ಅ. 15 ರಂದು ಡಾ ಎ. ಪಿ. ಜೆ. ಅಬ್ದುಲ್ ಕಲಾಂ ಜನ್ಮ ದಿನಾಚರಣೆ

Upayuktha
6 minute read
0



ಭಾರತೀಯ ಸಂಸ್ಕೃತಿ ಮತ್ತು ನಾಗರೀಕತೆಗಳ ಪರಂಪರೆ ವಿಶ್ವ ಪ್ರಜ್ಞೆ ಭಾವದ ತಳಹದಿಯ ಮೇಲೆ ಕಟ್ಟಲ್ಪಟ್ಟಿದೆ. ಭಾರತ ಯಾವಾಗಲೂ ಮಿತ್ರತ್ವವನ್ನು ಬಯಸಿದೆ ಹಾಗೂ ತನ್ನ ಸ್ನೇಹ ಹಸ್ತವನ್ನು ಸಮಸ್ತ ವಿಶ್ವಕ್ಕೇ ಚಾಚಿ ನಿಂತಿದೆ. ನಮ್ಮ ದೇಶ ಪ್ರಾಕೃತಿಕ ಸಂಪನ್ಮೂಲಗಳು, ಜಾಗೃತ ಕ್ರಿಯಾಶೀಲ ಜನತಾ ಸಮೂಹ ಮತ್ತು ಪರಂಪರಾಗತ ಮೌಲ್ಯ ಪದ್ಧತಿಗಳಿಂದ ಸಮೃದ್ಧವಾಗಿದೆ. ಒಂದು ದೇಶವನ್ನು ಗುರುತಿಸುವ ಮುಖ್ಯ ಲಕ್ಷಣಗಳೆಂದರೆ ಅನಾರೋಗ್ಯಮುಕ್ತ ಸಮೃದ್ಧ ಮತ್ತು ಸಂಪದ್ಭರಿತ, ಹೆಚ್ಚಿನ ಉತ್ಪಾದನಾ ಶಕ್ತಿಯನ್ನೊಳಗೊಂಡ, ಶಾಂತ ಸಮರಸ ಜೀವನ ಹೊಂದಿದ ಮತ್ತು ಪ್ರಬಲ ರಕ್ಷಣಾ ಶಕ್ತಿಯುಳ್ಳ ಲಕ್ಷಣಗಳು. ನಮ್ಮ ಪ್ರಯತ್ನಗಳು, ಈ ಗುಣಲಕ್ಷಣಗಳನ್ನು ದೇಶ ಹೊಂದುವಂತೆ ಎಲ್ಲಾ ಸ್ತರಗಳಲ್ಲಿಯೂ ಸಮಂಜಸವಾಗಿ ಮತ್ತು ಸಮಗ್ರವಾಗಿ ಮಾಡುವ ದಿಕ್ಕಿನಲ್ಲಿ ಕೇಂದ್ರೀಕೃತವಾಗಬೇಕು. 



ಭಾರತವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸೇನಾ ಕ್ಷೇತ್ರದಲ್ಲಿ ಸಶಕ್ತ ರಾಷ್ಟ್ರವನ್ನಾಗಿ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನಮಗಾಗಿ, ನಮ್ಮ ದೇಶಕ್ಕಾಗಿ ಮತ್ತು ಭವಿಷ್ಯದ ಪೀಳಿಗೆಗಾಗಿ ಈ ಕರ್ತವ್ಯ ಪರಾಯಣರಾಗುವುದು ಅವಶ್ಯಕ. ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಯ ಉದ್ದೇಶವನ್ನು ಹೊಂದಿದ ವೇಗಯುತ ಅಭಿವೃದ್ಧಿಯೊಂದಿಗೆ ರಾಷ್ಟೀಯ ರಕ್ಷಣೆಯು ರಾಷ್ಟ್ರದ ಆದ್ಯತೆಯ ಅಂಶವೆಂಬುದನ್ನು ಪ್ರತಿಯೊಬ್ಬ ಭಾರತೀಯನೂ ಗಮನಿಸಬೇಕು.  ಹೀಗೆಂದು 2002 ರ ಜುಲೈ 25 ರಂದು ಭಾರತದ ಹನ್ನೊಂದನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡು ಭಾರತ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದವರು ಯಾರು ಗೊತ್ತೇ ? 



