ಒಬ್ಬ ವ್ಯಕ್ತಿ ನಮಗೆ ಮಹಾನ್ ಎಂದೆನಿಸಿದಾಗ ನಾವು ಕೇವಲ ಅವರ ಹಿಂಬಾಲಕರಾಗಿರುತ್ತೇವೆ. ಆ ಮಹಾನ್ ವ್ಯಕ್ತಿಯ ಕಾರ್ಯವನ್ನು ಅಭ್ಯಸಿಸಿ ಅಲ್ಲಿನ ಮೌಲ್ಯಗಳನ್ನು ಅರಿತುಕೊಂಡಾಗ ಪುನೀತರಾಗುತ್ತೇವೆ. ವಾಲ್ಮೀಕಿ ಮರ್ಹರ್ಷಿಗಳು ರಚಿಸಿದ ರಾಮಾಯಣವು ಆದಿಕಾವ್ಯವೆನಿಸಿದೆ. ಹಲವಾರು ರಾಮಾಯಣಗಳು ಕಾಲಾನುಕ್ರಮದಲ್ಲಿ ರಚಿತವಾಗಿದ್ದರೂ ಇವೆಲ್ಲವೂ ವಾಲ್ಮೀಕಿ ರಾಮಾಯಣವನ್ನೇ ಅನುಸರಿಸಿ ಬಂದಂತಹವು. ಯಾವುದೇ ಕವಿ ರಾಮಾಯಣವನ್ನು ಬರೆಯುವಾಗಲೂ ವಾಲ್ಮೀಕಿಯನ್ನು ಅನುಸರಿಸದೇ ಇಲ್ಲ.
ವಾಲ್ಮೀಕಿ ಮಹರ್ಷಿಗಳಾಗುವುದಕ್ಕೆ ಮುಂಚಿನ ಬದುಕಿನ ಬಗ್ಗೆ ಒಂದು ಐತಿಹ್ಯವಿದೆ. ಅವರ ಮೊದಲ ಹೆಸರು ರತ್ನಾಕರ ಎಂದಿತ್ತು. ಈ ರತ್ನಾಕರ ಒಳ್ಳೆಯ ಮನೆತನದಲ್ಲಿ ಜನಿಸಿದ್ದನಾದರೂ ದರೋಡೆಕೋರರ ಸಂಗದಲ್ಲಿ ಇದ್ದುದರಿಂದ ದರೋಡೆ, ಕೊಲೆಗಳನ್ನು ಮಾಡತೊಡಗಿದ್ದನು. ಇದೇ ಆತನ ಜೀವನ ನಿರ್ವಹಣೆಯ ಕಸುಬೂ ಆಗಿಹೋಗಿತ್ತು. ನಾರದರಿಂದ ಉಪದೇಶ ಪಡೆದು ರತ್ನಾಕರನು ನಾಮಜಪದಲ್ಲಿ ಮುಳುಗಿಹೋದನು. ಹಲವಾರು ವರ್ಷಗಳವರೆಗೆ ನಾಮಜಪದ ಪ್ರಬಲ ನಿಷ್ಠೆಯಿಂದ ಅವನ ಸಮಸ್ತ ಪಾಪಗಳೂ ತೊಳೆದುಹೋದವು. ಅವನ ಶರೀರದ ಮೇಲೆ ಹುತ್ತ ಬೆಳೆಯಿತು. ಹುತ್ತಕ್ಕೆ ವಲ್ಮೀಕವೆಂದು ಹೇಳುವರು. ದೈವ ಸಾಕ್ಷಾತ್ಕಾರದಿಂದ ವಲ್ಮೀಕದಿಂದ ಹೊರಬಂದ ಕಾರಣದಿಂದ ಅವನ ಹೆಸರು ವಾಲ್ಮೀಕಿ ಎಂದಾಯಿತು.
