ಕೆ.ಆರ್.ಪೇಟೆ: ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೆದುಳು ನಿಷ್ಕ್ರಿಯ ಗೊಂಡಿದ್ದ ತಮ್ಮ ಮಗನ ಅಂಗಾಂಗ ದಾನ ಮಾಡುವ ಮೂಲಕ ಆತನ ಪೋಷಕರು ಮಾನವೀಯತೆ ಮೆರೆದಿರುವ ಘಟನೆ ಕೆ.ಆರ್.ಪೇಟೆ ತಾಲ್ಲೂಕಿನ ಕಟ್ಟೆಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕಟ್ಟೆಕ್ಯಾತನಹಳ್ಳಿ ಗ್ರಾಮದ ಕೃಷ್ಣೇಗೌಡ- ಶಾರದಮ್ಮ ದಂಪತಿಗಳ ಪುತ್ರ ರಾಜೇಶ್ (41) ಅವರಿಗೆ ಮೈಸೂರಿನಲ್ಲಿ ಗುರುವಾರ ನಡೆದ ಬೈಕ್ ಅಪಘಾತದಲ್ಲಿ ತಲೆಯ ಭಾಗಕ್ಕೆ ಗಂಭೀರ ಸ್ವರೂಪದ ಗಾಯಗಳಾಗಿ ತೀವ್ರವಾಗಿ ಅಸ್ವಸ್ಥಗೊಂಡು ಜೀವನ್ಮರಣ ಸ್ಥಿತಿಯಲ್ಲಿದ್ದರು. ತಕ್ಷಣ ಅವರನ್ನು ಅಪೋಲೋ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಯಿತು. ಆದರೆ ಗಾಯಾಳು ರಾಜೇಶ್ ಅವರ ಮೆದುಳಿಗೆ ತೀವ್ರವಾದ ಹಾನಿಯುಂಟಾಗಿ ಮೆದುಳು ನಿಷ್ಕ್ರಿಯಗೊಂಡಿತ್ತು. ಆದರೂ ವೈದ್ಯರು ಚಿಕಿತ್ಸೆ ನೀಡಿ ಬದುಕಿಸುವ ಪ್ರಯತ್ನ ಮಾಡಿದರೂ ಸಹ ರಾಜೇಶ್ ಕೊನೆಯುಸಿರೆಳೆದರು.
ಮೃತ ರಾಜೇಶ್ ಅವರ ಪತ್ನಿ ಮೈಸೂರು ಮಹಾನಗರ ಪಾಲಿಕೆಯಲ್ಲಿ ಆರೋಗ್ಯ ಪರಿವೀಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಅರ್ಪಿತಾ ಮತ್ತು ರಾಜೇಶ್ ತಾಯಿ ಶಾರದಮ್ಮ ಅವರು ವಿಮಾ ಪ್ರತಿನಿಧಿಯಾಗಿದ್ದ ರಾಜೇಶ್ ಅವರ ಆಸೆಯಂತೆ ಅಂಗಾಂಗ ದಾನ, ಮಾಡಿ ತಮ್ಮ ಮಗನ ಸಾವಿನ ದುಃಖದಲ್ಲೂ, ಅಂಗಾಂಗಳ ಅವಶ್ಯಕತೆ ಇರುವ ಹಲವು ಮಂದಿ ರೋಗಿಗಳ ಬಾಳಿಗೆ ಆಸರೆಯಾಗಲು ನಿರ್ಧಾರ ಕೈಗೊಂಡಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಅಂಗಾಂಗ ದಾನ ಮಾಡಿರುವ ರಾಜೇಶ್ ಕುಟುಂಬದ ಪುಣ್ಯದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಅರಣ್ಯ ಇಲಾಖೆಯ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಚಂದ್ರೇಗೌಡ ಅವರು ಮಣ್ಣಲ್ಲಿ ಮಣ್ಣಾಗಿ ವ್ಯರ್ಥವಾಗುವ ದೇಹವನ್ನು ಅಂಗಾಂಗ ದಾನ ಮಾಡುವ ಉತ್ತಮ ನಿರ್ಧಾರ ಕೈಗೊಂಡಿರುವ ರಾಜೇಶ್ ಕುಟುಂಬದವರ ನಿರ್ಧಾರದಿಂದ ಇಬ್ಬರು ದೃಷ್ಟಿ ಹೀನರಿಗೆ ದೃಷ್ಟಿ ಬರುತ್ತದೆ. ಎರಡೂ ಕಿಡ್ನಿಯಿಂದ ಇಬ್ಬರಿಗೆ ಜೀವಧಾನವಾಗಲಿದೆ. ಜೊತೆಗೆ ಇನ್ನಿತರ ಅಂಗಾಂಗಳಿಂದ ಇನ್ನೂ ಹಲವು ಮಂದಿ ರೋಗಿಗಳಿಗೆ ಅನುಕೂಲವಾಗಲಿದೆ. ಇಂತಹ ದೇವರು ಮೆಚ್ಚುವ ಪುಣ್ಯದ ಕೆಲಸ ಮಾಡಿರುವ ರಾಜೇಶ್ ಕುಟುಂಬಕ್ಕೆ ದೇವರು ರಾಜೇಶ್ ಅಗಲಿಕೆಯನ್ನು ತಡೆಯುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.
ಮೃತ ರಾಜೇಶ್ ಪತ್ನಿ ಅರ್ಪಿತಾ, ತಾಯಿ ಶಾರದಮ್ಮ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
ಮೃತ ರಾಜೇಶ್ ಅಂತ್ಯಕ್ರಿಯೆಯು ಅ.28ರಂದು ಶನಿವಾರ ಮಧ್ಯಾಹ್ನ ಹುಟ್ಟೂರು ಕೆ.ಆರ್.ಪೇಟೆ ತಾಲ್ಲೂಕಿನ ಕಟ್ಟೆಕ್ಯಾತನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮೃತರ ನಿಧನ ತಾಲ್ಲೂಕಿನ ವಿವಿಧ ಗಣ್ಯರು ಸಂತಾಪ ಸೂಚಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