ಯಕ್ಷರಂಗದ ‘ಚೆನ್ನಯ’ ಜೆಪ್ಪು ದಯಾನಂದ ಶೆಟ್ಟಿ

Upayuktha
0

ತೆಂಕುತಿಟ್ಟಿನ ಯಕ್ಷಗಾನ ರಂಗದಲ್ಲಿ ಅಭಿನವ ಚೆನ್ನಯನೆಂದೇ ಖ್ಯಾತರಾದ ಜೆಪ್ಪು ದಯಾನಂದ ಶೆಟ್ಟರು ತುಳು-ಕನ್ನಡ ಪ್ರಸಂಗಗಳ ಸವ್ಯಸಾಚಿ ಕಲಾವಿದರು. ಮಂಗಳೂರಿನ ವಿಶ್ವ ಬಂಟ ಪ್ರತಿಷ್ಠಾನವು ಡಾ| ಡಿ.ಕೆ. ಚೌಟ ದತ್ತಿನಿಧಿ ವತಿಯಿಂದ ಪ್ರತಿವರ್ಷ ಯಕ್ಷಗಾನ ಕಲಾವಿದರಿಗಾಗಿ ನೀಡುವ ‘ಬಂಟ ಪ್ರತಿಷ್ಠಾನ ಪ್ರಶಸ್ತಿ’ಗೆ ಈ ಬಾರಿ ಅವರು ಆಯ್ಕೆಯಾಗಿರುವುದು ಹಳೆ ತಲೆಮಾರಿನ ಹಿರಿಯ ಕಲಾವಿದರೊಬ್ಬರಿಗೆ ಸಲ್ಲುವ ಸಹಜ ಗೌರವವಾಗಿದೆ.


ಬೆಳ್ತಂಗಡಿ ತಾಲೂಕಿನ ಸವಣಾಲು ದಿ| ದೇವಪ್ಪ ಶೆಟ್ಟಿ ಮತ್ತು ಲಕ್ಷ್ಮೀ ಶೆಟ್ಟಿ ದಂಪತಿ 1948 ಜೂನ್ 1 ರಂದು ಜನಿಸಿದ ದಯಾನಂದ ಶೆಟ್ಟರು ಕಲಿತದ್ದು ಎರಡನೇ ತರಗತಿ. ಯಕ್ಷಗಾನದ ಸಾಮಾನು ಸರಂಜಾಮುಗಳನ್ನು ಎತ್ತಿನ ಗಾಡಿಯಲ್ಲಿ ಸಾಗಿಸುತ್ತಿದ್ದ ಕಾಲದಲ್ಲಿ 12ನೇ ವರ್ಷ ಪ್ರಾಯದ ದಯಾನಂದ ಕುಮಾರ ವೇಣೂರು  ದೇಲಂಪುರಿ ಮೇಳದಲ್ಲಿ ಬಾಲ ಕಲಾವಿದರಾಗಿ ಸೇರಿಕೊಂಡರು. ದಶಾವತಾರಿ ಸೂರಿಕುಮೇರಿ ಗೋವಿಂದ ಭಟ್ಟರಿಂದ ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಳನ್ನು ಕಲಿತ ಅವರು ಮುಂದೆ ತಮ್ಮ ನೃತ್ಯಾಭಿನಯ ವಿಸ್ತರಿಸಿಕೊಂಡದ್ದು ಇತರರನ್ನು ನೋಡಿಯೇ.


