ಅಜ್ಞಾನದ ಅಂಧಕಾರ ಹೊಡೆದೋಡಿಸಲು ಅಕ್ಷರ ಜ್ಞಾನದ ಬೆಳಕು ಅಗತ್ಯ: ಸಿಎಂ ವಿಶೇಷಾಧಿಕಾರಿ ಪ್ರಮೋದ್ ಕುಮಾರ್

Upayuktha
0


ಕೆ.ಆರ್.ಪೇಟೆ (ಮಂಡ್ಯ): ಅಮಾವಾಸ್ಯೆಯ ಕಗ್ಗತ್ತಲನ್ನು ಅಕ್ಷರ ಜ್ಞಾನದ ಬೆಳಕಿನ ಶಕ್ತಿಯ ಮೂಲಕ ಹೊಡೆದೋಡಿಸಿ ಜ್ಞಾನದ ಅಮೃತವನ್ನು ಉಣಬಡಿಸುವ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮವು ಇಂದಿನ ಸಮಾಜಕ್ಕೆ ಅಗತ್ಯವಾಗಿ ಬೇಕಾಗಿದೆ. ಸಾಮಾಜಿಕ ಕಟ್ಟುಪಾಡುಗಳು ಹಾಗೂ ಮೌಢ್ಯಗಳ ವಿರುದ್ಧ ಅರಿವಿನ ಜಾಗೃತಿ ಮೂಡಿಸಿ ಸುಜ್ಞಾನದ ದೀಪಬೆಳಗುವ ಕಾರ್ಯಕ್ರಮವಾಗಿದೆ ಎಂದು ಮುಖ್ಯಮಂತ್ರಿಗಳ ವಿಶೇಷಾಧಿಕಾರಿ  ಪ್ರಮೋದ್‌ ಕುಮಾರ್ ಹೇಳಿದರು.


ಅವರು ಕೆ.ಆರ್.ಪೇಟೆ ತಾಲೂಕಿನ ಬೆಡದಹಳ್ಳಿಯ ಶ್ರೀ ಪಂಚಭೂತೇಶ್ವರ ಸುಕ್ಷೇತ್ರದಲ್ಲಿ ಪಿತೃಪಕ್ಷದ ಅಮಾವಾಸ್ಯೆಯ ಅಂಗವಾಗಿ ಆಯೋಜಿಸಿದ್ದ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಶ್ರೀಮಠದ ವತಿಯಿಂದ ನೀಡಿದ ಆತ್ಮೀಯ ಅಭಿನಂದನೆಯನ್ನು ಸ್ವೀಕರಿಸಿ ನೆರೆದಿದ್ದ ಭಕ್ತರು ಹಾಗೂ ಸಾರ್ವಜನಿಕರನ್ನು ಉದ್ಧೇಶಿಸಿ ಮಾತನಾಡಿದರು.



