ಪಿತೃಪಕ್ಷ ವಿಶೇಷ - "ತರ್ಪಣ ಕ್ರಮ"

Upayuktha
0


"ತರ್ಪಣ ಕ್ರಮ" 

ಕರ್ತನು ಪೂರ್ವಾಭಿಮುಖವಾಗಿ ಕುಳಿತು ಆಚಮನ ಮಾಡಿ ದೇವೀ ಗಾಯತ್ರೀ ಛಂದಃ ಎಂಬ ಮಂತ್ರವನ್ನು ಪಠಿಸಿ ದೇಶ ಕಾಲಾದಿಗಳನ್ನು ಉಚ್ಛರಿಸಿ ಸಂದರ್ಭಕ್ಕೆ ತಕ್ಕ ಸಂಕಲ್ಪ ಮಾಡಿ ಜನಿವಾರವನ್ನು ಎಡಕ್ಕೆ ಹಾಕಿಕೊಂಡು ದಕ್ಷಣಾಭಿಮುಖವಾಗಿ ತಿರುಗಿಕೊಂಡು ಬಲ ಮೊಣಕಾಲನ್ನು ನೆಲಕ್ಕೆ ಊರಿ ಬಲಗೈಯಲ್ಲಿ ತಿಲವನ್ನು ಹಾಕಿಕೊಂಡು ಉದ್ಧರಣೆಯಿಂದ ಕಲಶೋದಕವನ್ನು ಬಲಗೈಗೆ ಹಾಕಿಕೊಂಡು ಹೆಬ್ಬರಳು ಮತ್ತು ತೋರು ಬೆರಳುಗಳ ಬುಡದ ಮಧ್ಯದಿಂದ ತರ್ಪಣವನ್ನು ಮೂರುಸಲ ತರ್ಪಯಾಮಿ - ತರ್ಪಯಾಮಿ - ತರ್ಪಯಾಮಿ ಎಂದು ಕೊಡಬೇಕು.


* ಕಲಶದ ನೀರಿಗೆ ನಿರ್ಮಾಲ್ಯ ತೀರ್ಥವನ್ನು ಹಾಕಬೇಕು.

* ತರ್ಪಣವನ್ನು ನೆಲದ ಮೇಲೆ ಕೊಡಬಾರದು. 

* ತರ್ಪಣ ಕೊಟ್ಟ ನೀನು ನೆಲದ ಮೇಲೆ ಬೀಳಬಾರದು. 

* ತಾಮ್ರದ ಪಾತ್ರೆಯಲ್ಲಿ ತರ್ಪಣ ಕೊಡಬೇಕು. 

* ಸಂದರ್ಭಾನುಸಾರ 3, 12 ಅಥವಾ ಸಮಸ್ತ ಪಿತೃಗಳಿಗೆ ತರ್ಪಣ ಕೊಟ್ಟಾಗ ಜನಿವಾರವನ್ನು ವನಮಾಲೆಯಾಗಿ ಹಾಕಿಕೊಳ್ಳಬೇಕು. 

ಉಳಿದಿರುವ ಎಳ್ಳು ಅಷ್ಟನ್ನೂ ಈ ಕೆಳಗಿನ 2 ಮಂತ್ರಗಳನ್ನು ಹೇಳಿ ತರ್ಪಣ ಕೊಡಬೇಕು. 

ಆಬ್ರಹ್ಮಸ್ತ೦ಭ ಪರ್ಯಂತ ಋಷಿ ಪಿತೃ ಮಾನವಾ: ।

ತೃಪ್ತ್ಯ೦ತು ಪಿತರೇಸ್ಸರ್ವೇ ಮಾತೃ ಮಾತಾ ಮಹಾದಯಃ ।।

ಅತೀತ ಕುಲ ಕೋಟಿನಾ೦ ಸಪ್ತದ್ವೀಪ ನಿವಾಸಿನಾಮ್ ।

ಆಬ್ರಹ್ಮ ಭುವನಾಲ್ಲೋಕಂ ಇದಮಸ್ತು ತಿಲೋದಕಂ ।। 


ಜನಿವಾರದ ಬ್ರಹ್ಮಗಂಟನ್ನು ಕಲಶೋದಕ ನೀರಿನಲ್ಲಿ ಅದ್ದಿ ಬಲಗಣ್ಣು ನಂತರ ಎಡಗಣ್ಣಿಗೆ ಈ ಕೆಳಗಿನ ಮಂತ್ರ ಹೇಳಿ ಒತ್ತಿಕೊಳ್ಳಬೇಕು. 