ಕುಂಡಾವು ಮೇಳದಲ್ಲಿ ಆರುವ ಕೊರಗಪ್ಪ ಶೆಟ್ಟರ ಸಾಂಗತ್ಯದಲ್ಲಿ ಅದು ಸ್ಫುಟಗೊಂಡಿತು. ಮುಂದೆ ಕರ್ನಾಟಕ ಮೇಳವೊಂದಲ್ಲೇ 36 ವರ್ಷ ವ್ಯವಸಾಯ ಮಾಡಿದ ಹಿರಿಮೆ ಅವರದು. ದಾಮೋದರ ಮಂಡೆಚ್ಚ, ಅಳಿಕೆ, ಬೋಳಾರ, ಮಂಕುಡೆ, ರಾ. ಸಾಮಗ, ಕ್ರಿಶ್ಚನ್ ಬಾಬು, ಮಿಜಾರು, ಕೋಳ್ಯೂರು ಮೊದಲಾದ ದಿಗ್ಗಜರ ಒಡನಾಟದಲ್ಲಿ ಕಲ್ಲಾಡಿ ಮನೆತನದ ಮೂವರು ಯಜಮಾನರನ್ನು ಕಂಡ ದಯಾನಂದ, ಕಲ್ಲಾಡಿ ಕೊರಗ ಶೆಟ್ಟರಿಂದಾಗಿ ಮಂಗಳೂರಿನ ಜೆಪ್ಪಿನ ಮೊಗರಿನಲ್ಲಿ ನೆಲೆಸಿ ಜಪ್ಪು ದಯಾನಂದ ಶೆಟ್ಟಿ ಎಂದಾದರು.


ಖಚಿತ ಲಯ ಜ್ಞಾನ, ಲಾಲಿತ್ಯ ಪೂರ್ಣ ನಾಟ್ಯ ಭಾವನಾತ್ಮಕ ಅಭಿನಯಕ್ಕೆ ಹೆಸರಾದ ದಯಾನಂದ ಶೆಟ್ಟರು, ಪುಂಡು ವೇಷ, ಸ್ತ್ರೀ ವೇಷ, ಇದಿರು ವೇಷ, ಹಾಸ್ಯ, ಬಣ್ಣ, ಹೀಗೆ ಯಕ್ಷರಂಗದ ವಿಭಿನ್ನ ವೇಷಗಾರಿಕೆಯಲ್ಲಿ ಪಳಗಿದ ನಟ.


ಅಭಿಮನ್ಯು ಬಭ್ರುವಾಹನ, ಪರಶುರಾಮ, ಅಶ್ವತ್ಥಾಮ, ವಿಕರ್ಣ, ಸುದೇವ, ನಕ್ಷತ್ರಿಕ, ಜಲಂಧರ, ಹಿರಣ್ಯಾಕ್ಷ, ಇಂದ್ರಜಿತು, ರಕ್ತಬೀಜ, ಋತುಪರ್ಣ, ದಾರಿಗಾಸುರ ಮುಂತಾದ ಪೌರಾಣಿಕ ಪಾತ್ರಗಳು ಅವರಿಗೆ ಹೆಸರು ತಂದಿದೆ. ತುಳು ಪ್ರಸಂಗಗಳ ದೇವುಪೂಂಜ, ಬಬ್ಬು, ಚೆನ್ನಯ, ಕಾಂತಣ ಅತಿಕಾರಿಯಂತಹ ಪಾತ್ರಗಳಲ್ಲದೆ ದೇಯಿ, ಕಿನ್ನಿದಾರು, ಭಾಗೀರಥಿ, ಚೇದಿರಾಣಿ, ನೀಲು, ಬ್ಯಾರ್ದಿ, ಮೊದಲಾದ ಸ್ತ್ರೀ ಪಾತ್ರಗಳಲ್ಲಿ ಸೈ ಎನಿಸಿಕೊಂಡಿದ್ದಾರೆ. ಬೆಳ್ಳಾರೆ ವಿಶ್ವನಾಥ ರೈ ಅವರೊಂದಿಗೆ ಚಂಡ-ಮುಂಡ, ಅರುವ ಕೊರಗಪ್ಪ ಶೆಟ್ಟಿ ಮತ್ತು ದಾಸಪ್ಪ ರೈ ಅವರೊಂದಿಗೆ ಕೋಟಿ-ಚೆನ್ನಯ, ಮಿಜಾರು ಅಣ್ಣಪ್ಪರೊಡನೆ ಪಯ್ಯ-ಕಿನ್ನಿದಾರು ಇತ್ಯಾದಿ ಅವರ ಜೋಡಿ ವೇಷಗಳು ರಸಿಕರ ಮನಗೆದ್ದಿವೆ.


