ಕೆ.ಆರ್.ಪೇಟೆ: ಜನ ಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯಲು ಜಿಲ್ಲಾಡಳಿತವೇ ನೇರವಾಗಿ ಜನತಾದರ್ಶನ ಕಾರ್ಯಕ್ರಮ ನಡೆಸುವ ಮೂಲಕ ಕಾನೂನಿನ ಪರಿಮಿತಿ ಒಳಗಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಹರಿಸಲಾಗುವುದು, ಉಳಿದ ಸಮಸ್ಯೆಗಳ ನಿವಾರಣೆಗೆ ಕಾಲಾವಕಾಶವನ್ನು ಪಡೆದು ಹಂತ ಹಂತವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ, ಜನರಿಂದ ಅರ್ಜಿ ಸ್ವೀಕಾರ ಮಾಡಿ ಮಾತನಾಡಿದರು.
ಜನತಾದರ್ಶನ ಭಾಷಣ ಮಾಡುವ ಕಾರ್ಯಕ್ರಮವಲ್ಲ, ರೈತರ ಸಮಸ್ಯೆಗಳಿಗೆ ನೇರವಾಗಿ ಪರಿಹಾರವನ್ನು ಕಂಡುಹಿಡಿದು ಸಮಸ್ಯೆಯನ್ನು ನಿವಾರಿಸುವ ಕಾರ್ಯಕ್ರಮವಾಗಿದೆ. ಹಾಗಾಗಿ ಇಲ್ಲಿ ಹೆಚ್ಚು ಭಾಷಣಕ್ಕೆ ಅವಕಾಶವಿಲ್ಲ, ರೈತರು ಮತ್ತು ಸಾರ್ವಜನಿಕರು ಸಲ್ಲಿಸುವ ಅರ್ಜಿಗಳಿಗೆ ಪರಿಹಾರವನ್ನು ಕಂಡು ಹಿಡಿಯುವ ಮೂಲಕ ರೈತರ ಮೊಗದಲ್ಲಿ ನಗು ಮೂಡಿಸುವ ಕಾರ್ಯಕ್ರಮವಾಗಿದೆ. ಈಗಾಗಲೇ ನಾಗಮಂಗಲ ಮಳವಳ್ಳಿ ಹಾಗೂ ಮದ್ದೂರಿನಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಗಿದೆ. ಕೆ.ಆರ್. ಪೇಟೆ ತಾಲೂಕು ಕೇಂದ್ರದಲ್ಲಿ ನಡೆಯುತ್ತಿರುವ ಜನತಾದರ್ಶನ ಕಾರ್ಯಕ್ರಮವು ಕೂಡ ಸಂಪೂರ್ಣವಾಗಿ ಯಶಸ್ವಿಯಾಗಬೇಕು. ಈ ನಿಟ್ಟಿನಲ್ಲಿ ರೈತ ಬಾಂಧವರು ಹಾಗೂ ಇತರೆ ಸಾರ್ವಜನಿಕರು ಸಲ್ಲಿಸುವ ಮನವಿಗಳಿಗೆ ಶಾಶ್ವತವಾದ ಪರಿಹಾರವನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ. ಸಣ್ಣ-ಪುಟ್ಟ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರವನ್ನು ದೊರಕಿಸಿಕೊಡಲಾಗುವುದು, ಉಳಿದ ಅರ್ಜಿಗಳಿಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ನಿರ್ಧಿಷ್ಟ ಅವಧಿಯಲ್ಲಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು. ಈ ಬಗ್ಗೆ ಯಾರೂ ಕೂಡ ಅನುಮಾನ ಪಡಬೇಕಾಗಿಲ್ಲ. ರೈತರ ಸಮಸ್ಯೆಗಳಿಗೆ ಶಾಶ್ವತವಾದ ಪರಿಹಾರವನ್ನು ದೊರಕಿಸಿ ಕೊಡುವುದೇ ಜನತಾದರ್ಶನ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜಿಲ್ಲಾಡಳಿತವೇ ನೇರವಾಗಿ ರೈತರ ಮನೆ ಬಾಗಿಲಿಗೆ ಬಂದು ಸಮಸ್ಯೆಗಳ ನಿವಾರಣೆಗೆ ಮುಂದಾಗಿದೆ. ಈ ಅವಕಾಶವನ್ನು ರೈತ ಬಾಂಧವರು ಬಳಸಿಕೊಂಡು, ಸಮಸ್ಯೆಗಳಿಂದ ಮುಕ್ತರಾಗಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ್ ಹೇಳಿದರು.
