ವಿವಿವಿಯಲ್ಲಿ ಮುಂದಿನ ವರ್ಷದಿಂದ ಪದವಿ ಶಿಕ್ಷಣ: ರಾಘವೇಶ್ವರ ಶ್ರೀ

Upayuktha
0


ಗೋಕರ್ಣ: ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆಶ್ರಯದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಪದವಿ ಕೋರ್ಸ್‍ಗಳನ್ನು ಆರಂಭಿಸಲಾಗುವುದು ಎಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಮಹಾಸ್ವಾಮೀಜಿ ಪ್ರಕಟಿಸಿದರು.



ಅಶೋಕೆಯ ವಿವಿವಿ ಆವರಣದಲ್ಲಿ ಹಮ್ಮಿಕೊಂಡಿರುವ ಚಾತುರ್ಮಾಸ್ಯ ವ್ರತಾಚರಣೆಯ 80ನೇ ದಿನ ಮಂಗಳೂರು ಮಂಡಲದ ಕೋಳ್ಯೂರು, ಕನ್ಯಾನ, ಬಾಯಾರು ಮತ್ತು ಮುಡಿಪು ವಲಯಗಳ ಶಿಷ್ಯರಿಂದ ಶ್ರೀಗುರುಭಿಕ್ಷಾ ಸೇವೆ ಸ್ವೀಕರಿಸಿ ಶ್ರೀಗಳು ಆಶೀರ್ವಚನ ನೀಡಿದರು.



ಇಂದಿನ ಶಿಕ್ಷಣ, ಅದರಲ್ಲೂ ಮುಖ್ಯವಾಗಿ ಪದವಿ ಶಿಕ್ಷಣ ಬಹಳಷ್ಟು ಕಲುಷಿತವಾಗಿದ್ದು, ಯುವ ಮನಸ್ಸುಗಳು ಕೆಡುವ ವಾತಾವರಣಕ್ಕೆ ಅವಕಾಶವೇ ಅಧಿಕ. ಈ ಹಿನ್ನೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಪದವಿ ಶಿಕ್ಷಣ ನೀಡಿ, ಜತೆಗೆ ನಮ್ಮ ಸಂಸ್ಕಾರ, ಸಂಸ್ಕøತಿ, ಆಹಾರ- ವಿಹಾರ, ಆಚಾರ- ವಿಚಾರಗಳ ಬಗ್ಗೆಯೂ ಅರಿವು ಮೂಡಿಸುವುದು ಇದರ ಉದ್ದೇಶ ಎಂದು ಸ್ಪಷ್ಟಪಡಿಸಿದರು.



ವಿವಿವಿ ಪರಿಕಲ್ಪನೆ ಬಗ್ಗೆ ಇಡೀ ಸಮಾಜದಲ್ಲಿ ಮಾಹಿತಿಯ ಪ್ರಸರಣಕ್ಕೆ ಸ್ವರ್ಣಪಾದುಕೆಗಳ ಸಂಚಾರ ಈ ತಿಂಗಳ 27ರಂದು ಆರಂಭವಾಗಲಿದೆ. ಇಡೀ ಗೋಕರ್ಣ ಮಂಡಲದಾದ್ಯಂತ ಸ್ವರ್ಣಪಾದುಕೆಗಳ ಸಂಚಾರ ನಡೆಯಲಿದ್ದು, ಇದಕ್ಕೆ ಸಮರ್ಪಣೆಯಾಗುವ ಸಂಪೂರ್ಣ ಕಾಣಿಕೆ ವಿವಿವಿಗೆ ಮೀಸಲು. ಈ ಹಿನ್ನೆಲೆಯಲ್ಲಿ ಸ್ವರ್ಣಪಾದುಕೆ ಸಂಚಾರ ಮುಂದಿನ ದಿನಗಳಲ್ಲಿ ವಿವಿವಿಯ ಆಧಾರಸ್ತಂಭ ಎನಿಸಲಿದೆ ಎಂದು ಬಣ್ಣಿಸಿದರು.



ವಿಷ್ಣುಗುಪ್ತ ವಿಶ್ವವಿದ್ಯಾಪೀಠ ಆವರಣದಲ್ಲಿ ಅಪರೂಪದ ಹಾಗೂ ಅಮೂಲ್ಯ ಗ್ರಂಥಗಳನ್ನೊಳಗೊಂಡ ಅಪೂರ್ವ ಗ್ರಂಥಾಲಯ ನಿರ್ಮಾಣವಾಗಲಿದ್ದು, ಮಂಗಳೂರು ಹೋಬಳಿಯ ಶಿಷ್ಯಭಕ್ತರ ಸೇವೆಯಾಗಿ ಇದು ಸಮರ್ಪಣೆಯಾಗಲಿದೆ ಮಾಣಿ ಮಠದಲ್ಲಿ ಈ ಬಾರಿ ನಡೆಯುವ ನವರಾತ್ರಿ ಉತ್ಸವದಲ್ಲಿ ಸಮರ್ಪಣೆಯಾಗುವ ಎಲ್ಲ ಕಾಣಿಕೆ ವಿವಿವಿ ಗ್ರಂಥಾಲಯಕ್ಕೆ ವಿನಿಯೋಗವಾಗಲಿದೆ. ನವರಾತ್ರಿ ಸರಸ್ವತಿಯ ಪೂಜೆ. ಈ ಸಂದರ್ಭದ ಉತ್ಸವ ಕಾಣಿಕೆಯನ್ನು ವಿದ್ಯಾದೇವತೆಯಾದ ಸರಸ್ವತಿಗೆ ಗ್ರಂಥಾಲಯ ನಿರ್ಮಾಣ ರೂಪದಲ್ಲಿ ವಿನಿಯೋಗಿಸಲಾಗುತ್ತದೆ ಎಂದು ವಿವರಿಸಿದರು.



