ಶರೀರಕ್ಕೆ ಎಣ್ಣೆಯನ್ನು ಹಚ್ಚಿ ಅದನ್ನು ಚೆನ್ನಾಗಿ ತಿಕ್ಕಿ ಅದು ತ್ವಚೆಗೆ ಚೆನ್ನಾಗಿ ಇಂಗಿದ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದನ್ನು ಅಭ್ಯಂಗಸ್ನಾನ ಎನ್ನುತ್ತಾರೆ. ಇನ್ನೊಂದು ಅರ್ಥದಲ್ಲಿ ಸೂರ್ಯೋದಯಕ್ಕೂ ಮೊದಲು ನಸುಕಿನಲ್ಲಿ ಎದ್ದು ತಲೆಗೆ ಮತ್ತು ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಂಡು ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು. ದೀಪಾವಳಿಯ ಮೂರು ಪ್ರಮುಖ ದಿನಗಳಾದ ಆಶ್ವಯುಜ ಕೃಷ್ಣ ಚತುರ್ದಶಿ, ಆಶ್ವಯುಜ ಅಮಾವಾಸ್ಯೆ ಮತ್ತು ಕಾರ್ತಿಕ ಶುಕ್ಲ ಪ್ರತಿಪದಾ ದಿನ ಅಭ್ಯಂಗ ಸ್ನಾನಕ್ಕೆ ಪ್ರಶಸ್ತವಾದ ದಿನಗಳು.
ಅಭ್ಯಂಗ ಸ್ನಾನದಿಂದ ದೇಹಕ್ಕೆ ಆಗುವ ಲಾಭಗಳು:
1. ಸ್ನಾನ ಮಾಡುವುದರಿಂದ ದೇಹದಲ್ಲಿ ಸತ್ವ ಗುಣಗಳು ಇರುತ್ತದೆ. ಅಭ್ಯಂಗ ಸ್ನಾನದಿಂದ ದೇಹಕ್ಕೆ ಪ್ರತಿಕೂಲವಾದ ರಜ-ತಮ ಗುಣಗಳು ಒಂದು ಲಕ್ಷ ಅಂಶದಷ್ಟು ಕಡಿಮೆಯಾಗಿ ಅಷ್ಟೇ ಪ್ರಮಾಣದಲ್ಲಿ ಸತ್ತ್ವಗುಣವು ಹೆಚ್ಚುತ್ತದೆ. ಇದರ ಪರಿಣಾಮವು ನಿತ್ಯವೂ ಮಾಡುವ ಸಾಮಾನ್ಯ ಸ್ನಾನದ ಸತ್ವ ಗುಣವು ಮೂರು ಗಂಟೆ ಉಳಿದರೆ, ಅಭ್ಯಂಗಸ್ನಾನದ ಸತ್ವ ಗುಣವು ನಾಲ್ಕರಿಂದ ಐದು ಗಂಟೆಗಳವರೆಗೆ ಉಳಿಯುತ್ತದೆ.
2. ಚರ್ಮಕ್ಕೆ ಸದಾ ಸ್ನಿಗ್ಧತೆಯ ಅವಶ್ಯಕತೆ ಇದ್ದು, ಅದಕ್ಕಾಗಿ ದೇಹದ ತ್ವಚೆಗೆ ಎಣ್ಣೆಯನ್ನು ಹಚ್ಚುತ್ತಾರೆ.