ಯೇ ಕೇ ಚಾಸ್ಮತ್ ಕುಲೇ ಜಾತಾ ಅಪುತ್ರಾ ಗೋತ್ರಣೋ ಮೃತಾಃ ।

ತೇ ಗೃಹ್ಣ೦ತು ಮಯಾ ದತ್ತಂ ಸೂತ್ರ ನಿಷ್ಪೀದನೋದಕಂ ।। 

ಪೂರ್ವಕ್ಕೆ ತಿರುಗಿಕೊಂಡು ಸರಿಯಾಗಿ ಪದ್ಮಾಸನದಲ್ಲಿ ಕುಳಿತುಕೊಂಡು ನಂತರ ಜನಿವಾರವನ್ನು ಬಲಕ್ಕೆ ಹಾಕಿಕೊಂಡು... 

ಯಸ್ಯಾಸ್ಮೃತ್ಯಾಚ ನಾಮೋಕ್ತ್ಯಾ ತಪಃ ತರ್ಪಣ ಕ್ರಿಯಾದಿಷು ।

ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಂ ।।

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಜನಾರ್ದನಃ ।

ಯತ್ಕೃತಂತು ಮಯಾದೇವಂ ಪರಿಪೂರ್ಣ೦ ತದಸ್ತುಮೇ ।। 

ಎಂದು ಹೇಳಿ.. ಅನೇನ ಶ್ರಾದ್ಧಾಂಗ (ಶ್ರಾದ್ಧ ಮಾಡಿದಾಗ) ತಿಲ ತರ್ಪಣೇ ಅಥವಾ  ಅನೇನ (ಶ್ರಾದ್ಧ ಮಾಡದೇ ಇದ್ದಾಗ)

ತಿಲ ತರ್ಪಣೇನ ಪಿತೃ೦ತರ್ಯಾಮಿ ಅಥವಾ ಪಿತ್ರಾದಿ ದ್ವಾದಶ ಪಿತೃಣಾ೦ ಅಥವಾ ಪಿತ್ರಾದಿ ಸಮಸ್ತ ಪಿತೃಣಾ೦ತರ್ಗತ ಭಾರತೀ ರಮಣ ಮುಖ್ಯಪ್ರಾಣಾಂತರ್ಗತ ಶ್ರೀಮಧ್ವವಲ್ಲಭ ಜನಾರ್ದನ ವಾಸುದೇವ ಪ್ರೀಯತಾಂ ಪ್ರೀತೋ ವರದೋ ಭವತು ಶ್ರೀಕೃಷ್ಣಾರ್ಪಣಮಸ್ತು!! 

ಎಂದು ಹೇಳಿ ಅಕ್ಕಿ ನೀರು ಅಥವಾ ಬರೀ ನೀರನ್ನು ಅರ್ಘ್ಯ ಪಾತ್ರೆಯಲ್ಲಿ ಬಿಡಬೇಕು. 

ನಂತರ 2 ಬಾರಿ ಆಚಮನ ಮಾಡಬೇಕು. 

ಮಧ್ಯೇ ಮಂತ್ರ ತಂತ್ರ ಸ್ವರ ವರ್ಣ ಲೋಪ ದೋಷ ಪ್ರಾಯಶ್ಚಿತ್ತಾರ್ಥಂ ನಾಮತ್ರಯ ಮಂತ್ರ ಜಪಂ ಕರಿಷ್ಯೆ ।। 

ಅಚ್ಯುತಾಯ ನಮಃ - ಅನಂತಾಯ ನಮಃ- ಗೋವಿಂದಾಯ ನಮಃ - ಎಂದು 3 ಬಾರಿ,  ಅಚ್ಯುತಾನಂತ ಗೋವಿಂದೇಭ್ಯೋ ನಮಃ - ಎಂದು 1 ಬಾರಿ ಹೇಳಬೇಕು. 

ಮಂತ್ರ ಮಧ್ಯೇ ಕ್ರಿಯಾ ಮಧ್ಯೇ ವಿಷ್ಣೋ ಸ್ಮರಣ ಪೂರ್ವಕಂ ।

ಯತ್ಕಿಂಚಿತ್ ಕ್ರಿಯತೇ ಕರ್ಮ ತತ್ಕರ್ಮ ಸಫಲಂ ಕುರು ।। 

ಕಾಯೇನ ವಾಚಾ ಮನಸೇಂದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತೇ: ಸ್ವಭಾವಾತ್ ।

ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯಾಮಿ ।। 


" ತರ್ಪಣಕ್ಕೆ ಬರುವ ಸಮಸ್ತ ಪಿತೃಗಳು" 