ಜನತಾದರ್ಶನ ಕಾರ್ಯಕ್ರಮದಲ್ಲಿ ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ಬಡಾವಣೆಯ ನಿವೇಶನಗಳ ಸಮಸ್ಯೆ, ಕತ್ತರಘಟ್ಟ ಗ್ರಾಮದಲ್ಲಿ ವಿದ್ಯುತ್ ಅವಘಡದಿಂದ ಮೃತನಾದ ರೈತನಿಗೆ ಈವರೆಗೆ ಪರಿಹಾರ ನೀಡದಿರುವುದು, ನೆನೆಗುದಿಗೆ ಬಿದ್ದಿರುವ ಗೂಡೆಹೊಸಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿಯನ್ನು ಸಂಪೂರ್ಣಗೊಳಿಸಿ ಜನತೆಯ ಸೇವೆಗೆ ಸಮರ್ಪಿಸುವುದು. ಸರ್ಕಾರಿ ಪಾಲಿಟೆಕ್ನಿಕ್ ಹಿಂಭಾಗದ ರೈತರ ಜಮೀನುಗಳಿಗೆ ಹೋಗಲು ರಸ್ತೆಯನ್ನು ನಿರ್ಮಿಸಿ ಕೊಡುವುದು. ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೈರನಪಾಳ್ಯ ನಿವಾಸಿಗಳು 30 ವರ್ಷಗಳಿಂದ ವಾಸವಿರುವ ಮನೆಗಳಿಗೆ 94ಸಿಸಿ ಯೋಜನೆ ಅಡಿಯಲ್ಲಿ ಹಕ್ಕುಪತ್ರ ಕೊಡಿಸುವುದು. ಅಗ್ರಹಾರಬಾಚಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಹಿಂಭಾಗದಲ್ಲಿರುವ ಕೀರೆಮಡಿ ಜಾಗದಲ್ಲಿ ದಲಿತರು ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಿಕೊಟ್ಟು ಹಕ್ಕುಪತ್ರ ಕೊಡಿಸುವುದು. ರೈತರ ಪಹಣಿ ದೋಷವನ್ನು ಸರಿಪಡಿಸುವುದು, ಪೌತಿ ಖಾತೆಗಳನ್ನು ಮಾಡುವುದು, ಕೆ.ಆರ್.ಪೇಟೆ ಪಟ್ಟಣದ ರಾಮಯ್ಯ ಕಾಲೋನಿಯ ನಿವಾಸಿಗಳ ಈದ್ಗಾಮೈದಾನದ ರಸ್ತೆ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು ಸೇರಿದಂತೆ ನೂರಾರು ಸಮಸ್ಯೆಗಳಿಗೆ ರೈತ ಬಾಂಧವರು ಸಲ್ಲಿಸಿದ ಮನವಿಗಳಿಗೆ ಜಿಲ್ಲಾಧಿಕಾರಿ ಡಾ.ಕುಮಾರ್, ಶಾಸಕ ಹೆಚ್.ಟಿ. ಮಂಜು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಕ್ ತನ್ವೀರ್ ಆಸಿಫ್, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ತಹಸಿಲ್ದಾರ್ ನಿಸರ್ಗಪ್ರಿಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ತಾ.ಪಂ. ಆಡಳಿತಾಧಿಕಾರಿ ರಾಜಮೂರ್ತಿ ನೇತೃತ್ವದಲ್ಲಿ ಸುಮಾರು 300ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿ ಸಮಸ್ಯೆಯನ್ನು ಖುದ್ದು ಆಲಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ರೂಪಿಸಲಾಯಿತು. ಉಳಿದ ಅರ್ಜಿಗಳಿಗೆ ನಿರ್ದಿಷ್ಟ ಅವಧಿಯೊಳಗೆ ಪರಿಹಾರವನ್ನು ದೊರಕಿಸಿಕೊಡುವ ಭರವಸೆಯನ್ನು ಅರ್ಜಿದಾರರಿಗೆ ನೀಡಲಾಯಿತು.