3. ಬಿಸಿನೀರು ಮಂಗಲಕಾರಕ ಮತ್ತು ಶರೀರಕ್ಕೆ ಸುಖದಾಯಕ ಆದ್ದರಿಂದ ಬಿಸಿ ನೀರಿನಿಂದ ಸ್ನಾನವನ್ನು ಮಾಡುತ್ತಾರೆ. ಎಣ್ಣೆಯನ್ನು ಹಚ್ಚಿದ ನಂತರ ಸ್ನಾನವನ್ನು ಮಾಡುವುದರಿಂದ ಚರ್ಮ ಮತ್ತು ಕೂದಲಿಗೆ ಬೇಕಾದಷ್ಟೇ ಎಣ್ಣೆಯ ಅಂಶವು ಉಳಿಯುವುದರಿಂದ ಸ್ನಾನಕ್ಕೆ ಮೊದಲು ಎಣ್ಣೆಯನ್ನು ಹಚ್ಚಬೇಕು. ಸ್ನಾನ ಆದ ನಂತರ ಎಣ್ಣೆಯನ್ನು ಹಚ್ಚುವುದರಿಂದ ಯಾವುದೇ ಉತ್ತಮ ಉಪಯೋಗಗಳು ಆಗುವುದಿಲ್ಲ.
ಅಭ್ಯಂಗ ಸ್ನಾನದ ಮಹತ್ವ:
ದೀಪಾವಳಿಯ ದಿನಗಳಲ್ಲಿ ಅಭ್ಯಂಗ ಸ್ನಾನ ಮಾಡುವುದರಿಂದ ವ್ಯಕ್ತಿಗೆ ಉಳಿದ ದಿನಗಳಿಗೆ ಹೋಲಿಸಿದರೆ 6% ರಷ್ಟು ಹೆಚ್ಚು ಸಾತ್ತ್ವಿಕತೆ ದೊರೆಯುತ್ತದೆ. ಸುಗಂಧಯುಕ್ತ ಎಣ್ಣೆ ಮತ್ತು ಉಟಣೆಯನ್ನು ಹಚ್ಚಿಕೊಂಡು (ಉಟಣೆ ಎಂದರೆ ಆಯುರ್ವೇದೀಯವಾದ ನೈಸರ್ಗಿಕ ಘಟಕಗಳಿಂದ ತಯಾರಿಸಿದ ಚೂರ್ಣ) ಶರೀರಕ್ಕೆ ಮಾಲೀಸು ಮಾಡಿ ಅಭ್ಯಂಗಸ್ನಾನ ಮಾಡುವುದರಿಂದ ವ್ಯಕ್ತಿಯಲ್ಲಿ ಸಾತ್ತ್ವಿಕತೆ ಮತ್ತು ತೇಜಸ್ಸು ಹೆಚ್ಚುತ್ತದೆ. ಉಟಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡುವುದರಿಂದ ದೇಹದಲ್ಲಿನ ಕಫ ಮತ್ತು ಕೊಬ್ಬು ಕಡಿಮೆಯಾಗುತ್ತದೆ. ಶರೀರಕ್ಕೆ ಉಟಣೆಯನ್ನು ಹಚ್ಚಿಕೊಳ್ಳುವುದರಿಂದ ಕಫ ಮತ್ತು ಕೊಬ್ಬು ದೂರವಾಗಿ ಶರೀರವು ಸದೃಢವಾಗಿ ತ್ವಚೆಯು ಸ್ವಚ್ಛವಾಗುತ್ತದೆ.
ಸುವಾಸನೆ ಎಣ್ಣೆ ಮತ್ತು ಉಟಣೆ ಇವು ಸಾತ್ತ್ವಿಕವಾಗಿರುವುದರಿಂದ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಅಂಶವು ನಾಶವಾಗಿ ಶರೀರವು ಶುದ್ಧ ಮತ್ತು ಸಾತ್ತ್ವಿಕವಾಗಲು ಸಹಾಯ ಮಾಡುತ್ತದೆ. ತೆಂಗಿನ ಎಣ್ಣೆ ಮತ್ತು ಉಟಣೆಳು ನೈಸರ್ಗಿಕ ವಸ್ತುಗಳಾಗಿರುವುದರಿಂದ ಅವು ಸಾತ್ತ್ವಿಕ ಅಂಶಗಳಿಂದ ಕೂಡಿರುತ್ತವೆ. ಅವುಗಳ ಸುವಾಸನೆಯೂ ಸಾತ್ತ್ವಿಕವಾಗಿರುವುದರಿಂದ ವಾಯುಮಂಡಲದಲ್ಲಿನ ಸಾತ್ತ್ವಿಕತೆಯನ್ನು ಗ್ರಹಿಸಿಕೊಳ್ಳುವ ಕ್ಷಮತೆ ಇರುತ್ತದೆ. ಸುವಾಸನೆ ಎಣ್ಣೆ ಅಥವಾ ಉಟಣೆಯನ್ನು ಹಚ್ಚಿಕೊಂಡು ಸ್ನಾನ ಮಾಡುವುದರಿಂದ ಶರೀರದಲ್ಲಿನ ರಜ-ತಮ ಅಂಶಗಳು ಕಡಿಮೆಯಾಗಿ ಸ್ಥೂಲ ಮತ್ತು ಸೂಕ್ಷ್ಮದೇಹದ ಸುತ್ತಲೂ ಇರುವ ತ್ರಾಸದಾಯಕ ಶಕ್ತಿಯು ನಾಶವಾಗಿ ಶರೀರವು ಶುದ್ಧ ಹಾಗೂ ಸಾತ್ತ್ವಿಕ ಆಗುತ್ತದೆ.
