ರಾಷ್ಟೀಯ ಸೇವಾ ಯೋಜನೆ 2023-24 ಉದ್ಘಾಟನಾ ಕಾರ್ಯಕ್ರಮ
ಪುತ್ತೂರು: ಹೊಸ ಶಿಕ್ಷಣ ನೀತಿಯ ಅನುಸಾರವಾಗಿ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪಠ್ಯಪೂರಕ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ ಸಾಧ್ಯ. ಶಿಕ್ಷಣದೊಂದಿಗೆ ಸೇವೆ ಮತ್ತು ಶಿಕ್ಷಣದೊಂದಿಗೆ ವ್ಯಕ್ತಿ ವಿಕಸನವು ರಾಷ್ಟ್ರೀಯ ಸೇವಾ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಭಾರತದಲ್ಲಿ ಅನೇಕ ಸ್ವಯಂಸೇವಕರನ್ನು ಹೊಂದಿರುವ ಸಂಸ್ಥೆ ರಾಷ್ಟ್ರೀಯ ಸೇವಾ ಯೋಜನೆ. ನಾವು ಇತರರಿಗಿಂತ ಭಿನ್ನವಾಗಿ ಕಾಣುವುದು ನಮ್ಮ ವ್ಯಕ್ತಿತ್ವದಿಂದ. ಜ್ಞಾನ, ಆರೋಗ್ಯ, ಕೌಶಲ್ಯ, ಮೌಲ್ಯ ಈ ಮುಖ್ಯ ಅಂಶಗಳಿದ್ದಾಗ ನಾವು ಉತ್ತಮ ವ್ಯಕ್ತಿತ್ವ ಹೊಂದಿದ್ದೇವೆ ಎಂದರ್ಥ. ರಾಷ್ಟ್ರೀಯ ಸೇವಾ ಯೋಜನೆಯು ಶಿಸ್ತು, ಸಹಜೀವನ ಮುಂತಾದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರು ಹಾಗೂ ರಾಜ್ಯ ಸೇವಾ ಯೋಜನೆ ಅಧಿಕಾರಿ ಡಾ. ಗಣನಾಥ ಎಕ್ಕಾರು ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ 2023-24 ಉದ್ಘಾಟನೆ ಹಾಗೂ ಮಾಹಿತಿ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಅಧ್ಯಕ್ಷೀಯ ಮಾತುಗಳನ್ನಾಡಿ, ವಿದ್ಯಾರ್ಥಿಗಳು ಜವಾಬ್ದಾರಿಯುತವಾಗಿ ಸಮಾನತೆಯಿಂದಿರುವ ಪಾಠವನ್ನು ರಾಷ್ಟ್ರೀಯ ಸೇವಾ ಯೋಜನೆ ಕಲಿಸುತ್ತದೆ. ನಮ್ಮನ್ನು ದಾರಿ ತಪ್ಪಿಸುವ ಹಾದಿಯನ್ನು ಧಿಕ್ಕರಿಸಿ ನಾವು ಸಾಗಬೇಕು. ಸಿಗುವಂತದ್ದನ್ನು ಬಳಸಿಕೊಂಡು ನಮ್ಮನ್ನು ಹೇಗೆ ರೂಪಿಸಿಕೊಳ್ಳುವುದು ಎಂಬುವುದನ್ನು ನಾವು ಯೋಚಿಸಬೇಕು. ನಮ್ಮಲ್ಲಿ ಪರೋಪಕಾರದ ಭಾವನೆಯನ್ನು ರಾಷ್ಟ್ರೀಯ ಸೇವಾ ಯೋಜನೆಯು ಬೆಳೆಸುತ್ತದೆ ಎಂದು ಹೇಳಿದರು.
ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ವೇದಿಕೆಯಲ್ಲಿ ಕಾಲೇಜಿನ ಪ್ರಾಶುಪಾಲ ಪ್ರೊ.ವಿಷ್ಣುಗಣಪತಿ ಭಟ್, ಕಾಲೇಜಿನ ವಿಶೇಷಾಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಶ್ರೀಧರ ನಾಯ್ಕ್ ಬಿ, ರಾಷ್ಟೀಯ ಸೇವಾಯೋಜನೆಯ ಮುಖ್ಯಸ್ಥ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್, ರಾಷ್ಟೀಯ ಸೇವಾ ಯೋಜನೆಯ ಮುಖ್ಯಸ್ಥೆ ಮತ್ತು ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ವಿದ್ಯಾ ಕೆ. ಎನ್, ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕ ವಿಘ್ನೇಶ್ವರ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ನಾಯಕಿ ಮೈತ್ರಿ ಸ್ವಾಗತಿಸಿ, ದ್ವಿತೀಯ ಬಿ.ಸಿ.ಎ ವಿದ್ಯಾರ್ಥಿನಿ ಮಾನಸ ವಂದಿಸಿ, ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿ ಪ್ರಣಮ್ಯ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