ಶಿಕ್ಷಣ ಭವಿಷ್ಯದ ದಾರಿ ತೋರಿಸುವ ಸಾಧನವಾಗಬೇಕು: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ಶ್ರೀ ವಿಷ್ಣುಗುಪ್ತವಿಶ್ವವಿದ್ಯಾಪೀಠವು ನಮ್ಮ ಮಠದ ಶಿಖರಪ್ರಾಯ ಯೋಜನೆಯಾಗಿದ್ದು, ಶಿಕ್ಷಣವನ್ನು ಭವಿಷ್ಯದ ದಾರಿ ತೋರುವ ಸಾಧನವಾಗಿ ಪರಿವರ್ತಿಸುವಲ್ಲಿ ಮಹತ್ವದ ಹೆಜ್ಜೆ ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿ ನುಡಿದರು.


ಅಶೋಕೆಯ ಶ್ರೀ ವಿಷ್ಣುಗುಪ್ತವಿಶ್ವವಿದ್ಯಾಪೀಠ ಆವರಣದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಗುರುವಾರ ಕುಮಟಾ ಮಂಡಲದ ಉಪ್ಪಿನಪಟ್ಟಣ, ಮಿರ್ಜಾನ- ಅಚವೆ, ಕಾರವಾರ-ಅಂಕೋಲಾ ಮತ್ತು ಧಾರೇಶ್ವರ ವಲಯಗಳ ಶಿಷ್ಯಭಕ್ತರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ, ಮಾರ್ಗದರ್ಶನ ನೀಡಿದರು.


ವಾಸ್ತವವಾಗಿ ಶಿಕ್ಷಣ ಯುವಪೀಳಿಗೆಗೆ ಭವಿಷ್ಯದ ದಾರಿ ತೋರಿಸಬೇಕು. ಆದರೆ ಆಧುನಿಕ ಶಿಕ್ಷಣ ವ್ಯವಸ್ಥೆ ಇಂದು ಯುವಜನತೆಯನ್ನು ದಾರಿ ತಪ್ಪಿಸುತ್ತಿದೆ. ವಿದ್ಯಾರ್ಥಿ ಜೀವನದಲ್ಲಿ ಎಷ್ಟೋ ಮಂದಿ ದಾರಿ ತಪ್ಪುವುದನ್ನು ನಾವು ಕಾಣುತ್ತಿದ್ದೇವೆ. ನಮ್ಮ ಆಚಾರ- ವಿಚಾರ, ಆಹಾರ- ವಿಹಾರ, ಸಂಸ್ಕೃತಿ-ಪರಂಪರೆ ಹೀಗೆ ಎಲ್ಲವನ್ನೂ ನಮ್ಮ ಯುವಜನತೆ ಮರೆತಿದೆ. ನಮ್ಮ ಸಂಸ್ಕೃತಿ- ಸಂಪ್ರದಾಯವನ್ನು ಮೌಢ್ಯ ಎಂದು ಬಿಂಬಿಸುವ ಪದ್ಧತಿ ಬದಲಾಗಬೇಕು ಎಂದು ಆಶಿಸಿದರು.


ಮುಂದಿನ ದಿನಗಳಲ್ಲಿ ಸಮಾಜದ ಎಲ್ಲ ಮಕ್ಕಳು ನಮ್ಮ ವ್ಯವಸ್ಥೆಯಡಿ ಕನಿಷ್ಠ 12ನೇ ತರಗತಿವರೆಗೆ ಶಿಕ್ಷಣ ಪಡೆಯುವಂತಾಗಬೇಕು. ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಸೇರಿದಂತೆ ಸಮಾಜದ ಯುವಜನತೆ ಅಪೇಕ್ಷಿಸುವ ಎಲ್ಲ ಶಿಕ್ಷಣವನ್ನು ಇಲ್ಲೇ ಪಡೆಯಲು ಕೂಡಾ ಮುಂದಿನ ದಿನಗಳಲ್ಲಿ ಅವಕಾಶ ಮಾಡಿಕೊಡುವ ಬಗ್ಗೆಯೂ ಚಿಂತನೆ ನಡೆದಿದೆ. ಸಮಾಜಕ್ಕೆ ಪರಿಪೂರ್ಣ ವ್ಯಕ್ತಿಗಳನ್ನಾಗಿ, ನಮ್ಮ ದೇಶದ ಆಸ್ತಿಯಾಗಿ ನಮ್ಮ ಯುವ ಸಮೂಹವನ್ನು ಬೆಳೆಸಬೇಕು ಎಂದು ಅಭಿಪ್ರಾಯಪಟ್ಟರು.


