ಧರ್ಮತ್ತಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ಮಾರ್ಗದರ್ಶನದಲ್ಲಿ ಮುನ್ನಡೆ ಯುತ್ತಿರುವ ಮುಳ್ಳೇರಿಯ ಮಂಡಲಾಂತರ್ಗತ ಗುಂಪೆ ವಲಯದ ಅಕ್ಟೋಬರ್ ತಿಂಗಳ ಸಭೆಯು ಎಡಕ್ಕಾನ ಘಟಕದ ಗ್ರಾಮಿಣಿ ಸುಬ್ಬ ಭಟ್ ಇವರ ಸುಖನಿಧಿ ಮನೆಯಲ್ಲಿ ಶನಿವಾರ (ಅ.7) ನಡೆಯಿತು.
ಧ್ವಜಾರೋಹಣ, ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಆರಂಭವಾದ ಸಭೆಯ ಅಧ್ಯಕ್ಷತೆಯನ್ನು ವಲಯಾಧ್ಯಕ್ಷ ಬಿ.ಎಲ್. ಶಂಭು ಹೆಬ್ಬಾರ್ ಶ್ರಾವಣಕೆರೆ ವಹಿಸಿದರು. ಸಭೆಯಲ್ಲಿ ಕಾರ್ಯದರ್ಶಿ ಕೇಶವ ಪ್ರಸಾದ ಎಡಕ್ಕಾನ ಗತಸಭೆಯ ವರದಿ ವಾಚಿಸಿದರು. ಮಹಾಮಂಡಲದ ಮಾಹಿತಿಗಳನ್ನು, ಸೂಚನೆಗಳನ್ನು ತಿಳಿಸಿದರು. ಕೋಶಾಧ್ಯಕ್ಷ ರಾಜಗೋಪಾಲ ಭಟ್ ಅಮ್ಮಂಕಲ್ಲು ಕಳೆದ ತಿಂಗಳ ಲೆಕ್ಕಪತ್ರ ಮಂಡಿಸಿದರು.
ಸಭೆಯಲ್ಲಿ ನವರಾತ್ರ ನಮಸ್ಯಾ ಕಾರ್ಯಕ್ರಮಗಳ ಬಗೆಗೆ ವಿವರಣೆ ನೀಡಲಾಯಿತು. ಅ. 15ರಂದು ಮಾಣಿಮಠದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗೆಗೆ ವಿಚಾರವನ್ನು ನಡೆಸಲಾಯಿತು. ಗುಂಪೆ ವಲಯದ ಶ್ರೀರಾಮಾರ್ಪಣಾ ಭಜನಾ ತಂಡಕ್ಕೆ ಭಜನಾ ಸೇವೆಗೆ ಒದಗಿ ಬಂದ ಅವಕಾಶದ ಬಗೆಗೆ ಹಾಗೂ ಮಾತೆಯರಿಗೆ ಬಾಗಿನ ಸಮರ್ಪಣೆಯ ಮೂಲಕ ಧನ್ಯತೆ ಪಡೆವ ಸೇವಾವಕಾಶದ ಬಗೆಗೆ ಮಾಹಿತಿ ನೀಡಲಾಯಿತು. ನವರಾತ್ರ ನಮಸ್ಯಾದಲ್ಲಿ ಭಕ್ತರು ಮಾಡಬಹುದಾದ ಎಲ್ಲಾ ಸೇವೆಗಳ ವಿವರಣೆ ಹಾಗೂ ಮಾಹಿತಿಗಳನ್ನು ನೀಡಲಾಯಿತು.
ಮುಳ್ಳೇರಿಯ ಮಂಡಲದಲ್ಲಿ ನಡೆಯಲಿರುವ ವಿದ್ಯಾರ್ಥಿವಾಹಿನಿ ಮತ್ತು ಯುವವಿಭಾಗಗಳ ಪ್ರತಿಭಾ ಪ್ರದರ್ಶನ ಹಾಗೂ ಕ್ರೀಡೋತ್ಸವದ ವಿಷಯಗಳನ್ನು ತಿಳಿಸಲಾಯಿತು. ವಲಯ ಮಟ್ಟದ ಸ್ಪರ್ಧೆಗಳನ್ನು ನಡೆಸುವ ದಿನವನ್ನು ನಿಗದಿಗೊಳಿಸಲಾಯಿತು.
