ಗೋಕರ್ಣ: ಶ್ರೀರಾಮಚಂದ್ರಾಪುರ ಮಠದ ಪ್ರಧಾನ ದೇವತೆಗಳಲ್ಲೊಂದಾದ ರಾಜರಾಜೇಶ್ವರಿಯ ಮಹಾಸಮಾರಾಧನೆ 'ನವರಾತ್ರಿ ನಮಸ್ಯಾ' ಕಾರ್ಯಕ್ರಮ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಮಾಣಿ ಮಠದಲ್ಲಿ ನಡೆಯಲಿದೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರಭಾರತೀಮಹಾಸ್ವಾಮೀಜಿ ಪ್ರಕಟಿಸಿದರು.
ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀಗಳು ಮಂಗಳವಾರ ಉಪ್ಪಿನಂಗಡಿ ಮಂಡಲದ ಪುತ್ತೂರು, ದರ್ಭೆ, ಕಬಕ ಮತ್ತು ಮಾಣಿ ವಲಯಗಳ ಶಿಷ್ಯರಿಂದ ಗುರುಭಿಕ್ಷಾ ಸೇವೆ ಸ್ವೀಕರಿಸಿ ಶ್ರೀಸಂದೇಶ ನೀಡಿದರು.
ಶ್ರೀಮಠದ ಪ್ರಧಾನ ದೇವತೆಗಳಲ್ಲೊಂದಾದ ರಾಜರಾಜೇಶ್ವರಿಯ ಮಹೋತ್ಸವ ವೈಭವಯುತವಾಗಿ ನಡೆದು ಅದ್ಭುತ ಯಶಸ್ಸಿನ ನಿರೀಕ್ಷೆಯಲ್ಲಿದ್ದೇವೆ. ಅವಿಚ್ಛಿನ್ನ ಪರಂಪರೆ, ಸ್ವರ್ಣ ಮಂಟಪ, ಹಸ್ತಿದಂತ ಸಿಂಹಾಸನದಂಥ ವೈಭವಗಳಿಗೆ ಇದು ಕಿರೀಟಪ್ರಾಯವಾಗಬೇಕು ಎಂದು ಆಶಿಸಿದರು.
ಹವ್ಯಕ ಸಂಸ್ಕೃತಿ- ಪರಂಪರೆ, ಆಚಾರ- ವಿಚಾರ, ಆಹಾರ- ವಿಹಾರ ಎಲ್ಲವೂ ವಿಶಿಷ್ಟ. ಎಲ್ಲಕ್ಕಿಂತ ಹೆಚ್ಚಾಗಿ ಯುವಜನಾಂಗ ನಮಗಿಂತ ಬುದ್ಧಿವಂತ ಜನಾಂಗ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಹೆಮ್ಮೆ ನಮ್ಮದು. ಆದರೆ ಈ ಹೆಮ್ಮೆಯೊಂದಿಗೆ ಹೊಣೆಗಾರಿಕೆಗಳೂ ಬರುತ್ತವೆ ಎನ್ನುವುದನ್ನು ಮರೆಯಬಾರದು. ನಮ್ಮ ಸಂಸ್ಕøತಿ- ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಮೂಲಕ ಭವ್ಯ ಪರಂಪರೆಯ ವಾರಸುದಾರರಾಗಬೇಕು ಎಂದು ಕರೆ ನೀಡಿದರು.
ಆದರೆ ಹವ್ಯಕ ಸಮಾಜ ಇಂದು ಕ್ಷೀಣಿಸುತ್ತಿದೆ. ಸಾಂಸ್ಕೃತಿಕವಾಗಿಯೂ ಕ್ಷಯಿಸುತ್ತಿದೆ. ಈ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಮೂಡಿಸಿ ಸಂಸ್ಕೃತಿಯ ಸಂರಕ್ಷಣೆಗೆ ಪ್ರೇರೇಪಿಸಬೇಕು. ಯುವಜನಾಂಗಕ್ಕೆ ಪರಂಪರೆಯ ಬಳುವಳಿ ನೀಡಬೇಕು. ಮಕ್ಕಳಿಗೆ ನಮ್ಮ ಹವ್ಯಕ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ನೀಡದವರು ಉತ್ತಮ ತಂದೆ ತಾಯಿ ಎನಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಮಕ್ಕಳಿಗೆ ಉತ್ತಮ ಆಧುನಿಕ ಶಿಕ್ಷಣದ ಜತೆಗೆ ಸಂಸ್ಕೃತಿ- ಸದಾಚಾರವೂ ಅಗತ್ಯ ಎಂಬ ಉದ್ದೇಶದಿಂದ ಆರಂಭವಾಗಿರುವ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮುಂದೆ ಬೃಹತ್ ಸ್ವರೂಪ ಪಡೆಯಲಿದ್ದು, ಸಮಾಜದ ಎಲ್ಲ ಮಕ್ಕಳೂ ಇಲ್ಲಿ ಓದುವಂತಾಗಬೇಕು. ನಮಗಿಂತ ನಮ್ಮ ಮುಂದಿನ ಜನಾಂಗ ಉತ್ತಮವಾಗಬೇಕು ಎಂದು ಆಶಿಸಿದರು.
ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಮಂಗಳೂರು ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ಉಪ್ಪಿನಂಗಡಿ ಮಂಡಲದ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಮಾಣಿ ಮಠ ಕ್ರಿಯಾ ಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್, ಕೋಶಾಧ್ಯಕ್ಷ ಮೈಕೆ ಗಣೇಶ್ ಭಟ್, ಸದಸ್ಯರಾದ ಶೈಲಜಾ ಕೊಂಕೋಡಿ, ಸತೀಶ್ ಬನಾರಿ, ವಿವಿವಿ ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್ಜಿ ಭಟ್, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ.ಹೆಗಡೆ, ಮತ್ತಿತರರು ಉಪಸ್ಥಿತರಿದ್ದರು. ಸಾಗರದ ಮಾಜಿ ಶಾಸಕ ಹರತಾಳು ಹಾಲಪ್ಪ ಈ ಸಂದರ್ಭದಲ್ಲಿ ಶ್ರೀಗಳಿಂದ ಅನುಗ್ರಹ ಮಂತ್ರಾಕ್ಷತೆ ಪಡೆದರು.
ಕಾರ್ಯಕ್ರಮ ವಿವರ
ಮಾಣಿ ಮಠದ ನವರಾತ್ರಿ ಉತ್ಸವ ಅಕ್ಟೋಬರ್ 15 ರಿಂದ 24ರವರೆಗೆ ಸಂಪನ್ನಗೊಳ್ಳಲಿದೆ. ಶ್ರೀಸಂಸ್ಥಾನ ನವರಾತ್ರಿಯ ಒಂಬತ್ತು ದಿನಗಳ ಕಾಲ ಉಪವಾಸ ವ್ರತ ಕೈಗೊಂಡು ಸುವರ್ಣ ಮಂಟಪದಲ್ಲಿ ಪೂಜೆ ಸಲ್ಲಿಸುವ ಕಾರ್ಯಕ್ರಮವಿದೆ. ಇದೇ ಸಂದರ್ಭದಲ್ಲಿ ಶ್ರೀಗಳು 'ನವರಾತ್ರ ನಮಸ್ಯ' ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಒಂಬತ್ತು ದಿನಗಳ ಕಾಲ ಸ್ವರ್ಣಮಂಟಪದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಪ್ರತಿದಿನ ಸ್ವರ್ಣಪಾದುಕಾ ಪೂಜೆ, ಕೊನೆಯ ದಿನ ಸುವರ್ಣಭಿಕ್ಷಾ ಸೇವೆ ನೆರವೇರಲಿದೆ. ಪ್ರತಿದಿನ ಮಧ್ಯಾಹ್ನ ಶ್ರೀಸಂಸ್ಥಾನದವರಿಂದ ಲಲಿತೋಪಾಖ್ಯಾನ ಪ್ರವಚನ ನಡೆಯಲಿದೆ.
ಪ್ರತಿದಿನ ಸ್ವರ್ಣಮಂಟಪದಲ್ಲಿ ಶ್ರೀಪೂಜೆ, ಶ್ರೀಕರಾರ್ಚಿತ ಸನ್ನಿಧಿಗಳಿಗೆ ಮಹಾಸಪರ್ಯಾ, ಶ್ರೀದುರ್ಗಾಪೂಜೆ, ಶ್ರೀದುರ್ಗಾ ಸಪ್ತಶತಿ ಪಾರಾಯಣ, ಶ್ರೀದೇವಿ ಭಜನೆ, ಕುಂಕುಮಾರ್ಚನೆ ಇರುತ್ತದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