ದಶರಥನು ಸುಮಂತ್ರನ ಮೂಲಕ ರಾಮನನ್ನು ತನ್ರಮನೆಗೆ ಬರಹೇಳಿದನು. ಗುರು-ಪುರೋಹಿತರುಗಳಿಂದ,ರಾಜರುಗಳಿಂದ, ಸಚಿವರುಗಳಿಂದ,ಮಹಾಜನರು ಗಳಿಂದ ದಶರಥನ ಆಸ್ಥಾನ ತುಂಬಿತ್ತು.ಸುಮಂತ್ರನೊಡಗೂಡಿ ಬಂದ ರಾಮನನ್ನು ದಶರಥನು ಸೂಕ್ತವಾದ ಆಸನದಲ್ಲಿ ಕುಳಿತು ಕೊಳ್ಳಲು ಹೇಳಿದನು.ಬಳಿಕ ತುಂಬಿದ ಸಭೆಯಲ್ಲಿ ರಾಮನ ಯುವರಾಜ ಪಟ್ಟಾಭಿಷೇಕದ ವಿಷಯವನ್ನು ಅಧಿಕೃತವಾಗಿ ಘೋಷಿಸಿದನು.ನೆರೆದವರೆಲ್ಲರೂ ಹರ್ಷೋದ್ಗಾರ ಮಾಡಿದರು.
ಬಳಿಕ ರಾಮನು ತಾಯಿಯ ಬಳಿಗೆ ತೆರಳಿ ಸಿಹಿಸುದ್ದಿಯನ್ನು ಅವಳಿಗೆ ತಿಳಿಸಿ ಆಶೀರ್ವಾದವನ್ನು ಪಡೆದನು.ಕೌಸಲ್ಯೆಯ ಆನಂದಕ್ಕೆ ಪಾರವೇ ಇಲ್ಲದಂತಾಯಿತು.
ರಾಮನು ತನ್ನ ಅರಮನೆಗೆ ಸೇರಿ ಸೀತೆಯೊಂದಿಗೆ ಗೆಳೆಯರೊಂದಿಗೆ ಮಾತಾಡುತ್ತಿರುವಾಗ ಮತ್ತೊಮ್ಮೆ ಸುಮಂತ್ರನು ಬಂದು ತುರ್ತಾಗಿ ದಶರಥನು ಕರೆದ ಸಂದೇಶವನ್ನು ತಿಳಿಸಿದನು.ತಂದೆಯ,ರಾಜನ ಕರೆಗೆ ಓಗೊಟ್ಟು ರಾಮನು ದಶರಥನನ್ನು ಕಾಣಲು ತೆರಳಿದನು.ಅಲ್ಲಿ ದಶರಥನು-ನೀನು ಪರಿಪೂರ್ಣ ನು.ನಿನಗೆ ಹಿತವಚನಗಳನ್ನು ಹೇಳಬೇಕೆಂದಿಲ್ಲ, ಆದರೂ ಹೇಳುತ್ತೇನೆ ಎಂದು ಹಿತನುಡಿ ಗಳನ್ನು ಹೇಳಿ ನಾಳೆಯ ಪುಷ್ಯ ನಕ್ಷತ್ರದಲ್ಲಿ ನಿನಗೆ ಪಟ್ಟಾಭಿಷೇಕವಾಗಬೇಕು.ಅದಕ್ಕಾಗಿ ಈಗಿಂದೀಗಲೇ ಗುರು ವಸಿಷ್ಠರ ಮಾರ್ಗದರ್ಶನದಲ್ಲಿ ನೀನೂ ಸೀತೆಯೂ ವ್ರತ ನಿಯಮನಿಷ್ಠರಾಗಿ- ಎಂದು ಹೇಳಿದನು.
ಇಲ್ಲಿ ಕೆಲವು ಗಮನಾರ್ಹ ಅಂಶಗಳಿವೆ-
. ದಶರಥನು ತನ್ನ ವೃದ್ಧಾಪ್ಯ ಮತ್ತು ಅಂತಿಮ ದಿನಗಳ ಕುರಿತು ಹೇಳಿದ್ದು
. ಅವನಿಗೆ ಇರುಳು ದುಃಸ್ವಪ್ನಗಳು ಬೀಳುತ್ತಿರುವುದು
. ಒಳ್ಳೆಯ ಕೆಲಸಗಳಿಗೆ ಯಾವಾಗಲೂ ವಿಘ್ನಗಳು ಬರುತ್ತವೆ ಎಂದಿದ್ದು
.ಭರತನು ತನ್ನ ಸೋದರಮಾವನ ಮನೆಯಿಂದ ಹಿಂದಿರುಗುವ ಮೊದಲು ಯುವ ಪಟ್ಟಾಭಿಷೇಕ ಮುಗಿಯಬೇಕು ಎಂದಿದ್ದು
. ಮಹಾತ್ಮರೂ ಸೇರಿದಂತೆ ಮಾನವನ ಮನಸ್ಸು ಸ್ಥಿರವಲ್ಲ ಎಂದಿದ್ದು
.ಕೌಸಲ್ಯೆಯು ರಾಮನಲ್ಲಿ- ನೀನು ನನ್ನನ್ನೂ, ಸುಮಿತ್ರಾ ದೇವಿಯನ್ನೂ ಮತ್ತು ನಮ್ಮ ಜ್ಞಾತಿ-ಬಾಂಧವರನ್ನೂ ಧರ್ಮ ಮೂಲವಾದ ರಾಜ್ಯಭಾರದಿಂದ ಆನಂದಭರಿತರನ್ನಾಗಿ ಮಾತು-ಎಂದು ಆಶೀರ್ವದಿಸುವಾಗ ಕೈಕೇಯಿಯ ಪ್ರಸ್ತಾಪವಿಲ್ಲದ್ದು
.ರಾಮನು ಲಕ್ಷ್ಮಣನಲ್ಲಿ-ಲಕ್ಷ್ಮಣ ನನ್ನೊಡನೆ ನೀನೂ ಈ ರಾಜ್ಯವನ್ನು ಶಾಸನಮಾಡು.ನೀನು ನನ್ನ ಎರಡನೆಯ ಅಂತರಾತ್ಮ...-ಎಂದದ್ದು...
ಗುರು ವಸಿಷ್ಠರ ಮಾರ್ಗದರ್ಶನದಲ್ಲಿ ಸೀತಾರಾಮರು ಉಪವಾಸ ವ್ರತದ ಸಂಕಲ್ಪವನ್ನು ಮಾಡಿ ಕರ್ಮಾನುಷ್ಠಾನವನ್ನು ಕೈಗೊಂಡರು.
ರಾಮಸತಿ ಸೀತೆಯಿಂದ ತೊಡಗಿ ಅಯೋಧ್ಯೆಯ ಕಟ್ಟಕಡೆಯ ಪ್ರಜೆಯ ತನಕ ಎಲ್ಲರೂ ಪಟ್ಟಾಭಿಷೇಕದ ಮಹೋತ್ಸವದ ಸಿದ್ಧತೆಯಲ್ಲಿ ಅಯೋಧ್ಯೆಯಲ್ಲಿ ಸಂಭ್ರಮಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