ಎರಡನೇ ಮಹಾಯುದ್ಧದ ಸಮಯ. ಅಂತರಾಷ್ಟ್ರೀಯ ಹಾಕಿ ಪಂದ್ಯಾವಳಿಯೊಂದು ನಡೆಯುತ್ತಿತ್ತು. ಅದರಲ್ಲಿ ಆಡುತ್ತಿದ್ದ ಓರ್ವ ಭಾರತೀಯ ಆಟಗಾರನ ಆಟದ ವೈಖರಿಯನ್ನು ಕಂಡು ಅಂದಿನ ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಆತನಿಗೆ ಕರೆ ಕಳುಹಿಸಿದನು. ಕೊಂಚ ಅಳುಕಿನಿಂದಲೇ ಹಿಟ್ಲರ್ ನನ್ನು ಕಾಣಲು ಕ್ರೀಡಾಂಗಣದ ಕಚೇರಿಗೆ ಹೋದ ಆ ವ್ಯಕ್ತಿಯನ್ನು ಹಿಟ್ಲರ್ ಅತ್ಯಂತ ಗೌರವದಿಂದ ನಡೆಸಿಕೊಂಡು ಜರ್ಮನಿಯ ಪರವಾಗಿ ಆಟವಾಡಿದರೆ ಆತನಿಗೆ ಉತ್ತಮ ಭವಿಷ್ಯ, ಜರ್ಮನಿಯ ಪೌರತ್ವ ಮತ್ತು ಜರ್ಮನಿಯ ಸೇನೆಯಲ್ಲಿ ಕೊಲೋನೆಲ್ ಸ್ಥಾನಮಾನಗಳನ್ನು ನೀಡುವ ಭರವಸೆ ನೀಡಿದನು. ಆದರೆ ತಾಯಿನಾಡಿನ ಮೇಲಿನ ಅತೀವ ಪ್ರೀತಿ ಮತ್ತು ದೇಶಭಕ್ತನಾದ ಆ ಹಾಕಿ ಆಟಗಾರ ಹಿಟ್ಲರ್ ನ ಆಹ್ವಾನವನ್ನು ತಿರಸ್ಕರಿಸಿದನು. ಬೇರೆ ಯಾರಾದರೂ ಆ ವ್ಯಕ್ತಿಯ ಜಾಗದಲ್ಲಿ ಇದ್ದರೆ ಹಿಟ್ಲರ್ ತನ್ನನ್ನು ಬದುಕುಳಿಸಲಾರ ಎಂಬ ಭಯದಿಂದಲಾದರೂ ಆತನ ಆಹ್ವಾನವನ್ನು ಒಪ್ಪಿಕೊಳ್ಳುತ್ತಿದ್ದರೇನೋ! ಆದರೆ ನಿರ್ಭಯದಿಂದ ಮತ್ತು ಅಷ್ಟೇ ವಿನಯದಿಂದ ಹಿಟ್ಲರನ ಆಹ್ವಾನವನ್ನು ತಿರಸ್ಕರಿಸಿದ ಆ ವ್ಯಕ್ತಿ ಮುಂದೆ ತಾಯ್ನಾಡಿನ ಗೆಲುವಿಗಾಗಿ ಅಹರ್ನಿಶಿಯಾಗಿ ಆಡಿ ತಾಯಿ ಭಾರತಿಯ ಮಡಿಲಿಗೆ ಚಿನ್ನದ ಪದಕವನ್ನು ತಂದಿತ್ತನು. ಆತನೇ ಇಡೀ ವಿಶ್ವ ಮೆಚ್ಚಿ ಕೊಂಡಾಡಿದ 'ಹಾಕಿ ಮಾಂತ್ರಿಕ' ಎಂದು ಹೆಸರಾದ ಮೇಜರ್ ಧ್ಯಾನ್ ಚಂದ್.
