ಜಯಚಾಮರಾಜೇಂದ್ರ ಒಡೆಯರ ಗಣಪತಿ ಕುರಿತ ಕೃತಿಗಳ ಮಾಲೆ- ಕರ್ನಾಟಕ ಸಂಗೀತಕ್ಕೆ ಕೊಡುಗೆ

Upayuktha
0


 

ಭಾರತೀಯ ಸಂಸ್ಕೃತಿಯ ಪ್ರತೀಕಗಳಾದ ಶಿಲ್ಪ, ಸಾಹಿತ್ಯ, ಸಂಗೀತ, ಧರ್ಮ ಹಾಗೂ ತತ್ವಶಾಸ್ತ್ರಗಳ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅತ್ಯಮೂಲ್ಯವಾದುದು. ಆಳಿದ ರಾಜರ ವಿಶಾಲ ಮನೋಧರ್ಮ, ಸುದೀರ್ಘ ಪರಂಪರೆ, ಇವೆಲ್ಲವೂ ಕರ್ನಾಟಕ ಮಹತ್ತರ ಪಾತ್ರ ವಹಿಸಲು ಸಾಧ್ಯವಾಯಿತು.


ವಿಜಯನಗರ ಸಾಮ್ರಾಜ್ಯದಿಂದ ಮೈಸೂರು ಅರಸು ವಂಶಕ್ಕೆ ದೊರಕಿದ ಪುರಾತನ ರತ್ನ ಸಿಂಹಾಸನದ ಮೇಲೆ ಸುಮಾರು 600 ವರ್ಷಗಳ ಕಾಲ ರಾಜ್ಯವಾಳಿದ ಯದುವಂಶದ ಅರಸರಲ್ಲಿ 25ನೇ ಮತ್ತು ಕೊನೆಯ ಅರಸರಾಗಿ ಖ್ಯಾತಿವೆತ್ತವರು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು.


ನಾಲ್ವಡಿರವರ ಕಾಲದಿಂದ ಮೈಸೂರು ಅರಮನೆಯ ಸಾಂಸ್ಕೃತಿಕ ಚಟುವಟಿಕೆಗಳು ಉತ್ತುಂಗ ಶಿಖರಕ್ಕೇರಿದ ಕಾಲ; ಅರಮನೆಯಲ್ಲಿ ಪ್ರತಿದಿನವೂ ಎಂಬಂತೆ ವಿಶೇಷ ಪೂಜೆ, ಸಮಾರಂಭಗಳು, ದಸರಾ ಉತ್ಸವಾಂಗಗಳಲ್ಲಿ ಸಂಗೀತೋತ್ಸವಗಳಿಲ್ಲದ ಕಾರ್ಯಕ್ರಮವೇ ಇಲ್ಲ. ಈ ಎಲ್ಲಾ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ಚಿಕ್ಕವರಾದ ಜಯಚಾಮರಾಜೇಂದ್ರ ಒಡೆಯರು ಕೇಳಲೇಬೇಕಾಗಿತ್ತು. ಸಂಗೀತ ಕ್ಷೇತ್ರದಲ್ಲಿ ಸಾಧಿಸಿದ ಸಾಧನೆಗೆ ಕಾರಣ- ಅವರ ನಿರಂತರ ಕೀರ್ತಿ ಹಾಗೂ ಅವರ ಪೂರ್ವಜರ ಸಂಸ್ಕಾರದ ಸಹಯೋಗದಿಂದ ಮಾತ್ರ ಸಾಧ್ಯವಾದುದಷ್ಟೆ.


ಒಡೆಯರಿಗೆ ಸಂಗೀತ ಶಾಸ್ತ್ರದಲ್ಲಿ ಇದ್ದ ಪ್ರೌಢಿಮೆಯ ಬಗ್ಗೆ ಹೇಳುವುದಾದರೆ, ಅವರದೇ ಆದ ಯೋಚನಾ ಸರಣಿ, ವಿಚಾರಗಳಲ್ಲಿ ಖಚಿತತೆ ಕಂಡು ಬರುತ್ತದೆ.


