ಒಳಿತು ಜಯ ಗಳಿಸಿದ ಸಂಕಲ್ಪ ನವರಾತ್ರಿ: ಪ್ರೊ. ಪದ್ಮನಾಭ ಪೂಜಾರಿ
ಕಾಸರಗೋಡು: ಭಾರತವು ಅಭೂತಪೂರ್ವ ಇತಿಹಾಸ, ಪರಂಪರೆ ಮತ್ತು ಸಂಸ್ಕೃತಿಗಳನ್ನು ಹೊಂದಿದ ದೇಶ. ಅಧ್ಯಾತ್ಮಿಕತೆ ನಮ್ಮ ಆಚರಣೆಗಳ ಜೀವಾಳ. ನವರಾತ್ರಿ ಹಬ್ಬವು ಕೆಡುಕಿನ ವಿರುದ್ಧ ಒಳಿತು ಜಯ ಗಳಿಸಿದ ಸಂಕಲ್ಪವನ್ನು ಹೊಂದಿದೆ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಕೆ.ಎ.ಪದ್ಮನಾಭ ಪೂಜಾರಿ ಅವರು ಅಭಿಪ್ರಾಯಪಟ್ಟರು. ಅವರು ಕಾಸರಗೋಡು ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಕಾಸರಗೋಡು ಕನ್ನಡ ಬಳಗ ಮತ್ತು ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಆಯೋಜಿಸಿದ ದಸರಾ ನಾಡಹಬ್ಬ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಉಪನ್ಯಾಸವನ್ನು ನೀಡುತ್ತ ಮಾತನಾಡುತ್ತಿದ್ದರು.
ನಮ್ಮ ದೇಶದಲ್ಲಿ ಅನೇಕ ಸಂಸ್ಕೃತಿಗಳು ಹುಟ್ಟಿ ಬೆಳೆದಿವೆ. ಅನೇಕ ರಾಜವಂಶಗಳು ಕಾಲಕಾಲಕ್ಕೆ ಈ ದೇಶವನ್ನು ಆಳಿವೆ. ಹಲವು ಆಕ್ರಮಣಗಳು ನಮ್ಮ ದೇಶದ ಮೇಲೆ ಆಗಿವೆ. ಆದರೆ ದೇಶದ ಸಂಸೃತಿ ಪರಂಪರೆಯನ್ನು ನಾಶ ಮಾಡಲು ಯಾರಿಂದಲೂ ಸಾಧ್ಯವಾಗಿಲ್ಲ. ಎಲ್ಲ ಆಕ್ರಮಣಗಳನ್ನು ಮೆಟ್ಟಿ ನಿಂತ ಪರಂಪರೆ ನಮ್ಮದು ಎಂದು ಅವರು ಹೇಳಿದರು.
ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ.ಎ.ಎಲ್.ಅನಂತಪದ್ಮನಾಭ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನವರಾತ್ರಿ ಹಬ್ಬವು ಕೃಷಿ ಸಂಸ್ಕೃತಿಯ ಆರಾಧನೆ. ಶಕ್ತಿಪೂಜೆ ಈ ಹಬ್ಬದ ವಿಶೇಷ. ಪ್ರಕೃತಿಯನ್ನು ತಾಯಿ ಎಂದು ತಿಳಿದು ಪೂಜಿಸುವ ಆರಾಧನ ಪರಂಪರೆಗೆ ವರ್ತಮಾನ ಕಾಲದಲ್ಲಿ ತುಂಬ ಮಹತ್ವವಿದೆ ಎಂದು ಅವರು ಅಭಿಪ್ರಾಯಪಟ್ಟರು. ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ. ಸುಜಾತ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಭಾರತೀಯ ಸೈನ್ಯಕ್ಕೆ ಅಗ್ನಿವೀರರಾಗಿ ಆಯ್ಕೆಯಾದ ಕನ್ನಡ ವಿಭಾಗದ ವಿದ್ಯಾರ್ಥಿಗಳಾದ ಸಚಿನ್ ಮತ್ತು ಗಿರೀಶ ನಾಯ್ಕ ಅವರನ್ನು ನಿವೃತ್ತ ಪ್ರಾಧ್ಯಾಪಕ ಡಾ.ಕೆ. ಕಮಲಾಕ್ಷ ಅವರು ಸಾಲು ಹೊದೆಸಿ, ಸ್ಮರಣಿಕೆ ನೀಡಿ ಅಭಿನಂದಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ನಾತಕೋತ್ತರ ಪದವಿ, ಪದವಿ, ಪದವಿಪೂರ್ವ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನಗಳನ್ನು ವಿತರಿಸಲಾಯಿತು. ಕನ್ನಡ ಬಳಗದ ಕಾರ್ಯದರ್ಶಿ ಡಾ.ಬಾಲಕೃಷ್ಣ ಹೊಸಂಗಡಿ ಸ್ವಾಗತಿಸಿ, ಕೋಶಾಧಿಕಾರಿ ಡಾ.ಸವಿತಾ ಬಿ ವಂದಿಸಿದರು. ಡಾ.ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು. ಡಾ.ಆಶಾಲತಾ ಸಿಕೆ ನಿರ್ವಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