ಶರೀರಕ್ಕೆ ಎಣ್ಣೆ ಹಚ್ಚುವ ಕ್ರಮ:
ತೆಂಗಿನ ಎಣ್ಣೆಯು ರಜೋಗುಣ ಮತ್ತು ತೇಜ ತತ್ವಕ್ಕೆ ಸಂಬಂಧಿಸಿದ್ದು, ಶರೀರದ ಮೇಲೆ ಪ್ರದಕ್ಷಿಣಾಕಾರದಲ್ಲಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು. ಕೈ ಬೆರಳುಗಳ ತುದಿಯು ಶರೀರವನ್ನು ಸ್ಪರ್ಷಿಸುವಂತೆ ಮತ್ತು ಶರೀರದ ಮೇಲೆ ಸ್ವಲ್ಪ ಒತ್ತಡ ಬರುವಂತೆ ಹಚ್ಚಬೇಕು
1. ಹಣೆ: ತರ್ಜನಿ (ತೋರುಬೆರಳು), ಮಧ್ಯಮಾ (ಮಧ್ಯಬೆರಳು) ಮತ್ತು ಅನಾಮಿಕಾ (ಉಂಗುರ ಅಥವಾ ಪವಿತ್ರ ಬೆರಳು) ಇವುಗಳ ಮೂಲಕ ಹಣೆ ಮೇಲೆ ತಮ್ಮ ಎಡದಿಂದ ಬಲಕ್ಕೆ ಭಸ್ಮದಂತೆ ಎಣ್ಣೆ ಹಚ್ಚಿಕೊಳ್ಳಬೇಕು. ಉಟಣೆ ಹಚ್ಚಿಕೊಳ್ಳುವಾಗ ಬಲದಿಂದ ಎಡಕ್ಕೆ ವಿರುದ್ಧ ದಿಕ್ಕಿನಲ್ಲಿ ಬೆರಳುಗಳನ್ನು ತಿರುಗಿಸಬಾರದು. ಹಣೆಯ ಎರಡೂ ಕಡೆಗೆ ಮತ್ತು ಹುಬ್ಬುಗಳ ಹೊರಭಾಗಕ್ಕೆ ಬೆರಳುಗಳ ಅಗ್ರಭಾಗವನ್ನು ಇಟ್ಟು ಅವುಗಳನ್ನು ಹಿಂದೆ ಮುಂದೆ ಸರಿಸಬೇಕು.
2. ಕಣ್ಣು ಮತ್ತು ರೆಪ್ಪೆ : ಮೂಗಿನಿಂದ ಕಿವಿಯೆ ಕಡೆಗೆ ಕೈಯನ್ನು ತಿರುಗಿಸುತ್ತಾ ಕಣ್ಣು ರೆಪ್ಪೆಯ ಮೇಲೆ ಎಣ್ಣೆಯನ್ನು ಹಚ್ಚಬೇಕು.
