ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿ ನೆಲೆಸಿರುವ ಅಂತರಾಷ್ಟ್ರೀಯ ಖ್ಯಾತಿಯ ಮೈಸೂರು ಸಾಂಪ್ರದಾಯಿಕ ಚಿತ್ರಕಲಾವಿದೆ ಡಾ. ಮೀರಾ ಕುಮಾರ್ ರವರ ನಿವಾಸ ವಿಶ್ವಂಭರದಲ್ಲಿ ಗಣೇಶೋತ್ಸವವನ್ನು ವಿಶಿಷ್ಟವಾಗಿ ಆಚರಿಸಲಾಯಿತು .
ಮಾರುಕಟ್ಟೆಯಲ್ಲಿ ದೊರೆಯುವ ಶುದ್ಧ ಮೃಣ್ಮಯ ವಿಗ್ರಹವನ್ನು ವೈಭವೋಪೇತವಾಗಿ ಅಲಂಕರಿಸಿ ಶಾಸ್ತ್ರೋಕ್ತ ರೀತಿಯಲ್ಲಿ ಗೌರಿ ಮತ್ತು ಗಣಪರಿಗೆ ಪೂಜೆ ಸಲ್ಲಿಸುತ್ತಾರೆ. ಪ್ರತಿ ವರ್ಷ ವೈವಿಧ್ಯವಾಗಿ ಮಂಟಪ ರಚಿಸುವ ಮೀರಾ ಕುಮಾರ್ ಈ ಬಾರಿ ಸಮಸ್ತ ಭಾರತೀಯರ ಹೆಮ್ಮೆ ಇಸ್ರೋ ವಿಜ್ಞಾನಿಗಳ ಅಭೂತಪೂರ್ವ ಸಾಧನೆ ಚಂದ್ರಯಾನ ನೌಕೆ ಇಳಿದ ಜಾಗ 'ಶಿವಶಕ್ತಿ' ಮಾದರಿಯಲ್ಲಿ ಕಲಾನೈಪುಣ್ಯತೆಯಿಂದ ಕೂಡಿದ ವೇದಿಕೆ ಮಾಡಿ ಕಾಮಧೇನು ಮೇಲೆ ಕುಳಿತ ಗೌರಿಯನ್ನು ಸಿಂಗರಿಸಿ ಪೂಜಿಸಿದ್ದಾರೆ .
ಗಣೇಶ ಆರತಿಯಲ್ಲಿ ನಾಡಿನ ಸಾಂಸ್ಕೃತಿಕ ಲೋಕದ ಗಣ್ಯರಾದ ಮಾಜಿ ಸಚಿವೆ ರಾಣಿ ಸತೀಶ್, ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರ, ಬೆಂಗಳೂರು ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಿ.ಮಹೇಂದ್ರ, ಹಂಸ ಜ್ಯೋತಿ ಟ್ರಸ್ಟ್ ನ ಕಲಾಸಂಘಟಕ ಎಂ.ಮುರಳಿಧರ, ಹಿರಿಯ ಕಲಾವಿದ ಡಾ. ಕೆಂಚನೂರು ಶಂಕರ್, ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಮೊದಲಾದವರು ಭಾಗವಹಿಸಿದ್ದರು .
ಕಲಾಕಸ್ತೂರಿ ಮೀರಾಕುಮಾರ್ ಕಿರು ಪರಿಚಯ
ವರ್ಣ ಸಂಯೋಜನೆ ಹಾಗು ಸೂಕ್ಷ್ಮ ಕುಸುರಿ ಕಲೆಯಿಂದ ಗಮನ ಸೆಳೆಯುವ ಮೈಸೂರು ಚಿತ್ರಕಲೆ, ಭಾರತೀಯ ಸಾಂಪ್ರದಾಯಿಕ ಚಿತ್ರಕಲೆಯಲ್ಲೆ ಒಂದು ವಿಶಿಷ್ಟ ಪ್ರಕಾರವಾದ ಈ ಶೈಲಿ ನೋಡುಗರಿಗೆ ಒಂದು ತ್ರಿ- ಆಯಾಮದ ಅನುಭವ ನೀಡುತ್ತದೆ . ಕಲೆ- ಕೌಶಲ- ಭಕ್ತಿ ಮತ್ತು ವೈಭವಗಳ ಒಟ್ಟು ಮೊತ್ತವೇ ಆಗಿರುವ ಈ ಪ್ರಕಾರದ ಚಿತ್ರ ರಚನೆ ಸುಲಭದ ವಿಷಯವಲ್ಲ ಎನ್ನುವ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರ ಕಲಾವಿದೆ ಶ್ರೀಮತಿ ಮೀರಾಕುಮಾರ್ ಬೆಂಗಳೂರು ಕಲಾಮಂದಿರ ಸ್ಕೂಲ್ ಆಫ್ ಆರ್ಟ್ ಮೂಲಕ ಫೈನ್ ಆರ್ಟ್ ಡಿಪ್ಲೊಮಾ ಪಡೆದ ಕಲಾತಪಸ್ವಿ .
