ಲಕ್ಷ್ಮೀಪೂಜೆಯ ಮಹತ್ವ

Upayuktha
0



ಸಾಮಾನ್ಯವಾಗಿ ಅಮಾವಾಸ್ಯೆಯನ್ನು ಅಶುಭದಿನವೆಂದು ಪರಿಗಣಿಸಲಾಗುತ್ತದೆ; ಆದರೆ ಈ ಅಮಾವಾಸ್ಯೆಯು ಅದಕ್ಕೆ ಅಪವಾದವಾಗಿದೆ. ಈ ದಿನವು ಶುಭದಿನವೆಂದು ಮನ್ನಣೆ ಪಡೆದಿದೆ; ಆದರೆ ಅದು ಎಲ್ಲ ಕಾರ್ಯಗಳಿಗಲ್ಲ. ಆದುದರಿಂದ ಈ ದಿನವನ್ನು ಶುಭದಿನ ಎನ್ನುವುದಕ್ಕಿಂತ ಆನಂದದ ದಿನ ಎನ್ನುವುದೇ ಯೋಗ್ಯವಾಗಿದೆ. ಈ ದಿನ ಶ್ರೀವಿಷ್ಣುವು ಲಕ್ಷ್ಮೀಸಹಿತ ಎಲ್ಲ ದೇವತೆಗಳನ್ನು ಬಲಿಚಕ್ರವರ್ತಿಯ ಸೆರೆಮನೆಯಿಂದ ಮುಕ್ತಗೊಳಿಸಿದನು. ಅನಂತರ ಆ ಎಲ್ಲ ದೇವತೆಗಳು ಕ್ಷೀರಸಾಗರದಲ್ಲಿ ಹೋಗಿ ಮಲಗಿದರು ಎನ್ನುವ ಕಥೆ ಇದೆ. ಈ ದಿನ ‘ಪ್ರಾತಃಕಾಲದಲ್ಲಿ ಮಂಗಲಸ್ನಾನ ಮಾಡಿ ದೇವರ ಪೂಜೆ, ಮಧ್ಯಾಹ್ನ ಪಾರ್ವಣಶ್ರಾದ್ಧ ಹಾಗೂ ಬ್ರಾಹ್ಮಣಭೋಜನ ಮತ್ತು ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆಯನ್ನು ಮಾಡುತ್ತಾರೆ. ಇವು ಈ ದಿನದ ವಿಧಿಗಳಾಗಿವೆ.




