ಸಂತೇಬಾಚಹಳ್ಳಿಯಲ್ಲಿ ಗೆಳೆಯರ ಬಳಗದಿಂದ ದಾಖಲೆಯ 65ನೇ ವರ್ಷದ ಗಣೇಶೋತ್ಸವ
ಕೆ.ಆರ್.ಪೇಟೆ: ತಾಲ್ಲೂಕಿನ ಸಂತೇಬಾಚಹಳ್ಳಿ ಗ್ರಾಮದಲ್ಲಿ ಬಿ. ಶಿವಪ್ಪನವರ ಸಾರಥ್ಯದಲ್ಲಿ 65ನೇ ವರ್ಷದ ಅದ್ದೂರಿ ಗಣೇಶೋತ್ಸವ ಕಾರ್ಯಕ್ರಮವು ಅತ್ಯಂತ ಸಡಗರ ಸಂಭ್ರಮದಿಂದ ನಡೆಯಿತು.
ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಗಣೇಶೋತ್ಸವ ಸಮಾರಂಭಕ್ಕೆ ಕ್ಷೇತ್ರದ ಶಾಸಕ ಹೆಚ್.ಟಿ. ಮಂಜುರವರು ಚಾಲನೆ ನೀಡಿ ಮಾತನಾಡಿ, ನಮ್ಮಲ್ಲಿ ಹಲವಾರು ಗಣೇಶೋತ್ಸವ ಸಂಘಗಳಿವೆ. ನೂರಾರು ಯುವಕರ ಸಂಘ ಸಂಸ್ಥೆಗಳಿವೆ. ಎಲ್ಲವೂ ಆರಂಭ ಶೂರತ್ವ ತೋರಿಸಿ ಒಂದೆರಡು ವರ್ಷಗಳ ನಂತರ ಸಂಘದಲ್ಲಿನ ಪದಾಧಿಕಾರಿಗಳ ನಡುವೆ ಒಮ್ಮತವಿಲ್ಲದೇ ಕೆಲವೇ ವರ್ಷದಲ್ಲಿ ಸಂಘದ ಚಟುವಟಿಕೆಗಳನ್ನು ನಿಲ್ಲಿಸಿರುವ ನಿದರ್ಶನ ಸಾಕಷ್ಟಿವೆ. ಆದರೆ ಸಂತೇಬಾಚಹಳ್ಳಿ ಗೆಳೆಯರ ಬಳಗವು ಸತತ 65 ವರ್ಷಗಳಿಂದ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ, ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಿವಪ್ಪ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದು ನುಡಿದರು.
ಈ ಸಂಘವು ನಡೆಸುವ ಗಣೇಶೋತ್ಸವ ವೀಕ್ಷಿಸಲು ನೆರೆಯ ಚನ್ನರಾಯಪಟ್ಟಣ, ನಾಗಮಂಗಲ ತಾಲ್ಲೂಕುಗಳಿಂದಲೂ ಜನರ ದಂಡೇ ಆಗಮಿಸುತ್ತದೆ ಎಂದರೆ ಈ ಸಂಘವು ಅಷ್ಟೊಂದು ಗಟ್ಟಿತನದಿಂದ ಉತ್ತಮವಾಗಿ ಗಣೇಶೋತ್ಸವ ಕಾರ್ಯಕ್ರಮವನ್ನು ಪಕ್ಷಾತೀತವಾಗಿ ನಡೆಸುತ್ತಿರುವುದೇ ಪ್ರಮುಖ ಕಾರಣವಾಗಿದೆ. ಮುಂದೆ ಈ ಸಂಘವು 100 ವರ್ಷಗಳನ್ನು ಪೂರೈಸುವಂತಾಗಲಿ ಈ ಸಂಘಕ್ಕೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ ತಿಳಿಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಬಿ.ಶಿವಪ್ಪಅವರ ಆಶಯದಂತೆ ಸಂತೇಬಾಚಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಗೂಡೇಹೊಸಹಳ್ಳಿ ಸಮೀಪದ ಹೇಮಾವತಿ ನದಿ ಮೂಲದಿಂದ ಹೋಬಳಿಯ ಕೆರೆ ಕಟ್ಟೆಗಳನ್ನು ತುಂಬಿಸಲು ಯೋಜಿಸಲಾಗಿರುವ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಒತ್ತಡ ತರುತ್ತೇನೆ. ಜೊತೆಗೆ ಸಂತೇಬಾಚಹಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆಗಳ ಶಿಥಿಲಗೊಂಡಿರುವ ಕಟ್ಟಡಗಳ ದುರಸ್ತಿಗೆ ಹಾಗೂ ಹೊಸ ಕಟ್ಟಡಗಳನ್ನು ನಿರ್ಮಿಸಿಕೊಡಲು ಅನುಧಾನ ನೀಡುವುದಾಗಿ ಶಾಸಕ ಮಂಜು ಭರವಸೆ ನೀಡಿದರು.