ಮಹರ್ಷಿಗಳಾದ ವಾಲ್ಮೀಕಿಗಳು ಪ್ರಪಂಚದಲ್ಲಿ ಲೌಕಿಕ ಛಂದಸ್ಸುಗಳ ಆದಿಕವಿಗಳೇ ಆದರು. ಈ ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು. ಬ್ರಹ್ಮನ ಮಡದಿಯಾದ ವಾಗ್ದೇವಿ ತಾನಾಗಿಯೇ ವಾಲ್ಮೀಕಿಯ ನಾಲಿಗೆಯಲ್ಲಿ ರಾಮಾಯಣವನ್ನು ಹೊರಹೊಮ್ಮಿಸಿದಳು ಎಂಬುದು ಭಕ್ತಿಪೂರ್ಣ ಭಾವವಾಗಿದೆ. ತಮ್ಮ ಬೋಧನೆಯಿಂದ ಮಹರ್ಷಿಯಾದ ಈ ವಾಲ್ಮೀಕಿ ಮಹರ್ಷಿಗಳ ಆಶ್ರಮಕ್ಕೆ ಒಮ್ಮೆ ನಾರದರು ಆಗಮಿಸಿದರು. ಬಂದ ದೇವರ್ಷಿಗಳನ್ನು ಯಥೋಚಿತವಾಗಿ ಅರ್ಘ್ಯಪಾದ್ಯಾದಿಗಳಿಂದ ಸತ್ಕರಿಸಿದರು ವಾಲ್ಮೀಕಿ. ಸತ್ಕಾರವಾದ ಮೇಲೆ ತಪೋನಿರತರಾದ ನಾರದರನ್ನು ಮುನಿಶ್ರೇಷ್ಠರಾದ ವಾಲ್ಮೀಕಿ ಮಹರ್ಷಿಗಳು ಪ್ರಶ್ನಿಸಿದರು - “ಈ ಲೋಕದಲ್ಲಿ ಈಗ ಸಕಲ ಸದ್ಗುಣ ಸಂಪನ್ನ, ಪರಾಕ್ರಮಶಾಲಿ, ಧರ್ಮಜ್ಞ, ಸತ್ಯದ ವ್ರತ ಹಿಡಿದವನು, ಮಾಡಿದ ಸಂಕಲ್ಪವನ್ನು ಬಿಡದವನು, ಪರಂಪರೆಯಾಗಿ ಬಂದ ಸದಾಚಾರ ಸಂಪನ್ನ, ಸರ್ವ ಕಾರ್ಯ ದುರಂಧರ, ಪ್ರಿಯದರ್ಶನ, ಧೈರ್ಯಶಾಲಿ, ಕಾಂತಿಮಂತ, ಕೋಪವನ್ನು ಜಯಿಸಿದವನು, ಅಹಂಕಾರ ರಹಿತ, ಅಸೂಯೆ ಇಲ್ಲದವನು, ಯುದ್ಧಕ್ಕೆ ನಿಂತರೆ ದೇವತೆಗಳನ್ನೇ ಗೆಲ್ಲಬಲ್ಲವನು ಇದ್ದಾನೆಯೇ? ಈ ಹದಿನಾರು ಗುಣಗಳಿಂದ ಕೂಡಿದಂಥವ ಈಗ ಈ ಲೋಕದಲ್ಲಿ ಇದ್ದರೆ ದಯೆಯಿಟ್ಟು ತಿಳಿಸಿ, ನನಗೆ ಬಹಳ ಕುತೂಹಲವಾಗಿದೆ. ಸ್ವಾಮಿ, ನೀವು ಇದನ್ನು ತಿಳಿಸಲು ಸಮರ್ಥರು - ಅದಕ್ಕೇ ನಾನು ಕೇಳುತ್ತಿದ್ದೇನೆ; ದಯವಿಟ್ಟು ತಿಳಿಸಿ”.