ಆದೌ ಪಿತಾ ತಥಾ ಮಾತಾ । ಸ ಪತ್ನೀ ಜನನೀ ತಥಾ ।

ಮಾತಾಮಹಾಸ್ಸಪತ್ನಿಕಾ: । ಆತ್ಮಪತ್ನೀತ್ವನಂತರಂ ।। 

ಸುತಾಭ್ರಾತೃಪಿತ್ರವ್ಯಾಚ್ಯ । ಮತುಲಾ ಸಹ ಭಾರ್ಯಕಾ: ।

ದುಹಿತಾ ಭಗಿನೀ ಚೈವ: ದೌಹಿತ್ರೋಭಾಗಿನೇಯಕಾ: ।। 

ಪಿತೃತ್ವಸಾ ಮಾತೃಶ್ವಸಾ । ಜಾಮಾತಾ ಭಾವುಕ ಸ್ನುಷಾ ।

ಶ್ವಶುರ ಸ್ಯಾಲಕಶ್ಚ್ಯೆವ । ಶಿಷ್ಯಾಪ್ತ ಗುರು ಬಾಂಧವಾ: ।।

( ಪಾಠಾ೦ತರ) ಸ್ವಾಮಿನೋ ಗುರುರಿಥ್ವಿನಂ ।। 


ಅಂತೂ ಭಗವಂತನು ಪಂಚ ರೂಪಗಳಿಂದ ಪಿತೃಯಜ್ಞ ಮಾಡುವ ಕರ್ತೃ, ಕರ್ಮ, ಕ್ರಿಯೆಗಳಲ್ಲಿ, ಆಕಾಲದಲ್ಲಿ ಭೋಕ್ಷ್ಯ - ಭೋಜ್ಯಗಳಲ್ಲಿ ಹೀಗೆ ಎಲ್ಲಾ ಹಂತಗಳಲ್ಲಿ ಆಯಾ ನಾಮಗಳಿಂದ (ಎಂದರೆ ಕರ್ತೃ, ಕರ್ಮ, ಕ್ರಿಯಾ, ಭೋಕ್ತಾ, ಭೋಜ್ಯ ನಾಮಗಳಿಂದ) 96 ರೂಪಗಳಿಂದ "ಷಣ್ಣವತಿ" ಎಂಬ ನಾಮದಿಂದಲೂ ಇದ್ದು "ಪಿತೃಯಜ್ಞ" ಮಾಡಿಸುತ್ತಾನೆ!!! 

ಚೇತನಾಚೇತನಗಳಲಿ ಗುರು ।

ಮಾತರಿಶ್ವಾ೦ತರ್ಗತ । ಜಗ ।

ನ್ನಾಥವಿಠಲ ನಿರಂತರದಿ ವ್ಯಾಪಿಸಿ ತಿಳಿಸಿಕೊಳ್ಳದಲೆ ।।

ಕಾತುರವ ಪುಟ್ಟಿಸಿ ವಿಷಯದಲಿ ।

ಯಾತುಧಾನರ ಮೋಹಿಸುವ । ನಿ ।

ರ್ಭೀತ ನಿತ್ಯಾನಂದಮಯ ನಿರ್ದೋಷ ನಿರವದ್ಯ ।


" ಶ್ರೀ ಗಯಾ ಗದಾಧರ ಸ್ತೋತ್ರ " 

ಶ್ರಾದ್ಧ ಭೂಮಿಂ ಗಯಾ೦ ಧ್ಯಾತ್ವಾ ಧ್ಯಾತ್ವಾ ದೇವಂ ಗದಾಧರಮ್ ।

ವಸ್ವಾದೀಂಶ್ಚ ಪಿತ್ರೂನ್ ಧ್ಯಾತ್ವಾ ತತಃ ಶ್ರಾದ್ಧ೦ ಪ್ರವರ್ತಯೇ ।। 


" ಸುಪುತ್ರ" 

ಮಾತಾಪಿತ್ರೋಣ ವಚನಕೃದ್ ಹಿತಃ ಪಧ್ಯಶ್ಚ ಯಃ ಸುತಃ । 

ತಂದೆ ತಾಯಿಗಳ ಹಿತವನ್ನು ಬಯಸಿ ವೇದೋಕ್ತ ಕರ್ಮಗಳನ್ನು ಮಾಡಿದವನು ಸತ್ಪುತ್ರ ಎನಿಸುವನು. 

" ಶರೀರ"

" ಶೀರ್ಯತೆ ಇತಿ ಶರೀರಂ " ಅಂದರೆ, ಸ್ಥೂಲ ಶರೀರ ನಾಶವಾಗುವ ಸ್ವಭಾವವುಳ್ಳದ್ದು. 

" ದೇಹ"

" ದಹ್ಯತೇ ಇತಿ ದೇಹ" ಅಂದರೆ, ಬೆಂಕಿಯಲ್ಲಿ ಹಾಕಿ ಸುಡುವ ಇಂಧನ ಈ ದೇಹ. 

" ಮರ್ತ್ಯ"

 ಮರಣ ಶೀಲ" ಅಂದರೆ, ಸಾಯುವುದೇ ಸ್ವಭಾವ. ಹುಟ್ಟಿದ ಕೂಡಲೇ ನಮ್ಮ ಪಯಣ ಯಮಧರ್ಮರಾಜರ ಕಡೆಗೆ... 

