ದೇಶವನ್ನು ಪ್ರೀತಿಸಿದ ನೈಜ ನಾಯಕರಲ್ಲಿ ಡಾ.ಕಲಾಂ ಕೂಡ ಒಬ್ಬರು : ಜಯಪ್ರಕಾಶ ರಾವ್

Upayuktha
0



ಪುತ್ತೂರು: ದೇಶವನ್ನು ನಿಜವಾಗಿ ಪ್ರೀತಿಸಿದ ನಾಯಕರಲ್ಲಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಕೂಡ ಒಬ್ಬರು.  ಸ್ವಾಮಿ ವಿವೇಕಾನಂದ, ಸರ್ವಪಳ್ಳಿ ರಾಧಾಕೃಷ್ಣರಂತಹ ನಾಯಕರ ಸಾಲಿಗೆ ಸೇರುವ ಮಹಾನ್ ವ್ಯಕ್ತಿತ್ವ ಅವರದ್ದು. ಯುವ ವ್ರೃಂದ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ಡಾ.ಕಲಾಂ ದೃಢವಾಗಿ ನಂಬಿದ್ದರು ಎಂದು ಭಾರತ ಸರ್ಕಾರದ ರಕ್ಷಣಾ ಸಚಿವಾಲಯದ ಎ.ಡಿ.ಎ. ಮತ್ತು ಡಿ.ಆರ್.ಡಿ.ಒದ ಮಾಜಿ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಜಯಪ್ರಕಾಶ್ ರಾವ್ ಹೇಳಿದರು.



ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ನೆಲ್ಲಿಕಟ್ಟೆಯ ಅಂಬಿಕಾ ಪದವಿ ಪೂರ್ವ ವಿದ್ಯಾಲಯದಲ್ಲಿ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ದೃಷ್ಟಿ ಮತ್ತು ಗುರಿ ಎಂಬ ವಿಚಾರವಾಗಿ ಗುರುವಾರ ಪ್ರೇರಣಾತ್ಮಕ ಭಾಷಣ ಮಾಡಿದರು.



ನಾವು ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ಉತ್ಪನ್ನಗಳನ್ನು ಅವಲಂಬಿಸಿರುವುದರಿಂದ ಕೋಟಿ ಕೋಟಿ ರೂಪಾಯಿ ವಿದೇಶಿಯರ ಪಾಲಾಗುತ್ತದೆ. ಯುದ್ಧ ವಿಮಾನ, ಶಸ್ತ್ರಾಸ್ತ್ರಗಳಿಗಾಗಿ ದೊಡ್ಡ ಮೊತ್ತವನ್ನು ರಷ್ಯಾಕ್ಕೆ ಕೊಡುತ್ತೇವೆ. ನಮಗೆ ಬೇಕಾದದ್ದನ್ನು ನಾವೇ ತಯಾರಿಸುವಂತಾದರೆ ಆ ಬೃಹತ್ ಮೊತ್ತವನ್ನು ನಮ್ಮ ಮೂಲಭೂತ ಸೌಕರ್ಯಗಳು, ವಿದ್ಯಾಭ್ಯಾಸ, ದೇಶ ರಕ್ಷಣೆಗಾಗಿ ಬಳಸಿಕೊಳ್ಳಬಹುದು.  ಭಾರತೀಯರು ಎಲ್ಲ ಕ್ಷೇತ್ರಗಳಲ್ಲಿಯೂ ತಮ್ಮನ್ನು ತಾವು ಉತ್ತಮವಾಗಿ ತೊಡಗಿಸಿಕೊಂಡಿದ್ದಾರೆ. ವಿಶ್ವದ ಎಲ್ಲಾ ದೇಶಗಳಲ್ಲಿ ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ನಮ್ಮವರಿಲ್ಲದೆ ಒಂದು ದಿನವೂ ಪ್ರಾಪಂಚಿಕ ಕೆಲಸ ನಡೆಯಲಾರದು ಎಂದು ಅಭಿಪ್ರಾಯಪಟ್ಟರು.



ಭಾರತೀಯ ಯುವಕರು ಯಾವುದಕ್ಕೂ ಕಡಿಮೆ ಇಲ್ಲ. ನಮ್ಮ ಬುದ್ಧಿವಂತಿಕೆಯನ್ನು ದೇಶಕ್ಕೋಸ್ಕರ ತ್ಯಾಗ ಮಾಡಬೇಕು. ದೊಡ್ಡ ದೊಡ್ಡ ಕನಸು ಕಾಣುವುದಲ್ಲದೆ ಅದನ್ನು ನನಸು ಮಾಡಲು ಅವಿರತವಾಗಿ ಶ್ರಮಿಸಬೇಕು. ಆಗ ನಮ್ಮಿಂದಲೇ ನಮ್ಮ ಭಾರತ ದೇಶ ಮಹಾನ್ ದೇಶ, ವಿಶ್ವಗುರು ಆಗುವುದಕ್ಕೆ ಸಾಧ್ಯ. ಈ ತಲೆಮಾರಿನ ಹುಡುಗರು ಹುಡುಗಿಯರು ಈ ನಿಟ್ಟಿನಲ್ಲಿ ಪ್ರಯತ್ನಿಸಿ ಸಫಲರಾಗಬೇಕು ಎಂದರಲ್ಲದೆ ಇಸ್ರೋ, ಎಚ್.ಎ.ಎಲ್‍ನ ಸಾಧನೆಗಳನ್ನು, ಡಿ.ಆರ್.ಡಿ.ಒ. ಬಗೆಗಿನ ಸಂಗತಿಗಳನ್ನು ವಿಡಿಯೋ ಪ್ರದರ್ಶನದ ಮೂಲಕ ವಿವರಿಸಿದರು.



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ ಅಂಬಿಕಾದ ಉದ್ದೇಶವೇ ದೇಶ ಕಟ್ಟುವ ವಿದ್ಯಾರ್ಥಿಗಳನ್ನು ತಯಾರು ಮಾಡುವುದಾಗಿದೆ. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಇಸ್ರೋದಲ್ಲಿ, ಸೇನೆಯಲ್ಲಿ ದೇಶದ ಗೌರವಾನ್ವಿತ ಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ವಿಚಾರ. ನಾವು ಯಾವುದೇ ವೃತ್ತಿ ಕೈಗೊಂಡರೂ ಅದರಲ್ಲಿ ಹೊಸತನವಿರಬೇಕು ಹಾಗೂ ಸೇವಾ ಭಾವವಿರಬೇಕು ಎಂದರು.



 ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್ ನಟ್ಟೋಜ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿದರು. ವಿದ್ಯಾರ್ಥಿನಿ ಸೃಷ್ಟಿ ಅತಿಥಿಗಳನ್ನು ಪರಿಚಯಿಸಿದರು.ಆಂಗ್ಲಭಾಷಾ ಉಪನ್ಯಾಸಕ ಆಶಿಕ್ ಬಾಲಚಂದ್ರ ವಂದಿಸಿದರು. ವಿದ್ಯಾರ್ಥಿನಿ ಸಮೃದ್ಧಿ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top