ಈ ಪ್ರಶ್ನೆಯನ್ನು ಕೇಳಿದ ನಾರದ ಸಂತೋಷದಿಂದ ವಾಲ್ಮೀಕಿಗೆ “ನೀವು ಕೇಳುವಂತೆ ಸಕಲ ಗುಣಗಳಿಂದ ಕೂಡಿದವನು ಇದ್ದಾನೆ. ಅವನೇ ಇಕ್ಷ್ವಾಕು ವಂಶದಲ್ಲಿ ಅವತರಿಸಿದ ಶ್ರೀರಾಮ” ಎಂದು ಸಂಕ್ಷೀಪವಾಗಿ ಶ್ರೀರಾಮಾವತಾರದಿಂದ ಪ್ರಾರಂಭಿಸಿ, ಸೀತಾಕಲ್ಯಾಣ, ಅರಣ್ಯಾಗಮನ, ಪಾದುಕಾ ಪ್ರದಾನ, ಸೀತಾಪಹರಣ, ಸುಗ್ರೀವ ಸಖ್ಯ, ಸೇತುಬಂಧ, ರಾವಾಣಾದಿಗಳ ನಿಗ್ರಹ, ಅಯೋಧ್ಯೆಯಲ್ಲಿ ಪಟ್ಟಾಭಿಷೇಕದವರೆಗೆ ಶ್ರೀರಾಮ ಕಥೆಯನ್ನು ಹೇಳಿದರು. ರಾಮನಾಮದ ಮಹಿಮೆಯಿಂದಲೇ ಮಹರ್ಷಿಗಳಾದ ವಾಲ್ಮೀಕಿಗಳಿಗೂ ಶ್ರೀರಾಮನ ಕಥೆಯ ಅನುಭಾವವಾಗಿತ್ತು. ತಮಗೆ ತಿಳಿದಿರುವುದನ್ನು ಚೆನ್ನಾಗಿ ಮನದಟ್ಟು ಮಾಡಿಕೊಳ್ಳುವ ಸಲುವಾಗಿಯೇ ಅವರು ನಾರದರನ್ನು ಕೇಳಿದ್ದರು.
ನಾರದರು ಹೊರಟು ಹೋದಮೇಲೆ ವಾಲ್ಮೀಕಿ ಮಹರ್ಷಿಗಳು ಸ್ನಾನ ಮಾಡಲು ಶಿಷ್ಯನಾದ ಭಾರದ್ವಾಜನೊಡನೆ ತಮಸಾನದೀ ತೀರಕ್ಕೆ ಬರುತ್ತಾರೆ.
ಆ ಸಮಯದಲ್ಲಿ ಯಾವನೋ ಒಬ್ಬ ಬೇಡ ಮರದ ಮೇಲೆ ಸಂತೋಷದಿಂದ ಕುಳಿತಿದ್ದ ಕ್ರೌಂಚ ಪಕ್ಷಿಗಳಲ್ಲಿ ಗಂಡು ಹಕ್ಕಿಯನ್ನು ತನ್ನ ಬಾಣದಿಂದ ಹೊಡೆದು ಹಾಕುತ್ತಾನೆ. ಗಂಡು ಹಕ್ಕಿ ಕೆಳಗುರುಳಿದಾಗ ಅದನ್ನು ಕಂಡು ಹೆಣ್ಣು ಹಕ್ಕಿ ವಿಲಪಿಸುತ್ತದೆ. ಈ ದೃಶ್ಯವನ್ನು ಕಂಡು ವಾಲ್ಮೀಕಿ ಮಹರ್ಷಿಗಳಿಗೆ ಸಂಕಟವಾಗಿ ಕೋಪ ಬರುತ್ತದೆ. ಕೋಪದ ಭರದಲ್ಲಿ “ಹೇ ನಿಷಾದ! ಕಾಮಮೋಹಿತವಾಗಿರುವ ಈ ಪಕ್ಷಿದ್ವಯರಲ್ಲಿ ಗಂಡು ಹಕ್ಕಿಯನ್ನು ಕೊಂದೆಯಾದ ಕಾರಣ ನೀನು ಬಹುಕಾಲ ಬದುಕುವುದು ಬೇಡ” ಎಂದು ಶಪಿಸುತ್ತಾರೆ. ಶಪಿಸಿದ ನಂತರ ಜಿತಕ್ರೋಧರಾಗಿರಬೇಕಾದ ತಮ್ಮಿಂದ ಶಾಪ ಹೊರಹೊಮ್ಮಿತಲ್ಲಾ ಎಂದು ಕಳವಳ ಪಡುತ್ತಾರೆ. ಸ್ನಾನ-ಅಹ್ನೀಕಗಳನ್ನು ಮುಗಿಸಿಕೊಂಡು ಆಶ್ರಮಕ್ಕೆ ಬಂದು ತಾವು ಹೇಳಿದ ಶ್ಲೋಕವನ್ನೇ ಮತ್ತೆ ಮತ್ತೆ ಧ್ಯಾನಿಸತೊಡಗುತ್ತಾರೆ. ಅದೇ ಸಮಯಕ್ಕೆ ಬ್ರಹ್ಮದೇವರು ವಾಲ್ಮೀಕಿಯ ಬಳಿ ಬರುತ್ತಾರೆ. ಚಿಂತಾಕ್ರಾಂತರಾಗಿರುವ ಋಷಿವರ್ಯರನ್ನು ಕಂಡು “ಚಿಂತಿಸುವ ಕಾರಣವಿಲ್ಲ. ನಿಮ್ಮ ಬಾಯಿಂದ ಸಾಕ್ಷಾತ್ ವಾಣಿಯೇ ಆ ಶ್ಲೋಕವನ್ನು ನುಡಿಸಿದ್ದಾಳೆ. ಇದು ನೀವು ರಚಿಸುವ ೨೪,೦೦೦ ಶ್ಲೋಕವುಳ್ಳ ರಾಮಾಯಣ ಕಾವ್ಯಕ್ಕೆ ನಾಂದೀ ಶ್ಲೋಕವಾಗಿ, ಮಂಗಳ ಶ್ಲೋಕವಾಗಿ ಪರಿಣಮಿಸುತ್ತದೆ” ಎಂದು ನುಡಿದರು.