ಸಮಾಜ ಸೇವಕರು ಹಾಗೂ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಆರ್. ಟಿ.ಓ ಮಲ್ಲಿಕಾರ್ಜುನ್ ಮಾತನಾಡಿ, ಸಂಘದ ಸಂಸ್ಥಾಪಕ ಬಿ. ಶಿವಪ್ಪರವರು ಈ ಗೆಳೆಯರ ಬಳಗವನ್ನು ಸಹನೆ ಶಾಂತಿಯಿಂದ ಯಾವುದೇ ತೊಂದರೆ ತೊಡಕಿಲ್ಲದೆ ಶ್ರೀ ವಿನಾಯಕ ಕೃಪೆಯಿಂದ ಈ ಸಂಘವನ್ನು 83ರ ಹಿರಿಯ ಮುತ್ಸದ್ದಿಗಳಾದರೂ 18ರ ತರುಣನಂತೆ ಉತ್ಸಾಹದಿಂದ ಮುನ್ನೆಡೆಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ. ಈ ಗೆಳೆಯರ ಬಳಗಕ್ಕೆ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಸಿಗಬೇಕು. ಸತತ 65 ವರ್ಷಗಳಿಂದ ನಿರಂತರವಾಗಿ ಗಣೇಶೋತ್ಸವ ನಡೆಸುತ್ತಿರುವ ದೇಶದ ಏಕೈಕ ಸಂಘ ಸಂತೇಬಾಚಹಳ್ಳಿ ಗೆಳೆಯರ ಬಳಗ ದೇಶದಲ್ಲೆ ಪ್ರಥಮವಾಗಿರಬಹುದು. ಇದು ಸಂಸ್ಥಾಪಕ ಅಧ್ಯಕ್ಷರು ಹಾಗೂ ಬಿಬಿಎಂಪಿ ನಿವೃತ್ತ ಇಂಜಿನಿಯರ್ ಬಿ. ಶಿವಪ್ಪ ಅವರ ನಿಶ್ಕಲ್ಮಶ ಸೇವೆಯಿಂದ ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇವಲ ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾಗದೇ ಆರೋಗ್ಯ ತಪಾಸಣೆ ಶಿಬಿರಗಳು, ಗ್ರಾಮಾಭಿವೃದ್ದಿ ಕೆಲಸಗಳು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ, ವಯೋವೃದ್ದರಿಗೆ, ವಿಕಲಚೇತನರಿಗೆ ಮಾಸಾಶನ ಕೊಡಿಸುವುದು. ಹೀಗೆ ಸಾಕಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮಾದರಿ ಸಂಘವಾಗಿ ಸತತ 65 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿರುವುದು ಸಾಮಾನ್ಯ ಸಾಧನೆಯಲ್ಲ. ಮುಂದೆಯೂ ಇದೇ ರೀತಿ ಉತ್ತಮ ಕೆಲಸಗಳನ್ನು ಹಮ್ಮಿಕೊಂಡು ಮತ್ತಷ್ಟು ಹೆಮ್ಮರವಾಗಿ ಬೆಳೆಯಲಿ ಎಂದು ಮಲ್ಲಿಕಾರ್ಜುನ್ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿಗಳಾದ ಸಿ. ಮೃತ್ಯುಂಜಸ್ವಾಮಿ, ಬೆಳ್ಳೂರು ಕ್ರಾಸ್ ಆದಿಚುಂಚನಗಿರಿ ಆಸ್ಪತ್ರೆಯ ಆರ್.ಎಂ.ಓ ವೈದ್ಯರಾದ ಡಾ. ಸೋಮಶೇಖರ್, ಕೆ.ಪಿ.ಎಸ್. ಶಾಲೆಯ ಪ್ರಾಂಶುಪಾಲ ಡಿ.ಬಿ.