ಕೈಲಾಸಾಧಿಪತಿ ಶಿವನ ಸತಿ ಪಾರ್ವತಿ. ತಾಯಿ ಪಾರ್ವತಿಯು ಭೂ ಲೋಕದ ಜೀವ ಸಂಕುಲಗಳಿಗೆ ಒದಗಬಹುದಾದ ಕಷ್ಟಗಳನ್ನು ನಿವಾರಿಸಲು ದುರ್ಗಾಶಕ್ತಿಯಾಗಿ ವಿವಿಧ ರೂಪಗಳಲ್ಲಿ ಅವತಾರವೆತ್ತುತ್ತಾಳೆ. ಅಧರ್ಮವು ತಾಂಡವವಾಡುತ್ತಿರುವಾಗ, ಅನೀತಿ ಮೆಟ್ಟಿ ನಿಲ್ಲುತ್ತಿರುವಾಗ, ಅನ್ಯಾಯಗಳು ಅಟ್ಟಹಾಸದಿಂದ ಮೆರೆಯುತ್ತಿರುವಾಗ, ಅಸತ್ಯಗಳು ಕುಣಿದಾಡುತ್ತಿರುವಾಗ , ಎಲ್ಲ ಕೆಡುಕುಗಳನ್ನು ತುಳಿದು ಒಳ್ಳೆಯದನ್ನು ಮರು ಸ್ಥಾಪಿಸಲು, ಸತ್ಯ , ಧರ್ಮ , ನ್ಯಾಯ, ನೀತಿ ಗಳನ್ನು ಪುನರ್ ನಿರ್ಮಾಣ ಮಾಡಲು ದೇವಿಯ ಅವತಾರವಾಗತ್ತದೆ. ಮಹಾಲಯ ಅಮಾವಾಸ್ಯೆಯ ನಂತರದ ಒಂಭತ್ತು ದಿನ ರಾತ್ರಿಗಳು ಒಂಭತ್ತು ಅವತಾರಗಳಲ್ಲಿ ಮಹಾದೇವಿ ದುರ್ಗೆಯು ಭಕ್ತರಿಂದ ಪೂಜಿಸಲ್ಪಟ್ಟು ಹತ್ತನೇ ದಿನ ರಾಕ್ಷಸರ ರುಂಡ - ಮುಂಡಗಳನ್ನು ಚೆಂಡಾಡುವ ಚಂಡಿ - ಚಾಮುಂಡಿ - ಕಾಳಿ - ದುರ್ಗೆಯಾಗಿ ಅವತಾರ ವೆತ್ತಿ ದುಷ್ಟರನ್ನು ಸಂಹರಿಸಿ ಶಿಷ್ಟರನ್ನು ರಕ್ಷಿಸಿ ವಿಜಯದಶಮಿಯಾಗಿ ನೆರವೇರಿಸಲ್ಪಡುವ ಹಬ್ಬವೇ ನವರಾತ್ರಿ ಅಥವಾ ದಸರಾ ಮಹೋತ್ಸವ ಆಗಿದೆ. ನವರಾತ್ರಿಗಳಲ್ಲಿ ಭಕ್ತಾಧಿಗಳ ಭಕ್ತಿಯಿಂದ ಆರಾಧಿಸಲ್ಪಡುವ ತಾಯಿ ಪಾರ್ವತಿಯ ವಿವಿಧ ರೂಪಗಳನ್ನು ವಿವರವಾಗಿ ತಿಳಿಯೋಣ.
ನವರಾತ್ರಿಯ ಮೊದಲ ದಿನದಂದು ಪೂಜಿಸಲ್ಪಡುವ ಮೊದಲ ನವದುರ್ಗೆ ಶೈಲಪುತ್ರಿ. ಈ ತಾಯಿಯನ್ನು ಸತಿ ದೇವಿಯ ಪುನರ್ಜನ್ಮ ಎಂದು ಹೇಳಲಾಗುತ್ತದೆ. ಶೈಲಪುತ್ರಿ ಪರ್ವತ ರಾಜನಾದ ಹಿಮವತ್ ಪ್ರಭುವಿನ ಮಗಳು ಮತ್ತು ಹಿಂದೂ ಧರ್ಮದ ಮಾತೃ ದೇವತೆ ಮಹಾದೇವಿಯ ಅಭಿವ್ಯಕ್ತಿ ಮತ್ತು ರೂಪವಾಗಿದೆ. ಈ ರೂಪವು ಪಾರ್ವತಿ ದೇವಿಯ ಶುದ್ಧ ರೂಪವಾಗಿ ಪ್ರತಿನಿಧಿಸಲ್ಪಡುತ್ತದೆ.