ಅವರೇ, ಸರಳತೆಯ ಸಾಕಾರ ಮೂರ್ತಿ, ಸಾರ್ವಕಾಲಿಕ ಸ್ಫೂರ್ತಿ, ಭಾರತ ಮಾತೆಯ ಹೆಮ್ಮೆಯ ಪುತ್ರ, ಭಾರತದ ವೈಜ್ಞಾನಿಕ ಮತ್ತು ವೈಮಾನಿಕ ಕ್ಷೇತ್ರವನ್ನು ವಿಶ್ವಕ್ಕೆ ಮಿಂಚಿನಂತೆ ಬೆಳಗಿಸಿದ ಹೆಮ್ಮೆಯ ವಿಜ್ಞಾನಿ, ಜವಾಬ್ದಾರಿಯುತ ರಾಜಕಾರಣಿ, ಭಾರತದ ಕ್ಷಿಪಣಿಯ ಜನಕ, ವಿಚಾರವಾದಿ, ಶ್ರೇಷ್ಠ ಉಪನ್ಯಾಸಕ, ಚಿಂತಕ, ತತ್ವಜ್ಞಾನಿ, ಮಕ್ಕಳ ನೆಚ್ಚಿನ ಮೇಷ್ಟ್ರು, ಜನಸಾಮಾನ್ಯರ ಜನಪ್ರಿಯ ರಾಷ್ಟ್ರಪತಿ, ಅಪ್ಪಟ ದೇಶಭಕ್ತ, ರಾಷ್ಟ್ರಾಭಿವೃದ್ಧಿಯ ಕನಸುಗಾರ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರವರು. ಭಾರತ ದೇಶ ಕಂಡ ಅದ್ವಿತೀಯವಾದ ನಿಸ್ವಾರ್ಥ ವ್ಯಕ್ತಿತ್ವ ಅವರದು. ಭಾರತದ ಬಗ್ಗೆ ಅವರಿಗಿರುವ ಪ್ರೀತಿ, ಅಭಿಮಾನ, ಬದ್ಧತೆ ಎಲ್ಲವೂ ಅವರ ಭಾಷಣದ ಮೂಲಕ ಅಭಿವ್ಯಕ್ತಿಗೊಂಡಿರುವುದನ್ನು ತಿಳಿಯುತ್ತೇವೆ. ಇಂತಹ ಮಹೋನ್ನತ ವ್ಯಕ್ತಿತ್ವದ ಎ. ಪಿ. ಜೆ. ಅಬ್ದುಲ್ ಕಲಾಂ.

 


ಎ. ಪಿ. ಜೆ. ಅಬ್ದುಲ್ ಕಲಾಂ ರವರ ಪೂರ್ಣ ಹೆಸರು ಅವುಲ್ ಫಕೀರ್ ಜೈನುಲಬ್ದೀನ್ ಅಬ್ದುಲ್ ಕಲಾಂ ಎಂದು. ಇವರು ತಮಿಳುನಾಡಿನ ರಾಮೇಶ್ವರಂನಲ್ಲಿ, ಅಕ್ಟೋಬರ್ 15, 1931 ರಲ್ಲಿ ತಮಿಳು ಮುಸ್ಲಿಂ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಜೈನುಲಬ್ದೀನ್, ಅವರು ದೋಣಿ ಮಾಲೀಕರಾಗಿದ್ದರು. ತಾಯಿ ಅಶಿಮಾ ಗೃಹಿಣಿಯಾಗಿದ್ದರು. ಕಲಾಂ ಅವರ ತಂದೆ, ಈಗ ನಿರ್ನಾಮವಾದ ಧನುಷ್ಕೋಟಿ ಮತ್ತು ರಾಮೇಶ್ವರಂ ನಡುವೆ ತಮ್ಮ ದೋಣಿಯಲ್ಲಿ ಹಿಂದು ಭಕ್ತಾದಿಗಳನ್ನು ಕರೆದುಕೊಂಡು ಹೋಗುತ್ತಿದ್ದರು. ಅಬ್ದುಲ್ ಕಲಾಂ ಅವರು ಕುಟುಂಬದ ನಾಲ್ಕು ಜನ ಸಹೋದರರು ಮತ್ತು ಒಬ್ಬ ಸಹೋದರಿಯಲ್ಲಿ ಅತ್ಯಂತ ಕಿರಿಯ ವರಾಗಿದ್ದರು. ಅವರು ಬಡತನದ ಹಿನ್ನೆಲೆಯಿಂದ ಬಂದವರು ಮತ್ತು ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಬೆಂಬಲಿಸುವ ಸಲುವಾಗಿ, ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ಕಲಾಂ ರವರಿಗೆ ತಮ್ಮ ತಂದೆಯೇ ಸ್ಫೂರ್ತಿ. ತಮ್ಮ ತಂದೆಗೆ ಆರ್ಥಿಕವಾಗಿ ಸಹಾಯ ಮಾಡಲು, ಅವರು ಶಾಲೆಯ ನಂತರ ಸಹೋದರ ಸಂಸೂದ್ದೀನ್ ಕಲಾಂ ರವರೊಂದಿಗೆ ದಿನಪತ್ರಿಕೆಗಳನ್ನು ವಿತರಣೆ ಮಾಡುತ್ತಿದ್ದರು. ಇವರ ಬಾಲ್ಯವು ಬಹಳ ಬಡತನದಿಂದ ಕೂಡಿತ್ತು.




