ಲೋಕದ ಮಾತಿಗೆ ಅಂಜಿ ನಡೆದರೆ....

Upayuktha
0


ಆತನೋರ್ವ ಅತ್ಯುತ್ತಮ ಕೆಲಸಗಾರ. ಅತ್ಯಂತ ಸಜ್ಜನ ಮತ್ತು ಸ್ವಭಾವತಃ ಧರ್ಮಭೀರುವಾಗಿದ್ದನು. ಆತನ ಬಗ್ಗೆ ಎಲ್ಲೆಡೆ ಒಳ್ಳೆಯ ಪ್ರಶಂಸೆ ಕೇಳಿ ಬರುತ್ತಿತ್ತು. ಇದರಿಂದ ಆತನಿಗೆ ಸಂತಸವಾಗುತ್ತಿತ್ತಲ್ಲದೇ ಇನ್ನೂ ಹೆಚ್ಚಿನ ಒಳ್ಳೆಯ ಕೆಲಸಗಳನ್ನು ಮಾಡಲು ಈ ಪ್ರಶಂಸೆಗಳು ಪ್ರೇರಣೆ ನೀಡುತ್ತಿದ್ದವು. ಇಷ್ಟೇ ಆದರೆ ಕಥೆ ಇಲ್ಲಿಗೆ ಮುಗಿಯಬೇಕು ಆದರೆ ಹಾಗಾಗಲಿಲ್ಲ!



ಒಂದು ದಿನ ಆತ ಹೊಲದಿಂದ ಮನೆಗೆ ಮರಳುವಾಗ ಮರದಡಿಯಲ್ಲಿ ಕುಳಿತ ಕೆಲವು ಜನರು ತನ್ನೆಡೆ ಕೈ ಮಾಡಿ ಮಾತನಾಡುವುದನ್ನು ಕಂಡ ಹತ್ತಿರ ಹೋಗಿ ಕೇಳಿದಾಗ ಅವರು ಆತ ಅತ್ಯಂತ ಸೊಕ್ಕಿನ ಮನುಷ್ಯ, ತನ್ನದೇ ಸರಿ ಎಂಬ ವ್ಯಕ್ತಿತ್ವವನ್ನು ಹೊಂದಿದಾತ, ಅಹಂಭಾವಿ ಎಂದು ಬೈದುಕೊಳ್ಳುತ್ತಿದ್ದರು. ಇದರಿಂದ ಆತನಿಗೆ ಆಘಾತವಾಯಿತು. ಇಷ್ಟು ಒಳ್ಳೆಯ ವ್ಯಕ್ತಿತ್ವವನ್ನು ಹೊಂದಿರುವ ನನ್ನ ಬಗ್ಗೆ ಇವರು ಹೀಗೆ ಮಾತನಾಡಿಕೊಳ್ಳುವುದು ತರವೇ ಎಂದು ಮಾನಸಿಕವಾಗಿ ನೊಂದನು.



ಪರಿಣಾಮವಾಗಿ ಯಾರೇ ನಾಲ್ಕು ಜನರು ಕುಳಿತು ಮಾತನಾಡುತ್ತಿದ್ದರೂ ಆತನಿಗೆ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿಕೊಳ್ಳುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿತ್ತು. ಹಾಗೆ ಯಾರಾದರೂ ನಾಲ್ಕು ಜನರು ಕುಳಿತು ಮಾತನಾಡುವುದನ್ನು ಕಂಡಾಗಲೆಲ್ಲ ಅವರು ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಹಾಗೆ ಜನರ ಗುಂಪನ್ನು ನೋಡಿದಾಗಲೆಲ್ಲ ಆತನಿಗೆ ಮಾನಸಿಕ ತೊಂದರೆಯಾಗಿ ಈ ಮಾನಸಿಕ ಅಸ್ವಸ್ಥತೆಯು ಆತನಲ್ಲಿ ದೈಹಿಕ ಬಳಲಿಕೆಯನ್ನು ಕೂಡ ಬಳುವಳಿಯಾಗಿ ನೀಡಿತು. ಆತನ ಮಡದಿ ಹಲವಾರು ರೀತಿಯಲ್ಲಿ ಆತನನ್ನು ಸಾಂತ್ವನಿಸಲು ಪ್ರಯತ್ನಿಸಿದಳು. ಆದರೂ ಆಕೆಯ ಪ್ರಯತ್ನ ನಿಷ್ಪಲವಾಯಿತು.ಇದರಿಂದ ನೊಂದ ಆಕೆ ಹತ್ತಿರದ ಹಳ್ಳದ ದಂಡೆಯಲ್ಲಿರುವ ದೇವಸ್ಥಾನದ ಸ್ವಾಮೀಜಿಗಳ ಬಳಿ ಪರಿಹಾರ ಕೇಳಿ ಬರಲು ಕಳುಹಿಸಿದಳು.



