೇ ಅಡಿಪಾಯವಾಗಿರಿಸಿಕೊಂಡು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಹಾಗೂ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಹವಾಮಾನದಲ್ಲಾಗುವ ಬದಲಾವಣೆಯು ಮನುಷ್ಯರ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ. ಮಳೆಯನ್ನೇ ನಂಬಿಕೊಂಡ ಬೆಳೆಗಳ ಮೇಲೂ ಅತೀ ಹೆಚ್ಚು ಪರಿಣಾಮವನ್ನು ಉಂಟುಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಸಸ್ಯಶಾಸ್ತ್ರದ ಅಧ್ಯಯನವು ಸಾಕಷ್ಟು ಪ್ರಯೋಜನಕಾರಿಯಾಗಲಿವೆ ಎಂದು ಅಭಿಪ್ರಾಯಪಟ್ಟರು.
ಭೂಮಿಯ ಮೇಲಿರುವ ಪ್ರತಿಯೊಂದು ಸಸ್ಯವು ಅದರದ್ದೇ ಆದ ಔಷಧೀಯ ಗುಣವನ್ನು ಹೊಂದಿದೆ. ಆದರೆ ಅದನ್ನು ಯಾವ ಪ್ರಮಾಣದಲ್ಲಿ, ಯಾವ ವಿಧಾನದಲ್ಲಿ ಬಳಸಬೇಕು ಎಂಬ ಮಾಹಿತಿಯ ಕೊರತೆ ನಮ್ಮಲ್ಲಿದೆ. ಸಸ್ಯಗಳಲ್ಲಿನ ಔಷಧಿ ಗುಣಗಳನ್ನು ಅರಿತು, ಔಷಧಿಗಳ ತಯಾರು ಮಾಡುವವರಿಗೆ ಸಾಕಷ್ಟು ಬೇಡಿಕೆಯಿದೆ ಎಂದರು.
ಸರಳ, ವಿನಮ್ರ ಹಾಗೂ ದೂರದೃಷ್ಟಿ ಆಲೋಚನೆಗಳುಳ್ಳ ಡಾ. ಬಿ. ಯಶೋವರ್ಮರವರು ಕಾಲೇಜಿನಲ್ಲಿ 27 ವರ್ಷಗಳ ಕಾಲ ಪ್ರಾಂಶುಪಾಲರಾಗಿ ಹಾಗೂ ಸಂಸ್ಥೆಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಕಾಲದಲ್ಲಿ ವೈವಿಧ್ಯಮಯ ಸಸ್ಯಸಂಕುಲಗಳ ಪಾಲನೆ ಮಾಡುವ ಆರ್ಬೊರೇಟಮ್, ಕಾಲೇಜು ಮಾತ್ರವಲ್ಲದೆ ಉಜಿರೆ ಪರಿಸರದಲ್ಲೇ ಹಸಿರು ಕ್ರಾಂತಿಯಾಯಿತು. ಇವರು ಕೇವಲ ಅಧ್ಯಾಪಕರು ಮಾತ್ರವಲ್ಲದೆ, ಸಸ್ಯಶಾಸ್ತ್ರಜ್ಞರೂ ಆಗಿದ್ದರೂ ಎಂದು ಸ್ಮರಿಸಿಕೊಂಡರು.
ಸಸ್ಯಶಾಸ್ತ್ರ ವಿಭಾಗವು 'ಸಸ್ಯ ಸೌರಭ' ಎಂಬ ವೇದಿಕೆಯ ಮೂಲಕ ನಡೆಸಿದ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು ಹಾಗೂ 'ಸಸ್ಯ ಸೌರಭ' ವೇದಿಕೆಯಿಂದ ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿ ಆ್ಯಂಡ್ಸನ್ ಫರ್ನಾಂಡಿಸ್ ತಯಾರಿಸಿದ ಇ- ಮ್ಯಾಗಜೀನ್ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ. ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸಸ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅಭಿಲಾಷ್ ಕೆ.ಎಸ್ ನಿರೂಪಿಸಿ, ಪ್ರಾಧ್ಯಾಪಕಿ ಶಕುಂತಲಾ ಸ್ವಾಗತಿಸಿ, ಮಂಜುಶ್ರೀ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