ಧ್ಯಾನ್ ಸಿಂಗ್ ಉತ್ತರ ಪ್ರದೇಶ ರಾಜ್ಯದ ಪ್ರಯಾಗದಲ್ಲಿ ರಜಪೂತ ಕುಟುಂಬವೊಂದರ ಕುಡಿಯಾಗಿ ಹುಟ್ಟಿದ್ದು ಆಗಸ್ಟ್ 29 1905 ರಲ್ಲಿ. ಈತನ ತಂದೆ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಸೈನಿಕರಾಗಿದ್ದರು. ತಂದೆಯವರ ವೃತ್ತಿ ಸದಾ ವರ್ಗಾವಣೆಯಿಂದ ಕೂಡಿದ್ದು ಧ್ಯಾನಸಿಂಗರ ಕುಟುಂಬವು ಊರಿಂದೂರಿಗೆ ವಲಸೆ ಹೋಗುವುದೇ ಆಗಿತ್ತು. ಮುಂದೆ ಝಾನ್ಸಿಯಲ್ಲಿ ಧ್ಯಾನ್ ಅವರ ಕುಟುಂಬ ನೆಲೆಯೂರಿ ಅಲ್ಲಿಯೇ ಅವರ ವಿದ್ಯಾಭ್ಯಾಸ ಪ್ರಾರಂಭವಾಯಿತು.
ತಮ್ಮ ಹದಿನಾರನೇ ವಯಸ್ಸಿನಲ್ಲಿ ಸೇನೆಗೆ ಸೇರಿದ ಧ್ಯಾನ್ ಹಲವಾರು ಸ್ನೇಹಪರ ಆಟಗಳನ್ನು ಆಡುತ್ತಿದ್ದರೆ ಹೊರತು ಯಾವುದೇ ಒಂದು ಕ್ರೀಡೆಯಲ್ಲಿ ಧ್ಯಾನವನ್ನು ಕೇಂದ್ರೀಕರಿಸಲಿಲ್ಲ. ಆದರೆ ಇವರ ಆಟದ ವೈಖರಿಯನ್ನು ಕಂಡ ಸುಬೇದಾರ್ ಬೋಲೆ ತಿವಾರಿಯವರಿಗೆ ಇವರಲ್ಲಿಯ ಸಾತ್ವಿಕ ಹಠ ಮತ್ತು ಶ್ರದ್ಧೆಯ ಅರಿವಾಗಿ ಅವರಿಗೆ ವಿಶೇಷ ತರಬೇತಿಯನ್ನು ನೀಡಲಾರಂಭಿಸಿದರು. ಪ್ರಾರಂಭದಲ್ಲಿ ಹಲವಾರು ವಲಯ ಮಟ್ಟದ ಆಟಗಳಲ್ಲಿ ಪಾಲ್ಗೊಂಡ ಧ್ಯಾನ್ ಮುಂದೆ ಹಾಕಿ ಆಟದಲ್ಲಿ ತಮ್ಮ ವೈಶಿಷ್ಟ್ಯವನ್ನು ಸಾಧಿಸಲಾರಂಭಿಸಿದರು.
ಧ್ಯಾನ ಅವರು ಹಾಕಿ ಆಟವನ್ನು ಚಂದ್ರನ ಬೆಳಕಿನಲ್ಲಿ ಅಭ್ಯಸಿಸುತ್ತಿದ್ದುದನ್ನು ಕಂಡು ಅವರ ಗುರುಗಳು ಅವರನ್ನು ಚಾಂದ್ ಎಂದು ಕರೆಯಲಾರಂಭಿಸಿದರು. ಮುಂದೆ ಅವರ ಹೆಸರು ಧ್ಯಾನ್ ಸಿಂಗ್ ಬದಲಾಗಿ ಧ್ಯಾನ್ ಚಂದ್ ಎಂದೇ ಆಯಿತು.