ಮೇಲ್ಕಂಡ ಮೂರು ಶಬ್ದಗಳಿಂದ ನಮ್ಮನ್ನು ಕರೆಯುವುದು ನಮ್ಮ ಸ್ವಭಾವ ತಿಳಿಯುವುದೇ ಆಗಿದೆ.


" ಗಯಾ ಶ್ರಾದ್ಧ ಮಹಿಮಾ"

" ಗಯಾ" ಎಂಬುವನು ಒಬ್ಬ ರಾಕ್ಷಸ. ಇವನು ಶ್ರೀ ಮಹಾವಿಷ್ಣುವಿನ ಭಕ್ತ. ವಿಶೇಷವಾಗಿ ಶ್ರೀ ಮಹಾವಿಷ್ಣುವನ್ನು ಕುರಿತು ತಪಸ್ಸು ಮಾಡಿ ಬೇರಾರಿಂದಲೂ ಜಯಿಸಲಶಕ್ಯವಾದ ಶಕ್ತಿಯನ್ನು ಪಡೆದಿದ್ದನು. 

ರಾಕ್ಷಸತ್ವ ಗುಣದಿಂದ ಕೂಡಿದ್ದುದರಿಂದ ತಪಃಶಕ್ತಿಯನ್ನು ಪಡೆದಿದ್ದರೂ ರಜೋ ಗುಣ ಭೂಯಿಷ್ಠನಾಗಿ, ಅಹಂಕಾರದಿಂದ ಮೆರೆಯುವ ದೇವತೆಗಳನ್ನೂ ಬಿಡದೇ ಬಿಡದಂತೆ ಎಲ್ಲರಿಗೂ ನಾನಾ ರೀತಿಯಾದ ತೊಂದರೆಯನ್ನು ಉಂಟು ಮಾಡುತ್ತಿದ್ದನು. ಇವನ ಹಿಂಸೆಯನ್ನು ಸಹಿಸಲಾರದೇ ದೇವತೆಗಳು ಶ್ರೀ ಚತುರ್ಮುಖ ಬ್ರಹ್ಮದೇವರಲ್ಲಿ ಏನಾದರೂ ಮಾಡಿ ನಾಶಪಿಡಿಸಬೇಕೆಂದು ಮೊರೆಯಿಟ್ಟರು. 

ಆಗ ಶ್ರೀ ಚತುರ್ಮುಖ ಬ್ರಹ್ಮದೇವರು ಶ್ರೀ ಮಹಾವಿಷ್ಣುವಿನ ಅನುಗ್ರಹಕ್ಕೆ ಪಾತ್ರನಾದ ಇವನನ್ನು ತಾನು ಏನೂ ಮಾಡಲಾರನೆಂದರಿತು ಶ್ರೀ ಮಹಾವಿಷ್ಣುವಿನಲ್ಲೇ ಮೊರೆ ಹೋಗಿ. ಇದಕ್ಕೆ ಒಂದು ಉಪಾಯವನ್ನು ತಿಳಿಸಬೇಕೆಂದು ಪ್ರಾರ್ಥಿಸುತ್ತೇನೆ. 

ಆಗ ಶ್ರೀ ಮಹಾವಿಷ್ಣುವು ತನ್ನ ಭಕ್ತನಾದ ಗಯಾಸುರನ ವಿಷಯದಲ್ಲಿ ವಿಶೇಷವಾದ ಕೃಪೆಯಿಂದ ಕೂಡಿದವನಾಗಿ, ತನ್ನಲ್ಲಿ ಶರಣು ಹೋದ ಶ್ರೀ ಚತುರ್ಮುಖ ಬ್ರಹ್ಮಾದಿಗಳಿಗೂ ಅನುಗ್ರಹ ಮಾಡುವ ಸಲುವಾಗಿ ಶ್ರೀ ಮಹಾವಿಷ್ಣುವು ಒಬ್ಬ ಬ್ರಾಹ್ಮಣನ ವೇಷವನ್ನು ಧರಿಸಿ, ಗಯಾಸುರನ ಬಳಿ ಹೋಗಿ ತಾನು ಒಂದು ಮಹತ್ತರವಾದ ವೈಷ್ಣವ ಯಜ್ಞವನ್ನು ಮಾಡಬೇಕೆಂದು ಅದಕ್ಕೆ ಸ್ಥಳವಾವುದೂ ಸಿಗದಿರುವುದರಿಂದ, ಎಲೈ ಗಯನೇ ನೀನೆ ಅಂಥಹ ಸ್ಥಳವೊಂದನ್ನು ತೋರಿಸಿ ಕೊಡಬೇಕೆಂದು ಹೇಳಿದನು!