ಶ್ರೇಷ್ಠ ವಾಗ್ಗೇಯಕಾರರೆನಿಸಲು ಕೇವಲ ಇದೊಂದೇ ಸಾಕೆ? ಇಲ್ಲಿ ಒಡೆಯರ್ ನೆರವಿಗೆ ಬಂದದ್ದು ಅವರ ಸಂಸ್ಕೃತ ಭಾಷೆಯಲ್ಲಿ ಪ್ರಭುತ್ವ. ಎಲ್ಲಕ್ಕೂ ಮುಕುಟಪ್ರಾಯವಾಗಿ ` ಶ್ರೀ ವಿದ್ಯಾ ' ಉಪಾಸನೆ.


ಶ್ರೀ ಒಡೆಯರ್‌ ಅವರು ವಾಗ್ಗೇಯ ಪ್ರಪಂಚಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆ ಎಂದರೆ 94 ಕೃತಿಗಳು. ಕೆಲ ಸಂದರ್ಭಗಳಲ್ಲಿ ಮಾತ್ರ ಕೆಲವರ ಪ್ರಭಾವ ಮುಖ್ಯ ಪಾತ್ರ ವಹಿಸಿರುವುದು ಕಂಡು ಬಂದರೂ ಇವನ್ನೆಲ್ಲಾ ಮೀರಿ ಬೆಳೆಯುತ್ತಿರುವ ಒಡೆಯರ್ ಕೃತಿಗಳು ಕರ್ನಾಟಕ ಸಂಗೀತಕ್ಕೆ ವಾಗ್ಗೇಯ ಪ್ರಪಂಚಕ್ಕೆ ಒಂದು ದೊಡ್ಡ ನಿಧಿ ಎಂದೆನಿಸಿದೆ.


ಸಕಲ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ಪ್ರಪ್ರಥಮವಾಗಿ ಮಹಾಗಣಪತಿಯನ್ನು ನೆನೆದು ಪೂಜಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ವಿಶೇಷ. ಈ ನಿಟ್ಟಿನಲ್ಲಿ ಸಂಗೀತವು ಹೊರತಾಗಿಲ್ಲ.


ಶ್ರೀ ಒಡೆಯರು 11 ಗಣಪತಿ ಕೃತಿಗಳನ್ನು ರಚಿಸಿ, ತಮ್ಮ ವಿಶೇಷತೆಯನ್ನು ತೋರಿದ್ದಾರೆ. 


ಗಣಪತಿ ಕೃತಿಗಳ ಗುಚ್ಛವಾಗಿ ಈ 11 ಕೃತಿಗಳ ಅಧ್ಯಯನ ಮಾಡಿದಾಗ, ಹಲವಾರು ಅಂಶಗಳು ಬೆಳಕಿಗೆ ಬರುತ್ತವೆ. ಅವುಗಳೆಂದರೆ:

1) ಗಣಪತಿ ಪರ ರಚನೆಯ ಉದ್ದಿಶ್ಯವನ್ನು ಊಹಿಸಿದರೆ, ಗಣಪತಿಯ ದೂರ್ವಾಯುಗ್ಮ ಪೂಜೆಯಲ್ಲಿನ ನಾಮಗಳಂತೆ ಈ ಕೃತಿಗಳನ್ನು ರಚಿಸಿದ್ದಾರೆಯೋ ಎನಿಸುತ್ತದೆ.

2) ಒಡೆಯರು ತಮ್ಮ ರಚನೆಗಳಲ್ಲಿ ಅಂಶಗಳನ್ನೆಲ್ಲಾ ಬಳಸಿರುವ ಕಾರಣ, ಅವರು `ಗಣಪತ್ಯ' ದಲ್ಲಿ ನಿಷ್ಣಾತರು.

ಸ್ಕಂಧ ಪುರಾಣ, ಮುದ್ಗಲ ಪುರಾಣ, ಗಣೇಶ ಪುರಾಣ, ಅಥರ್ವ ಶೀರ್ಷೆ, ಮಂತ್ರ-ತಂತ್ರ, ಆಗಮ-ಯೋಗಗಳಲ್ಲಿ ಪ್ರಾವೀಣ್ಯ, ಮೇಲಾಗಿ ಅದ್ವೈತ ಸಿದ್ಧಾಂತಗಳ ನಿರಂತರ ಅಧ್ಯಯನ.