ಹಾಕಿ ಕ್ರೀಡೆಯಲ್ಲಿ ಉತ್ತಮ ತಂಡವನ್ನು ಕಟ್ಟಿದ ಮೇಜರ್ ಧ್ಯಾನ್ ಚಂದ್ ಅವರ ಬೆನ್ನಿಗೆ ಇಡೀ ದೇಶವೇ ನಿಂತಿತ್ತು.೧೯೨೮ರಲ್ಲಿ ಭಾರತೀಯ ಹಾಕಿ ತಂಡವನ್ನು ಸೇರಿದ ಧ್ಯಾನ್ ಚಂದ್ ಅವರಿಗೆ, ನೆದರ್ಲ್ಯಾಂಡ್ ದೇಶದ ಆಮ್ ಸ್ಟರ್ಡಹ್ಯಾಮನಲ್ಲಿ ಆಯೋಜಿಸಲಾದ 1928ರ ಬೇಸಗೆಯ ಒಲಂಪಿಕ್ ಪಂದ್ಯಾವಳಿಗಳಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. 3-0 ಗೋಲ್ ಗಳಲ್ಲಿ 2 ನ್ನು ಗಳಿಸುವ ಮೂಲಕ ಭಾರತೀಯ ತಂಡಕ್ಕೆ ನೆದರ್ ಲ್ಯಾಂಡನ್ನು ಸೋಲಿಸಲು ಸಹಾಯ ಮಾಡಿದ ಧ್ಯಾನ್ ಚಂದರ ಆಟದ ವೈಖರಿಗೆ ನೆರೆದ ಜನರು ಬೆರಗಾದರು. ಈ ಸರಣಿಯಲ್ಲಿ ಭಾರತೀಯ ಹಾಕಿ ತಂಡಕ್ಕೆ ಒಲಂಪಿಕ್ ಸ್ವರ್ಣ ಪದಕವು ದೊರೆತು ವಿಶ್ವ ಹಾಕಿ ಇತಿಹಾಸದಲ್ಲಿ ಭಾರತದ ಜಯಭೇರಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿತು. ಧ್ಯಾನ್ ಚಂದ್ 1932 ಹಾಗೂ 1936 ರಲ್ಲಿ ನಡೆದ ಒಲಂಪಿಕ್ಸ್ಗಳಲ್ಲಿ ಸ್ವರ್ಣ ಪದಕ ಪಡೆದ ಭಾರತದ ತಂಡದ ಸದಸ್ಯರಾಗಿದ್ದರು. ಹೀಗೆ ತಾವು ಆಡಿದ ಮೂರೂ ಒಲಿಂಪಿಕ್ಸ್ ಕ್ರೀಡೆಗಳಲ್ಲೂ ಭಾರತಕ್ಕೆ ಚಿನ್ನದ ಪದಕ ದೊರಕುವಲ್ಲಿ ಅವರು ಮಹತ್ತರವಾದ ಪಾತ್ರ ವಹಿಸಿದರು. ಆಡಿದ ಮೂರು ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಒಟ್ಟು ಹನ್ನೆರಡು ಪಂದ್ಯಗಳಲ್ಲಿ ಧ್ಯಾನ್ ಚಂದ್ ಗಳಿಸಿದ ಒಟ್ಟು ಗೋಲುಗಳ ಸಂಖ್ಯೆ 33. ಇದು ಸಾರ್ವಕಾಲಿಕ ಶ್ರೇಷ್ಠ ದಾಖಲೆಯಾಗಿ ಉಳಿದಿದೆ.
ಹಲವಾರು ರಾಷ್ಟ್ರೀಯ, ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಆಡುತ್ತಿದ್ದ ಮೇಜರ್ ಧ್ಯಾನ್ ಚಂದ್ ಅವರ ತಂಡದ ಶಿಸ್ತು ಆಟದ ಕುರಿತಾದ ಶ್ರದ್ದೆಯ ಬಗ್ಗೆ ಅನೇಕ ದಂತ ಕಥೆಗಳು ಇದ್ದವು. ಒಂದೊಮ್ಮೆ ಮೇಜರ್ ಧ್ಯಾನ ಚಂದ್ ಅವರನ್ನು ಆಸ್ಟ್ರೇಲಿಯಾದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟ್ ಪಟು ಡಾನ್ ಬ್ರಾಡ್ಮನ್ ಅವರು ನಾವು ಕ್ರಿಕೆಟ್ನಲ್ಲಿ ರನ್ನುಗಳನ್ನು ಬಾರಿಸಿದಂತೆ ನೀವು ಹಾಕಿಯಲ್ಲಿ ಗೋಲುಗಳನ್ನು ಹೊಡೆಯುವಿರಲ್ಲ ಎಂದು ಕೇಳಿದ್ದರು.
