ದೇಹದ ಅವಶ್ಯಕತೆಗಳ ಕರೆಗೆ ಓಗೊಡಿ

Upayuktha
0

(ರಾಷ್ಟ್ರೀಯ ಪೋಷಕಾಂಶಗಳ ವಾರ ಸೆಪ್ಟೆಂಬರ್ 1-7)




ಕೆಲ ವರ್ಷಗಳ ಹಿಂದೆ ನನ್ನ ಫಿಟ್ನೆಸ್ ಸೆಂಟರ್‌ಗೆ ಬರುತ್ತಿದ್ದ ಓರ್ವ ಆಯುರ್ವೇದ ತಜ್ಞ ವೈದ್ಯ ಸ್ನೇಹಿತೆ ಅಂದು ನನಗೆ ತಾನು ಡಯಟ್ ಮಾಡುತ್ತಿರುವೆನೆಂದು ಹೇಳಿದಳು. ಡಯಟ್‌ನ ಬಗ್ಗೆ ಅಷ್ಟಾಗಿ ಒಲವಿರದಿದ್ದ ನಾನು ಏನನ್ನು, ಹೇಗೆ, ಏಕೆ ಮಾಡುತ್ತಿರುವೆ ಎಂದು ಕೇಳಲಿಲ್ಲವಾದರೂ ಆಕೆಗೆ ಒಂದು ಮಾತನ್ನು ಹೇಳಿದೆ. ಇಂದು ನೀನು ಯಾವ ವಸ್ತುಗಳನ್ನು ಬೇಡವೆಂದು ದೂರವಿಡುತ್ತಿದ್ದೀಯೊ ಸರಿಯಾಗಿ ಕೆಲವೇ ದಿನಗಳಲ್ಲಿ ಅದೇ ವಸ್ತುಗಳನ್ನು ನೀನು ಇನ್ನಿಲ್ಲದಂತೆ ತಿನ್ನಲು ಪ್ರಾರಂಭಿಸುವೆ ಎಂದು. ಮುಂದಿನ ಕೆಲವೇ ದಿನಗಳಲ್ಲಿ ಆಕೆ ಬಂದು ಎಂದೂ ಸಿಹಿಯನ್ನು ಮುಟ್ಟದ ತಾನು ಇಂದು ಎರಡು ಬೇಸನ್ ಉಂಡೆಗಳನ್ನು ತಿಂದದ್ದಾಗಿ ಹೇಳಿದಳು. ಇದನ್ನೇ ನಾವು ಕ್ರೇವಿಂಗ್ ಎಂದು ಕರೆಯುತ್ತೇವೆ. ಒಂದು ರೀತಿಯ ಆಹಾರದ ಹಪಹಪಿಯೇ ಈ ಕ್ರೇವಿಂಗ್.


