ಮಂಗಳೂರು: ವಿದ್ಯೆಯಿಲ್ಲದೆ ತಮ್ಮ ತಪಸ್ಸಿನ ಮೂಲಕವೇ ಮಹರ್ಷಿಯಾದವರು ವಾಲ್ಮೀಕಿ. ಪಶ್ಚಿಮದ ಚಿಂತಕರು, ವಿದೇಶಿ ಪ್ರವಾಸಿಗರು ವಾಲ್ಮೀಕಿ ಉತ್ಕೃಷ್ಠ ಕವಿ ಎಂದು ಒಪ್ಪಿಕೊಂಡಿದ್ದಾರೆ. ಆದರೆ ದೇಶವಾಸಿಗಳೇ ವಾಲ್ಮೀಕಿಯನ್ನು ವಿರೋಧಿಸುತ್ತಿದ್ದಾರೆ. ಹಾಗಾಗಿ ವಿದೇಶಿಗರು ವಾಲ್ಮೀಕಿಯ ವಿರೋಧಿಗಳಲ್ಲ ಎಂದು ಹಿರಿಯ ಸಾಹಿತಿ ನಾರಾಯಣ ಶೇವಿರೆ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ವಿವಿ ಕಾಲೇಜಿನ ಕನ್ನಡ ಸಂಘ, ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಾಮಾಯಣ ನೈಜವೋ ಅಥವಾ ಕಾಲ್ಪನಿಕವೋ ಎಂಬ ಗೊಂದಲಗಳು ಮುಖ್ಯವಲ್ಲ. ಅದರ ಬದಲಾಗಿ ರಾಮಾಯಣ ಗ್ರಂಥದಲ್ಲಿರುವ ಆದರ್ಶಗಳು, ಜೀವನ ಮೌಲ್ಯ ಮೊದಲಾದ ಅಂಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ಈ ನಿಟ್ಟಿನಲ್ಲಿ ಮಹರ್ಷಿ ವಾಲ್ಮೀಕಿಯ ಆದರ್ಶಗಳನ್ನು ಪಾಲಿಸಬೇಕು. ರಾಮಾಯಣ ಮಹಾಗ್ರಂಥದಲ್ಲಿ ಅಡಕವಾಗಿರುವ ಸತ್ಯಗಳ ಕುರಿತು ಚಿಂತನೆ ನಡೆಸಬೇಕು. ಸಂಸ್ಕೃತದಲ್ಲಿ ಮರ ಎಂದರೆ ನಾಶ. ರಾಮನ ಆದರ್ಶ ವ್ಯಕ್ತಿತ್ವಕ್ಕೆ ವಿರೋಧವಾಗಿ ನಡೆದುಕೊಂಡರೆ ನಮ್ಮ ಜೀವನವೇ ಮರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್, ಲೋಕಾರೂಢಿಯಲ್ಲಿ ಹಣದ ಬೆನ್ನೇರುವವರಿಗೆ ರಾಮಾಯಣದ ಪ್ರಸಂಗಗಳು ಸ್ಫೂರ್ತಿಯಾಗುತ್ತವೆ. ಈ ಕಥೆಗಳು ಬದುಕಿನ ಮೌಲ್ಯಗಳನ್ನು ತಿಳಿಸಿಕೊಡುತ್ತವೆ ಎಂದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ. ಕೆ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕ ಡಾ. ನಾಗೇಶ್, ಐ.ಕ್ಯೂ.ಎ.ಸಿ. ಸಂಯೋಜಕ ಡಾ. ಸಿದ್ಧರಾಜು ಎಂ. ಎನ್. ಸೇರಿದಂತೆ ಕಾಲೇಜಿನ ಇತರ ಉಪನ್ಯಾಸಕರು ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