ವಾಲ್ಮೀಕಿ ಮಹರ್ಷಿಗಳ ಬಾಯಿಂದ ಹೊರಟ ಶ್ಲೋಕವಾದರೋ ಹೀಗಿತ್ತು.
ಮಾ ನಿಷಾದ ಪ್ರತಿಪ್ಠಾತ್ವಂ ಆಗಮಃ ಶಾಶ್ವತೀಃ ಸಮಾಃ|
ಯತ್ಕ್ರೌಂಚ ಮಿಥುನಾದೇಕಂ ಅವಧೀಹ್ ಕಾಮಮೋಹಿತಂ||
“ಎಲೈ ನಿಷಾದನೇ, ಕಾಮಮೋಹಿತವಾಗಿರುವ ಕ್ರೌಂಚ ದಂಪತಿಗಳಲ್ಲಿ ಒಂದನ್ನು ನೀನು ಅಸಮಯದಲ್ಲಿ ಕೊಂದೆಯಾದ್ದರಿಂದ ನೀನು ಬಹಳ ಕಾಲ ಬದುಕದಂಥ ಸ್ಥಿತಿಯನ್ನು ಪಡೆ.” ಮೇಲ್ನೋಟಕ್ಕೆ ತೋರಿ ಬರುವ ಅರ್ಥ ಇದು. ಈ ಶ್ಲೋಕ ಶಾಪರೂಪವಾಗಿ ಹೊರಬಂದಿತು. ಆದರೆ ಅದು ಶಾಪವಾಗಿರದೆ ತಂತ್ರೀಲಯಗಳಿಂದ ಒಡಗೂಡಿ ಪ್ರಾಸಬದ್ಧ, ಛಂದೋಬದ್ಧವಾದ ಶ್ಲೋಕವಾಗಿ ಹೊರಹೊಮ್ಮಿದ್ದನ್ನು ಕಂಡು ವಾಲ್ಮೀಕಿಗೇ ಅಚ್ಚರಿಯಾಗುತ್ತದೆ.
ಅದನ್ನೇ ಬ್ರಹ್ಮ ವಾಲ್ಮೀಕಿಗೆ ಸಮಾಧಾನ ಮಾಡುತ್ತಾ “ಇದು ಮಂಗಳ ಶ್ಲೋಕ ಎಂದು ಹೇಳಿದ್ದು. ಈ ಶ್ಲೋಕಕ್ಕೆ ಅನೇಕ ಜ್ಞಾನಿಗಳು ವ್ಯಾಖ್ಯಾನ ಮಾಡಿದ್ದಾರೆ. “ಮಾ” ಶಬ್ದ ಲಕ್ಷ್ಮಿಗೆ ಅನ್ವಯಿಸುತ್ತದೆ. ಲಕ್ಮೀಸಮೇತ ನಾರಾಯಣ ಸ್ವರೂಪ ಶ್ರೀರಾಮ, ಕಾಮಮೋಹಿತವಾಗಿದ್ದ ಕ್ರೌಂಚ ಪಕ್ಷಿಯನ್ನು ಕೊಂದೆಯಾದ್ದರಿಂದ ನೀನು “ಶಾಶ್ವತೀ ಸಮಾಃ” ಅಂದರೆ “ಶಾಶ್ವತವಾಗಿ ಬಾಳುವವನಾಗು” ಎಂದು. ಅದುವರೆಗೆ ತಾವು ಕೇಳಿದ ರಾಮಾಯಣ ಕಥಾನಾಯಕ ಶ್ರೀರಾಮನನ್ನು ಕುರಿತು, ಮಂಗಳಾಶೀರ್ವಾದ ಮಾಡುತ್ತಿರುವ ಶ್ಲೋಕವಾಗಿದೆ ಇದು.