ಲಕ್ಷ್ಮೀಯ ಪೂಜೆಯನ್ನು ಮಾಡುವಾಗ ಒಂದು ಚೌರಂಗದ ಮೇಲೆ ಅಕ್ಷತೆಗಳಿಂದ ಅಷ್ಟದಳ ಕಮಲ ಅಥವಾ ಸ್ವಸ್ತಿಕವನ್ನು ಬಿಡಿಸಿ ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಸ್ಥಾಪಿಸುತ್ತಾರೆ. ಕೆಲವು ಕಡೆಗಳಲ್ಲಿ ಕಲಶದ ಮೇಲೆ ತಾಮ್ರದ ತಟ್ಟೆಯನ್ನಿಟ್ಟು ಅದರ ಮೇಲೆ ಲಕ್ಷ್ಮೀಯ ಮೂರ್ತಿಯನ್ನು ಇಡುತ್ತಾರೆ. ಕಲಶದ ಮೇಲೆ ಲಕ್ಷ್ಮೀಯ ಸಮೀಪದಲ್ಲಿಯೇ ಕುಬೇರನ ಪ್ರತಿಮೆಯನ್ನು ಇಡುತ್ತಾರೆ. ಅನಂತರ ಲಕ್ಷ್ಮೀ ಮತ್ತು ಇತರ ದೇವತೆಗಳಿಗೆ ಲವಂಗ, ಏಲಕ್ಕಿ ಮತ್ತು ಸಕ್ಕರೆಯನ್ನು ಹಾಕಿ ತಯಾರಿಸಿದ ಹಸುವಿನ ಹಾಲಿನ ಖವೆಯ ನೈವೇದ್ಯವನ್ನು ಅರ್ಪಿಸುತ್ತಾರೆ. ಕೊತ್ತಂಬರಿ, ಬೆಲ್ಲ, ಭತ್ತದ ಅರಳು, ಬತ್ತಾಸು ಇತ್ಯಾದಿ ಪದಾರ್ಥಗಳನ್ನು ಲಕ್ಷ್ಮೀಗೆ ಅರ್ಪಿಸಿ ನಂತರ ಅವುಗಳನ್ನು ಆಪ್ತೇಷ್ಟರಿಗೆ ಹಂಚುತ್ತಾರೆ. ನಂತರ ಕೈಯಲ್ಲಿನ ದೀವಟಿಗೆಯಿಂದ ಪಿತೃಗಳಿಗೆ ಮಾರ್ಗದರ್ಶನ ಮಾಡುತ್ತಾರೆ. ಬ್ರಾಹ್ಮಣರಿಗೆ ಮತ್ತು ಇತರ ಹಸಿದ ವರಿಗೆ ಊಟವನ್ನು ಕೊಡುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿ ಲಕ್ಷಿ ಯು ಎಲ್ಲೆಡೆಗೆ ಸಂಚರಿಸಿ ತನ್ನ ನಿವಾಸಕ್ಕಾಗಿ ಯೋಗ್ಯ ಸ್ಥಾನವನ್ನು ಹುಡುಕುತ್ತಾಳೆ ಎಂದು ಪುರಾಣದಲ್ಲಿ ಹೇಳಲಾಗಿದೆ. 




ಎಲ್ಲಿ ಸ್ವಚ್ಛತೆ, ಶೋಭೆ ಇರುತ್ತದೆಯೋ ಅಲ್ಲಿ ಅವಳು ಆಕರ್ಷಿತಳಾಗುತ್ತಾಳೆ. ಅಲ್ಲದೆ ಯಾವ ಮನೆಯಲ್ಲಿ ಚಾರಿತ್ರ್ಯವುಳ್ಳ, ಕರ್ತವ್ಯದಕ್ಷ, ಸಂಯಮವುಳ್ಳ, ಧರ್ಮನಿಷ್ಠ ದೇವಭಕ್ತರು ಮತ್ತು ಕ್ಷಮಾಶೀಲ ಪುರುಷರು ಹಾಗೂ ಗುಣವತಿ ಮತ್ತು ಪತಿವ್ರತಾ ಸ್ತ್ರೀಯರು ಇರುತ್ತಾರೆಯೋ ಅಲ್ಲಿ ವಾಸಿಸಲು ಲಕ್ಷ್ಮೀಯು ಇಷ್ಟಪಡುತ್ತಾಳೆ.’ ಈ ಪೂಜೆಯಲ್ಲಿ ಕೊತ್ತಂಬರಿ ಮತ್ತು ಭತ್ತದ ಅರಳನ್ನು ಅರ್ಪಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಕೊತ್ತಂಬರಿಯು (ಧನಿಯಾ) ಧನವಾಚಕ ಶಬ್ದವಾಗಿದೆ ಮತ್ತು ಅರಳು ಸಮೃದ್ಧಿಯ ಪ್ರತೀಕವಾಗಿವೆ. ಸ್ವಲ್ಪ ಭತ್ತಗಳನ್ನು ಹುರಿದರೂ ಕೈತುಂಬಾ ಅರಳುಗಳಾಗುತ್ತವೆ. ಲಕ್ಷ್ಮೀಯ ಸಮೃದ್ಧಿಯಿರಬೇಕೆಂದು ಸಮೃದ್ಧಿಯ ಪ್ರತೀಕವಾಗಿರುವ ಅರಳನ್ನು ಅರ್ಪಿಸುತ್ತಾರೆ. ಆನಂತರ ಕಲಾಪ್ರೇಮಿ ಜನರಿಗೆ ಪ್ರಿಯವಾಗಿರುವ ಹಂಸವಾಹಿನಿ, ಜ್ಞಾನಸ್ವರೂಪಿಣಿ, ಜ್ಞಾನಿಯರಿಗೆ ವಿದ್ಯಾದಾನವನ್ನು ಮಾಡುವ ಮತ್ತು ಬಂದಿರುವ ಲಕ್ಷ್ಮೀಯನ್ನು ಯೋಗ್ಯರೀತಿಯಲ್ಲಿ ಉಪಯೋಗಿಸಲು ವಿವೇಕವನ್ನು ಜಾಗೃತಗೊಳಿಸುವ ಶ್ರೀಸರಸ್ವತಿ ದೇವಿಯ ಪೂಜೆಯನ್ನು ಮಾಡಬೇಕು.




