ತುಳುನಾಡಿನ ಸಾಂಪ್ರದಾಯಿಕ ಕಲೆಗಳು ಎಂದಾಗ ಮೊದಲಿಗೆ ನೆನಪಿಗೆ ಬರುವುದು ಯಕ್ಷಗಾನ. ಅಂತಹ ಕಲೆಯಲ್ಲಿ ತೊಡಗಿಸಿಕೊಂಡಿರುವರು ಸ್ವಸ್ತಿಶ್ರೀ. ಯಕ್ಷಗಾನ ಒಬ್ಬ ವ್ಯಕ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಿದೆ. ಹಾಗಿರುವಾಗ ಇಂತಹ ಕಲೆಯನ್ನು ಬಳಸಿಕೊಂಡವರ ಏಳಿಗೆಯಾಗುವುದರಲ್ಲಿ ಸಂಶಯವಿಲ್ಲ.
ಸ್ವಸ್ತಿಶ್ರೀ ವೆಂಕಟೇಶ.ಡಿ ಹಾಗೂ ಜ್ಯೋತಿ ಎಂ.ಜಿ. ಇವರ ಪುತ್ರಿ. ಈಕೆ ಎಕ್ಸ್ಪರ್ಟ್ ಕಾಲೇಜ್ ನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಯಕ್ಷಗಾನದ ಸರ್ವತೋಮುಖ ಅಭಿವೃದ್ಧಿಗಾಗಿ ಕಲಿಕೆಯೊಂದಿಗೆ ತೊಡಗಿಸಿಕೊಳ್ಳುತ್ತೇನೆ ಎಂಬುದು ಸ್ವಸ್ತಿಶ್ರೀಯವರ ಮಾತು.
ತಾಯಿ ಮತ್ತು ತಂದೆಯ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದ ಸ್ವಸ್ತಿಶ್ರೀ, ಮಂಜುನಾಥ ಕುಲಾಲ್ ಐರೋಡಿ ಹಾಗೂ ಸೀತಾರಾಮ ಕುಮಾರ್ ಕಟೀಲ್ ಇವರ ಬಳಿ ಯಕ್ಷಗಾನವನ್ನು ಕಲಿಯುತ್ತಿದ್ದಾರೆ.
ಪಾತ್ರದ ಹಿಡಿತ, ಪಾತ್ರಕ್ಕೆ ಬೇಕಾದ ತಯಾರಿಯನ್ನು ಈಗಾಗಲೇ ಆ ಪಾತ್ರದಲ್ಲಿ ಅನುಭವ ಇರುವ ಪಾತ್ರಧಾರಿಯಿಂದ ತಿಳಿದು, ಕಲಿತು ಹಾಗೂ ಭಾಗವತರಿಂದ ಸರಿಯಾಗಿ ಅರಿತು ರಂಗದ ನಡೆಗೆ ಚ್ಯುತಿ ಬಾರದಂತೆ ಅಳವಡಿಸಿ ಯಕ್ಷಗಾನವನ್ನು ಚಾಚು ತಪ್ಪದಂತೆ ಬೆಳೆಸುವುದರೊಂದಿಗೆ ತಾನು ಬೆಳೆಯುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.
ಅಭಿಮನ್ಯು ಕಾಳಗ, ಜಾಂಬವತಿ ಕಲ್ಯಾಣ, ಮೀನಾಕ್ಷಿ ಪರಿಣಯ, ಬಬ್ರುವಾಹನ ಕಾಳಗ, ಶ್ರೀ ಕೃಷ್ಣ ಲೀಲಾಮೃತ, ಪಾಂಚಜನ್ಯ, ಪಂಚವಟಿ ನೆಚ್ಚಿನ ಪ್ರಸಂಗಗಳು. ಮೀನಾಕ್ಷಿ, ಅಭಿಮನ್ಯು, ಷಣ್ಮುಖ, ರುಕ್ಮಾಂಗ, ಅಸಿಕೆ, ಕೃಷ್ಣ, ಬಬ್ರುವಾಹನ ಹಾಗೂ ಇನ್ನು ಅನೇಕ ಇವರ ನೆಚ್ಚಿನ ಪಾತ್ರಗಳು.