ಅದು ನಿಜವೂ ಆಗಿತ್ತು... ಅವು ನಾನು ನಡೆಸುತ್ತಿದ್ದ ಬೇಸಿಗೆ ಶಿಬಿರದ ದಿನಗಳು. ಮುಂಜಾನೆ 10:30 ರ ಒಳಗೆ ಯೋಗ ಮತ್ತು ವಾಕಿಂಗ್ ಮುಗಿಸಿ ನನ್ನ ಮನೆಯ ಎಲ್ಲಾ ಕೆಲಸಗಳನ್ನು ಪೂರೈಸಿ ಸ್ನಾನ ಪೂಜೆ ಮಾಡಿ, ತಿಂಡಿ ತಿಂದು ಬೇಸಿಗೆ ಶಿಬಿರದ ತರಗತಿಗೆ ಓಡುತ್ತಿದ್ದೆ ಮಧ್ಯಾಹ್ನ ಅರ್ಧ ಗಂಟೆಯಷ್ಟು ಕಾಲ ಮಾತ್ರ ಮತ್ತೆ ಮನೆಗೆ ಬಂದು ಊಟ ಮಾಡಿ ಹೊರಟುಬಿಡುತ್ತಿದ್ದವಳು. ಮತ್ತೆ ಮನೆ ಕಾಣುವುದರಲ್ಲಿ ನಾಲ್ಕುವರೆ ಆಗುತ್ತಿತ್ತು. ಮತ್ತೆ ಸಂಜೆಯ ಕೆಲಸ ಮಧ್ಯದ ಒಂದೆರಡು ಗಂಟೆಗಳಲ್ಲಿ ತುಸು ವಿರಾಮ ಮತ್ತೆ ಅಡುಗೆ ಹೀಗೆ ಒಂದು ವಾರ ನಡೆಯಿತು. ಕೇವಲ ಒಂದು ವಾರದಲ್ಲಿ ನನ್ನ ಮುಖ ತೇಜೋಹೀನವಾಯಿತು. ಸ್ವಾಭಾವಿಕವಾಗಿ ಪಿತ್ತ ಗುಣ ಹೊಂದಿರುವ ನನಗೆ ಸಿಹಿ ಪದಾರ್ಥಗಳ ಸೇವನೆ ಅವಶ್ಯಕ. ಆ ದಿನ ಸಂಜೆ ನನಗೆ ಅರಿವಿಲ್ಲದೆ ಮನೆಯಲ್ಲಿದ್ದ ಮೈಸೂರು ಪಾಕ್ ಅನ್ನು ಸೇವಿಸಿದೆ. ಮುಂದಿನ ಒಂದೆರಡು ದಿನಗಳಲ್ಲಿ ಅನಿಸಿದ್ದು ಶಿಬಿರದ ಕೆಲಸ ಮತ್ತು ಮನೆಯ ಕೆಲಸಗಳ ನಡುವೆ (ಅದರಲ್ಲೂ ಮುಖ್ಯವಾಗಿ ನಮ್ಮ ಉತ್ತರಕರ್ನಾಟಕದ ಅಡುಗೆಗಳಲ್ಲಿ ರೊಟ್ಟಿ ಚಪಾತಿ ತರಕಾರಿಗಳು ಕಾಳು ಪಚಡಿ ಕಡ್ಡಾಯವಾಗಿ ಪ್ರತಿದಿನವೂ ಬೇಕೇ ಬೇಕು) ಸಿಹಿ ಅಡುಗೆ ಮಾಡುವುದು ಬೇಸಿಗೆ ಶಿಬಿರದ ಒತ್ತಡದಲ್ಲಿ ಮಾಡಿಕೊಳ್ಳಲು ಆಗಿರಲಿಲ್ಲ. ಆಗ ನನ್ನರಿವಿಗೆ ಬಂದದ್ದು, ಮಾಡಿಕೊಳ್ಳಲಾಗದ ಅನಿವಾರ್ಯತೆ ಇದ್ದಾಗ ಉತ್ತಮ ಗುಣಮಟ್ಟದ ಸಿಹಿ ತಿಂಡಿಗಳನ್ನು ನಮ್ಮ ದೇಹದ ಅಗತ್ಯತೆಗೆ ತಕ್ಕಷ್ಟು ತರಿಸಿಯಾದರೂ ತಿನ್ನಬೇಕು ಎಂದು.


ನಮ್ಮ ದೇಹವು ತನ್ನ ಅವಶ್ಯಕತೆಗಳನ್ನು ನಮಗೆ ಸಾರಿ ಸಾರಿ ಹೇಳುತ್ತದೆ ಆದರೆ ನಮಗೆ ಕೇಳುವ, ಅರಿಯುವ ತಾಳ್ಮೆ ಇರಬೇಕಷ್ಟೆ.


ನಮಗೆ ಸಿಹಿಯನ್ನು ತಿನ್ನಬೇಕೆಂಬ ಹಪಹಪಿ ಬಂದರೆ ಒಂದು ನಮ್ಮ ದೇಹದ ರಕ್ತದಲ್ಲಿರುವ ಸಕ್ಕರೆಯ ಮಟ್ಟ ಕಡಿಮೆಯಾಗಿರುತ್ತದೆ ಇಲ್ಲವೇ ನಮ್ಮ ದೇಹಕ್ಕೆ ಮೆಗ್ನೀಷಿಯಂನ ಕೊರತೆಯಾಗಿರುತ್ತದೆ. ಇದರರ್ಥ ನೀವು ಸಿಹಿಯನ್ನೇ ತಿನ್ನಬೇಕೆಂದಿಲ್ಲ. ಬದಲಾಗಿ ಹೇರಳವಾಗಿ ಬಾದಾಮಿ, ಪಿಸ್ತಾಗಳಂತಹ ಒಣ ಹಣ್ಣುಗಳನ್ನು ಕೂಡ ಸೇವಿಸಬಹುದು.


