ಮಂಗಳೂರು: ಶಾಂತಿ ಮಾರ್ಗದಿಂದಲೇ ಎಲ್ಲರಿಂದಲೂ ಗೌರವಿಸಲ್ಪಟ್ಟವರು, ಅಂತಾರಾಷ್ಟ್ರೀಯ ಖ್ಯಾತಿ ಪಡೆದವರು ಗಾಂಧೀಜಿ. ಅವರ ಮದ್ಯಮುಕ್ತ, ಸ್ವಚ್ಛ ಸಮಾಜದ ಕಲ್ಪನೆಯನ್ನು ನನಸಾಗಿಸಲು ನಾವು ಬದ್ಧರಾಗಿರೋಣ, ಎಂದು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಅಭಿಪ್ರಾಯಪಟ್ಟರು.
ಕಾಲೇಜಿನ ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಸೋಮವಾರ ಮಹಾತ್ಮ ಗಾಂಧೀಜಿಯವರ 154 ನೇ ಜನ್ಮದಿನೋತ್ಸವದ ಪ್ರಯುಕ್ತ ಯುವ ರೆಡ್ ಕ್ರಾಸ್ ಘಟಕ ಆಯೋಜಿಸಿದ್ದ ಗಾಂಧೀಜಿಯವರ ವಿಚಾರಧಾರೆ ಕುರಿತ ರಸಪ್ರಶ್ನೆ, ಚರ್ಚೆ, ಹಾಗೂ ಕಾಲೇಜು ಆವರಣದ ಸ್ವಚ್ಛತಾ ಅಭಿಯಾನ (ಪ್ಲಾಸ್ಟಿಕ್ ಮುಕ್ತ) ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಚ್ಛತೆ ನಮ್ಮ ಮನಸ್ಸು- ಮನೆಯಿಂದಲೇ ಆರಂಭವಾಗಲಿ ಮತ್ತು ಅದು ನಿರಂತರವಾಗಿರಲಿ ಎಂದರು.
ಇದೇ ವೇಳೆ ಅವರು ಭಾರತದ ಎರಡನೇ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ನೆನಪಿಸಿಕೊಂಡರು. ಮಾಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ವಿಶ್ವವಿದ್ಯಾನಿಲಯ ಕಾಲೇಜಿನ ಯುವ ರೆಡ್ ಕ್ರಾಸ್ ಅಧಿಕಾರಿ ಡಾ. ಭಾರತಿ ಪಿಲಾರ್ ಸ್ವಾಗತಿಸಿ, ಪ್ರಸ್ತಾವನೆ ಭಾಷಣ ಮಾಡಿದರು. ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ವನ್ನೂರು ಸ್ವಾಮಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಗುರುಪ್ರಸಾದ್, ಯುವ ರೆಡ್ ಕ್ರಾಸ್ ನ ವಿದ್ಯಾರ್ಥಿ ಪ್ರತಿನಿಧಿಗಳಾದ ಅಭಿಲಾಷ್, ಶ್ರಾವ್ಯ, ಪ್ರೀತಿಕಾ ರೈ, ವಿಖ್ಯಾತ್ , ಉಪಸ್ಥಿತರಿದ್ದರು. ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