ಬೆಳಗಿನ ಜಾವ 4:00 ಘಂಟೆಗೆ ಎದ್ದು ದಿನದ ಪಾಠಗಳನ್ನು ಓದಿಕೊಂಡು ಶಾಲೆಗೆ ಹೋಗುತ್ತಿದ್ದರು. ಅವರು ಶಾಲೆಯಲ್ಲಿದ್ದಾಗ ಒಬ್ಬ ಸಾಧಾರಣ ವಿದ್ಯಾರ್ಥಿಯಾಗಿದ್ದು, ಚುರುಕಾದ ಮತ್ತು ಕಠಿಣ ಪರಿಶ್ರಮ ಪಡುವ ವಿದ್ಯಾರ್ಥಿಯಾಗಿದ್ದರು. ಅವರಿಗೆ ಗಣಿತದಲ್ಲಿ ವಿಶೇಷ ಆಸಕ್ತಿ ಇತ್ತು. ಅವರು ಗಣಿತವನ್ನು ಹಲವು ಗಂಟೆಗಳ ಅಧ್ಯಯನ ಮಾಡುತ್ತಿದ್ದರು. ಅಬ್ದುಲ್ ಕಲಾಂರವರು ರಾಮನಾಥಪುರಂ ನಲ್ಲಿನ ಶ್ವಾರ್ಟ್ಜ್ ಮೆಟ್ರಿಕ್ಯುಲೇಷನ್ ಶಾಲೆಯಲ್ಲಿ ಉನ್ನತ ಮಾಧ್ಯಮಿಕ ಶಿಕ್ಷಣ ಮುಗಿಸಿದ ನಂತರ ತಿರುಚಿರಾಪಳ್ಳಿಯಲ್ಲಿ ಸೇಂಟ್ ಜೋಸೆಫ್ಸ್ ಕಾಲೇಜಿಗೆ ಸೇರಿಕೊಂಡರು. 1954 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತಶಾಸ್ತ್ರದಲ್ಲಿ ಪದವಿಯನ್ನು ಪಡೆದರು. ನಂತರ ಅವರು ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಂತರಿಕ್ಷಯಾನ ಇಂಜಿನಿಯರಿಂಗ್ ಓದಲು ಮದ್ರಾಸ್ ಗೆ ತೆರಳಿದರು. 1960 ರಲ್ಲಿ ಮದ್ರಾಸ್ ತಾಂತ್ರಿಕ ಮಹಾವಿದ್ಯಾಲಯದಿಂದ ಪದವಿ ಪಡೆದ ನಂತರ ಕಲಾಂ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿ.ಅರ್.ಡಿ.ಓ) ನ ವಾಯುಯಾನ ವಿಜ್ಞಾನ ಅಭಿವೃದ್ಧಿ ವಿಭಾಗಕ್ಕೆ ಒಬ್ಬ ವಿಜ್ಞಾನಿಯಾಗಿ ಸೇರಿಕೊಂಡರು. 