ದೇವಿ ಶೈಲಪುತ್ರಿಯು ಆದಿ ಪರಾಶಕ್ತಿಯಾಗಿದ್ದು, ಪರ್ವತಗಳ ರಾಜ ಹಿಮವಂತನ ಮನೆಯಲ್ಲಿ ಜನಿಸಿದಳು. ಶೈಲಪುತ್ರಿ ಎಂಬ ಹೆಸರು ಅಕ್ಷರಶಃ
ಹೇಳುವುದಾದರೆ ಶೈಲ ಎಂದರೆ ಪರ್ವತ ಹಾಗೂ ಪುತ್ರಿ ಎಂದರೆ ಮಗಳು ಎಂದರ್ಥ. ಹಿಮಾಲಯ ದ ರಾಜ - ಹಿಮವಂತನ ಮಗಳಾದ ಸತಿ ಭವಾನಿ, ಪಾರ್ವತಿ ಅಥವಾ ಹೇಮಾವತಿ ಎಂದು ವಿವಿಧ ರೀತಿಯಲ್ಲಿ ಕರೆಯಲ್ಪಡುತ್ತಾಳೆ.
ಶಿವ ಪುರಾಣ ಮತ್ತು ದೇವಿ-ಭಾಗವತ ಪುರಾಣಗಳು ಹೇಳುವಂತೆ ತಾಯಿ ಭಗವತಿ ತನ್ನ ಹಿಂದಿನ ಜನ್ಮದಲ್ಲಿ ದಕ್ಷ ಪ್ರಜಾಪತಿಯ ಮಗಳಾಗಿ ಜನಿಸಿದ್ದಳು. ಆಗ ಅವಳ ಹೆಸರು ಸತಿ ಮತ್ತು ಅವಳು ಶಿವನನ್ನು ಮದುವೆಯಾಗಿದ್ದಳು. ಒಮ್ಮೆ ಆಕೆಯ ತಂದೆ ಪ್ರಜಾಪತಿ ದಕ್ಷನು ದೊಡ್ಡ ಯಜ್ಞವನ್ನು ಏರ್ಪಡಿಸಿದನು ಮತ್ತು ಶಿವನನ್ನು ಯಜ್ಞ ಸಮಾರಂಭಕ್ಕೆ ಆಹ್ವಾನಿಸಲಿಲ್ಲ. ಆದರೆ ಸತಿ ಹಠಮಾರಿಯಾಗಿ ಅಲ್ಲಿಗೆ ತಲುಪಿದಳು. ಸಮಾರಂಭದಲ್ಲಿ ತನ್ನ ತಂದೆ ಪ್ರಜಾಪತಿ ದಕ್ಷನು ತನ್ನ ಪತಿ ಶಿವನನ್ನು ಅವಮಾನಿಸಿದನು. ಇದನ್ನು ಸಹಿಸಲಾಗದೇ ಆಕೆ ತನ್ನ ದೇಹವನ್ನು ಯೋಗಾಗ್ನಿಯ ಬಲದಿಂದ ಸುಟ್ಟುಕೊಂಡಳು. ಮುಂದಿನ ಜನ್ಮದಲ್ಲಿ ಅವಳು ಪರ್ವತ ರಾಜ ಹಿಮವಂತನ ಮಗಳಾಗಿ ಹುಟ್ಟಿ, ಹೇಮಾವತಿ ಎಂದು ಕರೆಸಿಕೊಂಡಳು. ಶಿವನನ್ನು ಮದುವೆಯಾಗಿ ಪಾರ್ವತಿ ದೇವಿಯಾದಳು. ನವದುರ್ಗೆಯ ಇತರ ಅವತಾರವು ತಾಯಿ ಪಾರ್ವತಿಯ ಅವತಾರವಾಗಿದೆ. ಬ್ರಹ್ಮ, ವಿಷ್ಣು ಮತ್ತು ಶಿವನ ಶಕ್ತಿಯ ಮೂರ್ತರೂಪವೇ ಆದಿಶಕ್ತಿ . ಆ ತಾಯಿ ನಂದಿಯ ಮೇಲೆ ಸವಾರಿ ಮಾಡುತ್ತಾಳೆ ಮತ್ತು ತನ್ನ ಎರಡು ಕೈಗಳಲ್ಲಿ ತ್ರಿಶೂಲ ಮತ್ತು ಕಮಲವನ್ನು ಹಿಡಿದಿದ್ದಾಳೆ. ಉಪನಿಷತ್ತಿನ ಪ್ರಕಾರ, ಅವಳು ಇಂದ್ರನ ಅಹಂಕಾರವನ್ನು ಮುರಿದಳು. ದೇವತೆಗಳು, ನಾಚಿಕೆಯಿಂದ ಅವಳಿಗೆ ನಮಸ್ಕರಿಸಿ ಪ್ರಾರ್ಥಿಸಿದರು. ವಾಸ್ತವವಾಗಿ, ನೀನು ಶಕ್ತಿ, ನಾವೆಲ್ಲರೂ - ಬ್ರಹ್ಮ, ವಿಷ್ಣು ಮತ್ತು ಶಿವ ನಿಮ್ಮಿಂದ ಶಕ್ತಿಯನ್ನು ಪಡೆಯಲು ಸಮರ್ಥರು. ಎಂದು ಉದ್ಗರಿಸಿದರು.