ಕರ್ನಾಟP ಮೇಳದಿಂದ ನಿವೃತ್ತರಾದ ಬಳಿಕ ಸಸಿಹಿತ್ಲು ಭಗವತೀ ಮೇಳದಲ್ಲಿ ಎಂಟು ವರ್ಷ ತಿರುಗಾಟ ಮಾಡಿದ ದಯಾನಂದ ಶೆಟ್ಟರು ಒಟ್ಟು 52 ವರ್ಷಗಳ ರಂಗಾನುಭವ ಹೊಂದಿದ್ದಾರೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ಪೊಳಲಿ ಪ್ರಶಸ್ತಿ, ಅಳಿಕೆ ಮತ್ತು ಬೋಳಾರ ಪ್ರಶಸ್ತಿ, ಯಕ್ಷಗಾನ ಕಲಾರಂಗ ಉಡುಪಿ, ಮಂಗಳೂರಿನ ಶ್ರೀ ಕೃಷ್ಣ ಯಕ್ಷಸಭಾ, ಮುಂಬೈ ತೀಯಾ ಉತ್ಸವ, ಪುಳಿಂಚ ಸೇವಾ ಪ್ರತಿಷ್ಠಾನ, ಅರುವ ಕೊರಗಪ್ಪ ಶೆಟ್ಟಿ ಸಾÀಂಸ್ಕ್ರತಿಕ ಪ್ರತಿಷ್ಠ್ಠಾನ, ಕಟ್ಟೆ ಫ್ರೆಂಡ್ಸ್ ಗಂಜಿಮಠ, ಮಲ್ಲಿಕಾರ್ಜುನ ಸ್ವಯಂ ಸೇವಕ ಸಂಘ ಹೀಗೆ ಹಲವು ಕಡೆ ಗೌರವ ಸಮ್ಮಾನಗಳನ್ನು ಅವರು ಪಡೆದಿದ್ದಾರೆ. ಯಕ್ಷಗಾನ ಗುರುಗಳಾಗಿ ಮಾನ್ಯ ಸಂತೋಷರಂತಹ ಸಮರ್ಥ ಶಿಷ್ಯರನ್ನು ತಯಾರು ಮಾಡಿದ್ದಾರೆ.


ಪ್ರಸ್ತುತ 75ರ ಹೊಸ್ತಿಲಲ್ಲಿ ಜೆಪ್ಪಿನಮೊಗರಿನ ತಮ್ಮ ನಿವಾಸದಲ್ಲಿ ಪತ್ನಿ ಲೀಲಾ ಶೆಟ್ಟಿ, ಮೂರು ಹೆಣ್ಣು ಮತ್ತು ಈರ್ವರು ಗಂಡು ಮಕ್ಕಳೊಂದಿಗೆ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ.


ಇದೇ 2023 ಸೆಪ್ಟಂಬರ್ 16 ರಂದು ಪ್ರತಿಷ್ಠಾನದ ಅಧ್ಯಕ್ಷ ಡಾ| ಎ.ಜೆ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗುವ ಸಮಾರಂಭದಲ್ಲಿ ಜೆಪ್ಪು ದಯಾನಂದ ಶೆಟ್ಟರು ರೂ.25,000/- ಗೌರವ ನಿಧಿಯೊಂದಿಗೆ ‘ವಿಶ್ವಬಂಟ ಪ್ರತಿಷ್ಠಾನ ಪ್ರಶಸ್ತಿ’ ಸ್ವೀಕರಿಸಲಿದ್ದಾರೆ.


-ಭಾಸ್ಕರ ರೈ ಕುಕ್ಕುವಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top