ಅರಮನೆಯಲ್ಲಿ ಎಲ್ಲಾ ದ್ವಾರಗಳಲ್ಲಿಯೂ ಗಣಪತಿಯ ವಿಗ್ರಹವಿದೆ (ಉತ್ತರ, ದಕ್ಷಿಣ, ಬ್ರಹ್ಮಪುರಿ).    ಎಲ್ಲಕ್ಕಿಂತ ಮುಖ್ಯವಾದುದು `ಆತ್ಮವಿಲಾಸ ಗಣಪತಿ'. ಇದರ ವಿಶೇಷವೆಂದರೆ 1892 ರಲ್ಲಿ ಹಳೆಯ ಅರಮನೆ ಬೆಂಕಿಗಾಹುತಿಯಾದರೂ, ಅದಕ್ಕೆ ಹೊಂದಿಕೊಂಡಿದ್ದ ಈ ಆತ್ಮವಿಲಾಸ ಗಣಪತಿ ವಿಗ್ರಹಕ್ಕೆ ಯಾವ ಧಕ್ಕೆಯೂ ಆಗದೆ ಉಳಿದದ್ದು ಆಶ್ಚರ್ಯ. 300 ಕ್ಷೇತ್ರಗಳಿಂದ ತಂದ 450 ಸಾಲಿಗ್ರಾಮಗಳಿಂದ ರೂಪಿತವಾಗಿರುವ ಈ ಭವ್ಯ ವಿಗ್ರಹ ಕೆಂಪು ಬಣ್ಣದ್ದು. ಆದರೂ ಸೌಮ್ಯ. ಇದು ಒಡೆಯರ್‍ಗೆ ಪ್ರೇರಣೆ ನೀಡಿರಬಹುದು.  

3) ನಂಜನಗೂಡಿನ ಹೊರ ಪ್ರಾಕಾರ ದಕ್ಷಿಣ ಭಾಗದಲ್ಲಿ 32 ರೀತಿಯ ಗಣಪತಿ ವಿಗ್ರಹಗಳಿವೆ. ಬಹುಶಃ ಇವೆಲ್ಲದರ ಪ್ರಭಾವ್ಯ ಇದ್ದಿರಬಹುದು.


ಶ್ರೀ ಮಹಾಗಣಪತಿಂ ಭಜೇಹಂ

ಒಡೆಯರ್ ರಚಿಸಿದ ಮೊದಲ ಕೃತಿ. ಇದು ವೀರ ರಸ ಪ್ರಧಾನವಾದ ಅಠಾಣ ರಾಗದಲ್ಲಿ ಇದರ ರಚನೆ. ಗಣಪತಿ ತತ್ವವನ್ನು ಅರಿತಿದ್ದ ಒಡೆಯರು ಪಂಚಭೂತಗಳೇ ಗಣಪತಿ ಎನ್ನುವ ಅಭಿಪ್ರಾಯವನ್ನು ಸ್ಪಷ್ಟ ಪಡಿಸಿದ್ದಾರೆ. 


ಗಂ ಗಣಪತೆ ನಮಸ್ತೆ

ಗಂ ಗಣಪತಯೇ ನಮಃ ಎಂದು ಏಕವಿಂಶತಿ (21) ದೂರ್ವಾ (ಗರಿಕೆ) ಯುಗ್ಮ ಪೂಜೆ ಮಾಡುವುದು ಸಂಪ್ರದಾಯ. ಈ ಸಂಪ್ರದಾಯವನ್ನು ಒಡೆಯರ್‍ರವರು ಸಂಗೀತಯುಕ್ತ ಪೂಜೆಯಾಗಿಸಿದ್ದಾರೆ. ಈ ಕೃತಿಯ ಮೂಲಕ ಅದಕ್ಕೆಂದೇ ರಾಗ ದೂರ್ವಾಂಕಿಯನ್ನೇ ಆರಿಸಿದ್ದಾರೆ. 