ತಮಗೆ ಚಿಪ್ಸ್ ಮತ್ತು ಉಪ್ಪಿನ,ಖಾರದ ತಿಂಡಿಗಳನ್ನು ತಿನ್ನಬೇಕೆಂಬ ಹಪಹಪಿ ಬಂದರೆ ನಮ್ಮ ದೇಹದಲ್ಲಿ ಅವಶ್ಯಕ ಎಲೆಕ್ಟ್ರೋಲೈಟ್ಗಳ ಸಮತೋಲನ ಮಟ್ಟದಲ್ಲಿ ವ್ಯತ್ಯಾಸವಾಗಿದೆ ಎಂದರ್ಥ. ಜೊತೆಗೆ ದೇಹಕ್ಕೆ ಸೋಡಿಯಂ ಮತ್ತು ಪೊಟ್ಯಾಶಿಯಂನ ಅವಶ್ಯಕತೆ ಇರುತ್ತದೆ ಎಂದರ್ಥ. ಇನ್ನು ಕೆಲವೊಮ್ಮೆ ಅತಿಯಾದ ಬೆವರುವಿಕೆ ಮತ್ತು ನೀರು ಕುಡಿಯದೆ ಇರುವಾಗ, ವಾಂತಿ ಭೇದಿ ಉಂಟಾದಾಗ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಆಗ ನಮಗೆ ಉಪ್ಪಿನಿಂದ ಕೂಡಿರುವ ಚಿಪ್ಸ್ ಮತ್ತಿತರ ಖಾರದ ತಿಂಡಿಗಳನ್ನು ತಿನ್ನಬೇಕೆಂಬ ಆಸೆ ಉಂಟಾಗುತ್ತದೆ. ಇದಕ್ಕೆ ಅತ್ಯುತ್ತಮ ಪರಿಹಾರವೆಂದರೆ ಬಾಳೆಹಣ್ಣು. ನಮ್ಮ ದೇಹಕ್ಕೆ ಅತ್ಯವಶ್ಯಕವಾದ ಪೋಷಕಾಂಶಗಳನ್ನು ಬಾಳೆಹಣ್ಣು ಒದಗಿಸುತ್ತದೆ. ಎಳನೀರು ಕೂಡ ಅತ್ಯಂತ ಉತ್ತಮ, ಆರೋಗ್ಯಕರ ಪಾನೀಯ. ಬಾಳೆಹಣ್ಣು ಮತ್ತು ಎಳನೀರುಗಳು ನಮ್ಮ ದೇಹದ ಎಲೆಕ್ಟ್ರೋಲೈಟ್ಗಳನ್ನು ಸಮತೋಲನದಲ್ಲಿ ಇರಿಸುವುದಲ್ಲದೆ ಸೋಡಿಯಂ ಮತ್ತು ಪೊಟ್ಯಾಶಿಯಂನ ಅವಶ್ಯಕತೆಗಳನ್ನು ಪೂರೈಸುತ್ತವೆ.


ಚಪಾತಿ, ರೊಟ್ಟಿ, ಬ್ರೆಡ್, ಬಿಸ್ಕೆಟ್‌ಗಳಂತಹ ಪಿಷ್ಟ ಪದಾರ್ಥಗಳನ್ನು ಒಳಗೊಂಡ ಆಹಾರವನ್ನು ತಿನ್ನಬೇಕೆಂಬ ಹಪಹಪಿ ಉಂಟಾದರೆ ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟುಗಳ ಅವಶ್ಯಕತೆ ಮತ್ತು ಕ್ರೋಮಿಯಂನ ಕೊರತೆ ಇದೆ ಎಂದು ಅರ್ಥ. ಇದರಿಂದ ನಮಗೆ ಸುಸ್ತು ಮತ್ತು ದಣಿವಾಗುವುದು ಅರಿವಿಗೆ ಬರುತ್ತದೆ. ಮಧುಮೇಹ ಪೂರ್ವದಲ್ಲಿ ಮತ್ತು ಇನ್ಸುಲಿನ್ ಪ್ರತಿರೋಧಕವಾಗಿಯೂ ಕೂಡ ಕಾರ್ಬೋಹೈಡ್ರೇಟುಗಳು ಕಾರ್ಯನಿರ್ವಹಿಸುತ್ತವೆ. ಕ್ರೋಮಿಯಂ ಮತ್ತು ಕಾರ್ಬೋಹೈಡ್ರೇಟುಗಳ ಪೂರೈಕೆಗಾಗಿ ನಾವು ಊಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮೊಸರನ್ನು, ಹಣ್ಣುಗಳನ್ನು, ಮತ್ತು ಹಸಿರು ತರಕಾರಿಗಳನ್ನು ಸೇವಿಸಬೇಕು.


