ನೆನಪಿನಲ್ಲಿ ಉಳಿಯುವ ಮಹಾಬಲಯ್ಯನ ಕೋಟು

Upayuktha
0

ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ಗೌರಿಶಂಕರ ನಾಟಕೋತ್ಸವದ ವತಿಯಿಂದ ನಡೆದ ಮಹಾಬಲಯ್ಯನ ಕೋಟು ನಾಟಕ



ಶಿವಮೊಗ್ಗ: ದಿನನಿತ್ಯದ ಜಂಜಾಟದಲ್ಲಿ ಮನಸ್ಸಿಗೆ ಮುದ ನೀಡುವ ಕ್ಷಣಗಳು ಸಿಗುವುದು ರಾತ್ರಿ ದಿಂಬಿಗೆ ತಲೆ ಚಾಚಿದಾಗಲೇ.  ಆಧುನಿಕ ಕಾಲದಲ್ಲಿ ಎಲ್ಲರೂ ಮೊಬೈಲ್, ಲಾಪ್ ಟಾಪ್ , ಗೇಮಿಂಗ್ ನಲ್ಲಿ ಮುಳುಗಿ ಹೋಗಿದ್ದಾರೆ. ದಿನನಿತ್ಯವೂ ಒಂದೇ ರೀತಿಯ ಕೆಲಸ ಮಾಡುವುದರಿಂದ ಬೇಸತ್ತಾಗ, ಹಾಡು ಕೇಳುವುದು, ಸಿನಿಮಾ ನೋಡುವುದು, ಪುಸ್ತಕ ಓದುವ ಮೂಲಕ ಮನಸ್ಸಿಗೆ  ನಿರಾಳವೆನಿಸುವುದು ಸಾಮಾನ್ಯ. ಆದರೆ ನಾಟಕಗಳನ್ನು ನೋಡುವ ಮೂಲಕ ಮನಸ್ಸಿಗೆ ಸಿಗುವ ನೆಮ್ಮದಿ ಪದಗಳಿಗೆ ನಿಲುಕದ್ದು. 


ಹೀಗೆ ಮೊನ್ನೆ  ಶಿವಮೊಗ್ಗ ರಂಗಾಯಣದ ಸುವರ್ಣ ಸಾಂಸ್ಕೃತಿಕ ಭವನದಲ್ಲಿ ನಾಟಕ ಏರ್ಪಡಿಸಿರುವ ವಿಷಯ ತಿಳಿಯಿತು. ಕೆಲಸದ ಒತ್ತಡದ  ನಡುವೆಯೂ ನಾಟಕ ನೋಡಲೇಬೇಕು ಎನ್ನುವ ಉದ್ದೇಶದಿಂದ ಅಲ್ಲದೇ ಇದ್ದರೂ, ಪರಿಚಯಸ್ಥರೊಬ್ಬರು ನಾಟಕದಲ್ಲಿ ಅಭಿನಯಿಸುತ್ತಿದ್ದು ಅವರ ಅಭಿನಯ ನೋಡಲು ಸುವರ್ಣ ಸಾಂಸ್ಕೃತಿಕ ಭವನಕ್ಕೆ ಹೋದೆ. ನಾಟಕ ನೋಡಲು ಹೆಚ್ಚು ಜನ ಬರುವುದಿಲ್ಲ ಎಂದುಕೊಂಡು ಸಭಾಂಗಣದಲ್ಲಿ ಕಾಲಿಟ್ಟಾಗ ಅಲ್ಲಿ ಕಿಕ್ಕಿರಿದು ತುಂಬಿದ್ದ ಜನರನ್ನು ನೋಡಿ ಒಂದೇ ಸಮನೆ ಎದೆ ಝಲ್ ಎಂದಿತು. ತಪ್ಪಾದ ವಿಳಾಸಕ್ಕೆ ಬಂದೆನೆ ? ಎಂದು ಮತ್ತೊಮ್ಮೆ ಹೊರಗೆ ಹೋಗಿ ಬೋರ್ಡ್ ನೋಡಿ ಖಚಿತಪಡಿಸಿಕೊಂಡು ಸಭಾಂಗಣದ ಒಳಗೆ ಹೋಗಿ ಕುಳಿತೆ. ನಾಟಕ ಶುರುವಾಗುವುದಕ್ಕೂ ಮುನ್ನ ಸಭಾಂಗಣದಲ್ಲಿ ಮೌನ ಆವರಿಸಿತ್ತು. ಯಾರೊಬ್ಬರೂ ಮಾತಾಡುತ್ತಿರಲಿಲ್ಲ. ಹತ್ತು  ನಿಮಿಷ ಬಿಡುವಿದ್ದರೂ ಮೊಬೈಲ್ ಸ್ಕ್ರೀನ್ ಮೇಲೆ  ಕೈಯಾಡಿಸುವ ಜನ ಅಂದು ಮಂತ್ರಮುಗ್ದರಂತೆ ನಾಟಕ ವೀಕ್ಷಿಸುತ್ತಿದ್ದರು.