ಜೊಸ್ಸೋ ವರ್ಕ್ ಎಂಬೋಸ್ ಮೊದಲಾದ ಹಲವು ಕ್ಲಿಷ್ಟಕರ ಹಂತಗಳಲ್ಲಿ ಮೈದೆಳೆಯುವ ಈ ಕಲೆಯಲ್ಲಿ ನೈಜತೆಗಾಗಿ ಚಿನ್ನದ ತಗಡನ್ನು ಉಪಯೋಗಿಸುವುದರಿಂದ ಭಾರಿ ವೆಚ್ಚದಾಯಕ . ಇವರ ಚಿತ್ರಗಳಲ್ಲಿ ಕಂಡು ಬರುವ ಹಿನ್ನೆಲೆಯ 'ಪರದೆ' ಚಿತ್ರಕ್ಕೊಂದು ಮೆರೆಗು ನೀಡುತ್ತದೆ , ರಾಜ್ಯ ಮಟ್ಟದ 25 , ರಾಷ್ಟ್ರ ಮಟ್ಟದ 10 , ಅಂತರಾಷ್ಟ್ರೀಯ ಮಟ್ಟದ 5 ಕಲಾಪ್ರದರ್ಶನಗಳಲ್ಲಿ ಪ್ರತ್ಯಕ್ಷ ಭಾಗಿ ಇವರ ಕಲಾ ಪ್ರೇಮಕ್ಕೆ ಸಾಕ್ಷಿ. ಕಲೆಯ ಅಧ್ಯಯನಕ್ಕೆ ಲಂಡನ್, ಪ್ಯಾರಿಸ್, ಆಸ್ಟ್ರಿಯಾ ದೇಶಗಳೂ ಸೇರಿದಂತೆ ಅನೇಕ ದೇಶ ವಿದೇಶಗಳ ಪ್ರವಾಸ. ಅಪರೂಪದ ಕಲಾಕೃತಿಗಳ ಸಂಗ್ರಹ ಇವರ ಮನೆಯೇ ವಿಶ್ವಂಭರ ಕಲಾದೇಗುಲ . 'ಕಲಾಕಸ್ತೂರಿ' ಮುಂತಾದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅಭಿಜಾತ ಕಲಾವಿದೆಯ ಅಪ್ರತಿಮ ಸಾಧನೆ ಗುರುತಿಸಿ ನ್ಯೂ ಕ್ರಿಶ್ಚಿಯನ್ ಯೂನಿವರ್ಸಿಟಿರವರು ಗೌರವ ಡಾಕ್ಟರೇಟ್ ಪದವಿ ನೀಡಿದೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ 2020ನೇ ಸಾಲಿನ ಗೌರವ ಪ್ರಶಸ್ತಿ ಸಂದಿದೆ. ಇತ್ತೀಚೆಗೆ ಪ್ರಕಟಗೊಂಡ ಡಾ.ಗುರುರಾಜ ಪೋಶೆಟ್ಟಿಹಳ್ಳಿ ರವರ 'ಕೃಷ್ಣನ ಹೆಸರೇ ಲೋಕಪ್ರಿಯ' ಕೃತಿಗೆ ಮಾಡಿಕೊಟ್ಟ ನವನೀತ ಕೃಷ್ಣನ ಮುಖಪುಟ ವಿನ್ಯಾಸ ಜನಮನ ಸೂರೆಗೊಂಡಿದೆ. ಹಂಸಜ್ಯೋತಿ ಟ್ರಸ್ಟ್ನಿಂದ ಕೊಡಮಾಡುವ ಪ್ರತಿಷ್ಠಿತ 'ಹಂಸ ಸಮ್ಮಾನ್' ಪ್ರಶಸ್ತಿಗೆ ಭಾಜನರಾಗಲಿದ್ದಾರೆ.
ವಿವರಗಳಿಗೆ 9901398112
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