ಆಗ ಶ್ರೀಮಹಾವಿಷ್ಣು ಭಕ್ತನಾದ ಗಯನು ವೈಷ್ಣವ ಯಾಗಕ್ಕೆ ತನ್ನ ದೇಹವನ್ನೇ ಅರ್ಪಿಸುವುದಾಗಿ ತೀರ್ಮಾನಿಸಿ ತನ್ನ ಎದೆಯ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿ ಅಲ್ಲಿಯೇ ಶ್ರೀಮಹಾವಿಷ್ಣು ಪ್ರೀತಿಗಾಗಿ ಈ ವೈಷ್ಣವ ಯಜ್ಞವನ್ನು ಮಾಡಬಹುದೆಂದು ಹೇಳಿ ಮಲಗಿದನು. 

ಆ ಕೂಡಲೇ ಶ್ರೀ ಚತುರ್ಮುಖ ಬ್ರಹ್ಮದೇವರು ಅವನ ಎದೆಯ ಮೇಲೆ ಹಾಸುಗಲ್ಲನ್ನೊಂದು ಇಟ್ಟು ಅದರ ಮೇಲೆ ಯಜ್ಞ ಕುಂಡವನ್ನು ನಿರ್ಮಿಸಿದರು. ಆಗ ಗಯನ ಉಸಿರಾಟದ ಕಾರಣ ಯಜ್ಞ ಕುಂಡವು ಅಲಗಾಡಿತು. ಅದನ್ನು ಕಂಡ ಶ್ರೀ ಬ್ರಹ್ಮದೇವರು, ಕುಂಡವನ್ನು ಸ್ಥಿರಗೊಳಿಸಬೇಕೆಂದು ಶ್ರೀ ಹರಿಯಲ್ಲಿ ಪ್ರಾರ್ಥಿಸಿದನು. 

ಅದೇ ಸಮಯದಲ್ಲಿ ತನ್ನ ಮೇಲಿನ ಭಕ್ತಿಯಿಂದ ದುಷ್ಟವಾದ ರಾಕ್ಷಸ ಜನ್ಮದಲ್ಲಿ ಹುಟ್ಟಿದ್ದರೂ ತನ್ನ ಮರಣವನ್ನೇ ಲಕ್ಷ್ಯ ಮಾಡದೇ ಯಜ್ಞಾರ್ಥವಾಗಿ ತನ್ನ ದೇಹವನ್ನೇ ಅರ್ಪಿಸಿದ ತನ್ನ ಭಕ್ತನಿಗೆ ಶಾಶ್ವತವಾದ ವೈಕುಂಠ ಲೋಕವನ್ನೇ ಅನುಗ್ರಹಿಸಿ ಕೊಡಬೇಕೆಂದು ತೀರ್ಮಾನಿಸಿ ತನ್ನ ಬಲ ಪಾದವನ್ನು ಅವನ ಎದೆಯ ಮೇಲಿರುವ ಯಜ್ಞ ಕುಂಡದಲ್ಲಿಟ್ಟು ನಿಂತು ಕೊಂಡನು!

ತನ್ನ ನಿಜ ಸ್ವರೂಪವನ್ನು ತೋರಿಕೊಂಡನು. ಆ ಕೂಡಲೇ ಶ್ರೀ ಪರಮಾತ್ಮನ ಸಂಸರ್ಗದಿಂದ ಸತ್ವ ಗುಣ ಭೂಯಿಷ್ಠನಾದ ಗಯಾಸುರನು ಶ್ರೀ ಹರಿಯನ್ನು ಕಂಡು ಅವನಲ್ಲಿ ಬೇಡುತ್ತಾನೆ. 

" ಸ್ವಾಮಿ! ನಾನು ಇಷ್ಟುದಿನ ಮಾಡಿದ ತಪಸ್ಸಿನ ಫಲವು ಇಂದು ಲಭಿಸಿತು. ನನಗೆ ಇಂದು ನೀವು ಮುಕ್ತೈಶ್ವರ್ಯವನ್ನು ಕರುಣಿಸಿ ಕೊಡಿ. ನಿಮ್ಮ ಪಾದದಿಂದ ಅಂಕಿತವಾಗಿರುವ ಸ್ಥಳವು " ಗಯಾ ಕ್ಷೇತ್ರ " ವೆಂದು ಪ್ರಸಿದ್ಧಿಗೆ ಬರಲಿ! ನಿಮ್ಮ ಪಾದದ ಅಂಕನವು ಎಂದೆಂದಿಗೂ ಅಳಿಯದಂತೆ ನಿಮ್ಮ ಸಂಪೂರ್ಣ ಸನ್ನಿಧಾನದಿಂದ ಇಲ್ಲಿರಲಿ. ನನಗೆ ಮಾತ್ರವಲ್ಲದೆ ಯಾವುದೇ ಚೇತನವನ್ನು ಉದ್ಧೇಶಿಸಿ ಯಾರೇ "ಪಿಂಡ ದಾನ" ಮಾಡಿದರೂ ಅವರೆಲ್ಲರಿಗೂ ನೀವು ಮುಕ್ತಿಯನ್ನು ಅನುಗ್ರಹಿಸಿರಿ. 