ಅಲ್ಲಿ ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಭಾರತದ ಭೂ ಸೇನೆಗೆ ಸಣ್ಣ ಹೆಲಿಕಾಪ್ಟರ್ ಗಳನ್ನು ವಿನ್ಯಾಸ ಮಾಡುತ್ತಿದ್ದರು, ಆದರೆ ಅವರಿಗೆ ತಾವು ಡಿ.ಆರ್.ಡಿ.ಓ ದಲ್ಲಿ ಆಯ್ದುಕೊಂಡ ಕೆಲಸದ ಬಗ್ಗೆ ಅಸಮಾಧಾನ ಇತ್ತು. ಇವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( DEFENCE RESEARCH AND DEVELOPMENT ORGANIZATION : DRDO) ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ ( INDIAN SPACE RESEARCH ORGANIZATION : ISRO ) ಯಲ್ಲಿ ವೈಮಾನಿಕ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು. ಇವರು ಭಾರತಕ್ಕೆ ಕ್ಷಿಪಣಿ ಹಾಗೂ ರಾಕೆಟ್ ತಂತ್ರಜ್ಞಾನವನ್ನು ತಯಾರಿಸಿರುವ ಕಾರಣ, ಇವರನ್ನು ಕ್ಷಿಪಣಿಗಳ ಜನಕ ( MISSILE MAN OF INDIAN ) ಎಂದು ಕರೆಯಲಾಗುತ್ತದೆ. ಭಾರತದ ಮೊದಲ ಉಪಗ್ರಹ ಉಡಾವಣಾ ವಾಹನವಾದ SLV III  ಮತ್ತು ಮಾರ್ಗದರ್ಶಿ ಕ್ಷಿಪಣಿ ಕಾರ್ಯಕ್ರಮದ ಮೇಲಿನ ಅವರ ಕೆಲಸವು ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ವಿಜ್ಞಾನಿಯನ್ನಾಗಿ ಮಾಡಿತು ಮತ್ತು ಉನ್ನತ ತಂತ್ರಜ್ಞಾನದ ಏರೋಸ್ಪೇಸ್ ಯೋಜನೆಗಳ ವಿನ್ಯಾಸ ಮತ್ತು ಅಭಿವೃದ್ಧಿಗೆ ಅಡಿಪಾಯವನ್ನು ಒದಗಿಸಿತು. ನಂತರ 1980 ರಲ್ಲಿ ರೋಹಿಣಿ ಉಪಗ್ರಹವನ್ನು ಭೂಮಿಯ ಕಕ್ಷೆಗೆ ಸೇರಿಸುವಲ್ಲಿ ಯಶಸ್ವಿಯಾದರು. ತ್ರಿಶೂಲ್, ಪೃಥ್ವಿ , ಅಗ್ನಿ ಕ್ಷಿಪಣಿಗಳ ಉಡಾವಣೆಗಳು ಕಲಾಂ ರವರಿಗೆ ಬಹಳ ಯಶಸ್ಸನ್ನು ತಂದುಕೊಟ್ಟವು.




ಅಬ್ದುಲ್ ಕಲಾಂ ರವರು ಭಾರತದ 11 ನೇ ರಾಷ್ಟ್ರಪತಿಯಾಗಿ 2002 ರ ಜುಲೈ 25 ರಿಂದ 2007 ರ ಜುಲೈ 25 ರವರೆಗೆ ಸೇವೆ ಸಲ್ಲಿಸಿದರು. ಸರಳತೆ, ಪ್ರಾಮಾಣಿಕತೆ ಮತ್ತು ಮೇಧಾವಿತನದ ಸಾಕಾರ ಮೂರ್ತಿಯಂತಿರುವ ಕಲಾಂ ಅವರು ರಾಷ್ಟ್ರಪತಿ ಹುದ್ದೆಯ ಘನತೆಯನ್ನು ಹೆಚ್ಚಿಸಿದರು. ಜನಸಾಮಾನ್ಯರ ರಾಷ್ಟ್ರಪತಿ ಎಂಬ ಕೀರ್ತಿಗೆ ಪಾತ್ರರಾದರು. ಸ್ವತಃ ಬ್ರಹ್ಮಚಾರಿ ಆದ ಇವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಅವರ ಉಪನ್ಯಾಸ ಕಾರ್ಯಕ್ರಮಗಳಲ್ಲಿ ಮಕ್ಕಳು ಇರಲೇ ಬೇಕು. ಮಕ್ಕಳೊಂದಿಗೆ ಬೆರೆತು ಉಪಯುಕ್ತ ಸಲಹೆ ಸೂಚನೆ ನೀಡುವುದು ಇವರ ನೆಚ್ಚಿನ ಹವ್ಯಾಸವಾಗಿತ್ತು. 