ದೂರ್ವಾಂಕಿ ರಾಗವನ್ನು ಆರಿಸುವಾಗ ಪುರಾಣದಲ್ಲಿ ಉತ್ತಮವಾದ ಒಂದು ಕಥೆ ನೆನಪಿಗೆ ಬರುತ್ತದೆ. ಶಿವನ ಪತ್ನಿಯಾದ ಪಾರ್ವತಿ ಮತ್ತು ದೂರ್ವಾದೇವಿ ಇಬ್ಬರಿಗೂ ವಿರಸ ಮೂಡಿ, ` ತೃಣ ಸಮಾನಳಾಗು ' ಎಂಬ ಪಾರ್ವತಿಯ ಶಾಪಕ್ಕೆ ದೂರ್ವಾದೇವಿ ಗುರಿಯಾಗುತ್ತಾಳೆ. ಆಗ ಗಣಪತಿಯನ್ನು ಕುರಿತು ತಪಸ್ಸು ಮಾಡಿದಾಗ, ದೂರ್ವಾದೇವಿಗೆ ನೀನಿಲ್ಲದೇ ನನ್ನ ಪೂಜೆ ಅಪೂರ್ಣ ಎನ್ನುವ ಗಣಪತಿಯ ಆಶ್ವಾಸನೆಯ ಹಿನ್ನೆಲೆ ಈ ರಾಗವನ್ನು ಆರಿಸಲು ಪ್ರೇರಣೆ ನೀಡಿದ್ದಿರಬಹುದು.


ಗಂ ಗಣಪತಿ ಸದಾ ನಮಸ್ತೆ

ಇದು ಗಣಪತಿ ಸ್ತುತಿಯೇ ಆಗಿದ್ದರೂ ಅದ್ವೈತ ತತ್ವದ ಸಾರವನ್ನು ಈ ಕೃತಿಯಲ್ಲಿ ಅಳವಡಿಸಿದ್ದಾರೆ. ನಾಹಂ – ಜೀವಃ ಅಹಂ ಬ್ರಹ್ಮಾಸ್ಮಿ ` ಸೋಹಂ ಭಾವಃ ' ಇವುಗಳು ಕೃತಿಯಲ್ಲಿ ಸಹಜವಾಗಿ ಮೂಡಿ ಬಂದಿವೆ. 


ಗಣಪತಿ ಬೀಜಾಕ್ಷರದ ` ಗ ' ಕಾರವನ್ನು ಬಹಳ ಚೆನ್ನಾಗಿ ಬಳಸಿಕೊಂಡಿದ್ದಾರೆ. ಸಂಗೀತ, ಸಾಹಿತ್ಯಗಳನ್ನು ಸರಿಯಾದ ಉಸಿರಿನ ಹಿಡಿತವಿದ್ದು ಹಾಡಿದರೆ ಮಾತ್ರ, ಈ ಕೃತಿಯ ನಿಜವಾದ ಸೊಬಗು ಅರಿವಾಗುತ್ತದೆ. 


ಲಂಬೋದರ ಪಾಹಿಮಾಂ ಹರನಯನಾನಂದಕರ

ಒಡೆಯರ ಕ್ಷೇತ್ರ ಕೃತಿಗಳಲ್ಲಿ ಗಣಪತಿ ಪರವಾದ ಒಂದು ವಿಶೇಷ ಕೃತಿಯಾಗಿದೆ.  ದುಂಡೀ ಕ್ಷೇತ್ರದ ಭಾರ್ಗವೀ ತಟ ನಿವಾಸಿಯಾದ ಗಣಪತಿಯನ್ನು ಕುರಿತಾದ ಕೃತಿ ಇದಾಗಿದೆ. 


ರಾವಣನಿಂದ ಉಪಾಯದಿಂದ ಶಿವನ ಆತ್ಮಲಿಂಗವನ್ನು ತನ್ನಲ್ಲಿರಿಸಿಕೊಂಡ ಪುರಾಣದ ಒಂದು ಪ್ರಸಂಗವನ್ನು ನಮ್ಮ ಮುಂದಿಡುತ್ತಾರೆ ಒಡೆಯರು. 


