ಉಜಿರೆ: “ದೇಶವನ್ನು ಕಟ್ಟುವ ಹೊಣೆಗಾರಿಕೆ ನಮ್ಮೆಲ್ಲರ ಮೇಲೆ ಇದೆ. ನಾವು ಹಕ್ಕುಗಳ ಜತೆಗೆ ನಮ್ಮ ಕರ್ತವ್ಯಗಳನ್ನೂ ತಿಳಿದುಕೊಳ್ಳಬೇಕು. ನಮ್ಮ ಎಚ್ಚರಿಕೆಯ ನಡೆ ದೇಶವನ್ನು ಬದಲಿಸಬಹುದು” ಎಂದು ನಿವೃತ್ತ ಸಹಾಯಕ ಆಯುಕ್ತ (ಕೆ.ಎ.ಎಸ್.) ಕಾವೇರಿಯಪ್ಪ ಕೆ.ಟಿ. ಹೇಳಿದರು.
ಅವರು ಉಜಿರೆ ಶ್ರೀ ಧ.ಮಂ. ಕಾಲೇಜಿನಲ್ಲಿ ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿ ವತಿಯಿಂದ ಇತ್ತೀಚೆಗೆ ಆಯೋಜಿಸಲಾದ ಭ್ರಷ್ಟಾಚಾರ ವಿರೋಧಿ ಜಾಗೃತಿ ಕಾರ್ಯಕ್ರಮದಲ್ಲಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತ, "ಸರಕಾರಿ ಕಚೇರಿಗಳು ಪಾರದರ್ಶಕತೆಯಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಜನರಿಗೆ ಆಡಳಿತದ ಬಗ್ಗೆ ನಂಬಿಕೆ, ಗೌರವ ಮೂಡುತ್ತದೆ. ಹೀಗಾಗಿ ಮುಂದಿನ ಅಧಿಕಾರಿಗಳಾಗುವ ವಿದ್ಯಾರ್ಥಿಗಳಲ್ಲಿ ಹಂತ ಹಂತವಾಗಿ ಅರಿವು ಮೂಡಿದಾಗ ಭ್ರಷ್ಟಾಚಾರ ನಿಯಂತ್ರಿಸಲು ಸಾಧ್ಯ. ಭ್ರಷ್ಟಾಚಾರದ ಸೋಂಕು ತಾಗದ ಹಾಗೆ ಎಲ್ಲರೂ ತಮ್ಮ ಮೌಲ್ಯಗಳಿಗೆ ಬೇಲಿ ಕಟ್ಟಿಕೊಂಡು ಕಾರ್ಯನಿರ್ವಹಿಸಬೇಕಿದೆ” ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ. ಎಸ್. ಎನ್. ಕಾಕತ್ಕರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಆಡಳಿತ ಕುಲಸಚಿವೆ ಡಾ. ಶಲೀಫ್ ಎ.ಪಿ., ಉಪನ್ಯಾಸಕ ಸುಮನ್ ಜೈನ್ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ವಾಹನ ಪಾಸ್ (ಪಾರ್ಕಿಂಗ್) ವಿತರಿಸಲಾಯಿತು.
ವಿದ್ಯಾರ್ಥಿ ಕ್ಷೇಮ ಪಾಲನಾ ಸಮಿತಿಯ ಸಂಯೋಜಕ ನಟರಾಜ್ ಹೆಚ್.ಕೆ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ಯಾರ್ಥಿನಿಯರಾದ ಮಾನಸ ಅಗ್ನಿಹೋತ್ರಿ ಹಾಗೂ ಹರ್ಷಿತ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


