ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್. ಯತೀಶ್ ಸಲಹೆ

ಕೆ.ಆರ್.ಪೇಟೆ: ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುವ ಅಡುಗೆ ಸಿಬ್ಬಂದಿಗಳು ಅತಿ ಹೆಚ್ಚು ಜಾಗ್ರತೆ ವಹಿಸಿ ಬಿಸಿಯೂಟ ತಯಾರಿಸಿ ಸಮರ್ಪಕವಾಗಿ ಮಕ್ಕಳಿಗೆ ವಿತರಿಸಬೇಕು ಎಂದು ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್. ಯತೀಶ್ ಅವರು ತಿಳಿಸಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ತಾಲ್ಲೂಕು ಪಂಚಾಯತಿ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕರ ಕಚೇರಿಯ ವತಿಯಿಂದ ಬಿಸಿಯೂಟ ಸಿಬ್ಬಂದಿಗಳಿಗೆ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದರು.
ತಾಲ್ಲೂಕಿನಾದ್ಯಂತ ಎಲ್ಲಾ ಶಾಲೆಗಳ ಅಡುಗೆ ಸಿಬ್ಬಂದಿಗಳಿಗೆ ಹಂತಹಂತವಾಗಿ ಒಂದು ದಿನದ ತರಬೇತಿ ನೀಡಲಾಗುತ್ತಿದ್ದು ಎಲ್ಲಿಯೂ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಶಾಲೆಗಳಲ್ಲಿ ಮಕ್ಕಳನ್ನು ಸ್ವಚ್ಚವಾದ ಸ್ಥಳದಲ್ಲಿ ಕೂರಿಸಿ ಊಟ ಬಡಿಸಬೇಕು. ಯಾವುದೇ ಕಾರಣಕ್ಕೂ ಶಾಲಾ ಮಕ್ಕಳನ್ನು ಅಡುಗೆ ಕೋಣೆಗೆ ಕರೆದುಕೊಳ್ಳಬಾರದು. ಅವರಿಂದ ಅಡುಗೆ ಕೆಲಸಗಳನ್ನು ಮಾಡಿಸಬಾರದು. ಸಣ್ಣ ಸಣ್ಣ ಪಾತ್ರೆಗಳ ಮೂಲಕ ಅನ್ನ ಮತ್ತು ಸಾಂಬಾರು ವಿತರಿಸಬೇಕು. ಮಕ್ಕಳಿಂದ ನಾವೆಲ್ಲರೂ ವೇತನ ಪಡೆಯುತ್ತಿದ್ದೇವೆ. ಹಾಗಾಗಿ ನೀವು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಬೇಕು. ಮಕ್ಕಳು ಎರಡನೇ ತಾಯಿಯ ರೂಪದಲ್ಲಿ ನಿಮ್ಮನ್ನು ನೋಡುತ್ತಾರೆ. ಆದ್ದರಿಂದ ನೀವು ರುಚಿಯಾದ, ಶುಚಿಯಾದ, ಆಹಾರವನ್ಮು ತಯಾರಿಸಿ ನೀಡಬೇಕು.
ಸ್ಥಳೀಯವಾಗಿ ಸಿಗುವ ಪೌಷ್ಟಿಕಾಂಶ ವುಳ್ಳ ಆಹಾರ ಪದಾರ್ಥಗಳನ್ನು ಬಳಸುವ ಮೂಲಕ ಮಕ್ಕಳಿಗೆ ಗುಣಮಟ್ಟದ ಆಹಾರ ತಯಾರಿಸಬೇಕು. ಮಕ್ಕಳಿಗೆ ಮುಖ್ಯ ಶಿಕ್ಷಕರಾಗಲಿ, ಅಡುಗೆ ಸಿಬ್ಬಂದಿಯಾಗಲಿ ಬಿಸಿಯೂಟದಲ್ಲಿ ಯಾವುದೇ ಕಾರಣಕ್ಕೂ ಅನ್ಯಾಯ ಮಾಡಬಾರದು. ಅಡುಗೆ ಸಿಬ್ಬಂದಿಗಳು ಅಡುಗೆ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಏಪ್ರಾನ್ ಧರಿಸಿರಬೇಕು. ಅಡುಗೆ ಕೋಣೆ, ಸುತ್ತಲಿನ ಪರಿಸರವನ್ನು ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು. ಬೆಂಕಿ ಅವಘಡಗಳು ಸಂಭವಿಸುವ ಅವಕಾಶ ಇರುವುದರಿಂದ ಅಗ್ನಿನಂದಕಗಳನ್ನು ಬಾಗಿಲ ಬಳಿ ಇಟ್ಟುಕೊಳ್ಳಬೇಕು. ಗ್ಯಾಸ್, ಕುಕ್ಕರ್, ಗ್ಯಾಸ್ಕೇಟ್ ಮುಂತಾದುವುಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಮಕ್ಕಳ ಹಾಗೂ ನಿಮ್ಮ ಸುರಕ್ಷತೆಯೇ ಮೊದಲ ಆದ್ಯತೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಕೆಲಸ ನಿರ್ವಹಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಸೀತಾರಾಮ್ ಪ್ರಾಸ್ತಾವಿಕವಾಗಿ ನುಡಿಗಳನ್ನಾಡಿ, ನಮ್ಮ ಮನೆಗಳಿಗಿಂತಲೂ ಶಾಲೆಗಳಲ್ಲಿ ಬಿಸಿಯೂಟದ ಸಿಬ್ಬಂದಿಗಳು ಬಹಳ ಉತ್ತಮವಾಗಿ ಶುಚಿ-ರುಚಿಯಾಗಿ ಆಹಾರ ತಯಾರಿಸುತ್ತಾರೆ. ತಾಲ್ಲೂಕಿನ ಎಲ್ಲಾ ಶಾಲೆಗಳಲ್ಲಿ ಅಡುಗೆ ತಯಾರಿಕೆ ಕೆಲಸದಲ್ಲಿ ಯಾವುದೇ ಸಮಸ್ಯೆಗಳು ಬಾರದಂತೆ ನೋಡಿಕೊಳ್ಳಬೇಕು. ಹಣ, ಐಶ್ವರ್ಯ ಇದ್ದರೂ ಅವುಗಳು ನಮ್ಮ ಜೊತೆ ಬರುವುದಿಲ್ಲ. ನೀವು ಗಳಿಸಿದ ಹೆಸರು, ಒಳ್ಳೆಯತನ ನಿಮ್ಮೊಂದಿಗೆ ಬರುತ್ತದೆ. ಶಾಲಾ ಮಕ್ಕಳು ನಿಮ್ಮ ಮಕ್ಕಳೆಂದು ತಿಳಿದು ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಶಾಂತಕುಮಾರ್, ಸಮೂಹ ಸಂಪನ್ಮೂಲ ವ್ಯಕ್ತಿ ನಂದೀಶ್, ಕಾರ್ತಿಕ್, ಧ್ರುವರಾಜ್ ಸೇರಿದಂತೆ ಆನೆಗೊಳ, ಬಲ್ಲೇನಹಳ್ಳಿ, ಬೀರುವಳ್ಳಿ, ಅಕ್ಕಿಹೆಬ್ಬಾಳು ಸಿ.ಆರ್.ಸಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಅಡುಗೆ ಸಿಬ್ಬಂದಿಗಳು ಹಾಜರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