ಅನಂತಾನಂತ ಫಲಗಳನ್ನು ನೀಡುವುದರಲ್ಲಿ ಪ್ರಸಿದ್ಧನಾದ ಲಂಬೋದರನನ್ನು ಪ್ರಾಚೀನವಾದ ಹೆಚ್ಚಾಗಿ ಪ್ರಚಲಿತ ವಿಲ್ಲದ ನಾರಾಯಣಗೌಳ ರಾಗದಲ್ಲಿ ವರ್ಣಿಸಿದ್ದಾರೆ.


ಗಜಾನನಂ ಗಣಪತಿಂ ಭಜೇಹಂ || ಕುಮಾರಾಗ್ರಜಂ ಕಲಾಸದನಂ |

ಒಡೆಯರಿಗೆ ತೋಡೀರಾಗವೆಂದರೆ ಬಲು ಪ್ರೀತಿ. ಆಸ್ಥಾನದಲ್ಲಿ ಯಾವ ವಿದ್ವಾಂಸನೇ ಆಗಲೀ ತೋಡಿಯನ್ನು ಹಾಡಿ ನುಡಿಸುತ್ತಿದ್ದಾಗ, ಅವರಿಗೆ ಆಗುತ್ತಿದ್ದ ಆನಂದ ಅಸದಳ. ` ಒಬ್ಬ ಕಲಾವಿದ ತೋಡಿಯನ್ನು ಸಮರ್ಥವಾಗಿ ಹಾಡಿದರೆ, ಅದೇ ಅವನ ವಿದ್ವತ್ತಿಗೆ ಅಳತೆಗೋಲು ' ಎಂಬುದಾಗಿ ಹೇಳುತ್ತಿದ್ದರು. ಅದಕ್ಕೆ ಪೂರಕವಾಗಿ ಹನುಮತೋಡಿಯಲ್ಲೇ ಕೃತಿ ರಚನೆ ಮಾಡಿದ್ದಾರೆ. ಇದೊಂದು ಅದ್ಭುತ ರಸಯುತ ರಾಗ. ಈ ರಾಗವನ್ನು ಪ್ರಯೋಗಿಸುವಾಗ ಬಳಸಲಾಗುವ ಗಮಕಗಳ ಬಗ್ಗೆ ಎಷ್ಟು ಅರಿತರೂ ಕಮ್ಮಿಯೇ. ತೋಡಿ ತೋಡಿದಷ್ಟು ಆಳಕ್ಕೆ ಹೋಗುತ್ತದೆ. ಗಣಪತಿಯೂ ತತ್ವ ಸ್ವರೂಪಿ. ಕ್ಷಿತಿಯಿಂದ ಹಿಡಿದು ಶಿವಾಂತದವರೆಗೂ ಬರುವ 36 ಮಹತತ್ವ.   ಈ ಎಲ್ಲದರ ಸ್ವರೂಪವೇ ಗಣಪತಿ. 


` ಭಜರೇ ರೇ ಮಾನಸ ಸಿದ್ಧಿ ವಿನಾಯಕಂ ಸದಾ '

ಒಡೆಯರಿಗೆ ಅಪರೂಪ ರಾಗಗಳ ಬಗ್ಗೆ ಅಪಾರವಾದ ಒಲವು. ಕೆಲವೊಂದು ರಾಗಗಳು ಗ್ರಂಥಸ್ಥವಾಗಿದ್ದು, ಯಾರಿಂದಲೂ ಬಳಸಲ್ಪಡದೇ ಇರುವಂತಹದು. ಇಂತಹ ರಾಗಗಳ ಪಟ್ಟಿಗೆ ಸೇರುವಂತಹದು - ಭಾನುಚಂದ್ರಿಕೆ. ಒಡೆಯರ ಕ್ರಿಯಾಶಕ್ತಿಗೆ ಈ ಕೃತಿ ಸಾಕ್ಷಿಯಾಗಿದೆ. ಭಾನುಚಂದ್ರಿಕೆ – ಗಣಪತಿಯ ಕಣ್ಣುಗಳು ಸೂರ್ಯಚಂದ್ರರಂತೆ ತೀಕ್ಷ್ಣವಾಗಿರುವುದು ಇದರ ಒಳ ಅರ್ಥ. 