ಮೇಜರ್ ಧ್ಯಾನ್ ಚಂದ್ ಅವರ ಆಟದ ವೈಖರಿ ಮಾಂತ್ರಿಕ ಸ್ಪರ್ಶದಿಂದ ಕೂಡಿದ್ದು ಜರ್ಮನಿಯ ಪತ್ರಿಕೆಯೊಂದು "ಇದೀಗ ಹಾಕಿ ಆಟವು ಮ್ಯಾಜಿಕ್ ಶೋನಂತೆ ಆಗಿದೆ, ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ರ ಆಟವನ್ನು ನೋಡಲು ಜನರು ಮುಗಿ ಬೀಳುತ್ತಿದ್ದಾರೆ" ಎಂದು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿದ್ದರು.
ಒಂದು ಬಾರಿ ಪಂದ್ಯವೊಂದರಲ್ಲಿ ಧ್ಯಾನ್ ಚಂದ್ ಒಂದೇ ಒಂದು ಗೋಲನ್ನು ಕೂಡ ಬಾರಿಸಲು ಸಾಧ್ಯವಾಗಲಿಲ್ಲ ಆಗ ಅವರು ಅಲ್ಲಿ ನಿರ್ಮಾಣವಾಗಿದ್ದ ಗೋಲ್ ಪೋಸ್ಟ್ ಅಂತರರಾಷ್ಟ್ರೀಯ ಹಾಕಿ ನಿಯಮಾವಳಿಗೆ ಬದ್ಧವಾಗಿಲ್ಲ ಎಂದು ಮ್ಯಾಚ್ ರೆಫರಿಯೊಂದಿಗೆ ವಾಗ್ವಾದ ಮಾಡಿದರು. ಅವರ ವಾದವನ್ನು ಆಲಿಸಿದ ಹಾಕಿ ಬೋರ್ಡ್ ಗೋಲ್ ಪೋಸ್ಟನ್ನು ಅಳತೆ ಮಾಡಿದಾಗ ಧ್ಯಾನ್ ಚಂದ್ ರ ಊಹೆ ಕರಾರುವಾಕ್ಕಾಗಿದ್ದು ಎಲ್ಲರೂ ಧ್ಯಾನ್ ಚಂದ್ ರ ಜಾಣ್ಮೆಗೆ ತಲೆದೂಗಿದ್ದರು.
ಎರಡನೆ ವಿಶ್ವಯುದ್ದ ಮುಗಿದ ಬಳಿಕವೂ ಕೆಲಕಾಲ ಆಡಿದ ಧ್ಯಾನ್ ಚಂದ್ 1948ರಲ್ಲಿ ತಮ್ಮ 42ನೆ ವಯಸ್ಸಿನಲ್ಲಿ ಹಾಕಿ ಆಟದಿಂದ ನಿವೃತ್ತರಾದರು. ಧ್ಯಾನ್ ಚಂದರ ಸಹೋದರ ರೂಪ್ ಸಿಂಗ್ ಕೂಡ ಉತ್ತಮ ಆಟಗಾರರಾಗಿದ್ದರು. ಇವರಿಬ್ಬರನ್ನು 'ಹಾಕಿ ಅವಳಿಗಳು' ಎಂದು ಕರೆಯಲಾಗುತ್ತಿತ್ತು. 1932 ರ ಬೇಸಿಗೆ ಒಲಿಂಪಿಕ್ಸ್ನಲ್ಲಿ ಭಾರತವು ಎದುರಾಳಿಗಳ ವಿರುದ್ಧ ಗಳಿಸಿದ 35 ಗೋಲುಗಳಲ್ಲಿ ಇವರಿಬ್ಬರು 25 ಗೋಲುಗಳನ್ನು ಗಳಿಸಿದ್ದರು (ಚಾಂದ್ 12 ಗೋಲುಗಳನ್ನು ಹೊಂದಿದ್ದರು ಮತ್ತು ಸಿಂಗ್ 13 ಗೋಲುಗಳನ್ನು ಗಳಿಸಿದ್ದರು).
