ಮಂಗಳೂರು: ಮಂಗಳೂರು ಪುರಭವನದಲ್ಲಿ ಭಾನುವಾರ (ಅ.29) ಪಿ.ವಿ. ಪ್ರದೀಪ್ ಕುಮಾರ್ ಕಥಾಬಿಂದು ಪ್ರಕಾಶನ ಇವರ ಸಾರಥ್ಯದಲ್ಲಿ ನಡೆಯುವ ಕಥಾಬಿಂದು ಸಾಹಿತ್ಯೋತ್ಸವದಲ್ಲಿ 50 ಕೃತಿಗಳ ಲೋಕಾರ್ಪಣೆ, ಸಾಧಕರಿಗೆ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಶಾಂತಾ ಪುತ್ತೂರು ಸಾಹಿತ್ಯ ಸೇವೆಗಾಗಿ ಸಾಹಿತ್ಯ ಸಿರಿ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿರುತ್ತಾರೆ.
ಬಹುಮುಖ ಪ್ರತಿಭೆಯ ಸಾಹಿತಿ ಶಿಕ್ಷಕಿ ಶಾಂತಾ ಪುತ್ತೂರು
ಜನ್ಮಸ್ಥಳ ಉಡುಪಿ ಜಿಲ್ಲೆಯ ಬಾರಕೂರು. ತಂದೆ ದಿ।ನಾಗಪ್ಪಯ್ಯ, ತಾಯಿ ಭಾಗೀರಥಿ. ಮಗ ಎಂ.ಕೆ.ಸೌರಭ್ ರಾವ್. ಪತಿ ಎಂ.ಕೆ. ಚಂದ್ರಶೇಖರ್ ರಾವ್. ಪ್ರಸ್ತುತ ದ.ಕ. ಜಿಲ್ಲೆಯ ಬೊಳುವಾರಿನಲ್ಲಿ ವಾಸವಾಗಿದ್ದಾರೆ. ಬಾರಕೂರಿನ ಹೇರಾಡಿ, ಮತ್ತು ಹನೆಹಳ್ಳಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ. ಪ್ರೌಢಶಾಲಾ ಶಿಕ್ಷಣ ನ್ಯಾಶನಲ್ ಜೂನಿಯರ್ ಕಾಲೇಜು ಬಾರಕೂರಿನಲ್ಲಿ ಪೂರೈಸಿ ಪದವಿ ಶಿಕ್ಷಣ ವನ್ನು ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಮೈಸೂರಿನಲ್ಲಿ ಮಾಡಿರುತ್ತಾರೆ. ಟಿ.ಸಿ.ಹೆಚ್. ಬಿ.ಎ., ಬಿ.ಎಡ್, ಕನ್ನಡ ಎಂ.ಎ. ಡಿಪ್ಲೋಮ ಇನ್ ಯೋಗ, ಡ್ರಾಯಿಂಗ್ ಹೈಯರ್ ಗ್ರೇಡ್ ಉತ್ತೀರ್ಣರಾಗಿರುತ್ತಾರೆ.