ಹುಳಿಯಾದ ಉಪ್ಪಿನಕಾಯಿ ನೆಲ್ಲಿಕಾಯಿ, ಹುಣಸೆ ಹಣ್ಣಿನಂತಹ ಪದಾರ್ಥಗಳನ್ನು ತಿನ್ನಬೇಕೆಂಬ ಹಪಹಪಿ ಉಂಟಾದರೆ ನಮ್ಮ ದೇಹದಲ್ಲಿರುವ ನೀರಿನ ಪಿ.ಎಚ್. ಮಟ್ಟದಲ್ಲಿ ಅಸಮತೋಲನ ಇರುತ್ತದೆ ಎಂಬುದು ಅರಿವಿಗೆ ಬರುತ್ತದೆ. ಮತ್ತು ದೇಹದಲ್ಲಿ ಆಮ್ಲದ ಅಂಶ ಹೆಚ್ಚಾದಾಗಲೂ ಈ ರೀತಿಯ ಹಪಹಪಿ ಉಂಟಾಗುತ್ತದೆ. ಅತಿಯಾದ ಒತ್ತಡವು ಕೂಡ ಈ ರೀತಿಯ ತೊಂದರೆಗೆ ಕಾರಣವಾಗುತ್ತದೆ. ಬೆಚ್ಚಗಿನ ನೀರಿನಲ್ಲಿ ಒಂದು ಹೋಳು ನಿಂಬೆಹಣ್ಣಿನ ರಸವನ್ನು ಹಾಕಿ ಸೇವಿಸುವುದು ಉತ್ತಮ ಪರಿಹಾರವಾಗಿ ತೋರುತ್ತದೆ.


ಕೊನೆಯದಾಗಿ ಗರ್ಭಿಣಿಯರು ಕೆಲ ವಿಶಿಷ್ಟ ವಸ್ತುಗಳನ್ನು ತಿನ್ನುವುದನ್ನು ನೀವು ಕೇಳಿರಬಹುದು, ಚಾಕ್ ಪೀಸ್, ಬಳಪ, ಐಸ್ ಕ್ಯೂಬ್ ಮತ್ತು ಹಳೆಯ ಜಂತಿ ಮನೆಗಳಲ್ಲಿರುವ ಕಟಗು ಎಂಬ ವಸ್ತುಗಳನ್ನು ಸೇವಿಸುತ್ತಾರೆ. ಎಷ್ಟೋ ಚಿಕ್ಕ ಮಕ್ಕಳು ಕೂಡ ಈ ವಸ್ತುಗಳನ್ನು ತಿನ್ನುತ್ತಾರೆ. ಅದು ಆ ವ್ಯಕ್ತಿಯಲ್ಲಿರುವ ಐರನ್ ಇಲ್ಲವೇ ಕ್ಯಾಲ್ಸಿಯಂನ ಕೊರತೆಯನ್ನು ಸೂಚಿಸುತ್ತದೆ. ಆದ್ದರಿಂದಲೇ ಗರ್ಭಿಣಿಯರಿಗೆ ಮತ್ತು ಬಾಣಂತಿಯರಿಗೆ ಕಡ್ಡಾಯವಾಗಿ ಐರನ್ ಮತ್ತು ಕ್ಯಾಲ್ಸಿಯಂಗಳ ಮಾತ್ರೆಗಳನ್ನು ನೀಡುತ್ತಾರೆ. ರಜೋ ನಿವೃತ್ತಿ ಹೊಂದಿರುವ ಹೆಣ್ಣು ಮಕ್ಕಳಿಗೆ ಮತ್ತು ಎಲ್ಲರು ಇದ್ದರಿಗೆ ಕ್ಯಾಲ್ಸಿಯಂನ ಪೂರೈಕೆ ಅತ್ಯಗತ್ಯವಾಗಿದೆ.


ಆದ್ದರಿಂದ ಸ್ನೇಹಿತರೆ ಈ ರೀತಿಯ ಕ್ರೇವಿಂಗ್‌ಗಳನ್ನು ಯಾವತ್ತು ನಿರ್ಲಕ್ಷಿಸಬೇಡಿ.... ಅವು ನಮ್ಮ ದೇಹಕ್ಕೆ ಬೇಕಾದ ಅವಶ್ಯಕತೆಗಳನ್ನು ಹೇಳುತ್ತಿರಬಹುದು. ಜೊತೆಗೆ ಎಚ್ಚರ ಕೂಡ ವಹಿಸಿ ಕೆಲವೊಮ್ಮೆ ತಿನ್ನಬೇಕೆಂಬ ಚಪಲಕ್ಕೂ ಕ್ರೇವಿಂಗ್ ಉಂಟಾಗಬಹುದು. ಇವೆರಡರ ಮಧ್ಯದ ವ್ಯತ್ಯಾಸವನ್ನು ಅರಿತುಕೊಳ್ಳಿ.


- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top