ರಾಷ್ಟ್ರಪತಿ ಹುದ್ದೆಯನ್ನು ಯಶಸ್ವಿಯಾಗಿ ಪೂರೈಸಿ ಕಾಲಾವಧಿ ಮುಗಿದ ನಂತರವೂ ಇವರು ಜನಪ್ರಿಯ ಧುರೀಣರು ಮತ್ತು ವಿಜ್ಞಾನಿಯಾಗಿ ಕಂಗೊಳಿಸಿದ್ದಾರೆ. ಇವರು ಓರ್ವ ಉತ್ತಮ ಲೇಖಕರಾಗಿ ಹತ್ತಾರು ಗ್ರಂಥಗಳನ್ನು ಬರೆದಿದ್ದಾರೆ. ' ವಿಂಗ್ಸ್‌ ಆಫ್ ಫೈರ್ ’ ಎಂಬುದು ಇವರ ಆತ್ಮಕಥೆ. ಇವರು ತಮ್ಮ ‘ಇಂಡಿಯಾ ಮೈ ಡ್ರೀಮ್’, ‘ಇಂಡಿಯಾ 2020’ ಎಂಬ ಗ್ರಂಥಗಳಲ್ಲಿ ಭವ್ಯ ಭಾರತ ನಿರ್ಮಾಣದ ಬಗ್ಗೆ ರೂಪುರೇಷೆಗಳನ್ನು ಹಾಕಿಕೊಟ್ಟಿದ್ದಾರೆ. ‘ ಮೈ ಜರ್ನಿ ’, ‘ ಟಾರ್ಗೆಟ್ ತ್ರಿ ಬಿಲಿಯನ್ ’- ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಅಪ್ರತಿಮ ದೇಶಭಕ್ತರೂ ಉತ್ತಮ ವಾಗ್ಮಿಯೂ ಆಗಿರುವ ಕಲಾಂ ಅವರು ದೇಶ ವಿದೇಶಗಳಲ್ಲಿ ಸಂಚರಿಸುತ್ತ ಜ್ಞಾನ-ವಿಜ್ಞಾನ ಪ್ರಸಾರದಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿಕೊಂಡರು. ಒಮ್ಮೆ ಅಬ್ದುಲ್ ಕಲಾಂ ರವರು ಆಧುನಿಕ ಭಾರತವನ್ನು ರೂಪಿಸುವಲ್ಲಿ ತಂತ್ರಜ್ಞಾನದ ಪಾತ್ರದ ಕುರಿತು ಮಾತನಾಡಿದರು. ಅವರ ಭಾಷಣದ ನಂತರ ಹತ್ತು ವರ್ಷದ ಬಾಲಕಿಯೊಬ್ಬಳು ಅವರ ಹಸ್ತಾಕ್ಷರಕ್ಕಾಗಿ ಅವರ ಬಳಿಗೆ ಬಂದಳು. ' ನಿಮ್ಮ ಮಹತ್ವಾಕಾಂಕ್ಷೆ ಏನು? ' ಎಂದು ಕಲಾಂ ಅವರನ್ನು ಕೇಳಿದರು. " ನಾನು ಅಭಿವೃದ್ಧಿ ಹೊಂದಿದ ಭಾರತದಲ್ಲಿ ವಾಸಿಸಲು ಬಯಸುತ್ತೇನೆ " ಎಂದು ಆ ಬಾಲಕಿ ಉತ್ತರಿಸಿದಳು. ಅಬ್ದುಲ್ ಕಲಾಂ ರವರು ಭರವಸೆಯ ಕಿರಣ. 