ಸತ್ಯ, ರಾಷ್ಟ್ರೀಯ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗಳಿಸಿ ಕೀರ್ತಿ ತಂದಿರುವ ಲೋಹಿತ್ ರಂಗಸ್ವಾಮಿ, ಕೆ. ಹನುಮಂತೇಗೌಡ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ತೆಂಡೇಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಬೆಡದಹಳ್ಳಿ ಶ್ರೀ ಪಂಚಭೂತೇಶ್ವರ ಮಠದ ಶ್ರೀ ರುದ್ರಮುನಿ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮನ್ಮುಲ್ ನಿರ್ದೇಶಕ ಡಾಲು ರವಿ, ಟಿಎಪಿಸಿಎಂಎಸ್ ಸಂಸ್ಥೆಯ ಅಧ್ಯಕ್ಷ ಬಿ.ಎಲ್.ದೇವರಾಜು, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಮ್, ತಾ.ಪಂ. ಪಂಚಾಯತಿ ಸದಸ್ಯರಾದ ಮಲ್ಲೇನಹಳ್ಳಿ ಮೋಹನ್, ದೊಡ್ಡಕ್ಯಾತನಹಳ್ಳಿ ಡಿ.ಪಿ.ಪರಮೇಶ್, ಆದಿಹಳ್ಳಿ ನಾಗೇಶ್, ಸಮಾಜ ಸೇವಕ ಮೊಟ್ಟೆ ಮಂಜು, ಶಿಕ್ಷಕ ರಂಗಸ್ವಾಮಿ, ಗೊರವಿ ಗಣೇಶ್, ಮಾಜಿ ಗ್ರಾ.ಪಂ ಅಧ್ಯಕ್ಷ ಮೋಹನ್ ಗೆಳೆಯರ ಬಳಗದ ಅಧ್ಯಕ್ಷ ಗೌಡ ಜಯಕುಮಾರ್, ಕಾರ್ಯದರ್ಶಿ ಕೃಷ್ಣ, ಮಾಜಿ ಅಧ್ಯಕ್ಷ ಎಸ್.ಬಿ. ಕೃಷ್ಣಮೂರ್ತಿ, ಸಂತೇಬಾಚಹಳ್ಳಿ ಉಮೇಶರಾಜು, ರಾಜೇನಹಳ್ಳಿ ಪದ್ಮೇಶ್, ಮುಖಂಡರಾದ ನಾಗರಾಜು, ಸಂತೇಬಾಚಹಳ್ಳಿ ಸೋಮಶೇಖರ್, ನಾಗೇಶ್, ಎಸ್.ಎನ್.ದೇವರಾಜು, ಎಸ್.ಆರ್. ಕುಮಾರ್, ಎಸ್.ವಿ.ಶಿವಕುಮಾರ್, ಎಸ್.ಎಲ್. ಮಂಜುನಾಥ್, ಎಸ್.ಎಂ.ನಾಗೇಶ್, ಎಸ್.ಬಿ. ಸುರೇಶ್, ರಘುನಾಥ್, ಚೇತನ್ ಕುಮಾರ್, ಅಜಯ್, ಮಹಾಲಿಂಗ, ಆಟೋ ರಾಜೇಶ್, ಧನ್ಯಕುಮಾರ್, ಆಟೋ ಮಹಾದೇವ್, ಎಸ್.ಕೆ.ಪ್ರಕಾಶ್, ಹರ್ಷ, ನಾಗೇಶ್ ಸೇರಿದಂತೆ ನೂರಾರು ಗಣ್ಯರು ಹಾಗೂ ಸಾವಿರಾರು ಭಕ್ತಾದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಚಿಂಟು ಟಿವಿಯ ಕಿಶೋರ್ ಜಾದೂಗಾರ್ ರವರಿಂದ ಜಾದು ಪ್ರದರ್ಶನ, ಭರತನಾಟ್ಯ, ತುಮಕೂರು ಜೋತಿ ಮೆಲೋಡಿಸ್ ರವರಿಂದ ಸುಂದರ ರಸಸಂಜೆ ಕಾರ್ಯಕ್ರಮ ಹಾಗೂ ಶ್ರೀಕಾಂತ್ ಚಿಮ್ಮಲ್, ಗಾಯಕ ರವಿಶಿವಕುಮಾರ್ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