3. ಮೂಗು : ಬಲಗೈಯ ಹೆಬ್ಬೆರಳು ಮತ್ತು ತೋರು ಬೆರಳಿನಿಂದ ಮೂಗಿನ ಎರಡೂ ಬದಿಗೆ ಮೇಲಿನಿಂದ ಕೆಳಗೆ ಎಣ್ಣೆಯನ್ನು ಹಚ್ಚಬೇಕು ಮತ್ತು ಅದನ್ನು ಆಘ್ರಾಣಿಸಬೇಕು (ಮೂಸುವುದು).
4. ಮುಖದ ನಾಲ್ಕೂ ಬದಿಗೆ : ಮೂಗಿನ ಕೆಳಗಿನಿಂದ ನಮ್ಮ ಬಲಬದಿಗೆ ಗದ್ದದ ತುದಿಯವರೆಗೆ ಹಚ್ಚಬೇಕು. ನಂತರ ಗದ್ದದ ತುದಿಯಿಂದ ನಮ್ಮ ಎಡಬದಿಗೆ ಹೋಗಿ ಮುಖದ ಸುತ್ತಲೂ ವೃತ್ತಾಕಾರದಲ್ಲಿ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.
5. ಕೆನ್ನೆ : ಎರಡೂ ಕೆನ್ನೆಯ ಮಧ್ಯದಿಂದ ಆರಂಭಿಸಿ ನಮ್ಮ ಬೆರಳುಗಳನ್ನು ಕಣ್ಣು, ಕಿವಿ ಮತ್ತು ಕೊನೆಗೆ ಕೆಳಗಿನ ದಿಕ್ಕಿನಲ್ಲಿ ವೃತ್ತಾಕಾರದಲ್ಲಿ ತಿರುಗಿಸುತ್ತಾ ಕೆನ್ನೆಯ ಮೇಲೆ ಎಣ್ಣೆಯನ್ನು ಹಚ್ಚಿಕೊಳ್ಳಬೇಕು.
6. ಕಿವಿಯ ಕೆಳ ತುದಿ : ಎರಡೂ ಕಿವಿಯ ಕೆಳ ತುದಿಯ ಮೇಲೆ ಹೆಬ್ಬೆರಳು ಮತ್ತು ತೋರುಬೆರಳಿನಿಂದ ಎಣ್ಣೆಯನ್ನು ಹಚ್ಚಬೇಕು.
7. ಕಿವಿ : ಹೆಬ್ಬೆರಳು ಮತ್ತು ತೋರುಬೆರಳಿನಿಂದ ಎರಡೂ ಕಿವಿಗಳನ್ನು ಹಿಂದಿನಿಂದ ಹಿಡಿದು ಕೆಳಗಿನಿಂದ ಮೇಲಿನ ದಿಕ್ಕಿನತ್ತ ತಿರುಗಿಸಬೇಕು.
8. ಕುತ್ತಿಗೆ : ಕುತ್ತಿಗೆ ಹಿಂದೆ ಮಧ್ಯಭಾಗದಲ್ಲಿ ಬೆರಳುಗಳನ್ನಿಟ್ಟು ಎರಡೂ ಬದಿಯಿಂದ ಮುಂದೆ ಕುತ್ತಿಗೆಯ ಕೆಳ ಭಾಗದ ತನಕ ಹಚ್ಚಬೇಕು
9. ಎದೆ ಮತ್ತು ಹೊಟ್ಟೆಯ ಮಧ್ಯಭಾಗ : ಎರಡೂ ಕೈಗಳ ಬೆರಳುಗಳನ್ನು ಎದೆಯ ಮಧ್ಯಭಾಗದಲ್ಲಿ ಬರುವಂತೆ ಇಟ್ಟು ಮೇಲಿನಿಂದ ಕೆಳಗೆ ಕೈಯಾಡಿಸಿ ಎಣ್ಣೆ ಹಚ್ಚಬೇಕು.