ಯಕ್ಷಗಾನದ ಇಂದಿನ ಸ್ಥಿತಿ ಗತಿ ಹಾಗೂ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಯಕ್ಷಗಾನದ ಇಂದಿನ ಸ್ಥಿತಿ ಗತಿ ಬಗ್ಗೆ ಜಾಸ್ತಿ ತಿಳಿಯದು ಹಾಗೂ ಪ್ರೇಕ್ಷಕರ ಪ್ರೋತ್ಸಾಹವೇ ನನಗೆ ಆಶೀರ್ವಾದ. ಮೇಳಗಳಲ್ಲಿ ತಿರುಗಾಟ ಮಾಡದಿದ್ದರೂ ಅನೇಕ ಮೇಳಗಳ ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸಿದ್ದೇನೆ. ಮುಖ್ಯವಾಗಿ ಪೆರ್ಡೂರು, ಸಾಲಿಗ್ರಾಮ, ಹನುಮಗಿರಿ, ಸಿಗಂದೂರು, ಗೋಳಿಗರಡಿ, ಹಿರಿಯಡ್ಕ, ಸೌಕೂರು, ಹಾಲಾಡಿ, ಬಪ್ಪನಾಡು ಹೀಗೆ ತೆಂಕು ಹಾಗೂ ಬಡಗು ಮೇಳಗಳ ರಂಗಸ್ಥಳದಲ್ಲಿ ಬೇರೆ ಬೇರೆ ಪ್ರಸಂಗ ಗಳಲ್ಲಿ ಪಾತ್ರ ವನ್ನು ಮಾಡಿರುತ್ತೇನೆ ಎಂದು ಹೇಳುತ್ತಾರೆ ಸ್ವಸ್ತಿಶ್ರೀ.
ಸನ್ಮಾನ ಹಾಗೂ ಪ್ರಶಸ್ತಿ:-
♦ ಉತ್ತಮ ತೆಂಕು ಪುಂಡುವೇಷ ಪ್ರಶಸ್ತಿ, ಉತ್ತಮ ಸ್ತ್ರೀ ವೇಷ ಪ್ರಶಸ್ತಿ ಹಾಗೂ ಮಾತುಗಾರಿಕೆ ಮತ್ತು ನಾಟ್ಯಕ್ಕಾಗಿ ಪ್ರಶಸ್ತಿ.
♦ ಕಲ್ಕೂರ ಪ್ರತಿಷ್ಠಾನದಿಂದ ಸತತ ನಾಲ್ಕು ಬಾರಿ ಯಕ್ಷ ಕೃಷ್ಣ ಪ್ರಶಸ್ತಿ.
ಅಲ್ಲದೆ ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಮತ್ತು ಪ್ರಶಸ್ತಿ.
ಕೋಟೇಶ್ವರದ ಜೋಡಾಟದಲ್ಲಿ ಮದನಾಕ್ಷಿಯಾಗಿ ದಕ್ಷಿಣ ಕನ್ನಡದಿಂದ ಭಾಗವಹಿಸಿದ ಏಕೈಕ ಮಹಿಳಾ ಕಲಾವಿದೆ.
ಯಕ್ಷಗಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅಧ್ಯಯನ
ಸನಾತನ ಸಂಸ್ಕೃತಿ - ಸಂಪ್ರದಾಯ, ಪುರಾಣ, ಸ್ತೋತ್ರ ಮತ್ತು ಶ್ಲೋಕಗಳ ಅಧ್ಯಯನ ಇವರ ಹವ್ಯಾಸಗಳು. ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
-ಶ್ರವಣ್ ಕಾರಂತ್ ಕೆ,
ಶಕ್ತಿನಗರ ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