ಮಾಮ್ ಇನ್‌ಸ್ಪೈರ್ ಅವಾರ್ಡ್‌ ಪ್ರದಾನ ಸೆ.10ರಂದು ಬೆಂಗಳೂರಲ್ಲಿ

Upayuktha
0


ಬೆಂಗಳೂರು: ಮೀಡಿಯಾ ಅಲುಮ್ನಿ ಅಸೋಸಿಯೇಶನ್ ಆಫ್ ಮಂಗಳಗಂಗೋತ್ರಿ (MAAM- ಮಾಮ್) ಸಂಘಟನೆಯ ವತಿಯಿಂದ‌  ಭಾನುವಾರ ಸೆ. 10ರಂದು ಬೆಳಿಗ್ಗೆ  10:30ಕ್ಕ ಸರಿಯಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 'ಯಕ್ಷಗಾನ-ಮಹಿಳೆ -ಮಾಧ್ಯಮ' ಕುರಿತ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಬಳಿಕ "ಮಾಮ್ ಇನ್‌ಸ್ಪೈರ್ ಅವಾರ್ಡ್ ಪ್ರದಾನ" ನಡೆಯಲಿದೆ.  ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಾಮ್ ಕಾರ್ಯಕಾರಿ ಸಮಿತಿಯ ಪರವಾಗಿ ಅಧ್ಯಕ್ಷರಾದ ನವೀನ್ ಅಮ್ಮೆಂಬಳ ತಿಳಿಸಿದ್ದಾರೆ.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡಪ್ರಭ-ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಬೆಂಗಳೂರಿನ ಯೂನಿವರ್ಸಲ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ ಮುಖ್ಯಸ್ಥ ಆರ್. ಉಪೇಂದ್ರ ಶೆಟ್ಟಿ, ಕೆ.ಆರ್‌ ಪುರ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದ ಪ್ರೊ. ಪ್ರತಿಭಾ ಪಾರ್ಶ್ವನಾಥ್‌, ಬೆಂಗಳೂರಿನ ಕರ್ನಾಟಕ ಕಲಾದರ್ಶಿನಿಯ ನಿರ್ದೇಶಕ ಶ್ರೀನಿವಾಸ ಸಾಸ್ತಾನ ಹಾಗೂ ಮಾಮ್ ಗೌರವಾಧ್ಯಕ್ಷ ವೇಣು ಶರ್ಮ ಭಾಗವಹಿಸಲಿದ್ದಾರೆ. ಮಾಮ್ ಅಧ್ಯಕ್ಷ ನವೀನ್ ಅಮ್ಮೆಂಬಳ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.


ಬೆಳಗ್ಗೆ 11:15ರಿಂದ ಪ್ರಾರಂಭವಾಗುವ ಯಕ್ಷಗಾನ-ಮಹಿಳೆ- ಮಾಧ್ಯಮ- ಚಿಂತನ ಮಂಥನದಲ್ಲಿ ಯಕ್ಷಗಾನ ಸಂಶೋಧಕ ಪತ್ರಕರ್ತ ಪೃಥ್ವಿರಾಜ ಕವತ್ತಾರು, ಬೆಂಗಳೂರಿನ ಅಜೀಂ ಪ್ರೇಮ್‌ಜಿ ಯುನಿವರ್ಸಿಟಿಯ ಪ್ರೊ. ಎ. ನಾರಾಯಣ, ಯಕ್ಷಗಾನ ಸಂಶೋಧಕ ಡಾ. ಆನಂದರಾಮ ಉಪಾಧ್ಯಾಯ, ಕರ್ನಾಟಕ ಪತ್ರಕರ್ತೆಯರ ಸಂಘದ ಅಧ್ಯಕ್ಷೆ ಪದ್ಮಾ ಶಿವಮೊಗ್ಗ, ಹಿರಿಯ ಯಕ್ಷಗಾನ ಕಲಾವಿದೆ ಅನಸೂಯಾ, ಕರ್ನಾಕ ಮಹಿಳಾ ಯಕ್ಷಗಾನದ ಕಾರ್ಯದರ್ಶಿ ಕೆ. ಗೌರಿ ವಿಚಾರ ಮಂಡಿಸಲಿದ್ದಾರೆ. ಪ್ರಜಾವಾಣಿ ಡಿಜಿಟಲ್ ಸಂಪಾದಕ ಅವಿನಾಶ್ ಬೈಪಾಡಿತ್ತಾಯ ಅವರು ಸಮನ್ವಯಗೊಳಿಸಲಿದ್ದಾರೆ. ಶರತ್ ಹೆಗ್ಡೆ ಕಡ್ತಲ ಅವರು ಕಾರ್ಯಕ್ರಮ ಸಂಯೋಜನೆ ಮಾಡಲಿದ್ದಾರೆ.


ವಿಚಾರಗೋಷ್ಠಿಯ ಬಳಿಕ 2020-21 ಹಾಗೂ 2021-22ನೇ ಸಾಲಿನ ಮಾಮ್ ಇನ್‌ಸ್ಪೈರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು.  ಈ ಬಾರಿಯ ಪ್ರಶಸ್ತಿಗಳನ್ನು ರಶ್ಮಿ ಯಾದವ್ (ಎಸ್‌ಡಿಎಂ ಉಜಿರೆ), ಯಕ್ಷಿತಾ (ಆಳ್ವಾಸ್ ಮೂಡುಬಿದಿರೆ), ಶ್ಯಾಮ್ ಪ್ರಸಾದ್ (ಎಸ್‌ಡಿಎಂ ಉಜಿರೆ), ನವ್ಯಶ್ರೀ ಶೆಟ್ಟಿ (ಎಂಜಿಎಂ ಉಡುಪಿ), ಚೈತ್ರಾ (ಎಸ್‌ಡಿಎಂ ಉಜಿರೆ), ಸ್ವಸ್ತಿಕ್ ಕನ್ಯಾಡಿ (ಎಸ್‌ಡಿಎಂ ಉಜಿರೆ), ಇಂದೂಧರ್ ಹಳೆಯಂಗಡಿ (ಆಳ್ವಾಸ್ ಮೂಡುಬಿದಿರೆ) ಮತ್ತು ನಳಿನಿ (ಆಳ್ವಾಸ್ ಮೂಡುಬಿದಿರೆ) ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.


Post a Comment

0 Comments
Post a Comment (0)
To Top