ಗಣೇಶೋತ್ಸವ ಆಚರಣೆಗೆ ಅಡ್ಡಿಪಡಿಸಲು ಪ್ರಯತ್ನಿಸಿ ಈಗ ಜಾತಿಯ ವಿಷ ಬೀಜ ಬಿತ್ತುತ್ತಿದ್ದಾರೆ ಎಂದು ಆರೋಪ
ಮಂಗಳೂರು: ಮಂಗಳೂರು ವಿವಿಯ ಪ್ರಭಾರ ಕುಲಪತಿಗಳು ವಿಶ್ವ ವಿದ್ಯಾನಿಲಯದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಬಗ್ಗೆ ವಿವಾದ ಎಬ್ಬಿಸಿ ಸರಕಾರಕ್ಕೆ ಪತ್ರ ಬರೆದು, ಬಳಿಕ ಆ ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಲ್ಲದೆ, ಈಗ ಹಿಂದುಳಿದ ವರ್ಗ ಸಮಾಜದ ನನ್ನನ್ನು ಮೇಲ್ವರ್ಗದ ಜನ ಪ್ರತಿನಿಧಿಗಳು ತುಳಿಯುತ್ತಿದ್ದಾರೆ ಎ೦ದು ಜಾತಿಯ ವಿಷ ಬೀಜ ಬಿತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಎಂ ಹೇಳಿದ್ದಾರೆ. ಎಡಪಂಥೀಯ ಮಾನಸಿಕತೆಯ ಪ್ರಭಾರ ಕುಲಪತಿಯವರ ಈ ನಡೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಅವರು ಖಂಡಿಸಿದ್ದಾರೆ.
ಈ ಘಟನೆಯ ಹಿಂದೆ ಕರ್ನಾಟಕ ರಾಜ್ಯ ವಿಧಾನ ಸಭಾಧ್ಯಕ್ಷರಾದ ಯು.ಟಿ. ಖಾದರ್ ರವರ ಕುಮ್ಮಕ್ಕು ಇರುವುದು ಕಂಡು ಬರುತ್ತಿದೆ. ಸ್ವಾತಂತ್ರ್ಯ ಹೋರಾಟ ಸಂದರ್ಭ ಭಾರತೀಯರಲ್ಲಿ ಏಕತೆ, ಭಾವೈಕ್ಯತೆ ಜಾಗೃತಗೊಳಿಸುವ ಸಲುವಾಗಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಾರಂಭಿಸಿದ್ದು ಇತಿಹಾಸ. ಅಂದಿನಿಂದ ಇಂದಿನವರೆಗೂ ಜನತೆ ಜಾತಿ, ಮತ, ಪಂಥ, ರಾಜಕೀಯ ಭೇದ ಮರೆತು ಶ್ರೀ ಗಣೇಶೋತ್ಸವನ್ನು ರಾಷ್ಟ್ರೀಯ ಹಬ್ಬವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.
ಮುಂದಿನ ಭವಿಷ್ಯವಾಗಿರುವ ವಿದ್ಯಾರ್ಥಿಗಳಲ್ಲಿ ಈ ಮೇಲಿನ ಪರಿಕಲ್ಪನೆಯ ಭಾವನೆ ಮೂಡಬೇಕೆಂದು ಕಳೆದ ಕೆಲವು ಅವಧಿಯ ಹಿಂದೆ ಸಿಂಡಿಕೇಟ್ ಸಭೆಯಲ್ಲಿ ವಿ.ವಿ.ಯ ಮಂಗಳ ಅಡಿಟೋರಿಯಂನಲ್ಲಿ ವಿದ್ಯಾರ್ಥಿಗಳಿಗೆ ಸಾರ್ವಜನಿಕ ಶ್ರೀ ಗಣೇಶೋತ್ಸವ ಆಚರಣೆ ಮಾಡಲು ಅವಕಾಶ ಮಾಡಿಕೊಡುವ ನಿರ್ಣಯ ಕೈಗೊಂಡಿತ್ತು. ಕೆಲವು ವರ್ಷಗಳಿಂದ ನಡೆಯುತ್ತಿದ್ದ ಗಣೇಶೋತ್ಸವದಲ್ಲಿ ವಿ.ವಿ ಪರಿಸರದ ಸುತ್ತಮುತ್ತ ಪರಿಸರದ ಗ್ರಾಮಸ್ಥರು ಭಾಗವಹಿಸುತ್ತಿದ್ದದು ವಿಶೇಷ. ಆದರೆ ಈ ಬಾರಿ ಪ್ರಭಾರ ಕುಲಪತಿಯವರು ಪ್ರಾರಂಭದಲ್ಲಿ ಶ್ರೀ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಲಿಲ್ಲ. ಈ ಬಗ್ಗೆ ವಿದ್ಯಾರ್ಥಿಗಳು, ಸಾರ್ವಜನಿಕರು ವಿರೋಧ ವ್ಯಕ್ತ ಪಡಿಸಿದಾಗ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಗಣೇಶೋತ್ಸವ ಆಚರಣೆಗೆ ಅನುಮತಿ ನೀಡಿ, ಗ್ರಾಮಸ್ಥರು ಮತ್ತು ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ನೀಡದಿರುವುದು ಖಂಡನೀಯ. ಆದುದರಿಂದ ಸಮಾಜದಲ್ಲಿ ಮತ್ತು ವಿ.ವಿ.ಯ ಆವರಣದಲ್ಲಿ ಅಶಾಂತಿಯ ನಿರ್ಮಾಣಕ್ಕೆ ಕಾರಣರಾದ ಪ್ರಭಾರ ಕುಲಪತಿಯ ಮೇಲೆ ರಾಜ್ಯಪಾಲರು ಶಿಸ್ತು ಕ್ರಮ ಜರುಗಿಸಬೇಕೆಂದು ಸುದರ್ಶನ್ ಅವರು ಆಗ್ರಹಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