ಬೆಡದಹಳ್ಳಿಯ ಪಂಚಭೂತೇಶ್ವರ ಕ್ಷೇತ್ರದಲ್ಲಿ ಅನ್ನ, ಅಕ್ಷರ, ಗೋಶಾಲೆ ಹಾಗೂ ಪ್ರಕೃತಿಯ ಆರಾಧನೆಯ ದಾಸೋಹ ಕಾರ್ಯಕ್ರಮಗಳು ಕಳೆದ 9 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿವೆ. ಪೂಜೆ ಪುರಸ್ಕಾರಗಳ ಧಾರ್ಮಿಕ ಕಾರ್ಯಕ್ರಮಗಳು ಒಂದೆಡೆಯಾದರೆ ನವಗ್ರಹ ವನವನ್ನು ನಿರ್ಮಾಣ ಮಾಡಿ ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಪರಿಸರ ಪ್ರೇಮ ಹಾಗೂ ಗಿಡಮರಗಳ ಬಗ್ಗೆ ವಿಶೇಷವಾದ ಕಾಳಗಿ ಮೂಡುವಂತೆ ಪ್ರೇರೇಪಿಸುತ್ತಿರುವ ಸನಾತನ ಧರ್ಮರತ್ನಾಕರ ಡಾ.ಮಾದೇಶ್ ಗುರೂಜಿಯವರು ಕಳೆದ ಮೂರು ಅಮಾವಾಸ್ಯೆಗಳಿಂದ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಿ ಜ್ಞಾನದ ಬೆಳಕಿನ ದೀಪ ಹಚ್ಚಲು ವಿಚಾರಗಳ ಮಂಥನವಾಗುವ ಅಕ್ಷರ ಅಮಾವಾಸ್ಯೆ ಕಾರ್ಯಕ್ರಮದ ಮೂಲಕ ಸಾಮಾಜಿಕ ಜಾಗೃತಿ ಮೂಡಿಸಿ ಇಡೀ ನಾಗರೀಕ ಸಮಾಜವನ್ನು ಬದಲಾವಣೆಯ ದಿಕ್ಕಿನತ್ತ ಕೊಂಡೊಯ್ಯುತ್ತಿರುವ ಶ್ರೀಗಳು ಪ್ರತೀ ಅಮಾವಾಸ್ಯೆಗೂ ಒಬ್ಬೊಬ್ಬ ಸಾಧಕರನ್ನು ಶ್ರೀಕ್ಷೇತ್ರಕ್ಕೆ ಕರೆಸಿ ಸುಜ್ಞಾನಗಳ ವಿಚಾರಧಾರೆಯನ್ನು ಉಣಬಡಿಸುತ್ತಿದ್ದಾರೆ. ಅಕ್ಷರದ ಜ್ಞಾನದ ಬೆಳಕಿನ ಶಕ್ತಿಯು ಯಾರೂ ನಮ್ಮಿಂದ ಕದಿಯಲಾಗದ ಆಸ್ತಿಯಾಗಿದೆ. ಈ ದಿಕ್ಕಿನಲ್ಲಿ ಪೋಷಕರು ಹಾಗೂ ತಂದೆತಾಯಿಗಳು ತಮ್ಮ ಮಕ್ಕಳಿಗಾಗಿ ಆಸ್ತಿಯನ್ನು ಸಂಪಾದನೆ ಮಾಡಿ ಕೂ&ಡಿಡುವ ಬದಲಿಗೆ ನಿಮ್ಮ ಮಕ್ಕಳನ್ನೇ ಸಮಾಜಕ್ಕೆ ಆಸ್ತಿಯನ್ನಾಗಿ ಕೊಡುಗೆ ನೀಡಬೇಕು ಎಂದು ಪ್ರಮೋದ್‌ಕುಮಾರ್ ಮನವಿ ಮಾಡಿದರು.



ದೇವನೂರು ಮಹಾಸಂಸ್ಥಾನದ ಪೀಠಾಧಿಪತಿಗಳಾದ ಡಾ.ಮಾದೇಶ್ ಗುರೂಜಿ ಅವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಬೆಡದಹಳ್ಳಿಯ ಶ್ರೀಪಂಚಭೂತೇಶ್ವರ ಕ್ಷೇತ್ರದಲ್ಲಿ ಅಮಾವಾಸ್ಯೆಯ ಕಗ್ಗತ್ತಲಿನಲ್ಲಿ ಅಕ್ಷರ ಕ್ರಾಂತಿಯ ಮೂಲಕ ಬೆಳಕು ಮೂಡಿಸುವ ಕೆಲಸವನ್ನು ಕಾರ್ಯನಿರ್ವಹಿಸುತ್ತಿದೆ. ಇದು ಕತ್ತಲು ಮತ್ತು ಬೆಳಕಿನ ನಡುವೆ ನಡೆಯುತ್ತಿರುವ ಹೋರಾಟವಾಗಿದ್ದು. ಅಮಾವಾಸ್ಯೆಯ ಕಗ್ಗತ್ತಲನ್ನು ಹೊಡೆದೋಡಿಸಲು ಬೆಳಕಿನ ಅವಶ್ಯಕತೆ ಇದೆ, ಅಂತೆಯೇ ಮಾನವನಲ್ಲಿರುವ ಅಜ್ಞಾನದ ಅಂಧಕಾರವನ್ನು ಹೊಡೆದೋಡಿಸಲು ಅಕ್ಷರ ಕ್ರಾಂತಿಯ ಅವಶ್ಯಕತೆ ಇದೆ. ಈ ದಿಕ್ಕಿನಲ್ಲಿ ಬೆಡದಹಳ್ಳಿ ಪಂಚಭೂತೇಶ್ವರ ಮಠವನ್ನು ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತಗೊಳಿಸದೆ ಮಾನವನ ಸಾಧನೆಯ ವ್ಯಕ್ತಿತ್ವ ವಿಕಸನದ ಮಾರ್ಗಕ್ಕೆ ಬೇಕಾದ ಅರಿವು ಮತ್ತು ತಿಳುವಳಿಕೆ ನೀಡುವ ಕೇಂದ್ರವನ್ನಾಗಿ ಬದಲಾಯಿಸಿ ಮುನ್ನಡೆಸಲು ಸಂಕಲ್ಪ ಮಾಡಿದ್ದು, ಗ್ರಾಮೀಣ ಪ್ರದೇಶದ ಯುವಜನರು ಹಾಗೂ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಅಮಾವಾಸ್ಯೆಯಂದು ಒಬ್ಬೊಬ್ಬ ಸಾಧಕರನ್ನು ಕರೆಸಿ ಅವರು ಜೀವನದಲ್ಲಿ ಎದುರಿಸಿದ ಕಷ್ಟಗಳು, ಸವಾಲುಗಳು ಹಾಗೂ ಶಿಕ್ಷಣ ಪಡೆಯಲು ಅನುಭವಿಸಿದ ನೋವುಗಳ ಬಗ್ಗೆ ಅವರೊಂದಿಗೆ ಸಂವಾದ ನಡೆಸಿ ವಿಚಾರಗಳ ಮಂಥನ ಮಾಡಿಸಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ದಿಕ್ಕಿನಲ್ಲಿ ಸಮಾಜ ಸೇವಕರು ರಾಜ್ಯ ಆರ್‌ಟಿಓ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಮಲ್ಲಿಕಾರ್ಜುನ್, ರಾಜ್ಯ ವಿಜ್ಞಾನ ಸಂಶೋಧನಾ ಪರಿಷತ್ ಅಧ್ಯಕ್ಷ ವಿಚಾರವಾದಿಗಳಾದ ಡಾ.ಹುಲಿಕಲ್ ನಟರಾಜು, ಜಾನಪದ ಸಂಶೋಧಕ ಡಾ. ಆಲೂರು ನಾಗಪ್ಪ ಅವರನ್ನು ಕರೆಸಿ ಉಪನ್ಯಾಸವನ್ನು ಕೊಡಿಸಲಾಗಿದೆ. ಮುಂದಿನ ಅಮಾವಾಸ್ಯೆ ಕಾರ್ಯಕ್ರಮಕ್ಕೆ ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆಯವರನ್ನು ಕರೆಸಿ ವಿಚಾರ ಮಂಥನ ನಡೆಸುವ ಬಗ್ಗೆ ನಿರ್ಧಾರ ಮಾಡಲಾಗಿದೆ  ಎಂದು ತಿಳಿಸಿದರು.


