ನೂರು ನವೋದ್ಯಮಿಗಳ ಬೆಳೆಸುವ ಗುರಿ : ಬರೋಡಾದ ಉದ್ಯಮಿ ಶಶಿಧರ ಬಿ. ಶೆಟ್ಟಿ

Upayuktha
0

ಮಿಜಾರು: ‘ನೂರು ನವೋದ್ಯಮಿಗಳನ್ನು ಬೆಳೆಸುವ ಗುರಿ ಹೊಂದಿದ್ದು, ಈಗಾಗಲೇ 15 ನವೋದ್ಯಮಿಗಳನ್ನು ಪ್ರೋತ್ಸಾಹಿಸಲಾಗಿದೆ. ಇನ್ನೂ 85 ಸೃಜನಶೀಲ ನವೋದ್ಯಮಿಗಳಿಗೆ ತಲಾ 1 ಕೋಟಿ ರೂಪಾಯಿ ವರೆಗೆ ಸಹಾಯ ನೀಡಲು ಸಿದ್ಧ. ಇದರಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ’ ಎಂದು ಉದ್ಯಮಿ, ಬರೋಡಾದ ಶಶಿ ಕ್ಯಾಟರಿಂಗ್ ಸರ್ವೀಸಸ್ ಮಾಲೀಕ ಶಶಿಧರ್ ಬಿ. ಶೆಟ್ಟಿ ಘೋಷಿಸಿದರು.


ಆಳ್ವಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಬುಧವಾರ ನಡೆದ  ‘ಆಗಮನ’ ಕಾರ್ಯಕ್ರಮದಲ್ಲಿ  ‘ಉದ್ಯಮಶೀಲ ಪಯಣ’ದ ಬಗ್ಗೆ ಅವರು ಮಾತನಾಡಿದರು.


‘ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕಾರ ಹಾಗೂ ಹೊಸ ಯೋಚನೆಯೊಂದಿಗೆ ಮಾದರಿ ನವೋದ್ಯಮ ಸ್ಥಾಪಿಸಿದರೆ, ನನ್ನ ಪ್ರಾಯೋಜಕತ್ವ ಇದೆ ಎಂದು ಶಶಿಧರ ಶೆಟ್ಟಿ ಹೇಳಿದಾಗ ವಿದ್ಯಾರ್ಥಿಗಳ ಕರತಾಡನ ಅನುರಣಿಸಿತು.


ಕಠಿಣ ಸ್ಥಿಯಲ್ಲಿನ ತನ್ನ ಆರಂಭಿಕ ಹೋರಾಟದ ಬದುಕು ಹಾಗೂ ಬದ್ಧತೆಯನ್ನು ಬಣ್ಣಿಸಿದ ಶೆಟ್ಟಿ ಅವರು, ‘ಯುವ ಮನಸ್ಸುಗಳಿಗೆ ಶಿಕ್ಷಣದ ಶಕ್ತಿಯನ್ನು ನೀಡುತ್ತಿರುವ ಡಾ.ಎಂ.ಮೋಹನ ಆಳ್ವ ಅವರ ಬದುಕು ನನಗೆ ಮಾದರಿ. ಅವರ ಶೈಕ್ಷಣಿಕ ಮಾದರಿ ಅನುಕರಣೀಯ’ ಎಂದು ಕೊಂಡಾಡಿದರು.

ಸಮುದಾಯದ ಕ್ಷೇಮಾಭಿವೃದ್ಧಿ ಹಾಗೂ ಆರ್ಥಿಕ ಪ್ರಗತಿಗೆ ಬದ್ಧವಾಗಿದ್ದು, ಉದ್ಯಮದ ಮೂಲಕ ಸುಮಾರು 10 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಉದ್ಯೋಗ ಕಲ್ಪಿಸಿದ್ದೇನೆ ಎಂದರು.


‘ಬಾಲ್ಯದಲ್ಲಿ ಬಡತನದ ಕಾರಣ ಶಿಕ್ಷಣ ಪಡೆಯುವುದು ಕಷ್ಟಕರವಾಗಿತ್ತು. ಆದರೆ, ಎಲ್ಲರ ಬದುಕಿಗೆ ಶಿಕ್ಷಣವೇ ಮಾರ್ಗಸೂಚಿ. ಶಿಕ್ಷಣ ಮುಂದುವರಿಸುವ ಸಹಕಾರ ನೀಡುತ್ತೇನೆ’ ಎಂದರು.