ಎ.ಪಿ. ಜೆ. ಅಬ್ದುಲ್ ಕಲಾಂ ಅವರ ಸೇವಾ ವ್ಯಕ್ತಿತ್ವಕ್ಕೆ ಸಂದ ಪ್ರಶಸ್ತಿ ಗೌರವಾದರಗಳು ಅತ್ಯಮೂಲ್ಯವೆನಿಸಿವೆ. 2014 ರಲ್ಲಿ ಡಾಕ್ಟರ್ ಆಫ್ ಸೈನ್ಸ್ ಪದವಿಯನ್ನು ಎಡಿನ್‌ಬರ್ಗ್ ವಿಶ್ವವಿದ್ಯಾಲಯ, ಯುನೈಟೆಡ್ ಕಿಂಗ್ ಡಮ್ ನಿಂದ ನೀಡಿ ಗೌರವಿಸಲಾಯಿತು. ಸೈಮನ್ ಫೇಸರ್ ವಿಶ್ವವಿದ್ಯಾಲಯವು 2012ರಲ್ಲಿ ಡಾಕ್ಟರ್ ಆಫ್ ಲಾ ಪದವಿ ನೀಡಿ ಗೌರವಿಸಿತು. ವಾಟರ್ಲೂ ವಿಶ್ವವಿದ್ಯಾಲಯವು 2010 ರಲ್ಲಿ ಡಾಕ್ಟರ್ ಆಫ್ ಇಂಜಿನಿಯರಿಂಗ್ ಪದವಿ ನೀಡಿ ಸನ್ಮಾನಿಸಿತು. ಓಕ್ಲ್ಯಾಂಡ್ ವಿಶ್ವವಿದ್ಯಾಲಯವು 2009 ರಲ್ಲಿ ಗೌರವ ಡಾಕ್ಟರೇಟ್ ನೀಡಿ ಪುರಸ್ಕರಿಸಿತು. ಇಂಗ್ಲೆಂಡ್ ನ ರಾಯಲ್ ಸೊಸೈಟಿಯು 2007 ರಲ್ಲಿ ಕಿಂಗ್ ಚಾರ್ಲ್ಸ್ II ಪದಕ ನೀಡಿ ಗೌರವಿಸಿತು. ಅಮೇರಿಕಾದ ಕ್ಯಾಲಿ ಪೋರ್ನಿಯಾ ವಿಶ್ವವಿದ್ಯಾಲಯವು ಕಲಾಂ ರವರನ್ನು ಗೌರವಿಸಿತು. ಅಲ್ವಾರ್ ಸಂಶೋಧನಾ ಕೇಂದ್ರ, ಚೆನೈ 2000 ನೇ ವರ್ಷದಲ್ಲಿ ರಾಮಾನುಜನ್ ಪ್ರಶಸ್ತಿ ನೀಡಿ ಗೌರವಿಸಿದೆ. ಭಾರತ ಸರ್ಕಾರವು 1998 ರಲ್ಲಿ ವೀರ್ ಸಾವರ್ಕರ್ ಪ್ರಶಸ್ತಿ , 1997 ರಲ್ಲಿ ಭಾರತ ರತ್ನ ಪ್ರಶಸ್ತಿ 1990 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ , 1981ರಲ್ಲಿ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 1997 ರಲ್ಲಿ ದೇಶದ ಐಕ್ಯತೆಯ ಇಂದಿರಾಗಾಂಧಿ ಪ್ರಶಸ್ತಿ ನೀಡಿ ಸನ್ಮಾಸಿದೆ. ಹೀಗೆ ಪ್ರಶಸ್ತಿಗಳು ಇವರನ್ನೇ ಅರಸಿ ಬಂದವೇ ವಿನಃ ಪ್ರಶಸ್ತಿಗಳನ್ನು ಹುಡುಕಿಕೊಂಡು ಕಲಾಂರವರು ಎಂದೂ ಹೋದವರಲ್ಲ. 




ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರವರು ಜುಲೈ 27, 2015 ರಂದು ಮೇಘಾಲಯದ ಶಿಲ್ಲಾಂಗ್ ನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವ ಸಂದರ್ಭದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಕುಸಿದು ಬಿದ್ದರು. ನಂತರ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. 2015 ರ ಜುಲೈ 30 ರಂದು ಡಾ|| ಕಲಾಂ ರವರು ಹುಟ್ಟಿಬೆಳೆದ ತಮಿಳುನಾಡಿನ ರಾಮೇಶ್ವರಂ ಊರಿನಲ್ಲಿ ಅವರ ಅಂತಿಮ ಸಂಸ್ಕಾರವು ಸಕಲ ರಾಷ್ಟ್ರೀಯ ಗೌರವಗಳೊಂದಿಗೆ ನಡೆಯಿತು. ತನ್ನ ದೇಹದಲ್ಲಿ ಕೊನೆಯ ಉಸಿರು ಇರುವವರೆಗೂ ಸೇವೆಯಲ್ಲಿ ನಿರತರಾಗಿದ್ದು, ಇಡೀ ರಾಷ್ಟ್ರದ ಜನತೆಗೆ ಮಾದರಿಯ ವ್ಯಕ್ತಿತ್ವ ಹೊಂದಿದವರಾಗಿದ್ದರು. ಅಬ್ಬುಲ್ ಕಲಾಂ ಮೇರು ಪ್ರತಿಭೆಯ ಅದ್ಭುತ ವ್ಯಕ್ತಿತ್ವದ ಮಹಾನ್ ಚೇತನವಾಗಿ ಭಾರತದ ಆಗಸದಲ್ಲಿ ಹೊಳೆವ ಚಿರಧ್ರುವತಾರೆಯಾಗಿದ್ದಾರೆ.  