ಶಿಕ್ಷಣವೇ ನಿಜವಾದ ಶಕ್ತಿ. ಮಗುವಿಗೆ ಬಾಲ್ಯದಿಂದಲೇ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂಬ ಮಹದುದ್ದೇಶದಿಂದ ವಿವಿವಿ ತಲೆ ಎತ್ತಿದೆ. ಮುಂದಿನ ಭವ್ಯ ಭವಿಷ್ಯದ ಉದ್ದೇಶದಿಂದ ಸಮಾಜದ ಪ್ರತಿಯೊಂದು ಮಗು ನಮ್ಮ ಗುರುಕುಲ ವ್ಯವಸ್ಥೆಯಲ್ಲೇ ಶಿಕ್ಷಣ ಪಡೆಯುವಂತಾಗಬೇಕು ಎಂದು ಆಶಿಸಿದರು.



ಬದುಕಿಗೆ ಶಿಸ್ತು ಮತ್ತು ಸಂವಿಧಾನ ಬೇಕು. ನಮ್ಮ ಪಾರಂಪರಿಕ ಶಿಕ್ಷಣ ಇವೆರಡನ್ನೂ ನೀಡುತ್ತದೆ. ಸಂಸ್ಕಾರರಹಿತ ಶಿಕ್ಷಣ ಅಪಾಯಕಾರಿ. ನಮ್ಮತನವನ್ನು ನಾವು ಉಳಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಆತ್ಮಾಭಿಮಾನಕ್ಕೇ ಧಕ್ಕೆ ಉಂಟಾಗಬಹುದು ಎಂದು ಎಚ್ಚರಿಸಿದರು.



ಸಮಾಜ ಸಂಘಟನೆ ಬಲಗೊಳ್ಳಬೇಕು. ಸಮಷ್ಟಿ ಇದ್ದಾಗ ಉತ್ತಮ ಸೇವೆಗೆ ಪ್ರೇರಣೆ ಸಿಗುತ್ತದೆ. ಸಂಘಟನೆಯಿಂದ ನಮ್ಮ ಬದುಕು ಕೂಡಾ ವ್ಯವಸ್ಥಿತವಾಗುತ್ತದೆ. ನಾವು ಮಾಡಿದ ಸೇವೆಗೆ ಪುಣ್ಯ ಹಾಗೂ ನೆಮ್ಮದಿಯ ಪ್ರತಿಫಲ ದೊರಕುತ್ತದೆ. ಆದ್ದರಿಂದ ನಿಸ್ವಾರ್ಥ ಸೇವೆಯ ಮೂಲಕ ಸಮಾಜವನ್ನು ಗೆಲ್ಲಬೇಕು ಎಂದು ಸಲಹೆ ಮಾಡಿದರು.



ಹವ್ಯಕ ಮಹಾಮಂಡಲದ ಗೌರವ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ವಿದ್ಯಾರ್ಥಿ ಪ್ರಧಾನ ಈಶ್ವರ ಪ್ರಸಾದ್ ಕನ್ಯಾನ, ಶಿಷ್ಯಮಾಧ್ಯಮ ಪ್ರಧಾನ ಗಣೇಶ್ ಜೋಶಿ ಸಂಕೊಳ್ಳಿ, ಮಂಗಳೂರು ಮಂಡಲ ಅಧ್ಯಕ್ಷ ಉದಯಶಂಕರ ನೀರ್ಪಾಜೆ, ಕಾರ್ಯದರ್ಶಿ ಸರವು ರಮೇಶ್ ಭಟ್, ಮಾತೃಪ್ರಧಾನರಾದ ಮಲ್ಲಿಕಾ ಜಿ.ಭಟ್, ಮುಷ್ಟಿಭಿಕ್ಷೆ ಪ್ರದಾನ ಈಶ್ವರ ಭಟ್ ವಾರಣಾಸಿ, ವಿದ್ಯಾರ್ಥಿ ಪ್ರಧಾನರಾದ ಭಾರ್ಗವಿ ಕುಂದಾಪುರ ವೇದಿಕೆಯಲ್ಲಿದ್ದರು. ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯುಎಸ್‍ಜಿ ಭಟ್, ವಿವಿವಿ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top