‘ಜನರಿಗೆ ಪ್ರೀತಿ- ದಯೆಯಿಂದ ನೀಡಿದ ಆತಿಥ್ಯ, ಕಠಿಣ ಪ್ರರಿಶ್ರಮ ಹಾಗೂ ಇತರರ ಬದುಕಲ್ಲಿ ಧನಾತ್ಮಕ ಪರಿಣಾಮ ಬೀರಬೇಕು ಎಂಬ ಛಲವು ಉದ್ಯಮದ ಯಶಸ್ಸಿಗೆ ಕಾರಣ’ ಎಂದ ಅವರು, ‘ನೀವು ಪರೀಕ್ಷೆಯನ್ನೂ ಪ್ರೀತಿ- ಛಲದಿಂದ ಎದುರಿಸಿ’ ಎಂದರು.

ಪರಿಶ್ರಮ, ಶೈಕ್ಷಣಿಕ ಮೌಲ್ಯ ಹಾಗೂ ಸಾಮುದಾಯಿಕ ಬೆಂಬಲದ ಬಗೆಗಿನ ಶಶಿಧರ ಶೆಟ್ಟಿ ಅವರ ನಿಲುವು ಹಾಗೂ ನಡೆಯು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡಿತು.


ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಕಾಲೇಜಿನ ಪ್ರಾಂಶುಪಾಲ ಡಾ.ಪೀಟರ್ ಫೆರ್ನಾಂಡಿಸ್, ವಿದ್ಯಾರ್ಥಿ ಮುಖ್ಯ ಕ್ಷೇಮಪಾಲನಾಧಿಕಾರಿ ಪ್ರಣೀತ್, ಅಕಾಡೆಮಿಕ್ಸ್ ಡೀನ್ ಡಾ.ದಿವಾಕರ ಶೆಟ್ಟಿ, ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಶೆಟ್ಟಿ ಇದ್ದರು. ಕನಿಷ್ಕಾ ಶೆಟ್ಟಿ,  ಪ್ರತೀಕ್ಷಾ ಜೈನ್ ಕಾರ್ಯಕ್ರಮ ನಿರೂಪಿಸಿದರು. 


ಸಂವಾದ:

ಬಳಿಕ ನಡೆದ ಸಂವಾದದಲ್ಲಿ ‘ಉದಯೋನ್ಮುಖ ಉದ್ಯಮಶೀಲತೆ: ಯುವಜನತೆಯ ಮುನ್ನಡೆ’ ಕುರಿತು ಲೆಕ್ಸಾ ಲೈಟಿಂಗ್ ಟೆಕ್ನಾಲಜಿ ಪ್ರೈ.ಲಿ. ಕಾರ್ಯನಿರ್ವಾಹಕ ನಿರ್ದೇಶಕ ರೊನಾಲ್ಡ್ ಸಿಲ್ವನ್ ಡಿಸೋಜ, ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ.ಲಿ. ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಅಶ್ವತ್ಥ್ ಹೆಗ್ಡೆ, ಡಿಟೈಲಿಂಗ್ ಡೆವಿಲ್ಸ್‍ನ ಶಿಲ್ಪಾ ಘೋರ್ಪಡೆ ಅವರು ಅಭಿಪ್ರಾಯ ಮಂಡಿಸಿದರು. ಸುರತ್ಕಲ್ ಎನ್‍ಐಟಿಕೆ ಇನ್‍ಕ್ಯುಬೇಷನ್ ಸೆಂಟರ್ ಮುಖ್ಯಸ್ಥ ಡಾ. ಅರುಣ್ ಎಂ. ಇಸ್ಲೂರ್ ಸಂವಾದ ನಡೆಸಿಕೊಟ್ಟರು.


ಬಳಿಕ ಕಾಲೇಜಿನ ಆವರಣದಲ್ಲಿರುವ ಸ್ಟೆಲಿಯಂ, ಸ್ಟ್ರೀಕಾರ್ನ್, ಹೊಮ್ಸಾಕಾರ್ಟ್, ವಲ್ಕನ್ಸ್, ಆಳ್ವಾಸ್ ಇನ್ಫ್ರಾ360, ವಾಷಿಟೆಕ್ ಕಂಪನಿಗಳ ಘಟಕಗಳಿಗೆ ಭೇಟಿ ನೀಡಲಾಯಿತು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

'ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top