ಧ್ಯಾನ್ ಚಂದರ ಪುತ್ರ ಅಶೋಕ್ ಕುಮಾರ್ ಕೂಡ ಹಾಕಿಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.
1972 ರಲ್ಲಿ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಮ್ಯೂನಿಚ್ ಒಲಿಂಪಿಕ್ಸ್ಗೆ ಸಾಕ್ಷಿಯಾಗಲು ವಿಶೇಷ ಆಹ್ವಾನವನ್ನು ಕಳುಹಿಸಿತ್ತು ಎಂಬುದು ಧ್ಯಾನ್ ಚಂದ್ ರ ಜನಪ್ರಿಯತೆಗೆ ಸಾಕ್ಷಿ.
ಭಾರತೀಯ ಕ್ರೀಡೆ ಹಾಕಿ ಆಟದಲ್ಲಿ ವಿಶ್ವ ಮಾನ್ಯತೆಯನ್ನು ಗಳಿಸಿದ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29ರ ದಿನವನ್ನು ಭಾರತದಲ್ಲಿ 'ಕ್ರೀಡಾ ದಿನ'ವನ್ನಾಗಿ ಆಚರಿಸುವ ಮೂಲಕ ಭಾರತ ಸರಕಾರವು ಅವರಿಗೆ ಗೌರವ ಸಲ್ಲಿಸುತ್ತಿದೆ.
ಧ್ಯಾನ್ ಚಂದ್ ಅವರು 1979ರ ಡಿಸೆಂಬರ್ 3ರಂದು ನಿಧನರಾದರು. 1980 ಡಿಸೆಂಬರ್ 3ರಂದು ಮೇಜರ್ ಧ್ಯಾನಚಂದ್ ಅವರ ನೆನಪಿಗಾಗಿ ಭಾರತ ಸರ್ಕಾರವು ಅವರ ಹೆಸರಿನ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಆಸ್ಟ್ರಿಯಾ ದೇಶದ ವಿಯೆನ್ನಾದಲ್ಲಿ ಧ್ಯಾನ್ ಚಂದ್ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ.
ಭಾರತೀಯ ಹಾಕಿ ಇತಿಹಾಸದಲ್ಲಿ ಮೇಜರ್ ಧ್ಯಾನ್ ಚಂದ ಹೆಸರು ಅಜರಾಮರವಾಗಿದೆ. ಹಾಕಿ ಆಟಗಾರರ ಮತ್ತು ಕ್ರೀಡಾಭಿಮಾನಿಗಳ ಪಾಲಿಗೆ ಅವರು ದೈವ ಸದೃಶ್ಯವಾಗಿದ್ದಾರೆ. ಧ್ಯಾನ್ ಚಂದ್ರ ಯಶಸ್ಸಿನ ಉತ್ತುಂಗದ ಸಮಯದಲ್ಲಿ ಕೂಡ ಇಡೀ ಜಗತ್ತಿನಲ್ಲಿ ಅಂದಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪೈಕಿ ಅವರು ಒಬ್ಬರಾಗಿದ್ದರು. ಮತ್ತೆ ನಮ್ಮ ದೇಶದಲ್ಲಿ ಹಾಕಿ ತನ್ನ ಗತವೈಭವವನ್ನು ಕಂಡುಕೊಳ್ಳಲಿ ಧ್ಯಾನ್ ಚಂದರಂತಹ ನೂರಾರು ಕ್ರೀಡಾಪಟುಗಳು ಹುಟ್ಟಿ ಬರಲಿ ಎಂದು ಆಶಿಸೋಣ.
-ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