ಶ್ರಾವಣ ಮಾಸದಿ ಬರುವ ಸರ್ವಮಂಗಳೆಯ ಹಬ್ಬ- ವರಮಹಾಲಕ್ಷ್ಮಿಯ ಹಬ್ಬ

Upayuktha
0



"ಶುಕ್ಲೇ ಶ್ರಾವಣಿಕೇ ಮಾಸೇ ಪೂರ್ಣಿಮೋಪಾಂತ್ಯಭಾಗವೇ

ವರಲಕ್ಷ್ಮ್ಯಾ ವ್ರತಂ ಕಾರ್ಯಂ ಸರ್ವಸಿದ್ಧಿಪ್ರದಾಯಕಂ"


ಶ್ರಾವಣ ಮಾಸ ಎಂದರೆ ಹಬ್ಬಗಳ ಮಾಸ. ಹೆಣ್ಣು ಮಕ್ಕಳಿಗಂತೂ ಪ್ರಿಯವಾದ ಮಾಸ. ಪ್ರತಿಯೊಂದು ಹಬ್ಬದಲ್ಲೂ ಚೆನ್ನಾಗಿ ಅಲಂಕಾರ ಮಾಡಿಕೊಂಡು ಸಡಗರ ಸಂಭ್ರಮದಿಂದ ಖುಷಿಪಡುವ ಮಾಸ. ಎಲ್ಲಾ ಹಬ್ಬಗಳಲ್ಲಿ "ವರಮಹಾಲಕ್ಷ್ಮಿ ಹಬ್ಬ" ಎಂದರೆ ಎಲ್ಲರಿಗೂ ಬಹಳ ಪ್ರಿಯವಾದುದು. ಪ್ರತಿ ವರ್ಷ ಪೌರ್ಣಮಿಯ ಸಮೀಪದ ಶ್ರಾವಣ ಮಾಸದ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಸಂತಸ, ಸಂಭ್ರಮ, ಭಕ್ತಿ, ಶ್ರದ್ಧೆಯಿಂದ ಆಚರಿಸುತ್ತಾರೆ.


ನಿಜ ಶ್ರಾವಣ ಶುಕ್ಲಪೂರ್ಣಿಮೆ ದಿವಸ ಶುಕ್ರಗ್ರಹವು ಪೂರ್ವದಲ್ಲಿ ಬೆಳಗುತ್ತಿರುವ ಸಮಯದಲ್ಲಿ, ಅರ್ಥಾತ್ ಶುಕ್ರವಾರ, ಅಥವಾ ಶುಕ್ಲಪೂರ್ಣಿಮೆಯ ಅತಿ ಹತ್ತಿರದ ಶುಕ್ರವಾರದಂದು, ವರಲಕ್ಷ್ಮೀ ಆರಾಧನೆ ಮಾಡಬೇಕು ಎಂಬ ಶಾಸ್ತ್ರವಿಧಿ ಇದೆ.


ಸಮೃದ್ಧಿ, ಏಳ್ಗೆಯ ಸಂಕೇತವಾದ ಲಕ್ಷ್ಮೀದೇವಿಯನ್ನು ಮನೆಗೆ ಬರಮಾಡಿಕೊಳ್ಳುವ,  ಹಿಂದೂ ಧರ್ಮದಲ್ಲಿ ಸಂಪತ್ತಿನ ಅಧಿದೇವತೆಯೆಂದೇ ಕರೆಸಿಕೊಳ್ಳುವ ಲಕ್ಷ್ಮೀ ದೇವಿಯನ್ನು ಆರಾಧಿಸಿ ವಿಶೇಷ ವರ ಕೊಡು ಎಂದು ಬೇಡಿಕೆಯಿಡುವ ಈ ಹಬ್ಬ "ವರಮಹಾಲಕ್ಷ್ಮಿ ವ್ರತ"ವೆಂದು ಕರೆಸಿಕೊಳ್ಳುತ್ತದೆ. ಬಹುಮುಖ್ಯವಾಗಿ ಮನೆಯಲ್ಲಿನ ದಾರಿದ್ರ್ಯ, ಕಿರಿಕಿರಿ, ಅಸಮಾಧಾನವನ್ನು ತೊಲಗಿಸಿ ತಮ್ಮ ಕುಟುಂಬದ ಸುಖ ಸಮೃದ್ಧಿಗಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡುವ ಹಬ್ಬ.