ಇಂದು ಕಲಾಂ ರವರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ನಾನು ಓದಿದ ಪುಸ್ತಕಗಳಿಂದ ಸಂಗ್ರಹಿಸಿದ ಹಿತ್ತೋಕ್ತಿಗಳನ್ನು ಸ್ಮರಿಸುವ ಮೂಲಕ ನಮ್ಮ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಳ್ಳೋಣ. 

ಜ್ಞಾನವೆಂಬುದು ಎಂದಿಗೂ ನಿಂತ ನೀರಾಗಬಾರದು. ಸದಾ ಹೆಚ್ಚುತ್ತಲೇ ಇರಬೇಕು. ಇದು ನಿಮ್ಮ ವೈಯಕ್ತಿಕ ಸ್ವಾತಂತ್ರ್ಯ ಪಡೆಯಲು ಬೇಕಾದ ಪ್ರಮುಖ ಅಸ್ತ್ರ. ನೀವು ಒಂದೇ ವಸ್ತುವನ್ನು ಹಿಡಿದು ಕುಳಿತರೆ ಬುದ್ಧಿ ಜಡ್ಡುಗಟ್ಟುತ್ತದೆ. ಆದ್ದರಿಂದ ಹೊಸ ಆಯಾಮಗಳನ್ನು ಕಂಡುಕೊಳ್ಳಬೇಕು.

ನಿದ್ದೆಯಲ್ಲಿ ಕಾಣುವಂತದ್ದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು. ಹೃದಯದಲ್ಲಿ ಪ್ರಾಮಾಣಿಕತೆಯಿದ್ದರೆ ಚಾರಿತ್ರ್ಯದಲ್ಲಿ ಸೌಂದರ್ಯವಿರುತ್ತದೆ. ಚಾರಿತ್ರ್ಯದಲ್ಲಿ ಸೌಂದರ್ಯವಿದ್ದರೆ ಮನೆಯಲ್ಲಿ ಸಾಮರಸ್ಯವಿರುತ್ತದೆ. ಮನೆಯಲ್ಲಿ ಸಾಮರಸ್ಯವಿದ್ದರೆ ದೇಶದಲ್ಲಿ ಒಂದು ವ್ಯವಸ್ಥೆ ಯಿರುತ್ತದೆ. ದೇಶದಲ್ಲಿ ವ್ಯವಸ್ಥೆಯಿದ್ದರೆ ಜಗತ್ತಿನಲ್ಲಿ ಶಾಂತಿ ನೆಲೆಸಿರುತ್ತದೆ.




ಪ್ರತಿಯೊಬ್ಬರೂ ಜೀವನದಲ್ಲಿ ದುಃಖವನ್ನು ಅನುಭವಿಸುತ್ತಾರೆ, ಈ ದುಃಖವು ಎಲ್ಲರಲ್ಲೂ ತಾಳ್ಮೆಯನ್ನು ಪರೀಕ್ಷಿಸುತ್ತದೆ.

ಪ್ರತಿದಿನ ಒಂದು ಗಂಟೆಕಾಲ ಪುಸ್ತಕಗಳನ್ನು ಓದಿರಿ, ಕೆಲವೇ ವರ್ಷಗಳಲ್ಲಿ ನೀವು ಜ್ಞಾನದ ಕೇಂದ್ರವಾಗಿ ಬದಲಾಗುವಿರಿ.

ದೇಶದಲ್ಲಿನ ಅತ್ಯುತ್ತಮ ಮಿದುಳುಗಳನ್ನು ತರಗತಿ ಕೊಠಡಿಗಳ ಕೊನೆಯ ಬೆಂಚುಗಳಲ್ಲಿ ಕಾಣಬಹುದು.

ಬದಲಾವಣೆ ಧೈರ್ಯವನ್ನು ಅಪೇಕ್ಷಿಸುತ್ತದೆ. ವಿಭಿನ್ನವಾಗಿ ಚಿಂತಿಸಲು ಧೈರ್ಯಬೇಕು. ಅಸಾಧ್ಯವಾದುದನ್ನು ಅನ್ವೇಷಿಸಲು ಧೈರ್ಯಬೇಕು. ಸಮಸ್ಯೆಗಳೊಂದಿಗೆ ಹೋರಾಡಿ ಯಶಸ್ವಿಯಾಗಲು ಧೈರ್ಯಬೇಕು.