ಅಲಕ್ಷ್ಮೀಯ ನಿರ್ಮೂಲನ : ಗುಣಗಳನ್ನು ನಿರ್ಮಾಣ ಮಾಡಿದರೂ ದೋಷಗಳು ನಾಶವಾಗ ಬೇಕು; ಆಗಲೇ ಗುಣಗಳಿಗೆ ಮಹತ್ವವು ಬರುತ್ತದೆ. ಇಲ್ಲಿ ಲಕ್ಷ್ಮೀಪ್ರಾಪ್ತಿಯ ಉಪಾಯವಾಯಿತು, ಹಾಗೆಯೇ ಅಲಕ್ಷಿ ಯ ನಾಶವೂ ಆಗಬೇಕು. ಇದಕ್ಕಾಗಿ ಈ ದಿನದಂದು ಹೊಸ ಪೊರಕೆಯನ್ನು ಖರೀದಿಸುತ್ತಾರೆ. ಅದಕ್ಕೆ ‘ಲಕ್ಷ್ಮೀ’ ಎನ್ನುತ್ತಾರೆ. ‘ನಡುರಾತ್ರಿಯಲ್ಲಿ ಹೊಸ ಪೊರಕೆಯಿಂದ ಕಸಗುಡಿಸಿ ಅದನ್ನು ಮೊರದಲ್ಲಿ ತುಂಬಿ ಹೊರಗೆ ಹಾಕಬೇಕು’ ಎಂದು ಹೇಳಲಾಗಿದೆ. ಇದಕ್ಕೆ ‘ಅಲಕ್ಷ್ಮೀ (ಕಸ, ದಾರಿದ್ರ್ಯ) ನಿರ್ಮೂಲನ’ ಎನ್ನುತ್ತಾರೆ. ಸಾಮಾನ್ಯವಾಗಿ ರಾತ್ರಿ ಸಮಯದಲ್ಲಿ ಕಸವನ್ನು ಗುಡಿಸುವುದಿಲ್ಲ ಅಥವಾ ಹೊರಗೆ ಹಾಕುವುದಿಲ್ಲ. ಕೇವಲ ಈ ರಾತ್ರಿ ಮಾತ್ರ ಹಾಗೆ ಮಾಡುವುದಿರುತ್ತದೆ. ಕಸ ಗುಡಿಸುವಾಗ ಮೊರ ಮತ್ತು ಚರ್ಮದ ವಾದ್ಯವನ್ನು ಬಾರಿಸಿ ಅಲಕ್ಷಿ ಯನ್ನು ಓಡಿಸುತ್ತಾರೆ.




-ಶ್ರೀ. ವಿನೋದ ಕಾಮತ್,

ರಾಜ್ಯ ವಕ್ತಾರರು, ಸನಾತನ ಸಂಸ್ಥೆ



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top