ಒಮ್ಮೆ ದೂರ್ವಾಸ ಮುನಿಗಳ ಶಾಪದಿಂದ ಇಂದ್ರನು ರಾಜ್ಯಭ್ರಷ್ಟನಾಗಲು, ಸ್ವರ್ಗಲಕ್ಷ್ಮಿಯೂ ಸಹ ಸ್ವರ್ಗವನ್ನು ಬಿಟ್ಟು ವೈಕುಂಠವನ್ನು ಸೇರುತ್ತಾಳೆ. ಆಗ ಪರಮದುಃಖಾಕ್ರಾಂತರಾದ ದೇವತೆಗಳೆಲ್ಲರೂ ಚತುರ್ಮುಖ ಬ್ರಹ್ಮನನ್ನು ಮುಂದಿಟ್ಟುಕೊಂಡು ವೈಕುಂಠದಲ್ಲಿ ಪರಮಾತ್ಮನನ್ನು ಪ್ರಾರ್ಥನೆ ಮಾಡಿದರು. ಪರಮದಯಾಳುವಾದ ವಿಷ್ಣುವಿನ ಆಜ್ಞೆಯಂತೆ ದೇವತೆಗಳು ದಾನವರೊಡನೆ ಅಮೃತಕ್ಕಾಗಿ ಕ್ಷೀರಸಮುದ್ರವನ್ನು ಕಡೆದಾಗ ಆವಿರ್ಭವಿಸಿದವಳೇ ಶ್ರೀ ಮಹಾ ಲಕುಮಿ.


ನಿತ್ಯ ಶುದ್ಧ-ಬುದ್ಧ-ಮುಕ್ತಸ್ವರೂಪಳೂ, ನಿತ್ಯಸಿದ್ಧಳೂ ಆದ ಈ ಮಂಗಲದೇವತೆಯ ಮಹಿಮೆಯನ್ನು ವರ್ಣಿಸುವ ಶಾಸ್ತ್ರಗಳಲ್ಲಿ ಆಕೆಯನ್ನು ಕ್ಷೀರಸಮುದ್ರಸಂಭವೆ, ಸಮುದ್ರರಾಜನ ಪುತ್ರಿ, ಚಂದ್ರನ ತಂಗಿ, ಯಜ್ಞಕುಂಡದಲ್ಲಿ ಉದ್ಭವವಾದವಳು, ಕಮಲದಲ್ಲಿ ಆವಿರ್ಭವಿಸಿದವಳು ಎಂದೆಲ್ಲ ಹಾಡಿ ಹೊಗಳುವರು.


ಲಕ್ಶ್ಮೀ ಎಂದಾಕ್ಷಣ ಹಣ ಅಥವಾ ಐಶ್ವರ್ಯವಷ್ಟೇ ಅನುಗ್ರಹಿಸುವ ದೇವತೆ ಎಂಬುದು ಹಲವರ ನಂಬಿಕೆ. ಆದರೆ ಲಕ್ಶ್ಮೀ ಅಂದರೆ ವಿದ್ಯೆ ನೀಡುವವಳು, ಮನೆಯಲ್ಲಿ ಧಾನ್ಯದ ಸಮೃದ್ಧಿ ಕೊಡುವವಳು, ಒಟ್ಟಾರೆ ಅಷ್ಟ ಲಕ್ಷ್ಮಿ ಸ್ವರೂಪದಲ್ಲಿ ಬದುಕಿನ ಏಳ್ಗೆಗೆ, ಸಮೃದ್ಧಿಗೆ ಏನೇನು ಬೇಕೋ ಎಲ್ಲವನ್ನೂ ದಯ ಪಾಲಿಸುವ ಮಹಾತಾಯಿ ಆಕೆ.