10. ಕಂಕುಳಿಂದ ಸೊಂಟದವರೆಗೆ : ಪಕ್ಕೆಗಳತ್ತ ಮುಂಬದಿಗೆ ಹೆಬ್ಬೆರಳು ಮತ್ತು ಹಿಂಬದಿ ಉಳಿದ ಬೆರಳು ಬರುವಂತೆ ಮೇಲಿನಿಂದ ಕೆಳದಿಕ್ಕಿನತ್ತ ಹಚ್ಚಬೇಕು.
11. ಕೈ-ಕಾಲು: ಕೈಗಳಿಗೆ ಮೇಲಿನಿಂದ ಕೆಳಗೆ ಎಣ್ಣೆಯನ್ನು ಹಚ್ಚಬೇಕು. ಅದೇ ರೀತಿ ಕಾಲುಗಳಿಗೆ ಕೈಬೆರಳುಗಳಿಂದ ಮೇಲಿನಿಂದ ಕೆಳಗೆ ಎಣ್ಣೆಯನ್ನು ಹಚ್ಚಬೇಕು.
12. ಕಾಲುಗಳ ಸಂದುಗಳು ಅಂದರೆ ಆಂಕಲ್ಸ್: ಕಾಲು ಮತ್ತು ಕಾಲುಗಳ ಸಂದು ಅಂದರೆ ಂಟಿಞಟe ರಿoiಟಿಣs ನ ಮೇಲೆ ಹೆಬ್ಬೆರಳು ಮತ್ತು ತೋರು ಬೆರಳಿನಿಂದ ವೃತ್ತಾಕಾರವಾಗಿ ತಿಕ್ಕಬೇಕು.
13. ತಲೆಗೆ: ಎಣ್ಣೆಯನ್ನು ಹಚ್ಚಿದ ನಂತರ ಕೊನೆಗೆ ತಲೆಯ ಮಧ್ಯಭಾಗದಲ್ಲಿ ಎಣ್ಣೆಯನ್ನು ಹಾಕಿ ಬಲಗೈಯ ಬೆರಳುಗಳಿಂದ ಎಡದಿಂದ ಬಲಕ್ಕೆ ತಿರುಗಿಸುತ್ತಾ ಹಚ್ಚಬೇಕು.
ದೀಪಾವಳಿಯಂದು ಎಣ್ಣೆ ಹಚ್ಚಿಕೊಳ್ಳುವುದರ ಅಧ್ಯಾತ್ಮಿಕ ಮಹತ್ವ:
ದೀಪಾವಳಿಯ ಕಾಲಾವಧಿಯು ಎಣ್ಣೆಯನ್ನು ಹಚ್ಚಿಕೊಳ್ಳುವುದಕ್ಕೆ ಹೆಚ್ಚು ಪೂರಕವಾಗಿದ್ದು ಎಣ್ಣೆಯನ್ನು ಉಪಯೋಗಿಸುವ ಮುಂಚೆ ಅದರಲ್ಲಿ ಸುಗಂಧವನ್ನು ಸೇರಿಸಲಾಗುತ್ತದೆ. ದೀಪಾವಳಿಯ ಕಾಲಾವಧಿಯಲ್ಲಿ ಬ್ರಹ್ಮಾಂಡದಿಂದ ಆಪ, ತೇಜ ಮತ್ತು ವಾಯುಯುಕ್ತ ಚೈತನ್ಯವು ಭೂಮಿಯ ಮೇಲೆ ಆಗಮಿಸುವ ಪ್ರಮಾಣವು ಹೆಚ್ಚಿರುತ್ತದೆ. ಆದುದರಿಂದ ವಾತಾವರಣದಲ್ಲಿ ದೇವತೆಗಳ ತತ್ತ್ವದ ಪ್ರಮಾಣವೂ ಹೆಚ್ಚಿರುತ್ತದೆ. ಈ ಕಾಲಾವಧಿಯಲ್ಲಿ ಶರೀರಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಅದರಲ್ಲಿರುವ ಘಟಕಗಳಿಂದ ಶರೀರಕ್ಕೆ ಚೈತನ್ಯವನ್ನು ಗ್ರಹಿಸುವ ಕ್ಷಮತೆಯು ಹೆಚ್ಚಾಗುತ್ತದೆ. ಇದರಿಂದ ದೇಹಕ್ಕೆ ಹೆಚ್ಚಿನ ಚೈತನ್ಯ ದೊರೆಯುತ್ತದೆ.