ಬೆಡದಹಳ್ಳಿ ಪಂಚಭೂತೇಶ್ವರ ಕ್ಷೇತ್ರದ ರುದ್ರಮುನಿ ಮಾತನಾಡಿ, ಶ್ರೀ ಕ್ಷೇತ್ರದಲ್ಲಿ ಕತ್ತಲನ್ನು ಸರಿಸಿ ಬೆಳಕು ಮೂಡಿಸುವ ಸಲುವಾಗಿ ಪ್ರತಿ ಅಮಾವಾಸ್ಯೆ ಯಂದು  ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಈ ಕಾರ್ಯಕ್ರಮಕ್ಕೆ ಭಾರತಿಪುರ ಕ್ರಾಸ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರು ಸೇರಿದಂತೆ ತಾಲೂಕಿನ ನಾಗರಿಕರು ಹಾಗೂ ರೈತ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನ ಹಂಚಿಕೆಯ ಈ ಪುಣ್ಯ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.


ಕಾರ್ಯಕ್ರಮದಲ್ಲಿ ವಿಚಾರವಾದಿ ಬಿ.ಬಾಚಹಳ್ಳಿ ಬಿ.ಆರ್. ಪ್ರಸನ್ನ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕೆ.ಆರ್. ನೀಲಕಂಠ, ಬೆಡದಹಳ್ಳಿ ಪಂಚಭೂತೇಶ್ವರ ದೇವಾಲಯ ಟ್ರಸ್ಟ್ ಕಾರ್ಯದರ್ಶಿಗಳಾದ ಕಾಂತರಾಜು, ಉಪಾಧ್ಯಕ್ಷ ಶಿವಲಿಂಗೇಗೌಡ, ಖಜಾಂಚಿ ಮಹೇಶ್, ಕಾರ್ಯಕ್ರಮ ವ್ಯವಸ್ಥಾಪಕ ಚಂದ್ರು ಸೇರಿದಂತೆ ನೂರಾರು ಸದ್ಭಕ್ತರು ಹಾಗೂ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ವರದಿ: ಶ್ರೀನಿವಾಸ್, ಕೆ.ಆರ್.ಪೇಟೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top