ಕಲಿಯುವಿಕೆ ಸೃಜನಶೀಲತೆ ನೀಡುತ್ತದೆ. ಸೃಜನಶೀಲತೆ ಯೋಚಿಸುವಂತೆ ಮಾಡುತ್ತದೆ. ಯೋಚಿಸುವುದು ಜ್ಞಾನವನ್ನು ತುಂಬುತ್ತದೆ. ಜ್ಞಾನ ನಿಮ್ಮನ್ನು ಮಹಾನ್ ವ್ಯಕ್ತಿಯನ್ನಾಗಿಸುತ್ತದೆ.

ಪ್ರಜ್ವಲಿಸುವ ಮನಸ್ಸು ಭೂಮಿಯ ಮೇಲಿರುವ ಅತ್ಯಂತ ಸಾಮರ್ಥ್ಯ ಶಾಲಿ ಸಂಪನ್ಮೂಲ.

ಶಿಕ್ಷಕರು ರಾಷ್ಟ್ರದ ಬೆನ್ನೆಲುಬು, ಕನಸುಗಳು ನನಸಾಗುವ ವೇದಿಕೆಯ ಬುನಾದಿಗಳು. ಒಬ್ಬ ಶಿಕ್ಷಕನ ಜೀವನವು ಅನೇಕ ದೀಪಗಳನ್ನು ಬೆಳಗಿಸಬಲ್ಲದು.

ಅಸಾಧ್ಯವೆಂದು ಭಾವಿಸುವುದನ್ನು ಸಾಧ್ಯ ಮಾಡುವುದರಲ್ಲಿಯೇ ಮನುಷ್ಯ ಪ್ರಯತ್ನದ ಸಾರ್ಥಕತೆ ಇದೆ.




ನಾವು ಏನನ್ನು ಕಲಿಸುತ್ತೇವೆಯೋ ಅದನ್ನು ಆಚರಣೆಗೆ ತರಬೇಕು. ನಾವು ಏನನ್ನು ನಂಬುತ್ತೇವೆಯೋ ಅದನ್ನೇ ಸತತವೂ ಸಾಧಿಸಬೇಕು.

ಕನಸು ಕಾಣಬೇಕು. ಏಕೆಂದರೆ ಕನಸಿನಲ್ಲೇ ನಮ್ಮೆಲ್ಲರ ಆಕಾಂಕ್ಷೆಗಳು ಹುಟ್ಟುತ್ತವೆ. ಅದರಲ್ಲೇ ನಮ್ಮ ಯೋಜನೆಗಳು ಪರಿಕಲ್ಪನೆಗಳು ಕಾರ್ಯರೂಪಕ್ಕಿಳಿಯುತ್ತವೆ.

ನೀವು ಏನು ಸಾಧಿಸುತ್ತೀರೋ ಅದು ಮುಖ್ಯವಲ್ಲ. ತೃಪ್ತಿ ಎಂಬುದು ಇರಲೇಬಾರದು. ನಿಮ್ಮ ಸಾಮರ್ಥ್ಯವನ್ನು ತೋರಿಸುವತ್ತ ಅವಕಾಶಗಳಿಗಾಗಿನ ಹುಡುಕಾಟ ನಿರಂತರವಾಗಿರಬೇಕು.

ಈ ಜೀವನದಲ್ಲಿ ನಾವು ಗೆಲ್ಲುವುದಕ್ಕಿಂತಲೂ ಇತರರ ಗೆಲುವಿಗೆ ನೆರವಾಗುವುದೇ ಒಂದು ವಿಶಿಷ್ಟಕ್ರಿಯೆ.

ನಮ್ಮ ಪ್ರಾಮಾಣಿಕ ದುಡಿಮೆಯೇ ನಮ್ಮ ದಾರಿದೀಪ. ನಾವು ಕಷ್ಟಪಟ್ಟು ದುಡಿದರೆ ಅಭಿವೃದ್ಧಿ ಹೊಂದಬಹುದು. ಮಹಾನ್ ಚಿಂತನೆಗಳನ್ನು ಕಾರ್ಯರೂಪಕ್ಕೆ ತನ್ನಿ, ಪ್ರಾಮಾಣಿಕ ರೀತಿ ನೀತಿಗಳೇ ನಮ್ಮ ಮಾರ್ಗದರ್ಶಿ ಸೂತ್ರಗಳಾಗಲಿ.


- ಕೆ. ಎನ್. ಚಿದಾನಂದ. ಹಾಸನ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top