ಮಂಗಳೂರು: ನಗರದ ಕೆನರಾ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣೆ ವಿಭಾಗ ಹಾಗೂ ಫೋರಮ್ ಆಫ್ ಬಿಸಿನೆಸ್ ಮ್ಯಾನೇಜ್ಮೆಂಟ್ (ಫೋಬ್ಮೆಟ್) ಮಂಗಳೂರು ವಿಶ್ವವಿದ್ಯಾಲಯ, ಇವರ ಸಹಯೋಗದಲ್ಲಿ ರಾಷ್ಟೀಯ ಶಿಕ್ಷಣ ನೀತಿ 2020 ಬಿ.ಬಿ.ಎ ಐದನೇ ಸೆಮಿಸ್ಟರ್ ಪಠ್ಯಕ್ರಮದ ವಿಚಾರವಾಗಿ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ಕಾರ್ಯಾಗಾರ ನಡೆಯಿತು.
ಕೆನರಾ ಆಡಳಿತ ಮಂಡಳಿಯ ಪದಾಧಿಕಾರಿ ಬಸ್ತಿ ಪುರುಷೋತ್ತಮ್ ಶೆಣೈ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ನೂತನ ಶಿಕ್ಷಣ ನೀತಿಯ ಉದ್ದೇಶವು ಮಕ್ಕಳು ತಮ್ಮ ಆಯ್ಕೆಯ ವಿಷಯದಲ್ಲಿ ವಿದ್ಯಾಭ್ಯಾಸ ಮಾಡುವುದಲ್ಲದೆ ಸುಪ್ತಪ್ರತಿಭೆಯನ್ನು ಹೊರ ತಂದು ಜೀವನ ನಡೆಸುವುದಾಗಿದೆ. ಒತ್ತಡದ ಕಲಿಕೆಯಿಂದ ಅವರನ್ನು ಮುಕ್ತಗೊಳಿಸುವುದು ಎಂದು ನುಡಿದರು.
ಫೋಬ್ಮೆಟ್ ಇದರ ಅಧ್ಯಕ್ಷ ಡಾ. ಚಂದ್ರಶೇಖರ್. ಕೆ ತಮ್ಮ ದಿಕ್ಸೂಚಿ ಭಾಷಣದಲ್ಲಿ ಎನ್.ಇ.ಪಿ ದೇಶದ ಪ್ರಗತಿಯ ದೂರದರ್ಶಿತ್ವದ ಹಿನ್ನೆಲೆಯಲ್ಲಿ ರೂಪಿತವಾಗಿದೆ. ಇದು ವಿದ್ಯಾರ್ಥಿ ಹಾಗೂ ಶಿಕ್ಷಕರಲ್ಲಿ ಕಲಿಸುವ ಮತ್ತು ಕಲಿಯುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇಂತಹ ನೀತಿಯ ಪರಿಕಲ್ಪನೆ ಮತ್ತು ಉದ್ದೇಶಗಳನ್ನು ಸಮರ್ಪಕವಾಗಿ ಅಳವಡಿಸುವಲ್ಲಿ ನಾವು ಶ್ರಮ ವಹಿಸಬೇಕಾಗಿದೆ ಎಂದು ಹೇಳಿದರು.
ಫೋಬ್ಮೆಟ್ ನ ಕಾರ್ಯದರ್ಶಿ ನಂದಕಿಶೋರ್ ಕೆ. ಅವರು ಬಿ.ಬಿ.ಎ. ಪಠ್ಯ ಕ್ರಮದಲ್ಲಿ ಏಕರೂಪವನ್ನು ತರುವುದು ಹಾಗೂ ಕಲಿಕಾ ಪ್ರಕ್ರಿಯೆಯಲ್ಲಿರುವ ಗೊಂದಲಗಳನ್ನು ನಿವಾರಿಸುವುದು ಕಾರ್ಯಾಗಾರದ ಉದ್ದೇಶ ಎಂದು ಪ್ರಾಸ್ತಾವಿಕವಾಗಿ ನುಡಿದರು. ಕಾಲೇಜು ಪ್ರಾಂಶುಪಾಲೆ ಡಾ. ಪ್ರೇಮಲತಾ ವಿ. ಅಧ್ಯಕ್ಷತೆ ವಹಿಸಿದ್ದರು. ಆಡಳಿತಾಧಿಕಾರಿ ಡಾ. ದೀಪ್ತಿ ನಾಯಕ್ ಉಪಸ್ಥಿತರಿದ್ದರು.
ವಾಣಿಜ್ಯ ಮತ್ತು ನಿರ್ವಹಣೆ ವಿಭಾಗದ ಮುಖ್ಯಸ್ಥೆ ಶ್ರೀಮತಿ ದೇಜಮ್ಮ ಎ. ಸ್ವಾಗತಿಸಿ, ಕಾರ್ಯಾಗಾರ ಸಂಯೋಜಕ ಹಾರ್ದಿಕ್ ಪಿ. ಚೌಹಾಣ್ ವಂದಿಸಿದರು. ಶ್ರೀಮತಿ ಪ್ರಿಯಾಂಕ ನಿರೂಪಿಸಿದರು. ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಟ್ಟ ವಿವಿಧ ಕಾಲೇಜುಗಳ ಬಿ.ಬಿ.ಎ. ಬೋಧಿಸುತ್ತಿರುವ ಅಧ್ಯಾಪಕರು ಈ ಕಾರ್ಯಾಗಾರದಲ್ಲಿ ಭಾಗಹಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