ಮಾತೆ ಶೈಲಪುತ್ರಿಯು ಮೂಲಾಧಾರ ಚಕ್ರದ ದೇವಿ. ಅವಳು ನಂದಿಯ ಮೇಲೆ ಕುಳಿತು ಮೂಲಾಧಾರ ಚಕ್ರದಿಂದ ಮೊದಲ ಪ್ರಯಾಣವನ್ನು ತನ್ನ ಶಿವನ ಕಡೆಗೆ ಮಾಡುತ್ತಾಳೆ. ಆದ್ದರಿಂದ, ನವರಾತ್ರಿಯ ಪೂಜೆಯಲ್ಲಿ ಮೊದಲ ದಿನ ಯೋಗಿಗಳು ತಮ್ಮ ಮನಸ್ಸನ್ನು ಮೂಲಾಧಾರದಲ್ಲಿ ಕೇಂದ್ರೀಕರಿಸುತ್ತಾರೆ. ಆತ್ಮದಲ್ಲಿ ಅರಿತು ಯೋಗದ ಧ್ಯಾನದಲ್ಲಿ ಹೆಚ್ಚಿನ ಆಳವನ್ನು ತಲುಪಿ ತಾಯಿಯನ್ನು ಹುಡುಕಬೇಕು. ಇದು ಆಧ್ಯಾತ್ಮಿಕ ನಿಲುವಿನ ಬಂಡೆಯಾಗಿದೆ ಮತ್ತು ಪೂರ್ಣ ಪ್ರಕೃತಿ ದುರ್ಗೆಯ ಶೈಲಪುತ್ರಿ ಅಂಶದಿಂದ ಇಡೀ ಪ್ರಪಂಚವು ಶಕ್ತಿಯನ್ನು ಪಡೆಯುತ್ತದೆ ಮತ್ತು ಇದು ಮಾನವ ಅಸ್ತಿತ್ವದೊಳಗೆ ಅಚಲವಾದ ಆತ್ಮ ಶೋಧನೆಯ ಅನುಭವವಾಗಿದೆ ಎಂದು ಹೇಳಲಾಗುತ್ತದೆ.
ಪ್ರತಿಯೋರ್ವ ಭಕ್ತನ ಆಕಾಂಕ್ಷೆಯು ಉನ್ನತ ಮತ್ತು ಹೆಚ್ಚಿನ ಎತ್ತರವನ್ನು ತಲುಪುವುದು, ಆಧ್ಯಾತ್ಮಿಕ ವಿಕಾಸಕ್ಕಾಗಿ ಮತ್ತು ಆತ್ಮದ ಆನಂದಕ್ಕೆ ಸಂಬಂಧಿಸಿದ ಪರಿಪೂರ್ಣತೆಯ ಸಿದ್ಧಿಯನ್ನು ಸಾಧಿಸುವುದು.ಯೋಗದ ದೃಷ್ಟಿಕೋನದಿಂದ, ಮೊದಲ ನವರಾತ್ರಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಇದು ದೈವಿಕ ಮಾತೆ ದುರ್ಗೆಯ ಜೊತೆಯಲ್ಲಿರಲು ಯೋಗದ ಆರಂಭವಾಗಿದೆ ಎಂದು ಪ್ರಾಜ್ಞ ಮಹನೀಯರು ಹೇಳುತ್ತಾರೆ.
ಮಾತೆ ಶೈಲಪುತ್ರಿಯು ನಮ್ಮ ಭೂ ಗ್ರಹದ ಅಭಿವ್ಯಕ್ತಿಯಾಗಿದ್ದಾಳೆ. ಈ ಭೂಮಿಯ ಮೇಲೆ ಮತ್ತು ಭೂಗೋಳದೊಳಗೆ ಗೋಚರವಾಗುವ ಎಲ್ಲಾ ವಸ್ತು ವಿಷಯ ಪರಿಕಲ್ಪನೆಗಳನ್ನು ಒಳಗೊಂಡಿದೆ. ಶೈಲಪುತ್ರಿಯು ವಾತಾವರಣ ಸೇರಿದಂತೆ ಎಲ್ಲಾ ಬೆಟ್ಟಗಳು, ಕಣಿವೆಗಳು, ಜಲ ಸಂಪನ್ಮೂಲಗಳು, ಸಮುದ್ರಗಳು ಮತ್ತು ಸಾಗರಗಳನ್ನು ಆವರಿಸಿದ್ದಾಳೆ. “ಭಕ್ತರಿಗೆ ಅತ್ಯುತ್ತಮವಾದ ವರವನ್ನು ದಯಪಾಲಿಸುವ ಶೈಲಪುತ್ರಿ ದೇವಿಗೆ " ನಾವು ವ್ಯಷ್ಠಿ - ಸಮಷ್ಠಿಗಳ ಸರ್ವಾಭ್ಯುದಯಕ್ಕಾಗಿ ಶಿರಸಾಷ್ಟಾಂಗ ನಮನಗಳನ್ನು ಸಲ್ಲಿಸೋಣ
-ಕೆ. ಎನ್. ಚಿದಾನಂದ . ಹಾಸನ .
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