ಜನತಾದರ್ಶನ ಸಭೆಯಲ್ಲಿ ಭಾಗವಹಿಸಿದ್ದ ಶಾಸಕ ಎಚ್.ಟಿ. ಮಂಜು ಮಾತನಾಡಿ ತಾಲೂಕು ಕಚೇರಿಯಲ್ಲಿ ನೂರಾರು ರೈತರ ಸಮಸ್ಯೆಗಳಿವೆ, ತಮ್ಮ ಸಮಸ್ಯೆಗಳ ಈಡೇರಿಕೆಗಾಗಿ ರೈತ ಬಾಂಧವರು ಕಚೇರಿಗಳಿಗೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ. ಜನತಾದರ್ಶನ ಕಾರ್ಯಕ್ರಮವು ರೈತ ಬಾಂಧವರ ಸಮಸ್ಯೆಗಳ ಇತ್ಯರ್ಥಕ್ಕೆ ಸೂಕ್ತ ವೇದಿಕೆಯಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓ ಅವರ ಸಮಕ್ಷಮದಲ್ಲಿಯೇ ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವು ದೊರೆಯುತ್ತಿದೆ. ಜನತಾದರ್ಶನದಲ್ಲಿ ಭಾಗವಹಿಸಿರುವ ರೈತ ಬಾಂಧವರು ಹಾಗೂ ಸಾರ್ವಜನಿಕರು ಸಲ್ಲಿಸಿರುವ ಅರ್ಜಿಗಳಿಗೆ ಆದಷ್ಟು ಬೇಗ ಪರಿಹಾರವನ್ನು ದೊರಕಿಸಿಕೊಡಲಾಗುವುದು ಎಂದು ಶಾಸಕ ಮಂಜು ಹೇಳಿದರು.
ಹಿರಿಯ ರೈತಮುಖಂಡ ಮುದುಗೆರೆ ರಾಜೇಗೌಡ, ಪಿ.ಬಿ. ಮಂಚನಹಳ್ಳಿ ನಾಗಣ್ಣಗೌಡ, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್. ದೇವರಾಜು, ಕರ್ನಾಟಕ ರಾಷ್ಟ್ರ ಸಮಿತಿಯ ಮುರುಗೇಶ್, ಬಿ.ವಿ. ನಾಗೇಶ್, ಗ್ರಾ.ಪಂ. ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಸಮಾಜ ಸೇವಾ ಕಾರ್ಯಕರ್ತರಾದ ಅಗ್ರಹಾರಬಾಚಹಳ್ಳಿ ಕಾಂತರಾಜು, ಸಮೀರ್, ಜಯಣ್ಣ, ಲಾಯರ್ ಶಂಕರೇಗೌಡ, ಚಟ್ಟಂಗೆರೆ ನಾಗೇಶ್, ಇಓ ಸತೀಶ್, ಉಪ ತಹಸೀಲ್ದಾರ್ ರವಿ, ತಾಲ್ಲೂಕು ಸರ್ವೆ ಅಧಿಕಾರಿ ಸಿದ್ದಯ್ಯ, ವಲಯ ಅರಣ್ಯಾಧಿಕಾರಿ ಅನಿತಾ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್, ಪೊಲೀಸ್ ಆರಕ್ಷಕ ನಿರೀಕ್ಷಕರಾದ ಸುಮಾ ರಾಣಿ, ಜಗದೀಶ್, ಶಾಸಕರ ಆಪ್ತ ಸಹಾಯಕ ಪ್ರತಾಪ್ ಸೇರಿದಂತೆ ತಾಲೂಕು ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜನತಾದರ್ಶನ ಕಾರ್ಯಕ್ರಮದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ನೂರಾರು ಸಂಖ್ಯೆಯಲ್ಲಿ ರೈತಬಾಂಧವರು, ಮಹಿಳೆಯರು, ವಯೋವೃದ್ಧರು, ವಿಶೇಷ ಚೇತನರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಇದೇ ಸಂದರ್ಭದಲ್ಲಿ ಹಲವು ಮಂದಿ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಸೌಲಭ್ಯಗಳ ಮಂಜೂರಾತಿ ಆದೇಶ ಪತ್ರವನ್ನು ಶಾಸಕ ಹೆಚ್.ಟಿ. ಮಂಜು ಹಾಗೂ ಜಿಲ್ಲಾಧಿಕಾರಿ ಡಾ.ಕುಮಾರ್ ಹಾಗೂ ಜಿ.ಪಂ. ಸಿಇಓ ಶೇಕ್ ತನ್ವೀರ್ ಆಸಿಫ್ ವಿತರಣೆ ಮಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