28 ವರ್ಷ ಸೇವೆ ಸಲ್ಲಿಸಿದ್ದು ಪ್ರಸ್ತುತ ಸರಕಾರಿ ಪದವಿ ಪೂರ್ವ ಕಾಲೇಜು ಕಬಕ ಪ್ರೌಢಶಾಲಾ ವಿಭಾಗದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಕವನಗಳನ್ನು, ಲೇಖನಗಳನ್ನು ಬರೆಯುವ ಹಾಗೂ ಚಿತ್ರ ಬಿಡಿಸುವ ಕರಕುಶಲ ವಸ್ತುಗಳ ತಯಾರಿಕೆ ಉತ್ತಮ ಪುಸ್ತಕ ಓದುವ ಹಾಗೂ ಸಂಗ್ರಹಿಸುವ ಹವ್ಯಾಸವನ್ನು ಹೊಂದಿದ್ದಾರೆ. ಓರ್ವ ಸಮರ್ಥ ಸಂಘಟಕಿಯಾಗಿರುವ ಇವರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಟ್ಲ ಸ್ಥಳೀಯ ಸಂಸ್ಥೆಯ ಜೊತೆ ಕಾರ್ಯದರ್ಶಿಯಾಗಿ 6 ವರ್ಷ ಸೇವೆ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಬಂಟ್ವಾಳ ತಾಲೂಕು ಯೋಗ ಸಂಘಟಕಿಯಾಗಿ 8ವರ್ಷ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಪುತ್ತೂರು ಘಟಕದ ಅಧ್ಯಕ್ಷೆಯಾಗಿ, ಅಂತಾರಾಜ್ಯ ಮಟ್ಟದ ಕನ್ನಡ ನಾಡು ನುಡಿ ಸಂಸ್ಕೃತಿ ಕುರಿತಂತೆ ಕವನ ಸ್ಪರ್ಧೆ ಆಯೋಜನೆಯನ್ನು ಯಶಸ್ವಿಯಾಗಿಸಿದ್ದಾರೆ. ಅಂತಾರಾಜ್ಯ ಮಟ್ಟದ ಮಧು ಕವಿಗೋಷ್ಠಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದಿಂದ ಸಂಯೋಜನೆ ಮಾಡಿದ್ದಾರೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮೂಡಬಿದ್ರೆ, ಬಂಟ್ವಾಳ ಮೊದಲಾದ ಕಡೆ ಸಾಹಿತ್ಯ ಕಮ್ಮಟ, ಕವಿಗೋಷ್ಠಿ ನಡೆಸಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರು. ಸಾಹಿತ್ಯದ ನಡೆ ಗ್ರಾಮದ ಕಡೆಗೆ ಗ್ರಾಮ ಗ್ರಾಮದಲ್ಲಿ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ ಜೊತೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಮತ್ತು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ ಕೈ ಜೋಡಿಸಿದ ಸಂಸ್ಥೆಗಳಾಗಿವೆ.
ಕನಸು ಕ್ಲಸ್ಟರ್ ಪತ್ರಿಕೆಯ ಪ್ರಧಾನ ಸಂಪಾದಕರಾಗಿ 2ವರ್ಷ ಕೆಲಸ ಮಾಡಿರುತ್ತಾರೆ. ಹಲವು ಸಾಹಿತ್ಯ ಗುಂಪುಗಳ ಮೂಲಕ ಅಂರ್ಜಾಲದ ಮೂಲಕವೂ ಪ್ರೋತ್ಸಾಹ ನೀಡುತ್ತಿದ್ದಾರೆ. ಸಾಹಿತಿ ಗಣೇಶ ಪ್ರಸಾದ ಪಾಂಡೇಲು ಸಾರಥ್ಯ ದ ಅಕ್ಷರದೀಪ, ಅಕ್ಷರ ಜ್ಯೋತಿ ಸಾಹಿತ್ಯ ಬಳಗದ ಸಂಯೋಜಕಿ ಹಾಗೂ ಅಕ್ಷರದೀಪ ಬಳಗದ ನಿರ್ವಾಹಕಿಯಾಗಿದ್ದಾರೆ. ನಲಿಕಲಿ ಯೋಗ ರಾಜ್ಯ ಸಂಪನ್ಮೂಲ ವ್ಯಕ್ತಿ ಯಾಗಿದ್ದು ಶಿಕ್ಷಕರಿಗೆ ನಲಿಕಲಿ ತರಬೇತಿ ನೀಡಿರುತ್ತಾರೆ. ರಾಜ್ಯ ಮಟ್ಟದ ಯೋಗಾಸನ ತೀರ್ಪುಗಾರರ ಪರೀಕ್ಷೆ ಯಲ್ಲಿ ಉತ್ತೀರ್ಣರಾಗಿದ್ದು ಜಿಲ್ಲೆ, ರಾಜ್ಯ, ಅಂತಾರಾಜ್ಯ ಮಟ್ಟದಲ್ಲಿ ಯೋಗಾಸನ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ. ಜೀವನ ವಿಜ್ಞಾನ, ಸಮಾಜ ವಿಜ್ಞಾನ ವಿಷಯ ಸಂಪದೀಕರಣ, ಎಸ್.ಡಿ.ಎಂ.ಸಿ.ತರಬೇತಿ, ಕಿಶೋರಿ, ಪಂಚಮುಖಿ ವ್ಯಕ್ತಿ ತ್ವ ವಿಕಸನ ತರಬೇತಿ ನೀಡಿರುತ್ತಾರೆ. ಧರ್ಮಸ್ಥಳ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಮೂಲಕ ಸಾರ್ವಜನಿಕರಿಗೆ, ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ಜೆ.ಸಿ.ಐ.ಪುತ್ತೂರು ಮೂಲಕ ಮಹಿಳೆಯರಿಗೆ ಒಂದು ವಾರ ಉಚಿತ ಯೋಗ ತರಬೇತಿ ನೀಡಿರುತ್ತಾರೆ. ಜೆ.ಸಿ.ಐ ರವರ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿರುತ್ತಾರೆ. ರಾಜ್ಯ ಮಟ್ಟದ ಯೋಗಾಸನ ಸ್ಪರ್ಧಾ ತಂಡ ನಾಯಕಿಯಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.
ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಕಂಬಳಬೆಟ್ಟು ಹಾಗೂ ಕನ್ಯಾನ ಪ್ರೌಢಶಾಲೆಗೆ ದತ್ತಿನಿಧಿ ನೀಡಿರುತ್ತಾರೆ. ನೇತ್ರಾವತಿ ಜ್ಞಾನ ವಿಕಾಸ ಕೇಂದ್ರದ ಹಿರಿಯ ನಾಗರಿಕರಿಗೆ ಕೊರೋನ ಸಂದರ್ಭದಲ್ಲಿ ಉಚಿತ ಮಾಸ್ಕ್ ವಿತರಿಸಿದ್ದಾರೆ. ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಉಚಿತ ಪಾಸಿಂಗ್ ಪ್ಯಾಕೇಜ್ ನೀಡಿದ್ದು, ಕಲಿಕಾ ನ್ಯೂನತೆ ಇರುವ ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುತ್ತಿದ್ದಾರೆ. ಪುತ್ತೂರು ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿರುತ್ತಾರೆ. ಹಾಗೆಯೇ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಶಿಕ್ಷಕರ ಕವಿಗೋಷ್ಠಿ ಯ ಅಧ್ಯಕ್ಷತೆ ವಹಿಸಿರುತ್ತಾರೆ. ಇವರ ಸೌರಭ ಕವನ ಸಂಕಲನ ಬಿಡುಗಡೆಗೊಂಡಿದೆ. ಇವರ ವ್ಯಕ್ತಿ ಚಿತ್ರ ಅಮೃತ ಪ್ರಕಾಶ ಪತ್ರಿಕೆ, ಪೊಸಡಿಗುಂಪೆ, ಶ್ರೀಶಾರದಾ ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಸ್ಮರಣ ಸಂಚಿಕೆಗಳಲ್ಲಿ, ಪತ್ರಿಕೆಗಳಲ್ಲಿ ಇವರ ಕವನ ಲೇಖನ ಪ್ರಕಟಗೊಂಡಿವೆ. ದೂರದರ್ಶನ ಚಂದನ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿರುವ ಡಾ।ನೀರಜಾ ನಾಗೇಂದ್ರ ಕುಮಾರ್ ನಿರ್ದೇಶನದ ರತ್ನತ್ರಯ ಕಾರ್ಯಕ್ರಮದಲ್ಲಿ ಇವರ ಕವನ ಪ್ರಸಾರವಾಗಿದೆ. ದೆಹಲಿ, ಕೇರಳ ಸೇರಿದಂತೆ ಹಲವು ಕವಿಗೋಷ್ಠಿಗಳಲ್ಲಿ ಕವನ ವಾಚಿಸಿರುತ್ತಾರೆ.
ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ದ.ಕ. ವತಿಯಿಂದ ನಡೆದ ಅಂತಾರಾಷ್ಟ್ರೀಯ ಮಟ್ಟದ ಮುಕ್ತಕ ಸ್ಪರ್ಧೆಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿದ್ದಾರೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ದ ವತಿಯಿಂದ ನಡೆದ ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಆಕಾಶವಾಣಿ ಮಂಗಳೂರು ರೇಡಿಯೋ ವನಿತಾವಾಣಿ ಕಾರ್ಯಕ್ರಮದಲ್ಲಿ ಇವರ ಸಂದರ್ಶನ ಪ್ರಸಾರವಾಗಿದೆ. ಇವರ ಸಾಧನೆಯನ್ನು ಗುರುತಿಸಿ ಹಲವಾರು ಸಂಘ-ಸಂಸ್ಥೆಗಳು ಗೌರವಿಸಿವೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