ಇಲ್ಲಿ ವಾಸಿಯುವ ನನ್ನ ವಂಶದ ಬ್ರಾಹ್ಮಣರನ್ನು ಅಸುರನ ವಂಶದವರೆಂದು ಯಾರೊಬ್ಬರೂ ತಿರಸ್ಕರಿಸದೇ ಅವರಿಗೆ ಮನ್ನಣೆ ನೀಡಿ ಅವರನ್ನೇ ಶ್ರಾದ್ಧದಲ್ಲಿ ನಿಮಂತ್ರಿತರಾಗಿ ವರಿಸಿ ಪಿತೃಗಳ ಉದ್ಧೇಶ್ಯವಾಗಿ ಶ್ರಾದ್ಧ ಮಾಡಲಿ. ಇದರಿಂದ ಪಿತೃಗಳು ಸಂತುಷ್ಟರಾಗಲಿ. ಉದ್ಧಿಷ್ಟರಾದ ಚೇತನರು ಮುಕ್ತಿಯನ್ನು ಪಡೆಯಲಿ. ಈ ನನ್ನ ವಂಶದ ಬ್ರಾಹ್ಮಣರಿಗೆ ಶ್ರಾದ್ಧಾನ್ನ ಭೋಜನ ಮಾಡಿದ ದೋಷವು ತಟ್ಟದಿರಲಿ. 

ನಾನು ತಲೆಯಿಟ್ಟಿರುವ ಸ್ಥಳವು "ಗಯಾ ಶಿರಸ್" ಎಂದು ಪ್ರಸಿದ್ಧವಾದ ಪುಣ್ಯಕ್ಷೇತ್ರವಾಗಲಿ. ಇಲ್ಲಿ ಪಿತೃಗಳನ್ನು ಉದ್ಧೇಶಿಸಿ ಮಾಡಿದ ಪಿಂಡ ದಾನಗಳು ಪಿತೃಗಳಿಗೆ ಸಂತೋಷವನ್ನುಂಟು ಮಾಡಲಿ"

ಎಂದು ವರವನ್ನು ಬೇಡಿದನು. ಆ ಕೂಡಲೇ ಶ್ರೀ ಮಹಾವಿಷ್ಣುವು "ತಥಾಸ್ತು" (ಹಾಗೆ ಆಗಲಿ) ಎಂದು ಅನುಗ್ರಹಿಸಿ ತಕ್ಷಣದಲ್ಲಿ ಮುಕ್ತಿಯನ್ನೂ ಅನುಗ್ರಹಿಸಿದನು. 


ಆದುದರಿಂದ ಈ ಕ್ಷೇತ್ರದಲ್ಲಿ ಮೃತಿ ಹೊಂದಿರುವ ಯಾವುದೇ ಚೇತನರನ್ನು ಉದ್ಧೇಶಿಸಿ ಶ್ರಾದ್ಧ, ಪಿಂಡ ದಾನಗಳನ್ನು ಮಾಡಿದರೂ ಅವರಿಗೆ "ಮುಕ್ತಿ ಸಿದ್ಧ" ಅಂತೆಯೇ ಪಿತೃಗಳೂ ವಿಶೇಷವಾದ ಸಂತೋಷವನ್ನು ಹೊಂದುತ್ತಾರೆ. 

ಜೀವಂತವಾಗಿರುವ ಚೇತನರು ಪೂರ್ವದಲ್ಲಿ ತಾವು ಅನೇಕ ಜನ ಗಂಡು ಮಕ್ಕಳನ್ನು ಪಡೆದುಕೊಳ್ಳಬೇಕೆಂದು ಇಚ್ಛಿಸುತ್ತಿದ್ದರು. ಏಕೆಂದರೆ ಅವರಲ್ಲಿ ಒಬ್ಬರಾದರೂ ತನ್ನ ಮರಣಾ ನಂತರ "ಗಯಾ ಕ್ಷೇತ್ರ"ಕ್ಕೆ ಹೋಗಿ ತನಗೆ ಮುಕ್ತಿ ಸಿಗಲೆಂದು ಪಿಂಡದಾನ ಮಾಡುವಂತಾಗಲಿ ಎಂದು... 

ಶ್ರೀ ವಾಲ್ಮಿಕೀ ರಾಮಾಯಣದ ಆಯೋಧ್ಯ ಕಾಂಡದಲ್ಲಿ.... 