ವಿಶ್ವವಿದ್ಯಾಪೀಠ ನಮ್ಮ ಸಮಾಜಬಾಂಧವರು ಇರುವ ಎಲ್ಲ ಕಡೆಗಳಲ್ಲಿ ಶಾಖೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಎಲ್ಲ ಮಕ್ಕಳು ಮಠದ ವ್ಯವಸ್ಥೆಯಡಿ ಗುರುಕುಲ ಶಿಕ್ಷಣ ಪಡೆಯಲು ಅನುವು ಮಾಡಿಕೊಡಲಾಗುತ್ತದೆ. ಇಂಥ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಸಮಾಜದ ಜವಾಬ್ದಾರಿ ಮಹತ್ವದ್ದು ಎಂದು ತಿಳಿಸಿದರು.


ಹವ್ಯಕ ಸಮಾಜ ಅತ್ಯಂತ ಶ್ರೇಷ್ಠ ಸಮುದಾಯಗಳಲ್ಲೊಂದು. ಅನೇಕ ಮಂದಿ ಮೇಧಾವಿಗಳು ದೇಶದ ಎಲ್ಲೆಡೆಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಇಂಥ ಸಮಾಜ ಇಂದು ತನ್ನ ತನವನ್ನು ಕಳೆದುಕೊಳ್ಳುತ್ತಿದೆ. ಸಮಾಜದಲ್ಲಿ ಸಂಖ್ಯೆ ಕ್ಷೀಣಿಸುತ್ತಿರುವುದು ಒಂದು ಸಮಸ್ಯೆಯಾದರೆ, ನಮ್ಮ ಆಚಾರ- ವಿಚಾರ, ಆಹಾರ- ವಿಹಾರ, ಸಂಸ್ಕøತಿ- ಸಂಪ್ರದಾಯ ನಾಶವಾಗುತ್ತಿದೆ. ಆಧುನಿಕ ಶಿಕ್ಷಣದ ನೆಪದಲ್ಲಿ ನಮ್ಮತನವನ್ನು ನಾವು ಕಳೆದುಕೊಳ್ಳುತ್ತಿದ್ದೇವೆ. ಇಂಥ ಸಮಾಜ ಕ್ಷೀಣಿಸುವ ಮುನ್ನ ನಾವು ಎಚ್ಚೆತ್ತುಕೊಂಡು ನಮ್ಮ ಸಂಸ್ಕøತಿಯ ಸಾರವನ್ನು ಯುವಜನತೆಯಲ್ಲಿ ತುಂಬುವ ಕಾರ್ಯ ಆಗಬೇಕು ಎಂದು ಆಶಿಸಿದರು.


ನಮ್ಮ ಸಂಘಟನೆ ಸಮಾಜದಲ್ಲಿ ಸಾಧನೆ, ಸೇವೆಗಳನ್ನು ಗುರುತಿಸಿ, ಸಂಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಶ್ರೀಮಠದ ಕಾರ್ಯಕರ್ತರು ಶ್ರೀಮಠ ಮಾಡುವ ಎಲ್ಲ ಕೆಲಸಗಳನ್ನು ಮಾಡಬೇಕು. ಸಮಾಜದಲ್ಲಿ ಸಂಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಕಾರ್ಯ ಆಗಬೇಕು ಎಂದು ಕಿವಿಮಾತು ಹೇಳಿದರು.


ಹವ್ಯಕ ಮಹಾಮಂಡಲದ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಪ್ರಾಂತ ಉಪಾಧ್ಯಕ್ಷ ಜಿ.ಎಸ್.ಹೆಗಡೆ, ಕುಮಟಾ ಮಂಡಲ ಅಧ್ಯಕ್ಷ ಸುಬ್ರಾಯ ಭಟ್ ಮುರೂರು, ವಿವಿವಿ ವ್ಯವಸ್ಥಾ ಪರಿಷತ್ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಗಣೇಶ್ ಭಟ್, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಶ್ರೀಕಾಂತ್ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು. ಸಮಾಜದಲ್ಲಿ ಗಣನೀಯ ಸೇವೆ ಸಲ್ಲಿಸಿದ 15 ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ 13 ಮಂದಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top