ಮಂಗಳೂರು: ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಸಿದ್ದರಾಮಯ್ಯ ಸರಕಾರದ ಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ದ.ಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಎಂ ಅವರು ಈ ಕುರಿತು ಪ್ರಕಟಣೆ ನೀಡಿ, ಕಾಂಗ್ರೆಸ್ ಸರಕಾರವು ಸಂವಿಧಾನ ವಿರೋಧಿಯಾಗಿ ಮುಸ್ಲಿಂ ಓಲೈಕೆ ರಾಜಕಾರಣ ನಡೆಸುತ್ತಿರುವುದನ್ನು ಬಲವಾಗಿ ಖಂಡಿಸಿದರು.
ವಿವಿಧತೆಯಲ್ಲಿ ಏಕತೆಯನ್ನು ಕಾಪಾಡಿಕೊಂಡು ಬಂದಿರುವ ಈ ದೇಶದಲ್ಲಿ ಕಾಂಗ್ರೆಸ್ ಜಾತೀಯತೆಯ ವಿಷಬೀಜವನ್ನು ಬಿತ್ತಿ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವ ರಾಜಕಾರಣವನ್ನು ಮಾಡಿರುವುದರಿಂದ ದೇಶ ತುಂಡಾಗಿರುವ ಕರಾಳ ಇತಿಹಾಸ ನಮ್ಮ ಕಣ್ಣ ಮುಂದೆಯೇ ಇದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಮಾನತೆಯಿಂದ ಕೂಡಿರಬೇಕೆಂಬ ಉದ್ದೇಶದಿಂದ ಸಮವಸ್ತ್ರ ನೀತಿ ಜಾರಿಯಲ್ಲಿದೆ. ಈ ನೀತಿಗೆ ಅನುಗುಣವಾಗಿ ಹಿಂದಿನ ಬಿಜೆಪಿ ಸರಕಾರ ಹಿಜಾಬ್ ನಿಷೇಧ ಮಾಡಿದಾಗ ಹೈಕೋರ್ಟ್ ಮಾನ್ಯ ಮಾಡಿದೆ ಹಾಗೂ ಸಮವಸ್ತ್ರ ನೀತಿಯನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದಿದೆ.
ಮುಸ್ಲಿಂ ರಾಷ್ಟ್ರಗಳಲ್ಲಿ ಹಿಜಾಬ್ ಜಾರಿಯಲ್ಲಿ ಇಲ್ಲದಿದ್ದರೂ ಇಲ್ಲಿ ಕೆಲ ಮತಾಂಧ ಸಂಘಟನೆಗಳು ಕೋಮು ಪ್ರಚೋದನೆಗೋಸ್ಕರ ಹಿಜಾಬ್ ಪ್ರಕರಣವನ್ನು ಹುಟ್ಟುಕಾಕಿರುವುವುದು ಸಾಬೀತಾಗಿದೆ. ಆದರೆ ಇದನ್ನೆಲ್ಲ ಲೆಕ್ಕಿಸದೇ ರಾಜ್ಯದಲ್ಲಿ ದುರಾಡಳಿತ ನಡೆಸುತ್ತಿರುವ ಸಿದ್ದರಾಮಯ್ಯನವರು ಮುಸ್ಲಿಂ ಓಲೈಕೆಗೋಸ್ಕರ ಹಿಜಾಬ್ ನಿಷೇಧ ಆದೇಶ ವಾಪಸ್ ತೆಗೆದುಕೊಳ್ಳುತ್ತೇನೆ ಎಂಬ ಸಂವಿಧಾನ ವಿರೋಧಿ ಹೇಳಿಕೆಯನ್ನು ಸುದರ್ಶನ ಎಂ. ಖಂಡಿಸಿದ್ದಾರೆ.
ಹಿಜಾಬ್ ನಿಷೇಧ ಆದೇಶ ವಾಪಸ್ ಪಡೆಯದೆ ಸಮವಸ್ತ್ರ ನೀತಿಯನ್ನು ಅನುಷ್ಠಾನ ಮಾಡಬೇಕೆಂದು ಅವರು ಆಗ್ರಹಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