ಹಾಗೆ ಆತ ಪರಿಹಾರ ಕೇಳಲು ಹೋದಾಗ ಸ್ವಾಮೀಜಿಗಳು ಆ ದಿನ ರಾತ್ರಿ ಆತನಿಗೆ ಅಲ್ಲಿಯೇ ಉಳಿದುಕೊಳ್ಳಲು ಹೇಳಿದರು. ಮಠದ ದಾಸೋಹಭವನದಲ್ಲಿ ಪ್ರಸಾದ ಸ್ವೀಕರಿಸಿದ ಆತ ಮಠದ ವ್ಯವಸ್ಥಾಪಕರು ನೀಡಿದ ಕೋಣೆಯಲ್ಲಿ ರಾತ್ರಿ ಮಲಗಿದ. ಹತ್ತಿರದ ಹಳ್ಳದ ಕಡೆಯಿಂದ ಒಂದೇ ಸಮನೆ ಕಪ್ಪೆಗಳ ವಟರ್ ವಟರ್ ಎಂಬ ಶಬ್ದ ರಾತ್ರಿಯೆಲ್ಲ ಆತನನ್ನು ನಿಶ್ಚಿಂತನಾಗಿ ಮಲಗಲು ಬಿಡಲಿಲ್ಲ.


ಮರುದಿನ ಮುಂಜಾನೆ ನಿತ್ಯ ವಿಧಿಗಳನ್ನು ಪೂರೈಸಿ ಸ್ವಾಮೀಜಿಯವರ ದರ್ಶನಕ್ಕೆ ಆತ ಬಂದು ಕುಳಿತಾಗ ಸ್ವಾಮಿಗಳು ರಾತ್ರಿ ಚೆನ್ನಾಗಿ ನಿದ್ದೆಯಾಯಿತೆ? ಎಂದು ಕೇಳಿದರು. ಅದಕ್ಕೆ ಉತ್ತರಿಸುತ್ತಾ ಆ ವ್ಯಕ್ತಿ ಅಯ್ಯೋ ಸ್ವಾಮಿ, ರಾತ್ರಿಯೆಲ್ಲ ಹಳ್ಳದ ದಂಡೆಯಲ್ಲಿರುವ ಸಾವಿರಾರು ಕಪ್ಪೆಗಳ ವಟವಟ ಶಬ್ದದಿಂದ ನಿದ್ದೆಯೇ ಇಲ್ಲದಂತಾಯಿತು ಎಂದು ಹೇಳಿದನು.



ನಸುನಕ್ಕ ಸ್ವಾಮೀಜಿ ಈ ಜಾಗದ ಸಮಸ್ಯೆಯೇ ಅಂತಹದ್ದು ನಿನ್ನ ಕೆಲವು ಜೊತೆಗಾರರನ್ನು ಕರೆದುಕೊಂಡು ಬಂದು ಆ ಕಪ್ಪೆಗಳನ್ನು ಇಲ್ಲಿಂದ ತೆಗೆಸುವೆಯಾ, ನಮಗೂ ತೊಂದರೆಯಾಗುತ್ತಿದೆ ಎಂದು ಕೇಳಿದರು. ಇದಕ್ಕೆ ಒಪ್ಪಿದ ಆ ಸಜ್ಜನ ವ್ಯಕ್ತಿ ಒಂದೆರಡು ದಿನಗಳಲ್ಲಿ ತನ್ನ ಸ್ನೇಹಿತರೊಂದಿಗೆ ಬಂದು ಕಪ್ಪೆಗಳನ್ನು ಅಲ್ಲಿಂದ ತೆರವು ಮಾಡಲು ಹೋದನು ಆದರೆ ಏನು ಆಶ್ಚರ್ಯ!! ಅಲ್ಲಿದ್ದದ್ದು ಕೇವಲ 50-60 ಕಪ್ಪೆಗಳು ಮಾತ್ರ.



