ಸೆಪ್ಟೆಂಬರ್ 8- ಅಂತರಾಷ್ಟ್ರೀಯ ಸಾಕ್ಷರತಾ ದಿನ
“ಶಿಕ್ಷಣವು ಜಗತ್ತನ್ನು ಬದಲಾಯಿಸ ಬಹುದಾದಂತಹ ಪ್ರಭಲವಾದ ಅಸ್ತ್ರವಾಗಿದೆ” ಎಂಬ ನೆಲ್ಸನ್ ಮಂಡೇಲಾ ಅವರ ಮಾತು ಶಿಕ್ಷಣದ ಮಹತ್ವವನ್ನು ಸಾರುತ್ತದೆ.
ಸಾಕ್ಷರತೆ ಜೀವನಮಟ್ಟ ಮತ್ತು ಕೌಶಲವನ್ನು ವೃದ್ಧಿಸಲು ಅತೀ ಅಗತ್ಯ. ಆಧುನಿಕ ಸಮಾಜದಲ್ಲಿ ಸಾಕ್ಷರತೆ ಮಾನವ ಅಭಿವೃದ್ಧಿಯ ವಾಹಕ. ಓದುವ ಪರಿಕಲ್ಪನೆ ಮತ್ತು ವ್ಯವಸ್ಥೆಯನ್ನು ರಚಿಸುವುದು ಮಾನವಕುಲದ ಶ್ರೇಷ್ಠ ಬೌದ್ಧಿಕ ಸಾಧನೆಗಳಲ್ಲಿ ಒಂದಾಗಿದೆ. ಓದುವುದು ಮತ್ತು ಬರೆಯುವುದು ನಮ್ಮ ಕಲಿಯುವ ಸಾಮರ್ಥ್ಯವನ್ನು ವರ್ಧಿಸುತ್ತದೆ ಹಾಗೂ ನಮ್ಮ ಸ್ಪರ್ಧಾತ್ಮಕತೆ ಮತ್ತು ಮಾನವ ನಾಗರಿಕತೆಯ ಅಡಿಪಾಯವಾಗಿದೆ. ಸಾಕ್ಷರತೆಯ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಪರಿಣಾಮಕಾರಿ ಸಂವಹನವನ್ನು ಸುಲಭಗೊಳಿಸುತ್ತದೆ.
ಸಾಕ್ಷರತೆಯು ಜನರನ್ನು ಸಶಕ್ತಗೊಳಿಸುತ್ತದೆ ಮತ್ತು ಮುಕ್ತಗೊಳಿಸುತ್ತದೆ. ಶಿಕ್ಷಣದ ಹಕ್ಕಿನ ಭಾಗವಾಗಿ ಅದರ ಪ್ರಾಮುಖ್ಯತೆಯನ್ನು ಮೀರಿ, ಸಾಕ್ಷರತೆಯು ಸಾಮರ್ಥ್ಯಗಳನ್ನು ವಿಸ್ತರಿಸುವ ಮೂಲಕ ಜೀವನವನ್ನು ಸುಧಾರಿಸುತ್ತದೆ, ಅದು ಬಡತನವನ್ನು ಕಡಿಮೆ ಮಾಡುತ್ತದೆ, ಕಾರ್ಮಿಕ ಮಾರುಕಟ್ಟೆಯಲ್ಲಿ ಭಾಗವಹಿಸುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯ ಮತ್ತು ಸುಸ್ಥಿರ ಅಭಿವೃದ್ಧಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಅಂತಾರಾಷ್ಟ್ರೀಯ ಸಾಕ್ಷರತಾ ದಿನ
ಸಾಕ್ಷರತೆ ದೇಶದ ಅಭಿವೃದ್ಧಿ ಪ್ರಕ್ರಿಯೆಯ ಅಡಿಪಾಯ. ಸಾಕ್ಷರತೆ ಎಂದರೆ ಓದುವ, ಬರೆಯುವ ಮತ್ತು ಅದನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ. ಅಭಿವೃದ್ಧಿಯಲ್ಲಿ ಸಾಕ್ಷರತೆಯ ಮಹತ್ವವನ್ನು ಪ್ರಚುರಪಡಿಸಲು ಪ್ರತೀ ವರ್ಷ 1967ರಿಂದ ಸೆಪ್ಟೆಂಬರ್ 8ನ್ನು ಅಂತರಾಷ್ಟ್ರೀಯ ಸಾಕ್ಷರತಾ ದಿನವನ್ನಾಗಿ ಆಚರಿಸಲಾಗುತ್ತಿದೆ. ಅನಕ್ಷರತೆಯನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಸಮುದಾಯವನ್ನು ಸಶಕ್ತೀಕರಣಗಳಿಸುವ ಅಸ್ತ್ರವನ್ನಾಗಿ ಸಾಕ್ಷರತೆಯನ್ನು ಬಳಸುವುದೇ ಇದರ ಮುಖ್ಯ ಉದ್ಧೇಶ.
