ಸುರತ್ಕಲ್: ಯಕ್ಷರಂಗವು ಇಂದು ಸಮೃದ್ಧವಾಗಿ ಬೆಳೆದು ನಿಲ್ಲಲು ಹವ್ಯಾಸಿ ರಂಗಭೂಮಿಯೂ ಕಾರಣ ಎಂದು ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಪೊರ್ಕೋಡಿಯ ಸೋಮನಾಥ ದೇವಾಲಯದ ವಠಾರದಲ್ಲಿ ಆಯೋಜಿಸಲಾದ ಸೋಮನಾಥೇಶ್ವರ ಯಕ್ಷನಿಧಿ (ರಿ) ಸಂಸ್ಥೆಯ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಎಷ್ಟೋ ಹವ್ಯಾಸಿ ಕಲಾವಿದರು ಪ್ರಬುದ್ಧತೆ ಮೆರೆದು ಯಕ್ಷರಂಗಭೂಮಿಗೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದರಲ್ಲೂ ರವಿ ಅಲೆವೂರಾಯರಂತಹ ಯಕ್ಷಗುರುಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅನೇಕ ಕಡೆಗಳಲ್ಲಿ ಯುಕ್ತ ತರಗತಿಗಳನ್ನು ನಡೆಸುತ್ತಾ ಮುಂದಿನ ಯಕ್ಷ ಪೀಳಿಗೆಗಳನ್ನು ಈ ರಂಗಕ್ಕೆ ಕೊಡುಗೆಯಾಗಿ ನೀಡಿ ಯಕ್ಷಮಾತೆಯ ಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಇಂದು ಶ್ರೀ ಸೋಮನಾಥೇಶ್ವರ ಯಕ್ಷ ನಿಧಿ ಸಂಸ್ಥೆ ಅವರನ್ನು ಗುರುತಿಸಿ ಗೌರವ ಸನ್ಮಾನವನ್ನು ನೀಡಿದೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿದೆ. ಅವರಿಂದ ಇನ್ನೂ ಸ್ಫೂರ್ತಿಯುತವಾಗಿ ಯಕ್ಷ ಸೇವೆ ಜರಗಲಿ ಎ೦ದು ಅವರು ಆಶಿಸಿದರು.
ಸನ್ಮಾನಕ್ಕೆ ಉತ್ತರಿಸುತ್ತಾ ಯಕ್ಷಗುರು ಶ್ರೀ ರವಿ ಅಲೆವೂರಾಯರು, ತನ್ನ ಹತ್ತು ವರ್ಷಗಳ ಸಾರ್ಥಕ ಸೇವೆ ಇಂದು ಫಲ ಕೊಟ್ಟಿದೆ. ಒಂದು ಸಂಸ್ಥೆ ತನ್ನ ದಶಮಾನೋತ್ಸವವನ್ನು ಆಚರಿಸುತ್ತಿದೆ ಎಂದರೆ ಅದರ ಹಿಂದೆ ಅನೇಕರ ಪರಿಶ್ರಮವಿದೆ. ಹತ್ತು ಕೈಗಳು ಸೇರಿ ಒಂದು ಉದ್ದೇಶಕ್ಕಾಗಿ ಅರ್ಹಿನಿಶಿ ದುಡಿದ ಪರಿಣಾಮವೇ ಇಂದಿನ ಯಶಸ್ಸಿಗೆ ಕಾರಣವಾಗಿದೆ. ಹಾಗಾಗಿ, ನನ್ನನ್ನು ಸನ್ಮಾನಿಸಿದ್ದಕ್ಕಾಗಿ ಯುಕ್ಷನಿಧಿ ಸಂಸ್ಥೆಗೆ ನಾನು ಆಭಾರಿ ಸಂಸ್ಥೆ ಬೆಳೆಯಲಿ. ಸಂಘಟನೆ ಉಳಿಯಲಿ ಎಂದರು.
ಶಾಸಕರಲ್ಲದೇ ಕೆಂಜಾರ್- ಕಾನದ ಶ್ರೀಕೃಷ್ಣಪ್ಪ, ಅರ್ಥದಾರಿ ಮಹಾಬಲ ಶೆಟ್ಟಿ, ನಾರಾಯಣ ಕೋಟ್ಯಾನ್, ರಾಜೇಶ್ ಅಮೀನ್, ದಿನೇಶ್ ಶೆಟ್ಟಿ ಸಂಸ್ಥೆಯ ಅಧ್ಯಕ್ಷ ಸುಂದರ ಕೋಟ್ಯಾನ್, ಭಾಸ್ಕರಣ್ಣ, ಕರುಣಾಕರ್, ಶಂಕರ್ ಸಾಲ್ಯಾನ್, ಪ್ರವೀಣ್ ಉಪಸ್ಥಿತರಿದ್ದರು.
ಪ್ರಜ್ವಲಿತಾ ವರದಿ ವಾಚಿಸಿ ಹತ್ತು ವರ್ಷ ಸಂಸ್ಥೆ ಹಾದು ಬಂದ ದಾರಿಯನ್ನು ವಿವರಿಸಿದರು. ಕಟೀಲು ಶೇಖರ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಂಸ್ಥೆಯ ಕಲಾವಿದರಿಂದ ಸಂಪೂರ್ಣದೇವಿ ಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶಿಸಲ್ಪಟ್ಟಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