ಮಂಗಳೂರು: ತುಳುನಾಡು ಹೆಸರೇ ಸೂಚಿಸುವಂತೆ ತೌಳವ ಭಾಷಿಗರದ್ದೇ ನಾಡು. ಅದರ ರಕ್ಷಣೆ, ಬೆಳವಣಿಗೆಗೆ ನಾವೇ ಸತತ ಪ್ರಯತ್ನ ಪಡಬೇಕು. ಆ ನಿಟ್ಟಿನಲ್ಲಿ ಬಂಗಾರ್ ಪರ್ಬದ ಸಂಭ್ರಮದಲ್ಲಿರುವ ನಮ್ಮ ತುಳುಕೂಟ ಸಂಸ್ಥೆಯು ತುಳು ಮಾತೃ ಭಾಷೆಯ ನ್ನಾಡುವ ಎಸ್.ಎಸ್.ಎಲ್. ಸಿ. ಮತ್ತು ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿರುವ ಉಭಯ ಜಿಲ್ಲೆಯ ಪ್ರತಿಭಾನ್ವಿತರನ್ನು ಗೌರವಿಸುತ್ತಾ ಬರುತ್ತಿದ್ದು ಅವರಿಗೆ ಇನ್ನೂ ಭಾಷಾ ಪ್ರೇಮ ವೃದ್ಧಿಯಾಗಲು ಪ್ರೋತ್ಸಾಹಿಸುತ್ತಿದ್ದೇವೆ. ಈ ಬಾರಿ ಈ ಕಾರ್ಯಕ್ರಮವನ್ನು ಸರಕಾರಿ ಪ್ರೌಢಶಾಲೆಯಲ್ಲಿ ನಡೆಸುತ್ತಿದ್ದೇವೆ. ಇದರಿಂದ ಮುಂದಿನ ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಭಾನ್ವಿತರು ಮಾಡಿಬರಲು ಪ್ರೇರಣೆಯಾಗುತ್ತದೆ ಎಂದು ಕೂಟದ ಉಪಾದ್ಯಕ್ಷ ರೊ. ಜೆ.ವಿ.ಶೆಟ್ಟಿಯವರು ಹೇಳಿದರು.
ಅವರು ತುಳುಕೂಟ ಹಮ್ಮಿಕೊಂಡಿರುವ ತುಳು ಪ್ರತಿಭಾ ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.
ಮೇರಮಜಲು ಗ್ರಾಂ.ಪ.ನ ಮಾಜಿ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಎಂ. ಕರ್ಕೇರ ಅವರು ಮಾತನಾಡಿ, ಇದೊಂದು ಸ್ತುತ್ಯರ್ಹ ಕಾರ್ಯ. ತುಳುಕೂಟ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವುದರಿಂದ ಅವರಿಗೆ ತಮ್ಮ ಮಾತೃ ಭಾಷೆಯನ್ನು ಹೆಚ್ಚು ಹೆಚ್ಚು ಪ್ರೀತಿಸುವ ಗುಣ ಬೆಳೆಯುತ್ತದೆ. ತುಳು ಭಾಷೆ ನಮ್ಮೆಲ್ಲರನ್ನು ಒಗ್ಗೂಡಿಸುತ್ತದೆ. ಬೇರೆ ಬೇರೆ ದೇಶಗಳಲ್ಲಿರುವ ತುಳುವರಿಗೆ ಕೂಡಾ ಈ ಮೂಲಕ ಒಂದು ಉತ್ತಮ ಸಂದೇಶ ಹೋಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಮೇರಮಜಲು ಗ್ರಾ.ಪಂ.ನ ಅಧ್ಯಕ್ಷ ಚೆನ್ನಮ್ಮ ಶುಭ ಹಾರೈಸಿದರು. ಗ್ರಾಪಂ ಸದಸ್ಯರಾದ ಹರಿಣಾಕ್ಷಿ, ಸವಿತಾ ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ದೇವದಾಸ್, ಪಿ.ಎ. ಪೂಜಾರಿ. ಮುಖ್ಯೋಪಾಧ್ಯಾಯರಾದ ಟಿ. ಭಾಸ್ಕರ ರಾವ್ ಮುಖ್ಯ ಅತಿಥಿಗಳಾಗಿ ವೇದಿಕೆಯನ್ನು ಅಲಂಕರಿಸಿದರು.
ಚಂದ್ರಶೇಖರ ಸುವರ್ಣ ಶ್ರೀಮತಿ ಸುಜಾತಾ ಸುವರ್ಣ ಹಾಗೂ ಜೆ.ವಿ.ಶೆಟ್ಟಿ ಪ್ರತಿಭಾ ಪುರಸ್ಕಾರವನ್ನು ನಡೆಸಿಕೊಟ್ಟರು.
ವಿಜೇತ ವಿದ್ಯಾರ್ಥಿನಿ ಕು. ಶುಭೀಕ್ಷಾ (ಕೊಡ್ಮಾಣ್ ಸರಕಾರಿ ಪ್ರೌಢಶಾಲೆ), ಗಗನ್ ಜೆ. ಸುವರ್ಣ (ಕೆನರಾ ಪ.ಪೂ.ಕಾಲೇಜ್), ಮಾನಸ್, ಯಸ್.( ಪೂರ್ಣಪ್ರಜ್ಞ ಪ.ಪೂ.ಕಾಲೇಜ್, ಉಡುಪಿ) ಪ್ರತಿಭಾ ಪುರಸ್ಕಾರ ಪಡೆದರು. ಕೂಟದ ಸದಸ್ಯ ದಿನೇಶ್ ಕುಂಪಲ ವಿದ್ಯಾರ್ಥಿಗಳನ್ನು ಪರಿಚಯಿಸಿದರು.
ಪ್ರ.ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ನಿರ್ವಹಿಸಿದರೆ, ಶಿಕ್ಷಕಿ ನಿರ್ಮಲಾ ಧನ್ಯವಾದವಿತ್ತರು. ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಪ್ರಾರ್ಥನೆ ಹಾಡಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ತುಳು ಭಾಷಣ ಹಾಗೂ ತುಳು ಪದರಂಗಿತೊ ಎಂಬ ತುಳು ಹಾಡುಗಳನ್ನು ಹಾಡಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