ಅ.19: ವಾಲಿ- ಸುಗ್ರೀವರ ಒಡ್ಡೋಲಗ ವೀಡಿಯೋ ಲೋಕಾರ್ಪಣೆ

Upayuktha
0




ಮಂಗಳೂರು: ತೆಂಕುತಿಟ್ಟು ಯಕ್ಷಗಾನವು ಈವರೆಗೆ ಹಲ ಕೆಲವು ತಿರುವುಗಳನ್ನು ಪಡೆದುಕೊಳ್ಳುವು ದರೊಂದಿಗೆ, ಕೆಲವು ಪ್ರಮುಖ ಅಂಶಗಳನ್ನು ಕಳಕೊಂಡದ್ದೂ ಇದೆ. ಈ ಸಾಲಿನಲ್ಲಿ ರಾಮಾಯಣ ಪ್ರಸಂಗದ ವಾಲಿ ಹಾಗೂ ಸುಗ್ರೀವರ ಒಡ್ಡೋಲಗವೂ ಒಂದು. ಸುಮಾರು 1950ನೇ ಇಸವಿಯಿಂದ ರಂಗವೇರದ ಈ ಒಡ್ಡೋಲಗ ಕ್ರಮವು ಅಳಿಯುವ ಅಂಚಿನಲ್ಲಿತ್ತು. ಇದರ ಗಂಭೀರತೆಯನ್ನು ಮನಗಂಡ ಯಕ್ಷಗಾನ ಚಿಂತಕ ರಾಜಗೋಪಾಲ್ ಕನ್ಯಾನ ಅವರು ಈ ಕುರಿತು ಅಧ್ಯಯನ- ಸಂಶೋಧನೆಗಳನ್ನು ನಡೆಸಿ ಅದರ ದಾಖಲಾತಿಗಾಗಿ ಶ್ರಮಿಸಿದರು.


ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಸೂರಿಕುಮೇರಿಯವರ ಮಾರ್ಗದರ್ಶನ ಹಾಗೂ ನಿರ್ದೇಶನದಲ್ಲಿ ಇತ್ತೀಚೆಗೆ ಇದರ ಪಾರಂಪರಿಕ ಪ್ರದರ್ಶನದ ಮೂಲಕ ವೀಡಿಯೋ ಚಿತ್ರೀಕರಣ ಮಾಡಿದರು. ಗೋವಿಂದ ಭಟ್ಟರ ಶಿಷ್ಯ ಧರ್ಮೇಂದ್ರ ಆಚಾರ್ಯ ಕೂಡ್ಲು ಹಾಗೂ ಅವರ ಶಿಷ್ಯವೃಂದದವರು ಇದರಲ್ಲಿ ಸಂಪನ್ಮೂಲ ಕಲಾವಿದರಾಗಿ ಭಾಗವಹಿಸಿದ್ದಾರೆ. 


ಹಿಮ್ಮೇಳದಲ್ಲಿ ಭಾಗವತರಾಗಿ ತಲ್ಪನಾಜೆ ವೆಂಕಟ್ರಮಣ ಭಟ್, ಮದ್ದಳೆವಾದನದಲ್ಲಿ ಲಕ್ಷ್ಮೀಶ ಬೇಂಗ್ರೋಡಿ ಹಾಗೂ ಶುಭಶರಣ ತಾಳ್ತಜೆ, ಚೆಂಡೆವಾದನದಲ್ಲಿ ಮುರಾರಿ ಕಡಂಬಳಿತ್ತಾಯ ಮಂಗಳೂರು ಹಾಗೂ ಚಕ್ರತಾಳದಲ್ಲಿ ಕಿರಣ್ ಕುದ್ರೆಕೋಡ್ಳು ಸಹಕರಿಸಿದ್ದಾರೆ.


ಯಕ್ಷಗಾನ ಪರಂಪರೆಯ 'ವಾಲಿ- ಸುಗ್ರೀವರ ಒಡ್ಡೋಲಗ ದಾಖಲೀಕರಣದ ಈ ವೀಡಿಯೋವನ್ನು ಮಧುಸೂದನ ಅಲೆವೂರಾಯರ ಯೂಟ್ಯೂಬ್ ಚಾನೆಲಿನ ಮೂಲಕ ಅಕ್ಟೋಬರ್ 19, 2023ನೇ ಗುರುವಾರದಂದು ಬೆಳಗ್ಗೆ ಗಂಟೆ 10.30ಕ್ಕೆ ಮಂಗಳೂರಿನ ಪ್ರೆಸ್ ಕ್ಲಬ್ಬಿನಲ್ಲಿ ಲೋಕಾರ್ಪಣೆ ಗೊಳಿಸಲಾಗುವುದು.


ಲೋಕಾರ್ಪಣೆಯನ್ನು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ನೆರವೇರಿಸುವರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಅರ್ಥಧಾರಿ ಮತ್ತು ಚಿಂತಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ವಿದುಷಿ ಸುಮಂಗಲಾ ರತ್ನಾಕರ್ (ನಿರ್ದೇಶಕರು, ಯಕ್ಷಾರಾಧನಾ ಕಲಾಕೇಂದ್ರ (ರಿ) ಮಂಗಳೂರು) ಭಾಗವಹಿಸುವರು.


ಈ ವೀಡಿಯೋ ದಾಖಲೀಕರಣದ ನಿರ್ದೇಶಕರಾದ ಕೆ.ಗೋವಿಂದ ಭಟ್ ಹಾಗೂ ಸಂಶೋಧಕ- ಸಂಯೋಜಕರಾದ ಕೆ.ಪಿ. ರಾಜಗೋಪಾಲ್ ಕನ್ಯಾನ ಅವರು ಉಪಸ್ಥಿತರಿರುವರು. 


ಕಾರ್ಯಕ್ರಮವು ಮಧುಸೂದನ ಅಲೆವೂರಾಯರ ಯೂಟ್ಯೂಬ್ ಚಾನೆಲಿನ ಆಶ್ರಯದಲ್ಲಿ ನಡೆಯಲಿದ್ದು, ಎಲ್ಲರ ಸಹಕಾರವನ್ನು ಸಂಯೋಜಕರು ಅಪೇಕ್ಷಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top