ಆ ನಾಟಕದ ಹೆಸರೇ "ಮಹಾಬಲಯ್ಯನ ಕೋಟು"ಈ ನಾಟಕದ  ಮೂಲ ರಚನೆ ನಿಕೋಲಾಯ್ ಗೊಗೋಲ್ ಅವರು ಮಾಡಿದ್ದಾರೆ.  ನಿಕೋಲಾಯ್ ಗೊಗೋಲ್ ಅವರು 1842 ರಲ್ಲಿ ರಚಿಸಿದ ಪ್ರಸಿದ್ದ ಸಣ್ಣ ಕಥೆ "ಓವರ್ ಕೋಟ್" ನ ಕನ್ನಡ ರಂಗ ರೂಪಾಂತರವೇ ಮಹಾಬಲಯ್ಯನ ಕೋಟು


ಮಹಾಬಲಯ್ಯ ಪಾತ್ರದಲ್ಲಿ ಚೇತನ್ ಕುಮಾರ್ ಸಿ.ರಾಯನಹಳ್ಳಿಯವರು ಅದ್ಬುತವಾಗಿ ನಟಿಸಿದ್ದಾರೆ. ಮೂಡಲಮನೆ ಮಹಾಬಲ ಮಹಾಬಲೇಶಯ್ಯ ಸರ್ಕಾರಿ ಕಛೇರಿಯಲ್ಲಿ ಕಾಪಿ ಕಾರಕೂನನಾಗಿ ಕೆಲಸ ಮಾಡುತ್ತಿರುತ್ತಾನೆ.  ಸಮಾಜದ ಆಗು ಹೋಗುಗಳ ಬಗ್ಗೆ ಆತನಿಗೆ ಚಿಂತೆಯಿಲ್ಲ. ತನ್ನ ಕೆಲಸವನ್ನ  ನಿಷ್ಠೆಯಿಂದ ಮಾಡುತ್ತಾ ಜೀವನ ನಡೆಸುವ ಒಬ್ಬ ಸರಳ ಜೀವಿ. ಆತನಿಗೆ ದಿನಕ್ಕೆ ನೂರು ಕಾಪಿ ಬರೆಯುವುದು  ಬಹುದೊಡ್ಡ ಕನಸು. ತಾನಾಯಿತು ತನ್ನ ಕೆಲಸವಾಯಿತು ಎಂಬಂತೆ ಜೀವನ ಸಾಗಿಸುವ ಅವನಿಗೆ ತನ್ನ ಸರ್ಕಾರಿ ಕಛೇರಿಯಲ್ಲಿರುವ ಸಹೋದ್ಯೋಗಿಗಳು  ಮಹಾಬಲಯ್ಯನಿಗೆ ಉಪಟಳ ನೀಡುತ್ತಾ, ಆತನ  ವೇಷ-ಭೂಷಣ, ಆತನ ಕಾಪಿ ಬರೆಯುವ ಕೆಲಸಕ್ಕೆ ಹಂಗಿಸುತ್ತಿರುತ್ತಾರೆ. ಆದರೂ ಧೃತಿಗೆಡದೇ ಕೆಲಸ ಮಾಡುವ ಮಹಾಬಲಯ್ಯನಿಗೆ ತನ್ನ ಹಣದಲ್ಲೇ ಒಂದು ಕೋಟು ಹೋಲಿಸಿಕೊಳ್ಳಬೇಕು ಎನ್ನುವ ಮಹದಾಸೆ. ಕೊನೆಗೂ ಕೂಡಿಟ್ಟ ಹಣದಲ್ಲಿ  ಕೋಟು ಹೋಲಿಸುತ್ತಾನೆ. ಆದರೆ ಮುಚ್ಚಟೆಯಿಂದ ಹೋಲಿಸಿದ್ದ ಕೋಟು ಕಳುವಾಗುತ್ತದೆ. ಅದರಿಂದ ಮನನೊಂದು ಮಾನಸಿಕವಾಗಿ ಜರ್ಜರಿತನಾಗಿ ಸತ್ತು ಹೋಗುತ್ತಾನೆ ಮಹಾಬಲಯ್ಯ. ನಂತರ ತನ್ನ ಕೋಟು ಕದ್ದವರನ್ನು ಭೂತವಾಗಿ ಕಾಡುತ್ತಾ ಕಂಡಕಂಡವರ ಕೋಟನ್ನು ಕಸಿದುಕೊಳ್ಳುತ್ತಾನೆ. ಮಲೆನಾಡಿನ ಆಗುಂಬೆಯ ಜೀವನಶೈಲಿ ಮತ್ತು ಪರಿಸರಕ್ಕೆ ಒಗ್ಗಿಸಿಕೊಂಡು ನಾಟಕ ತೆರೆದುಕೊಳ್ಳುತ್ತದೆ.