" ಏಷ್ಟವ್ಯಾ: ಬಹವಃ ಪುತ್ರಾ: ಯದ್ಯೇಕೋSಪಿ ಗಯಾ೦ ವ್ರಜೇತ್ ।।

ಶ್ರೀಮನ್ಮಹಾಭಾರತ ಆದಿ ಪರ್ವದಲ್ಲಿ 235, ವನ ಪರ್ವದಲ್ಲಿ 83, ವಾಯು ಪುರಾಣದಲ್ಲಿ 106 ಶ್ಲೋಕಗಳಲ್ಲಿ ಗಯಾ ಶ್ರಾದ್ಧದ ಮಹಿಮೆಯ ವಿಷಯ ಹೇಳಲ್ಪಟ್ಟಿದೆ. 

ಶ್ರೀ ವಾಯುಪುರಾಣದಲ್ಲಿ "ಗಯಾ ಶ್ರಾದ್ಧದ ಮಹಿಮೆ" ಹೀಗಿದೆ... 

ಗಯಾನಾಮ್ನಾ ಗಯಾಖ್ಯಾತಾಕ್ಷೇತ್ರಂ ಬ್ರಹ್ಮಾಭಿಕಾಂಕ್ಷಿತಂ ।

ಕಾಂಕ್ಷ೦ತಿ ಪಿತರಃ ಪುತ್ರಾನ್ ನರಕಾದ್ಭಯ ಭೀರವಃ ।।


ಗಯಾ೦ ಯಸ್ಯಾತಿ ಯಃ ಪುತ್ರ : ಸ ನಸ್ತ್ರಾತಾ ಭವಿಷ್ಯತಿ ।

ಗಯಾ  ಪ್ರಾಪ್ತ೦ ಸುತಂ ದೃಷ್ಟ್ವಾ ಪಿತೃಣಾಮುತ್ಸವೋ ಭವೇತ್ ।।

ಪದ್ಭ್ಯಾಮಪಿ ಜಲಂ ಷ್ಟ್ರುಟ್ವಾ-ಸೋsಸ್ಮಭ್ಯ೦ ಕಿಂ ನ ದಾಸ್ಯತಿ ।

ಗಯಾ೦ಗತ್ವಾನ್ನದಾತಾ ಯಃ ಪಿತರಸ್ತೇನ ಪುತ್ರಿಣಃ ।।

ಪಕ್ಷತ್ರಯ ನಿವಾಸೀ ಚ ಪುನತ್ಯಾಸಪ್ತಮಂ ಕುಲಮ್ ।

ಬ್ರಹ್ಮಹತ್ಯಾ ಸುರಾಪಾನಂ ಸ್ತೇಯ೦ ಗುರ್ವಂಗನಾಗಮಃ ।।

ಪಾಪಂ ತತ್ಸಂಗಜಂ ಸರ್ವಂಗಯಾಶ್ರಾದ್ಧಾದ್ವಿನಶ್ಯತಿ ।

ಆತ್ಮಜೋsಪ್ಯನ್ಯಜೋ ವಾಪಿ ಗಯಾ ಭೂಮೌ ಯದಾ ತದಾ ।।


ಯನ್ನಾಮ್ನಾಪಾತಯೇತ್ಪಿಂಡಂ ತನ್ನಯೇದ್ಬ್ರಹ್ಮಶಾಶ್ವತಂ ।

ನಾಮ ಗೋತ್ರೇ ಸಮುಚ್ಚಾರ್ಯಪಿಂಡಪಾತನಮೀಕ್ಷತೇ ।।

ಯೇನಕೇನಾಪಿ ಕಸ್ಮೈ ಚಿತ್ಸಯಾತಿ ಪರಮಾಂ ಗತಿಮ್ ।।

 ಗಯಾ" ಎಂಬ ಹೆಸರಿನಿಂದ ಪ್ರಸಿದ್ಧವಾದ ಕ್ಷೇತ್ರವಾದರೋ ಶ್ರೀ ಬ್ರಹ್ಮಾದಿ ದೇವತೆಗಳಿಂದ ಇಚ್ಛಿಸಲ್ಪಟ್ಟುದಾಗಿದೆ. (ತಾವು  ಮಾಡಿರುವ ಕೆಟ್ಟ ಕರ್ಮಗಳ ಫಲವಾಗಿ ತಮಗೆ ಸಂಭವಿಸಬಹುದಾದ ನರಕಾದಿ ಲೋಕಗಳಿಂದ ಭಯಕ್ಕೆ ಒಳಗಾದ ಮೃತಿ ಹೊಂದಿದ ಪಿತೃಗಳಾದರೋ ತನ್ನ ಮಕ್ಕಳು "ಗಯೆ" ಗೆ ಹೋಗಿ ಅಲ್ಲಿ ತನಗೆ ಪಿಂಡ ದಾನವನ್ನು ಮಾಡಬೇಕೆಂದು ಇಚ್ಛಿಸುತ್ತಾರೆ. 