2023 ರ ಘೋಷವಾಕ್ಯ
“ಪರಿವರ್ತನೆ ಪಥದಲ್ಲಿರುವ ಜಗತ್ತಿನ ಸಾಕ್ಷರತೆಯನ್ನು ಉತ್ತೇಜಸುವುದು, ಸುಸ್ಥಿರ ಮತ್ತು ಶಾಂತಿಯುತ ಸಮಾಜಕ್ಕೆ ಅಡಿಪಾಯ ಹಾಕುವುದು” ಎಂಬ ಧ್ಯೇಯದೊಂದಿಗೆ ಈ ಬಾರಿ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಸಲಾಗುತ್ತಿದೆ.
ಸಾಕ್ಷರತೆಯ ಮಟ್ಟ:
ಒಟ್ಟಾರೆಯಾಗಿ, ಜಾಗತಿಕ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಕನಿಷ್ಠ 15 ವರ್ಷ ವಯಸ್ಸಿನ ಎಲ್ಲಾ ಪುರುಷರು ಮತ್ತು ಮಹಿಳೆಯರ ಸಾಕ್ಷರತೆಯ ಪ್ರಮಾಣವು 86.3% ಆಗಿದೆ. 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಪುರುಷರು 90% ಹಾಗೂ ಮಹಿಳಯರು 82.7% ಸಾಕ್ಷರತೆಯನ್ನು ಹೊಂದಿದ್ದಾರೆ. ಆದಾಗ್ಯೂ, ದೇಶದಿಂದ ದೇಶಕ್ಕೆ ಭಾರಿ ವ್ಯತ್ಯಾಸಗಳಿವೆ. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಯಾವಾಗಲೂ 96% ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಕರ ಸಾಕ್ಷರತೆಯನ್ನು ಹೊಂದಿದ್ದರೆ ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಸರಾಸರಿ 65% ಸಾಕ್ಷರತೆಯನ್ನು ಹೊಂದಿದೆ.
2011ರ ಜನಗಣತಿಯಂತೆ ಭಾರತ ಶೇ.74 (ಇತ್ತೀಚಿಗಿನ ವರದಿಯಂತೆ ಶೇ.77) ಸಾಕ್ಷರತಾ ಪ್ರಮಾಣ ಸಾಧಿಸಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣ ಶೇ.84.70 ಹಾಗೂ ಸ್ತ್ರೀ ಸಾಕ್ಷರತಾ ದರ ಶೇ.70.30 ರಷ್ಟಿದೆ. ಕೇರಳದಲ್ಲಿ ಅತೀ ಹೆಚ್ಚು (ಶೇ.94) ಹಾಗೂ ಬಿಹಾರ ಅತೀ ಕನಿಷ್ಠ (ಶೇ.61.80) ಅಕ್ಷರಸ್ಥರನ್ನು ಹೊಂದಿರುವ ರಾಜ್ಯಗಳಾಗಿವೆ. ಕರ್ನಾಟಕದಲ್ಲಿ ಶೇ.75.36 ಅಕ್ಷರಸ್ಥರು. ನಮ್ಮ ರಾಜ್ಯದಲ್ಲಿ ಶೇ.82.47 ಪುರುಷರು ಹಾಗೂ ಶೇ.68.08 ಮಹಿಳೆಯರು ಅಕ್ಷರಸ್ಥರು.
ಸಾಕ್ಷರತೆ ಮತ್ತು ಬಡತನ
ಬಡತನ ಮತ್ತು ಅನಕ್ಷರತೆ ಪರಸ್ಪರ ಕೈಜೋಡಿಸುತ್ತವೆ. ಬಡತನ ಪೀಡಿತ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣವು ಕಡಿಮೆ ಇರುತ್ತದೆ. ಆರ್ಥಿಕವಾಗ ಬಡ ರಾಷ್ಟ್ರಗಳಲ್ಲಿ ಶಿಕ್ಷಣ ಲಭ್ಯವಿದ್ದರೂ ಸಹ, ಹೆಣಗಾಡುತ್ತಿರುವ ಕುಟುಂಬಕ್ಕೆ ತಮ್ಮ ಮಕ್ಕಳು ಶಾಲೆಗೆ ಹೋಗುವ ಬದಲು ಕೆಲಸ ಮಾಡಲು ಮತ್ತು ಹಣ ಸಂಪಾದಿಸಲು ಮುಖ್ಯರಾಗುತ್ತಾರೆ. ಸಾಕ್ಷರತೆಯಲ್ಲಿ ಲಿಂಗ ಅಂತರವೂ ಇದೆ. ಪ್ರಪಂಚದಾದ್ಯಂತ ಸುಮಾರು 781 ಮಿಲಿಯನ್ ವಯಸ್ಕರಲ್ಲಿ ಓದಲು ಅಥವಾ ಬರೆಯಲು ಸಾಧ್ಯವಾಗುವುದಿಲ್ಲ, ಸುಮಾರು ಮೂರನೇ ಎರಡರಷ್ಟು ಮಹಿಳೆಯರು. ಕಡಿಮೆ-ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಈ ಅಸಮಾನತೆಯು ವಿಶೇಷವಾಗಿ ಗಮನಾರ್ಹವಾಗಿದೆ, ಇದರಲ್ಲಿ ಮಹಿಳೆಯರು ಹೆಚ್ಚಾಗಿ ಮನೆಯಲ್ಲಿಯೇ ಇರುತ್ತಾರೆ ಮತ್ತು ಪುರುಷರು ಕೆಲಸಕ್ಕೆ ಹೋಗುವಾಗ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಾರೆ.