ಮಹಾಬಲಯ್ಯ ಅಂಬಮ್ಮ  ಎಂಬ ವೃದ್ದೆಯ ಮನೆಯಲ್ಲಿ ಬಾಡಿಗೆಗೆ ಇರುತ್ತಾನೆ. ಅಂಬಮ್ಮನ  ಪಾತ್ರದಲ್ಲಿ ಮಂಜುನಾಥ ಸ್ವಾಮಿ ಎಸ್ ಅವರು ಬಣ್ಣ ಹಚ್ಚಿದ್ದಾರೆ.  ನಾಟಕದಲ್ಲಿ ಬರುವ ವಿಭಿನ್ನ  ಪಾತ್ರ ಇದಾಗಿದೆ. ಸದಾ  ಮಹಾಬಲಯ್ಯನ ಒಳಿತನ್ನ ಬಯಸುತ್ತಾ , ಆತನಿಗಾದ ನೋವಲ್ಲಿ ತಾನೂ ಸಂಕಟಪಡುತ್ತಾ  ನಾಟಕದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿಯಾಗಿ ಮಂಜುನಾಥ ಸ್ವಾಮಿಯವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.


ನಾಟಕದಲ್ಲಿ ಒಟ್ಟು ಐದು ಕಾರಕೂನರಿದ್ದು, ಚನ್ನೇಶ್ ಆಚಾರ್, ನಾಗಶಯನ ಜಿ.ಎಸ್, ಪ್ರತೀಕ್ ಸಿ.ಎಂ, ಬಂಗಿ ಬರ್ಮಣ್ಣಾ, ಮತ್ತು ಸುಧೀಂದ್ರ ಅವರು ಅಭಿನಯಿಸಿದ್ದಾರೆ.ಐದನೇ ಕಾರಕುನ ಪಾತ್ರಧಾರಿ ಸುಧೀಂದ್ರ ಅವರು ನಾಟಕದ ನಿರೂಪಕರಾಗಿದ್ದು, ಕಥೆಯು ಪ್ರೇಕ್ಷಕರ ಮನಸಿನಲ್ಲಿ ನಾಟುವಂತೆ ವಿಶ್ಲೇಷಿಸಿದ್ದಾರೆ.


ನಾಟಕದಲ್ಲಿ ಬರುವ ತುಕಾರಾಮನ ಪಾತ್ರವನ್ನು ಪ್ರವೀಣ್ ಎಸ್ ಹಾಲ್ಮತ್ತೂರು,ಜಗಳೂರು ಜಗಳಗಂಟಿ ಪಾತ್ರವನ್ನು  ದಿವ್ಯ ಅವರು ನಿಭಾಯಿಸಿದ್ದು, ಗಂಡ ಹೆಂಡತಿ ನಡುವಿನ ಜಗಳ,  ತುಕಾರಾಮನ ಕಾಮಿಡಿ  ನಾಟಕಕ್ಕೆ ಒಂದು ಪ್ಲಸ್ ಪಾಯಿಂಟ್ ಆಗಿ ರೂಪುಗೊಂಡಿದೆ. ಪ್ರತಿಯೊಬ್ಬ ಕಲಾವಿದರ ಅಭಿನಯವೂ ನೋಡುಗರನ್ನು ರೋಮಾಂಚನಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.ನಾಟಕದಲ್ಲಿ ಬರುವ ಗಿರಾಕಿ ಮತ್ತು ಪೋಲಿಸ್ ಆಗಿ  ರಾಜು ಶಾಂತವೇರಿ, ಸಾಹೇಬರಾಗಿ ಕಾಂತೇಶ್ ಮೂರ್ತಿ. ಕಳ್ಳ, ವೈದ್ಯ, ಗುಮಾಸ್ತನಾಗಿ ಭರತ್ ಅವರು ಅಭಿನಯಿಸಿದ್ದಾರೆ. ಚಿಕ್ಕ ಪಾತ್ರವೇ ಆದರೂ ಕಲಾವಿದರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.


