ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2023ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಬೆಂಗಳೂರಿನ ಡಾ. ಲಕ್ಷ್ಮಣ ವಿ.ಎ. ಅವರ ‘ಕಾಯಿನ್ ಬೂತ್’ ಎಂಬ ಕವನ ಸಂಕಲನದ ಹಸ್ತಪ್ರತಿಯು ಗೆದ್ದುಕೊಂಡಿದೆ ಎಂದು ಸಂಘದ ಸ್ಥಾಪಕಾಧ್ಯಕ್ಷರಾದ ಡಾ.ನಾ.ಮೊಗಸಾಲೆಯವರು ಘೋಷಿಸಿದ್ದಾರೆ. ಈ ಸಾಲಿನ ಸ್ಪರ್ಧೆಗೆ ಐವತ್ತ ಒಂಬತ್ತು ಹಸ್ತಪ್ರತಿಗಳು ಬಂದಿದ್ದು ಪ್ರಸಿದ್ಧ ವಿಮರ್ಶಕರಾದ ಡಾ. ರಾಜಶೇಖರ ಹಳೆಮನೆ, ಬೆಳಗೋಡು ರಮೇಶ ಭಟ್ (ವಿಭಾವರಿ ಭಟ್), ಮತ್ತು ಡಾ. ಚಿದಾನಂದ ಸಾಲಿ ಅವರುಗಳು ನೀಡಿದ ಅಂಕಗಳ ಆಧಾರದಲ್ಲಿ ಈ ಪ್ರಶಸ್ತಿಯನ್ನು ನಿರ್ಣಯಿಸಲಾಗಿದೆ.
1979ರಲ್ಲಿ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರದ ಗೌರವ ಸಂಭಾವನೆ, ತಾಮ್ರಪತ್ರ ಮತ್ತು ಸನ್ಮಾನವನ್ನು ಒಳಗೊಂಡಿದ್ದು ಪ್ರತೀ ವರುಷದಂತೆ ಈ ವರುಷದ ಪ್ರಶಸ್ತಿ ಪ್ರದಾನ ಸಮಾರಂಭವು 2024ರ ಫೆಬ್ರವರಿ ತಿಂಗಳಲ್ಲಿ ಕಾಂತಾವರದ ‘ಕನ್ನಡ ಭವನ’ದಲ್ಲಿ ನಡೆಯಲಿದ್ದು ಪ್ರಶಸ್ತಿಯ ಪ್ರಾಯೋಜಕರಾದ ಧರ್ಮದರ್ಶಿ ಶ್ರೀ ಹರಿಕೃಷ್ಣ ಪುನರೂರು ಅವರು ಪ್ರಶಸ್ತಿ ಪ್ರದಾನವನ್ನು ನೆರವೇರಿಸಲಿರುವರು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ತಿಳಿಸಿದ್ದಾರೆ.
ಡಾ.ಲಕ್ಷ್ಮಣ.ವಿ.ಎ
ಹುಟ್ಟೂರಿನಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣ ಮತ್ತು ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಪಿ.ಯು.ಸಿ ವಿದ್ಯಾಭ್ಯಾಸದ ಬಳಿಕ ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಿಂದ ವೈದ್ಯಕೀಯ ಪದವಿಯನ್ನು ಪಡೆದವರು. ಮೈಸೂರು ವಿಶ್ವವಿದ್ಯಾನಿಲಯದಿಂದ ಸಮೂಹ ಸಂವಹ ಮತ್ತು ಪ್ರತಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ತುಮಕೂರು ಜಿಲ್ಲೆ ಕೊರಟಗೆರೆ ಕಾಲೇಜಿನಿಂದ ಡಿಪ್ಲೋಮಾ ಇನ್ಫಾರ್ಮೆಸಿ ಪದವಿಯನ್ನೂ ಪಡೆದುಕೊಂಡು ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗಿ ವೈದ್ಯ ವೃತ್ತಿ ನಿರತರು.
“ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ” ಪ್ರಥಮ ಕವನ ಹಸ್ತ ಪ್ರತಿಗಾಗಿ ಕಣವಿ ಕಾವ್ಯ ಪ್ರಶಸ್ತಿ ಹಾಗೂ ಇದೇ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ ದತ್ತಿ ಬಹುಮಾನ, ಎರಡನೇ ಕವನ ಸಂಕಲನ ಅಪ್ಪನ ಅಂಗಿಗೆ ವಿಭಾ ಕಾವ್ಯ ಪ್ರಶಸ್ತಿ (ಹಸ್ತಪ್ರತಿ) ವೀಚಿ ಪ್ರಶಸ್ತಿ ಮತ್ತು ಅಡ್ವೈಸರ್ ಪ್ರಶಸ್ತಿ ಲಭಿಸಿದೆ.
ಮುಂಬಯಿ ನೇಸರು ಜಾಗತಿಕ ಕವನ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ, ಬೆರಗು ಪ್ರಕಾಶನ ಕಡಣಿ ಹಾಗೂ ಪ್ರಜಾವಾಣಿ ಜಂಟಿಯಾಗಿ ಆಯೋಜಿಸಿದ ರಾಜ್ಯಮಟ್ಟದ ಕವನ ಹಾಗೂ ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಅಂಕಣ ಬರಹ, ಕತೆ, ಕವನ, ವೈಚಾರಿಕ ಬರಹ, ಹಾಗೂ ಅನುಭವ ಕಥನ ಪ್ರಕಟವಾಗಿವೆ.
‘ಗರ್ದಿ ಗಮ್ಮತ್ತು ನೋಡಾ ಗೋಳ ಗುಮ್ಮಟ ನೋಡಾ ಮೂರನೇ ಕೃತಿ, ಮಿಲ್ಟ್ರೀ ಟ್ರಂಕು ನಾಲ್ಕನೇಯ ಕೃತಿ. ಈ ಕೃತಿಗೆ ಮಾಣಿಕ್ಯ ಪ್ರಕಾಶನ ಪ್ರಶಸ್ತಿ ಸಂದಿದೆ.
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