ಪರಿಪಾಹಿಮಾಂ ಸಿದ್ಧಿ ವಿನಾಯಕ 

ಶೃಂಗಾರ, ಭಕ್ತಿ ರಸ ಪ್ರತಿಪಾದಿತ ರಾಗವಾದ ವಕುಶಾಭರಣ ರಾಗವನ್ನು ಬಳಸಿರುವ ಹಿನ್ನೆಲೆ ಚಿಕ್ಕದಾದರೂ ಚೊಕ್ಕವಾದ ಈ ಕೃತಿಯಲ್ಲಿ ಬಕುಳ ನಾಗಕೇಸರ ಪುಷ್ಪ, ಕುಂಡಲಿನೀ ಶಕ್ತಿಯ ಸಂಕೇತ ಸರ್ಪ, ಅದರ ಜಾಗ ಓಂಕಾರ. ಶ್ರೀ ವಿದ್ಯಾ ಉಪಾಸಕರಾದ ಒಡೆಯರು ಇದರ ಅಂತರಾರ್ಥವನ್ನು ತಿಳಿದೇ ಈ ರಾಗವನ್ನು ಆಯ್ದಿದ್ದಾರೆ.



ಪಾಹಿಮಾಂ ಶ್ರೀ ಪಂಚಮಾತಂಗ ವದನ ಗಣಪತೇ

ಷೋಡಶ ಗಣಪತಿ ರೂಪಗಳಲ್ಲಿ ಪಂಚಮಾತಂಗ ಮುಖ ಗಣಪತಿಯೂ ಒಂದು. ಹೇರಂಬ ಗಣಪತಿಯೆಂದೂ ಮತ್ತೊಂದು ಹೆಸರಿದೆ. ಗಣಪತಿಯು ಅಷ್ಟೋತ್ತರದಲ್ಲಿ ಸುಪ್ರದೀಪಾಯನಮಃ ಎಂಬುದೊಂದು ನಾಮ. ಒಡೆಯರು ತಮ್ಮ ಕಲ್ಪನಾ ಶಕ್ತಿಯಿಂದ ಈ ರಾಗವನ್ನು ಗಣಪತಿಗೆ ಮೀಸಲಾಗಿಸಿದ್ದಾರೆ.


ಇಲ್ಲಿ ಗಣಪತಿಯ ಬಾಹ್ಯರೂಪ ವರ್ಣನೆಗಿಂತಲೂ ಗುಣವಿಶೇಷಗಳಿಂದ ಕೂಡಿದ ಆಂತರಿಕ ಸೌಂದರ್ಯವನ್ನು ವರ್ಣಿಸಿದ್ದಾರೆ. 


ಚಿಂತಯಾಮಿ ಸತತಂ ಹಸ್ತಿವದನಂ

ಈ ಕೃತಿಯಲ್ಲಿ ಬಳಸಿರುವ ಇಕ್ಷುವನ್ನು ಅಂದರೆ ಕಬ್ಬನ್ನು ಹಿಡಿದಿರುವಂಥವನು ಗಣಪತಿ – ಕಬ್ಬು ಜ್ಞಾನದ ಪ್ರತೀಕ. ಅದನ್ನು ಹಿಡಿದಿರುವ ಗಣಪತಿಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ತತ್ವದರ್ಶನ ಆಗುವುದು ಜ್ಞಾನದಿಂದ. ಜ್ಞಾನ ಬರುವುದು ವೀರತೆಯ ಸಂಕೇತ. ಒಡೆಯರಿಗೆ ಸಹಜವಾದ ವೀರತ್ವವಿದ್ದು, ವೀರವಸಂತರಾಗದ ಮೂಲಕ ಹೊರಹೊಮ್ಮಿದೆ. ಸಾಹಿತ್ಯ ದೃಷ್ಟಿಯಿಂದ ಅತ್ಯುತ್ತಮವಾಗಿರುವ ಈ ಕೃತಿಯೂ ಸಂಗೀತದ ದೃಷ್ಟಿಯಿಂದಲೂ ಆ ರಾಗದ ಸೂಕ್ಷ್ಮತೆಗೆ ತಕ್ಕಂತೆ ವಿಶೇಷವಾಗಿದೆ.