ಕ್ರೌಂಚಪಕ್ಷಿಗಳೇ ರಾವಣ ಮಂಡೋದರಿಯ ಪ್ರತೀಕ. ಆ ಬೇಡನೇ ಶ್ರೀರಾಮ. ಕಾಮ ಮೋಹಿತವಾದ ಕ್ರೌಂಚ ಪಕ್ಷಿ ಎಂದರೆ ಕಾಮಿಯಾದ ರಾವಣ ಎಂದರ್ಥ. ಅಂಥ ಕ್ರೌಂಚ ಪಕ್ಷಿಯ ಹೊಡೆದ ಬೇಡನೇ ಶ್ರೀರಾಮ. “ರಾವಣನಿಗ್ರಹ ಮಾಡಿದ ರಾಮ! ನೀನು ಶಾಶ್ವತವಾಗಿ ಬಾಳುವಂಥವನಾಗು” ಎಂದು ರಾಮನಿಗೆ ಮಂಗಳಾಶೀರ್ವಾದ ಮಾಡುವ ಶ್ಲೋಕ ಇದು.
“ರಹಸ್ಯ ಚ ಪ್ರಕಾಶಂ ಚ ಯದ್ವ್ರತ್ತಂ ತಸ್ಯ ಧೀಮತಃ” ಎಂಬುದಾಗಿ ಬ್ರಹ್ಮದೇವರು ವಾಲ್ಮೀಕಿಯನ್ನು ಅನುಗ್ರಹಿಸಿದರಂತೆ “ನಿನಗೆ ರಾಮಾಯಣದಲ್ಲಿನ ಸೂಕ್ಷ್ಮಾತಿಸೂಕ್ಷ್ಮ ದೃಶ್ಯಗಳು - ಅವು ರಹಸ್ಯವೇ ಆದರೂ ವೇದ್ಯವಾಗಲೀ” ಎಂದು ಬ್ರಹ್ಮರು ವಾಲ್ಮೀಕಿಯನ್ನು ಹರಸಿ ತಮ್ಮ ಸ್ವಸ್ಥಾನಕ್ಕೆ ಹಿಂದಿರುಗಿದರು. ಬ್ರಹ್ಮ ದೇವರು ಹೊರಟು ಹೋದ ಮೇಲೆ ದರ್ಭೆಯ ಆಸನದಲ್ಲಿ ಕುಳಿತು ವಾಲ್ಮೀಕಿ ಧ್ಯಾನಾಸಕ್ತರಾದರು. ಬ್ರಹ್ಮದೇವನ ಅನುಗ್ರಹದಿಂದ ವಾಗ್ದೇವಿಯಿಂದ ಪ್ರೇರಿತವಾಗಿ ತಮಗೆ ತಾವೇ ಎಲ್ಲಾ ದೃಶ್ಯಗಳೂ ಒಂದಾದ ಮೇಲೊಂದು ಮನಃಪಟಲದಲ್ಲಿ ಕಂಡುಬರುತ್ತಿರುವಂತೆ ವಾಲ್ಮೀಕಿ ೨೪,೦೦೦ ಶ್ಲೋಕಗಳುಳ್ಳ ಶ್ರೀಮದ್ರಾಮಾಯಣವನ್ನು ರಚಿಸಿದರು. ಇದು ಇತಿಹಾಸ - ಅಂದರೆ ನಡೆದದ್ದನ್ನು ನಡೆದಂತೆ ಹೇಳುವ ಕಾವ್ಯ ಎನಿಸಿಕೊಂಡಿತು.