ಸಭೆಗೆ ಆಗಮಿಸಿದ್ದ ಧರ್ಮತ್ತಡ್ಕ ಶ್ರೀ ದುರ್ಗಾಪರಮೇಶ್ವರೀ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲರಾದ ರಾಮಚಂದ್ರ ಭಟ್ ನೇರೋಳು ಇವರು ಮುಂದಿನ ತಿಂಗಳು ನಡೆಯಲಿರುವ ಮಂಜೇಶ್ವರ ಉಪಜಿಲ್ಲಾ ಮಟ್ಟದ ಕಲೋತ್ಸವಕ್ಕೆ ಆಮಂತ್ರಣ ನೀಡಿ ಹವ್ಯಕ ಬಾಂಧವರೆಲ್ಲರ ತನು-ಮನ- ಧನಗಳ ಸಹಕಾರ ಕೋರಿದರು.
ನೆರಿಯ ಘಟಕದ ಗುರಿಕ್ಕಾರರಾದ ಲಕ್ಷ್ಮೀನಾರಾಯಣ ಹೆಗಡೆ ನೆರಿಯ ಇವರು ನವರಾತ್ರಿ ಸಂದರ್ಭದಲ್ಲಿ ಕಂಬಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಲಲಿತಾ ಪಂಚಮಿ ದಿನದ ಕಾರ್ಯಕ್ರಮಗಳಿಗೆ ಹಾಗೂ ಚಂಡಿಕಾ ಯಾಗಕ್ಕೆ ಎಲ್ಲರನ್ನೂ ಆಮಂತ್ರಿಸಿ, ಸರ್ವ ಸೇವೆಯೊಂದಿಗೆ ಭಕ್ತರ ಸಂಪೂರ್ಣ ಸಹಕಾರ ಬಯಸಿದರು. ನೆರಿಯದಲ್ಲಿ ನಡೆಯಲಿರುವ ರಕ್ತೇಶ್ವರಿ ದೈವದ ತಂಬಿಲಕ್ಕೂ ವಿಶೇಷ ಆಹ್ವಾನವಿತ್ತರು.
ಸಭೆಯಲ್ಲಿ ಉಪಾಧ್ಯಕ್ಷರಾದ ಕುಮಾರ ಸುಬ್ರಹ್ಮಣ್ಯ ಕೊಂದಲಕಾಡು ಇವರು ವಲಯ ಸಭೆಯಲ್ಲಿ ನೀಡಿದ ಮಾಹಿತಿ ಮತ್ತು ವರದಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘಟನಾ ಕಾರ್ಯದರ್ಶಿ ವೆಂಕಟಕೃಷ್ಣ ಚೆಕ್ಕೆಮನೆ ಇವರು ಈ ಮೊದಲು ನಡೆದ ಸಂಘಟನಾ ಚಾತುರ್ಮಾಸ್ಯದ ಬಗೆಗೆ ಸಂಕ್ಷಿಪ್ತ ವರದಿ ನೀಡಿದರು.
ಇತ್ತೀಚೆಗೆ ಶ್ರೀರಾಮ ಸಾಯೂಜ್ಯ ಹೊಂದಿದ ಕುಡಾಲು ಗ್ರಾಮದ ಗುರಿಕಾರರಾಗಿ ಸೇವೆ ಸಲ್ಲಿಸಿದ್ದ ಕೇಶವ ಭಟ್ ಎಡಕ್ಕಾನ ಹಾಗೂ ಕೇಶವ ಭಟ್ ಚೆಕ್ಕೆಮನೆ ಇವರೀರ್ವರ ಆತ್ಮ ಸದ್ಗತಿಗಾಗಿ ರಾಮ ತಾರಕ ಜಪಿಸಲಾಯಿತು.
ಅಧ್ಯಕ್ಷರಾದ ಶಂಭು ಹೆಬ್ಬಾರ್ ನವರಾತ್ರ ನಮಸ್ಯಾ ಕ್ಕೆ ಸರ್ವರ ಉಪಸ್ಥಿತಿ ಹಾಗೂ ಸಹಕಾರ ಕೋರಿದರು. ಶ್ರಾವಣಕೆರೆಯಲ್ಲಿ ಜರಗುವ ನವರಾತ್ರಿ ಕಾರ್ಯಕ್ರಮ ಹಾಗೂ ಚಂಡಿಕಾ ಯಾಗಕ್ಕೂ ವಿಶೇಷ ಆಹ್ವಾನವಿತ್ತರು.
ಸಭೆಯು ಸಂಘಟನಾ ಕಾರ್ಯದರ್ಶಿಗಳಾದ ವೆಂಕಟಕೃಷ್ಣ ಚೆಕ್ಕೆಮನೆ ಇವರ ಧನ್ಯವಾದಗಳೊಂದಿಗೆ ಮುಕ್ತಾಯವಾಯಿತು. ರಾಮತಾರಕ ಜಪ, ಶಾಂತಿ ಮಂತ್ರದೊಂದಿಗೆ ಸಭೆ ಸಂಪನ್ನವಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