ಚಿಂತಯ ಸದಾ ವಾರಣ ವದನಂ

ಶೃಂಗಾರ ಮತ್ತು ವೀರ ರಸ ಪ್ರತಿಪಾದಕವಾದ `ಸಿಂಧುರಾಮಕ್ರಿಯಾ' ರಾಗದ ಈ ಕೃತಿಯಲ್ಲಿ ಲಾಲಿತ್ಯವಿದೆ. ಸುಲಲಿತವಾಗಿ ಹರಿದಾಡುವಂತಹ ಓಟವಿದೆ. 


ಸಗುಣಗಳ ಗಣಿ ಗಣಪತಿ. ಅಂತಹ ಅನಂತ ಗುಣಗಳ ಆಗರವಾಗಿರುವ ಅವನು ಶ್ರೀಗುರು. ಶ್ರೀಗುರುವಿನ ಸ್ಥಾನವನ್ನು ಪಡೆದ ಮೇಲೆ ಈ ಭವದ ಎಲ್ಲಾ ವ್ಯವಹಾರಗಳ ನಿವಾರಣೆ. ಕೊನೆಗೆ ಉಳಿಯುವುದೇನು. ಆನಂದಕರವಾದ ಮೋಕ್ಷ ಪದ. ಈ ಉದ್ದೇಶವನ್ನು ಕೃತಿಯಲ್ಲಿ ಸಾರಿ ಸಾರಿ ಹೇಳಿದ್ದಾರೆ. ಹೀಗೆ ಬಿಂದು - ಸಿಂಧುವಾಗುವಂತೆ ಸಿಂಧುರಾಮಕ್ರಿಯಾ ರಾಗದಲ್ಲಿ ಈ ಗಣಪತಿಯ ಕೃತಿಯ ಮೂಲಕ ಸಾಧಿಸಿ ನಮ್ಮನ್ನು ಸಾಧಿಸುವಂತೆ ಪ್ರೇರೇಪಿಸಿದ್ದಾರೆ. 


ಮಹಾ ಗಣಪತಿ ಭಜೇಹಂ

ಸಪ್ತಸ್ವರಗಳ ಮೂಲವನ್ನು ಪ್ರಾಣಿಪಕ್ಷಿಗಳ ಕೂಗಿನಿಂದ ಆರಿಸಲಾಗಿದೆ ಎನ್ನುವುದು ಸಂಗೀತದ ಇತಿಹಾಸದಿಂದ ತಿಳಿದು ಬರುತ್ತದೆ. ಅದರಲ್ಲಿ ನಿಷಾದ ಸ್ವರವನ್ನು ಆನೆಯ ಝೇಂಕಾರದಿಂದ ಆಯ್ದುಕೊಳ್ಳಲಾಗಿದೆ. ಅಂತೆಯೇ ಒಡೆಯರು ವಾರಣವದನನನ್ನು ನಿಷಾದದಿಂದಲೇ ಪ್ರಾರಂಭ ಮಾಡಿ ಸ್ತುತಿಸಿದ್ದಾರೆ. 