ರಾಮಾಯಣದ ರಚನೆಯೇನೋ ಆಯಿತು. ಆದರೆ ಅದರ ಪ್ರಚಾರ ಹೇಗಾಗುವುದೋ ಎಂಬ ಚಿಂತೆ ವಾಲ್ಮೀಕಿ ಮಹರ್ಷಿಗಳನ್ನು ಕಾಡುತ್ತಿತ್ತು. ಆ ವೇಳೆಗೆ ಸರಿಯಾಗಿ ಚಂದ್ರ ಸೂರ್ಯರಂತೆ ಅಲ್ಲಿಗೆ ಕುಶ ಲವರು ಬಂದು ವಾಲ್ಮೀಕಿಯ ಚರಣಗಳಿಗೆ ನಮಿಸಿದರು. ರಾಮಾಯಣವನ್ನು ರಾಮನ ಕುವರರಾದ ಕುಶ ಲವರಿಗೆ ವಾಲ್ಮೀಕಿ ಉಪದೇಶಿಸಿದರು. ಅವರು ಮೊದಲು ಋಷಿಗಳ ಸಮೂಹದಲ್ಲಿ ರಾಮಾಯಣವನ್ನು ಗಾಯನ ಮಾಡಿದರು. ರಸಿಕರಾದ ಋಷಿಗಳೆಲ್ಲಾ ಮಧುಪಾನ ಮಾಡಿದವರಂತೆ ರಾಮಾಯಣದ ಮಧುವನ್ನು ಆಸ್ವಾದಿಸಿದರು. ತುಷ್ಟರಾದರು. ಎಲ್ಲ ಋಷಿಗಳೂ ಮುದದಿಂದ ಕುಮಾರರಿಬ್ಬರನ್ನೂ “ಚಿರಾಯುಗಳಾಗಿ” ಎಂದು ಹರಸಿದರು. ಅಷ್ಟರಲ್ಲಿ ವಾಲ್ಮೀಕಿ ಮಹರ್ಷಿಗಳಿಗೆ ಶ್ರೀರಾಮರಿಂದ ಅಶ್ವಮೇಧ ಯಾಗಕ್ಕೆ ದಯಮಾಡಿಸುವಂತೆ ಕರೆ ಬಂದಿತು. ಆಗ ಅವರು ತಮ್ಮೊಂದಿಗೆ ಕುಶ ಲವರನ್ನೂ ಕರೆದೊಯ್ದರು. ರಾಮಾಯಣದ ಗಾನರೂಪಕ ಶ್ರೀರಾಮನ ಅಶ್ವಮೇಧ ಮಹಾಮಂಟಪದಲ್ಲಿ ಕಿಕ್ಕಿರಿದ ಜನಸ್ತೋಮದ ಇದಿರು ನಡೆಯಿತು. ಇಂದ್ರ ಅಗ್ನಿಯಂತೆ ಶೋಭಿಸುತ್ತಿರುವ ಕುಶ ಲವರು ಸುಶ್ರಾವ್ಯವಾದ ಕಂಠದೊಡನೆ ಮಧುರವಾದ ವೀಣಾನಾದ ಜೊತೆಗೂಡುತ್ತಿದ್ದಂತೆ ರಾಮಾಯಣವನ್ನು ಗಾಯನ ಮಾಡಿದರು. ಎಲ್ಲರೂ ಕೇಳಿ ಮೆಚ್ಚಿದರು. ಹೀಗೆ ವಾಲ್ಮೀಕಿ ಮಹರ್ಷಿಗಳ ರಾಮಾಯಣದ ಪ್ರಚಾರ ನಡೆಯಿತು. ಮುಂದೆ ಅದು ಜನಪದದಲ್ಲಿ ಪ್ರವಹಿನಿಯಾಗಿ ಸಹಸ್ರಾರು ವರ್ಷಗಳಿಂದ ವಿವಿಧ ರೂಪಗಳಲ್ಲಿ, ವಿವಿಧ ಭಾಷೆಗಳಲ್ಲಿ ಹರಿಯುತ್ತಲೇ ಇದೆ. ಹೀಗೆ ಮಹರ್ಷಿ ವಾಲ್ಮೀಕಿ ಮತ್ತು ಅವರು ಮಾಡಿದ ಕೆಲಸ ಶ್ರೀರಾಮನ ಕೀರ್ತಿಯಷ್ಟೇ ಅಜರಾಮರವಾದದ್ದು. ಈ ವಾಲ್ಮೀಕಿ ಎಂಬ ಶ್ರೇಷ್ಠತೆಗೆ, ಮಹಾನ್ ಶಕ್ತಿಗೆ, ದಿವ್ಯ ಭಾರತೀಯ ಪರಂಪರೆಗೆ ಭಕ್ತಿಯಿಂದ ವಂದಿಸೋಣ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