ರಂಗ-ರೂಪಾಂತರ ಮತ್ತು ನಿರ್ದೇಶನ: ಪ್ರೊ.ಎಸ್ ಸಿ.ಗೌರಿಶಂಕರ್, ಸಂಗೀತವನ್ನು  ಶ್ರೀಪಾದ ತೀರ್ಥಹಳ್ಳಿ ಮತ್ತು ಶಿವಕುಮಾರ್ ತೀರ್ಥಹಳ್ಳಿ, ಬೆಳಕು: ಶಂಕರ್ ಬೆಳಲಕಟ್ಟೆ,, ವಸ್ತ್ರ ವಿನ್ಯಾಸ ಮತ್ತು ಪ್ರಸಾಧನ: ಮಂಜುನಾಥ ಸ್ವಾಮಿ. ಎಸ್, ರಂಗಸಜ್ಚಿಕೆ: ನಾಗಶಯನ ಜಿ.ಎಸ್, ನಿರ್ವಹಣೆ: ಪ್ರತೀಕ್ ಸಿ.ಎಂ ಇವರ ನೇತೃತ್ವದಲ್ಲಿ ನೆರವೇರಿದೆ.


ನಾಟಕಗಳು ಸಿನಿಮಾಗಳಿಗಿಂತ ವಿಭಿನ್ನ. ಇಲ್ಲಿ ರೀ ಟೇಕ್ ಗಳು ಇರುವುದಿಲ್ಲ. ಯಾವುದೇ ಗ್ರಾಫಿಕ್ಸ್ ಗಳು, ಆಧುನಿಕ  ತಂತ್ರಜ್ಞಾನವನ್ನು ಬಳಸಿ ದೃಶ್ಯವನ್ನು  ಪ್ರಸ್ತುತ ಪಡಿಸಲು ಬರುವುದಿಲ್ಲ. ನಾಟಕಗಳಲ್ಲಿನ ಅಭಿನಯವು ನೈಜವಾಗಿರುತ್ತವೆ.ಇಲ್ಲಿ ಪ್ರತಿ ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರೇ ದೃಶ್ಯ ಮತ್ತು ರಂಗ ಪರಿಕರಗಳ ಬದಲಾವಣೆಯನ್ನು  ಮಾಡಿಕೊಂಡು ಅಭಿನಯಿಸುವುದು ವಿಶೇಷ.  ಮಹಾಬಲಯ್ಯನ ಕೋಟು ನಾಟಕ ನೆನಪಿನಲ್ಲಿ ಉಳಿಯುವ ನಾಟಕವಾಗಿ ರೂಪುಗೊಂಡಿದೆ.ಇಲ್ಲಿ  ಕಲಾವಿದರ ಶ್ರಮ ಬಹಳಷ್ಟಿರುತ್ತದೆ. ಹಾಗೆಯೇ ಬಹುತೇಕ ನಾಟಕಗಳು ಉಚಿತವಾಗಿ ಪ್ರದರ್ಶನಗೊಳ್ಳುತ್ತವೆ. 


ಶಿವಮೊಗ್ಗದ ಹೆಸರಾಂತ ನಿರ್ದೇಶಕ, ನಟ,ನಾಟಕ ರಚನಾಕಾರ,ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರೊ.ಎಸ್. ಸಿ.ಗೌರಿಶಂಕರ್ ಅವರ ಗೆಳಯರು ಸೇರಿಕೊಂಡು  ರಚನೆ ಮತ್ತು ನಿರ್ದೇಶನ ಮಾಡುವ ನಾಟಕಗಳು ನಾಡಿನಾದ್ಯಂತ ಇನ್ನಷ್ಟು ಬಿತ್ತರಗೊಳ್ಳಲಿ.ಮಹಾಬಲಯ್ಯನ ಕೋಟು ನಾಟಕ ಇನ್ನಷ್ಟು ಪ್ರದರ್ಶನಗಳನ್ನು ಕಾಣಲಿ....



ಅಂಜುಮ್ ಬಿ.ಎಸ್.

ಮುಖ್ಯಸ್ಥರು, ಪತ್ರಿಕೋದ್ಯಮ ವಿಭಾಗ,

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top