ಆ ಕಪ್ಪೆಗಳನ್ನು ತೆರೆವು ಮಾಡಿ ಬಂದ ಸಜ್ಜನ ವ್ಯಕ್ತಿ ಸ್ವಾಮೀಜಿಗಳಿಗೆ ನಮಸ್ಕರಿಸಿ ಹೇಳಿದನು.... ಗುರುಗಳೇ ಅಲ್ಲಿದ್ದದ್ದು ಕೇವಲ 50-60 ಕಪ್ಪೆಗಳು ಮಾತ್ರ, ನೀವು ಹೇಳಿದಂತೆ ಸಾವಿರಾರು ಕಪ್ಪೆಗಳಲ್ಲ. ಆಗ ಗುರುಗಳು ನಾನೆಲ್ಲಿ ಸಾವಿರಾರು ಕಪ್ಪೆಗಳೆಂದು ಹೇಳಿದೆ. ನೀನೇ ಹೇಳಿದ್ದು. ಕೆಲವೇ ಕಪ್ಪೆಗಳು ಒಟಗುಡುತ್ತಿರುವುದು ನಿನಗೆ ಸಾವಿರಾರು ಕಪ್ಪೆಗಳಂತೆ ತೋರುತ್ತದೆ. ಕೆಲ ಕಪ್ಪೆಗಳಿಗೆ ವಟಗುಡುವುದೇ ಕೆಲಸ. ಅವುಗಳನ್ನು ಅವುಗಳ ಪಾಡಿಗೆ ಬಿಟ್ಟುಬಿಡಬೇಕು. ಹಾಗೆಯೇ ನಿನ್ನ ಕುರಿತು ಮಾತನಾಡುತ್ತಿರುವವರು ಕೆಲವೇ ಜನ, ಅದು ಅವರ ಅಭಿಪ್ರಾಯ. ಎಲ್ಲರ ಅಭಿಪ್ರಾಯಗಳನ್ನು ನೀನೇಕೆ ನಿನ್ನ ಮೇಲೆ ಹೇರಿಕೊಳ್ಳಬೇಕು. ಯಾರೋ ಕೆಲವರು ನಿನ್ನ ಬಗ್ಗೆ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಎಲ್ಲರೂ ನಿನ್ನ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿದುಕೊಳ್ಳುವುದು ಶುದ್ಧ ತಪ್ಪು. ಈಗಲಾದರೂ ಗೊತ್ತಾಯಿತೇ?? ಎಂದು ಮರು ಪ್ರಶ್ನಿಸಿದರು. ಗುರುಗಳ ಮಾತಿನ ಮರ್ಮವನ್ನು ಅರಿತ ಆ ಸಜ್ಜನ ವ್ಯಕ್ತಿಯ ಮನಸ್ಸು ನಿರಾಳಗೊಂಡಂತಾಗಿ, ಮುಖದಲ್ಲಿ ನಸುನಗು ಹೊತ್ತು ಗುರುಗಳ ಕಾಲಿಗೆ ಬಿದ್ದು ನಮಸ್ಕರಿಸಿದನು.



ಅಂತೆಯೇ ಮನುಷ್ಯರು ಕೂಡ. ಎಲ್ಲರನ್ನೂ ಎಲ್ಲಾ ಕಾಲದಲ್ಲಿಯೂ ಮೆಚ್ಚಿಸಲು ಸಾಧ್ಯವಿಲ್ಲ. ಮೊಸರಿನಲ್ಲಿಯೇ ಕಲ್ಲನ್ನು ಹುಡುಕುವ ಜನರಿರುವ ಕಾಲದಲ್ಲಿ ಓರ್ವ ವ್ಯಕ್ತಿಯನ್ನು ವಿವಿಧ ಕೋನಗಳಿಂದ ತಮಗೆ ಬೇಕಾದಂತೆ ಪರಾಮರ್ಶಿಸುವ ಜನರು ಇದ್ದೇ ಇರುತ್ತಾರೆ. ಅದು ಅವರ ಅಭಿಪ್ರಾಯ, ಅವರ ಅಭಿಪ್ರಾಯವೆಂದಿಗೂ ನಮ್ಮ ಅಭಿಪ್ರಾಯವಾಗಬಾರದು. ನಮ್ಮ ಕುರಿತು ಮಾತನಾಡುವವರು ನಮ್ಮ ಒಳ್ಳೆಯದಕ್ಕೆ ಹೇಳಿದ್ದರೆ ಅದನ್ನು ಪರಾಮರ್ಶಿಸಿ ನಮ್ಮನ್ನು ನಾವು ತಿದ್ದಿಕೊಳ್ಳಬಹುದು, ಅಕಸ್ಮಾತ್ ನಮ್ಮನ್ನು ಹೀಯಾಳಿಸಲೆಂದೇ ಅವರು ಹೇಳುತ್ತಿದ್ದರೆ ಅವರನ್ನು ಮತ್ತು ಅವರ ಅಭಿಪ್ರಾಯಗಳನ್ನು ದೂರವಿರಿಸುವುದು ನಮ್ಮ ಮಾನಸಿಕ ಆರೋಗ್ಯಕ್ಕೆ ಅತ್ಯಂತ ಶ್ರೇಯಸ್ಕರ. ನಿಜ ಅಲ್ಲವೇ ಸ್ನೇಹಿತರೇ?



- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ. ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top