ಇಲ್ಲಿ ಗಣಪತಿಯನ್ನು ` ಶಿಲ್ಪಶಾಸ್ತ್ರ ವಿಶಾರದ ' ಎಂಬುದಾಗಿ ವರ್ಣಿಸಿದ್ದಾರೆ. ಇದಕ್ಕೆ ಮೂಲ ಕಾರಣ ಈ ಕೃತಿಯಲ್ಲಿ ಗಣಪತಿ ನಮನದೊಂದಿಗೆ ಗುರುವಿಗೂ ನಮನ ಸಲ್ಲಿಸಿದ್ದಾರೆ. ಶಿಲ್ಪಿ ಸಿದ್ಧಲಿಂಗಸ್ವಾಮಿಗಳು ಒಡೆಯರ ಗುರುಗಳಾಗಿದ್ದು, ಶಿಲ್ಪಶಾಸ್ತ್ರದಲ್ಲಿ ಬಲು ದೊಡ್ಡ ಹೆಸರು. ಹಾಗಾಗಿ ಅಪರೋಕ್ಷವಾಗಿ ಗುರುವಾಗಿ ವಂದಿಸಿದ್ದಾರೆ. ಅಂತೆಯೇ ಶೀಲಕ್ಕೆ ಬಹು ದೊಡ್ಡ ಸ್ಥಾನವನ್ನು ಗಣಪತಿಯ ಮೂಲಕ ಒಡೆಯರು ಕೊಡಿಸಿದ್ದಾರೆ.


ಒಡೆಯರಿಗೆ ಎಲ್ಲಾ ರೀತಿಯ ಗಾಯತ್ರಿ ಮಂತ್ರದಲ್ಲೂ ಅಧ್ಯಯನವಿತ್ತು ಎಂಬುದು ತಿಳಿದು ಬರುತ್ತದೆ. ಆರು ಚಕ್ರಗಳ ಗಣಪತಿಯನ್ನು ಷಟ್ಪದ ಜಪ ಚಕ್ರ ನಿವಾಸಿಯಾಗಿ ಗಣಪತಿಯನ್ನು ವರ್ಣಿಸಿದ್ದಾರೆ. ಶಿವಶಕ್ತಿಯರ ಮಕ್ಕಳಾದ ಗಣಪತಿ, ಷಣ್ಮುಖನನ್ನು ಸೇರಿಸಿ, ಷಡಾಧಾರವನ್ನಾಗಿಸಿದ್ದಾರೆ.


ಹೀಗೆ ಎಲ್ಲಾ ಕೃತಿಗಳಲ್ಲೂ ಒಂದೊಂದು ರೀತಿಯ ವಿಶೇಷವನ್ನಿಟ್ಟು ರಚಿಸಿರುವ ಒಡೆಯರ ವಾಗ್ಗೇಯ ಶಕ್ತಿಗೆ ಕಲ್ಪನಾ ಶಕ್ತಿಗೆ ನಮೋನ್ನಮಃ


ಷಟ್ಪದ ಜಪ ಚಕ್ರ:- ಪ್ರತಿಯೊಂದು ಮಂತ್ರಕ್ಕೂ ಆರು ಅಂಗಗಳಿವೆ. ಆ ಮಂತ್ರಕ್ಕೆ ಒಬ್ಬ ಋಷಿ. (1) ಒಂದು ಛಂದಸ್ಸು  (2) ಒಂದು ದೇವತೆ  (3) ಒಂದು ಬೀಜ ಮಂತ್ರ  (4) ಒಂದು ಶಕ್ತಿ  (5) ಒಂದೊಂದು ಮಂತ್ರದಲ್ಲೂ ಅಡಗಿರುವ ಚೈತನ್ಯ ಹೊರಹೊಮ್ಮುವಂತೆ ಹಿಡಿದಿಟ್ಟಿರುವುದು ಕೀಲಕ  (6) ಇದೇ ಷಟ್ಪದ ಜಪ ಚಕ್ರ.

ಪೂರಕ ಮಾಹಿತಿ : ಸಂಗೀತ ವಿದುಷಿ ಡಾ.ಸುಕನ್ಯ ಪ್ರಭಾಕರರವರ ಕೃತಿ – 

ಗಣೇಶನ ಕುರಿತು ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ಇದೇ ಲೇಖಕರ ‘ನೂತನ ಕೃತಿ - ವಿಶ್ವವಂದಿತ ವಿನಾಯಕ’ ನೋಡಬಹುದು .www. vishwavinayaka108.blogspot.com


-ಡಾ. ಗುರುರಾಜ ಪೋಶೆಟ್ಟಿಹಳ್ಳಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top