ಯಾವ ಮಗನು ಗಯೆಗೆ ಹೋಗಿ ನಮ್ಮನ್ನುದ್ಧೇಶಿಸಿ ಪಿಂಡ ದಾನವನ್ನು ಮಾಡುತ್ತಾನೆಯೋ ಅವನೇ ನಮಗೆ ರಕ್ಷಕನಾಗಿರುತ್ತಾನೆ ಎಂಬ ಅಭಿಪ್ರಾಯದಿಂದ ಗಯೆಗೆ ಹೋದ ಮಗನನ್ನು ಕಂಡು ಪಿತೃಗಳು ಹರ್ಷ ಚಿತ್ತರಾಗುತ್ತಾರೆ. 

ಕಾಲಿಂದಲಾದರೂ (ಗಯೆಯಲ್ಲಿರುವ ಫಲ್ಗು ನದಿಯ) ತೀರ್ಥವನ್ನು ಸ್ಪರ್ಶಿಸಿದವನು ನಮಗೆ ಏನನ್ನೂ ತಾನೇ ಕೊಡಲಾರ. ಗಯೆಗೆ ಹೋಗಿ ಮೃತರಾದ ಪಿತೃಗಳನ್ನುದ್ಧೇಶಿಸಿ ಅನ್ನ ದಾನವನ್ನು ಮಾಡುತ್ತಾರೆಯೋ, ಆ ಪುತ್ರನಿಂದಲೇ ಮೃತರಾದವರು ಪುತ್ರನನ್ನು ಹೊಂದಿದ ಭಾಗ್ಯವನ್ನು ಪಡೆದವರಾಗಿ "ಪುತ್ರೀ" ಎಂಬ ಶಬ್ದಕ್ಕೆ ಅರ್ಹರಾಗುತ್ತಾರೆ. 

ಗಯಾ ಕ್ಷೇತ್ರದಲ್ಲಿ ಮೂರು ಪಕ್ಷಗಳು ವಾಸವಾಗಿದ್ದು- ಅನ್ನ ಶ್ರಾದ್ಧ, ಹಿರಣ್ಯ ಶ್ರಾದ್ಧ ಅಥವಾ ಆಮ ಶ್ರಾದ್ಧ ಅಥವಾ ತರ್ಪಣ ರೂಪದಲ್ಲಿ ತೀರ್ಥ ಶ್ರಾದ್ಧವನ್ನಾದರೂ ಮಾಡುವವನು ತನ್ನ ಹಿಂದಿನ ಏಳು ತಲೆಮಾರಿನ ಪಿತೃಗಳನ್ನು- ಅವರ ಪಾಪ ಕರ್ಮಗಳಿಂದ ಬಿಡಿಸಿ ಶುದ್ಧಿಗೊಳಿಸುತ್ತಾನೆ!

ಗಯಾ ಶ್ರಾದ್ಧ ಮಾಡುವವನಿಗೂ ಮತ್ತು ಅವನ ವಂಶದಲ್ಲಿ ಜನಿಸಿ ಮೃತಿ ಹೊಂದಿದವರಿಗೂ ಸಂಭವಿಸಿದ ಬಹಳ ಘೋರವಾದ ಬ್ರಹ್ಮಹತ್ಯಾ, ಸುರಾಪಾನ, ಸ್ವರ್ಣಸ್ತೇಯ, ತಾಯಿಯೇ ಮೊದಲಾದ ಹಿರಿಯ ಸ್ತ್ರೀಯರೊಡನೆ ಲೈಂಗಿಕ ಸಂಬಂಧ ಇವೇ ಮೊದಲಾದ ಪಾಪಗಳು "ಗಯಾ ಶ್ರಾದ್ಧ" ಮಾಡುವುದರಿಂದ ನಾಶವಾಗುತ್ತದೆ. 

ತನ್ನ ಸ್ವಂತ ಮಗನೇ ಆಗಲೀ ಅಥವಾ ಬೇರಾರ ಮಗನೇ ಆಗಲೀ ಮೃತಿ ಹೊಂದಿದ ಯಾವ ಚೇತನನ ಗೋತ್ರ, ಹೆಸರನ್ನು ಹೇಳಿ ಯಾವಾಗ ಗಯಾ ಕ್ಷೇತ್ರದಲ್ಲಿ ಪಿಂಡ ದಾನ ಮಾಡುತ್ತಾನೆಯೋ ಆ ಕ್ಷಣದಲ್ಲಿಯೇ ಅವನು ಕೊಟ್ಟ ಪಿಂಡಕ್ಕೆ ಪಾತ್ರನಾದ ಚೇತನನು ಬ್ರಹ್ಮ ಸಾಯುಜ್ಯವನ್ನು ಪಡೆಯುತ್ತಾನೆ.

-ಡಾ. ಗುರುರಾಜ ಪೋಶೆಟ್ಟಿಹಳ್ಳಿ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top