ಹಾಸನ: ನಾಡಿನ ಅಪ್ರತಿಮ ನಿಸರ್ಗ ಚಿತ್ರ ಕಲಾವಿದರು, ಜನಪದ ತಜ್ಞರು ಹಾಗೂ ಸಾಹಿತಿಗಳಾದ ಶ್ರೀ ಪಿ.ಆರ್ ತಿಪ್ಪೇಸ್ವಾಮಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ನವೆಂಬರ್ 5ರಂದು ಹಮ್ಮಿಕೊಳ್ಳಲಾಗುತ್ತಿದ್ದು, ಇದಕ್ಕೆ ಸಂಬಂಧಿಸಿದ ಪೂರ್ವಭಾವಿ ಸಭೆ ಹಾಸನದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಲ್ಲಿ ಭಾನುವಾರ (ಅ.8) ನಡೆಯಿತು.
ನವೆಂಬರ್ 5ರಂದು ಬೆಳಿಗ್ಗೆ ಜಿಲ್ಲೆಯ ಶಾಲಾ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಚಿತ್ರ ಬರೆಯುವ ಸ್ಪರ್ಧೆ ಏರ್ಪಡಿಸುವುದು, ಮಧ್ಯಾಹ್ನ ಕಲಾವಿದರಿಂದ ಪ್ರಾತ್ಯಕ್ಷಿಕೆ ಮತ್ತು ಸಂಜೆ ಸಮಾರೋಪ ಕಾಯ೯ಕ್ರಮದಲ್ಲಿ ಪಿ. ಆರ್. ತಿಪ್ಪೇಸ್ವಾಮಿ ಅವರ ಕುರಿತಾಗಿ ಅತಿಥಿ ಗಣ್ಯರಿಂದ ಭಾಷಣ ಏರ್ಪಡಿಸುವುದು ಮುಂತಾಗಿ ಸಭೆಯಲ್ಲಿ ಕಾರ್ಯಕ್ರಮದ ಕುರಿತಾಗಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಲಾಯಿತು.
ಪಿ. ಆರ್. ತಿಪ್ಪೇಸ್ವಾಮಿ ಪ್ರತಿಷ್ಠಾನ ಅಧ್ಯಕ್ಷರು ರಾಜಶೇಖರ್, ಕಾರ್ಯದರ್ಶಿ ಮಹಾದೇವ ಶೆಟ್ಟಿ ಕೆ.ಸಿ, ಮಾನಸ, ಹೆಚ್. ಆರ್. ಚಂದ್ರಶೇಖರಯ್ಯ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಬಾಳ್ಳು ಗೋಪಾಲ್, ವಕೀಲರು ನವಿಲೆ ಅಣ್ಣಪ್ಪ, ಸಾಹಿತಿ ಗೊರೂರು ಅನಂತರಾಜು, ಗಾಯಕ ಬಿ ಡಿ.ಶಂಕರೇಗೌಡ, ಕಲಾವಿದರುಗಳಾದ ಬಿ. ಎಸ್. ದೇಸಾಯಿ, ಆರ್.ಸಿ. ಕಾರದಕಟ್ಟಿ, ವೈ. ಬಿ. ರವಿ, ಜಯರಾಮ್ ವೈ. ಹೆಚ್. ಶಂಕರಪ್ಪ ಕೆ. ಎನ್, ಮಂಜುನಾಥ ಎಸ್. ಆರ್., ನರಸಿಂಹಲು ಪಿ.ಎಂ, ಶಿವಕುಮಾರ್ ಆರ್, ಸುರೇಶ್ ಎ. ಸಿ. ಮೋಹನ್ ಕುಮಾರ್ ಕೆ., ರಮೇಶ್ ಎಚ್.ಎಂ, ಗುರುದೇವ ಆರ್. ನಾಯಕ, ನಾಗೇಶ್ ನವಿಲೆ, ಶಿವಶಂಕರ್ ಕೆ.ಎನ್. ಜಿ. ಎಸ್. ಗೋವಿಂದರಾಜು, ಹೆಚ್. ಪಿ. ಸೌಮ್ಯ, ಡಾ. ಲಿಖಿತ ಎಸ್ ಕೃಷ್ಣ, ಯಾಕೂಬ್ ಸಭೆಯಲ್ಲಿ ಭಾಗವಹಿಸಿದ್ದರು.
*******
ಪಿ.ಆರ್ ತಿಪ್ಪೇಸ್ವಾಮಿ ಅವರು ಮಹಾನ್ ಕಲಾವಿದರಷ್ಟೇ ಅಲ್ಲ, ಜನಪದ ತಜ್ಞರು ಸಾಹಿತಿಗಳು ಹಾಗೂ ಸಾಮಾಜಿಕ ಕಳಕಳಿ ಉಳ್ಳವರೂ ಆಗಿದ್ದರು. ಇವರನ್ನು ಚತುರ್ಮುಖ ಬ್ರಹ್ಮ ಎಂದು ಕರೆಯುತ್ತಾರೆ. ನಿಸರ್ಗ ಚಿತ್ರ ಕಲಾವಿದರಾಗಿ ನಾಡಿನ ರಾಷ್ಟ್ರದ ಉದ್ದಗಲಕ್ಕೂ ತೆರಳಿ ಅಪರೂಪದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.
ಮೈಸೂರಿನ ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯ ಜಾನಪದ ವಸ್ತು ಸಂಗ್ರಹಾಲಯ ಧರ್ಮಸ್ಥಳದ ಮಂಜೂಷಾ ವಸ್ತು ಸಂಗ್ರಹಾಲಯ ಹಾಗೂ ಸುತ್ತೂರಿನ ಜಾನಪದ ವಸ್ತು ಸಂಗ್ರಹಾಲಯವನ್ನು ಕಟ್ಟಿದ ಮೇರು ಜಾನಪದ ತಜ್ಞರು ಅವರು.
ಕಲಾ ಸಾಹಿತ್ಯದಲ್ಲಿ ಸುಮಾರು 17 ಪುಸ್ತಕಗಳನ್ನು ಬರೆದು ಅಕಾಡೆಮಿ ಅಧ್ಯಕ್ಷರಾಗಿದ್ದಾಗ 42 ಪುಸ್ತಕಗಳನ್ನು ಕಲಾಕ್ಷೇತ್ರಕ್ಕೆ ನೀಡಿದ ಶ್ರೇಯಸ್ಸು ಪಿ ಆರ್ ತಿಪ್ಪೇಸ್ವಾಮಿ ಅವರದು. ಬಡ ಕಲಾವಿದರ ಮಾಸಾಶನ ಪ್ರಶಸ್ತಿ ಗೌರವಗಳನ್ನು ಹೋರಾಟ ಮಾಡಿ ಕೊಡಿಸುತ್ತಿದ್ದ ಪಿಆರ್ ತಿಪ್ಪೇಸ್ವಾಮಿ ಅವರು ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ ಪುರಸ್ಕೃತರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