ಸಾಕ್ಷರತೆಯ ಹೆಜ್ಜೆಗಳು
ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಕೇವಲ ಶೇ.12 ಅಕ್ಷರಸ್ಥರಿದ್ದರು. ಶಿಕ್ಷಣದ ಮಹತ್ವವನ್ನು ಮನಗಂಡು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ಅಭಿಯಾನ, ವಯಸ್ಕರ ಶಿಕ್ಷಣ, ಉಚಿತ ಶಿಕ್ಷಣ, ಸಮವಸ್ತ್ರ ಹಾಗೂ ಪುಸ್ತಕ ವಿತರಣೆ, ಮಧ್ಯಾಹ್ನದ ಬಿಸಿಯೂಟ, ಕಡ್ಡಾಯ ಶಿಕ್ಷಣ ಯೋಜನೆ ಹಾಗೂ ಶಿಕ್ಷಣ ಹಕ್ಕು ಕಾಯ್ದೆ ಭಾರತದಲ್ಲಿ ಸಾಕ್ಷರತೆಯ ಮಟ್ಟವನ್ನು ಹಚ್ಚಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದೆ. 2060ರ ಹೊತ್ತಿಗೆ ಭಾರತದ ಸಾಕ್ಷರತಾ ಪ್ರಮಾಣ ಶೇ.100 ಆಗಲಿದೆ ಅಂದು ಯುನಸ್ಕೋ ಅಂದಾಜಿಸಿದೆ.
2020-21 ರಲ್ಲಿ ಕೇಂದ್ರ ಸರಕಾರದ ’ನಿಪುಣ್ ಭಾರತ್’ ಯೋಜನೆ 3ರಿಂದ 9 ವರ್ಷದ ಪ್ರತಿಯೊಂದು ಮಗುವಿನಲ್ಲಿಯೂ 2026-27 ರೊಳಗೆ ಸಾಕ್ಷರತೆಯ ತಳಹದಿ ಹಾಗೂ ಅಂಕೆ ಸಂಖ್ಯೆಗಳ ಕೌಶಲವನ್ನು ಸಾಧಿಸುವ ಗುರಿಯನ್ನು ಹೊಂದಿದೆ.
ಸುಸ್ಥಿರ ಅಭಿವೃದ್ಧಿಗಾಗಿ ಸಾಕ್ಷರತೆ
ಸಾಕ್ಷರತಾ ಅಭಿಯಾನವನ್ನು ಆರಂಭಿಸಿ ಐದು ದಶಕಗಳೇ ಕಳೆದರೂ ಪ್ರತಿಯೊಬ್ಬ ವ್ಯಕ್ತಿಗೂ ಶಿಕ್ಷಣ ದೊರಕುವಂತೆ ಮಾಡಲು ಸಾಧ್ಯವಾಗದಿರುವುದು ವಿಪರ್ಯಾಸವೇ ಸರಿ. ಜಗತ್ತಿನಲ್ಲಿ ಇಂದು 750 ಮಿಲಯನ್ ಜನರಿಗೆ ಓದಲೂ ಬರುವುದಿಲ್ಲ ಎಂಬ ಅಂಶ ನಮ್ಮ ಮುಂದರುವ ಸವಾಲಿನ ಅಗಾಧತೆಯನ್ನು ಬಿಂಬಿಸುತ್ತದೆ.
ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತೆ ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ. ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇದು ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ.
ಬಡತನ ಪ್ರಮಾಣವನ್ನು ಕುಗ್ಗಿಸುವುದು, ಜನಸಂಖ್ಯೆಯನ್ನು ನಿಯಂತ್ರಿಸುವುದು, ಲಿಂಗ ತಾರತಮ್ಯ ಮತ್ತು ಅಸಮಾನತೆಯಂತಹ ಸಮಸ್ಯೆಗಳ ನಿರ್ಮೂಲನೆ ಮಾಡುವಲ್ಲಿ ಸಾಕ್ಷರತೆ ಪ್ರಮುಖ ಪಾತ್ರವಹಿಸಲಿದೆ. ಈ ನಿಟ್ಟಿನಲ್ಲಿ ಅಕ್ಷರಸ್ಥ ಜಾಗೃತ ಸಮಾಜ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸುವ ಅಗತ್ಯ ಇದೆ.
- ಡಾ.ಎ.ಜಯ ಕುಮಾರ ಶೆಟ್ಟಿ
ನಿವೃತ್ತ ಪ್ರಾಂಶುಪಾಲರು ಹಾಗೂ ಅರ್ಥಶಾಸ್ತ್ರ ಪ್ರಾದ್ಯಾಪಕರು
ಶ್ರೀ.ಧ.ಮಂ.ಕಾಲೇಜು (ಸ್ವಾಯತ್ತ), ಉಜಿರೆ
9448154001
ajkshetty@sdmcujire.in