ಎಣ್ಣೆಯನ್ನು ಹಚ್ಚಿಕೊಳ್ಳುವುದರ ಮಹತ್ವ:
ಅಭ್ಯಂಗದಿಂದ, ಅಂದರೆ ಸ್ನಾನಕ್ಕಿಂತ ಮೊದಲು ದೇಹಕ್ಕೆ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಅಣುರೇಣು, ಸ್ನಾಯು ಮತ್ತು ದೇಹದಲ್ಲಿರುವ ಟೊಳ್ಳುಗಳು ಜಾಗೃತವಾಗಿ ಪಂಚಪ್ರಾಣಗಳನ್ನು ಕ್ರಿಯಾಶೀಲಗೊಳಿಸುತ್ತವೆ. ಜಾಗೃತಗೊಂಡ ಪಂಚಪ್ರಾಣಗಳ ಕಾರಣದಿಂದಾಗಿ ದೇಹದಲ್ಲಿರುವ ನಿರುಪಯುಕ್ತ ವಾಯುವು ತೇಗು, ಆಕಳಿಕೆ ಇತ್ಯಾದಿಗಳ ಮೂಲಕ ಹೊರಬೀಳುತ್ತದೆ. ಇದರಿಂದ ದೇಹದಲ್ಲಿರುವ ಅಣುರೇಣು, ಸ್ನಾಯು ಮತ್ತು ಆಂತರಿಕ ಟೊಳ್ಳುಗಳು ಚೈತನ್ಯವನ್ನು ಗ್ರಹಿಸಲು ಸಂವೇದನಾಶೀಲವಾಗುತ್ತವೆ. ಈ ನಿರುಪಯುಕ್ತ ವಾಯು ಅಥವಾ ದೇಹದಲ್ಲಿ ಘನೀಕೃತವಾಗಿರುವ ನಿರುಪಯುಕ್ತ ಶಕ್ತಿಯು ತಲೆ, ಮೂಗು, ಕಿವಿ ಮತ್ತು ಚರ್ಮದ ರಂಧ್ರಗಳಿಂದ ಹೊರಬೀಳುತ್ತದೆ. ಆದುದರಿಂದ ದೇಹಕ್ಕೆ ಎಣ್ಣೆಯನ್ನು ಹಚ್ಚಿದ ನಂತರ ಕೆಲವೊಮ್ಮೆ ಮುಖ ಮತ್ತು ಕಣ್ಣುಗಳು ಕೆಂಪಾಗುತ್ತವೆ.
ಆದ್ದರಿಂದ ದೀಪಾವಳಿಯ ಶುಭ ಸಂದರ್ಭದಲ್ಲಿ ಅಭ್ಯಂಗ ಸ್ನಾನವನ್ನು ಮಾಡುವುದರಿಂದ ಮನುಷ್ಯನಲ್ಲಿರುವ ಅಹಂಕಾರ, ಕೋಪ, ಜಗಳ, ಗರ್ವ ಮತ್ತು ಅಸೂಯೆಯನ್ನು ತೆಗೆದು ಹೊಸ ಭರವಸೆಯೊಂದಿಗೆ ದೇಹದ ಶುದ್ದತೆ, ಮನಸ್ಸಿನ ಆಧ್ಯಾತ್ಮಿಕ ಶುದ್ದತೆಯನ್ನು ಗಳಿಸಬಹುದು. ಆದ್ದರಿಂದ ದೀಪಾವಳಿಯ ದಿನದಂದು ಕುಟುಂಬ ಸಮೇತರಾಗಿ ಅಭ್ಯಂಗ ಸ್ನಾನ ಮಾಡೋಣ.
- ಸಂತೋಷ್ ರಾವ್ ಪೆರ್ಮುಡ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