ಸಕಲ ಶುಭವನ್ನು ನೀಡುವ ವರಮಹಾಲಕ್ಷ್ಮಿಯ ವ್ರತಾಚರಣೆ ಬಗ್ಗೆ ಭವಿಷ್ಯೋತ್ತರ ಪುರಾಣದಲ್ಲಿ ಸ್ವತಃ ಪರಶಿವನೇ ತಿಳಿಸಿಕೊಟ್ಟಿದ್ದಾನೆ. ವರಮಹಾಲಕ್ಷ್ಮೀ ವ್ರತಾಚರಣೆಯ ಬಗ್ಗೆ ನಿಮಗೆ ಗೊತ್ತಿಲ್ಲದ್ದೇನಲ್ಲ, ಅದನ್ನು ಮತ್ತೆ ಸ್ಮರಿಸುವ ಬನ್ನಿ...


ವರಮಹಾಲಕ್ಷ್ಮಿ ಆಚರಣೆಗೆ ಸಂಬಂಧಿಸಿದಂತೆ ಪುರಾಣದಲ್ಲಿ ಒಂದು ಕಥೆಯಿದೆ. ಮಹಿಳೆಯರು ತಮ್ಮ ಕುಟುಂಬದ ಸುಖಸಮೃದ್ಧಿಗೆ ಏನು ಮಾಡಬೇಕು? ಎಂದು. ಶಿವನಲ್ಲಿ ಒಮ್ಮೆ ಪಾರ್ವತಿದೇವಿ ಪ್ರಶ್ನೆಯೊಂದನ್ನು ಕೇಳಿದಾಗ.


ಆಗ ಚಾರುಮತಿ ಕಥೆಯನ್ನು ಶಿವ ಹೇಳುತ್ತಾನೆ. ಮಗಧ ದೇಶದಲ್ಲಿ ಸದ್ಗುಣದ ಪ್ರತೀಕದಂತಿದ್ದ ಚಾರುಮತಿ ಎಂಬ ಮಹಿಳೆ ಪರಿಪೂರ್ಣ ಪತ್ನಿ, ಸೊಸೆ ಮತ್ತು ತಾಯಿಯಾಗಿದ್ದಳು. ಆಕೆಯ ನಿಷ್ಠೆ, ಭಕ್ತಿಯಿಂದ ಪ್ರಭಾವಿತಳಾದ ಲಕ್ಷ್ಮೀ ದೇವಿ ಒಂದು ದಿನ ಚಾರುಮತಿಯ ಕನಸಿನಲ್ಲಿ ಬಂದು ಶ್ರಾವಣ ತಿಂಗಳಲ್ಲಿ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರ ತನ್ನನ್ನು ಪೂಜಿಸುವಂತೆ ಹೇಳುವಳು. ನೀನು ಭಕ್ತಿಪೂರ್ವಕವಾಗಿ ಪೂಜಿಸಿದರೆ ಜೀವನದಲ್ಲಿ ಇಚ್ಛಿಸಿರುವುದನ್ನು ವರ ನೀಡುವೆನು ಎಂದು ಲಕ್ಷ್ಮೀ ದೇವಿ ಹೇಳುವಳು. ಅದರಂತೆಯೇ ಚಾರುಮತಿ ನೆರೆಹೊರೆಯವರು, ಸಂಬಂಧಿಗಳ ಸಮ್ಮುಖದಲ್ಲಿ ಪೂಜೆ ನೆರವೇರಿಸುವಳು. ಪೂಜೆ ನಂತರ ಚಾರುಮತಿ ಮನೆ ಬಂಗಾರದಂತೆ ಸಮೃದ್ಧವಾಯಿತು. ಅಂದಿನಿಂದ ವರಮಹಾಲಕ್ಷ್ಮಿ ಪೂಜೆಯನ್ನು ವಿವಾಹಿತ ಮಹಿಳೆಯರು ನೆರವೇರಿಸುವ ಪರಿಪಾಠ ಬೆಳೆದುಕೊಂಡು ಬಂದಿತು. ಕುಟುಂಬದ ಶ್ರೇಯಸ್ಸು, ಸಮೃದ್ಧಿಯಂಥ ವರವನ್ನು ಕೊಡು ತಾಯಿ ಎಂದು ಮನೆ ಮಹಿಳೆಯರು ಪೂಜಿಸುವುದು ಪದ್ಧತಿಯಾಯಿತು.


ಇನ್ನು ವ್ರತದ ಬಗ್ಗೆ ಹೇಳಬೇಕೆಂದರೆ, ಒಮ್ಮೆ ವರಲಕ್ಷ್ಮಿ ವ್ರತ ಮಾಡಿದರೆ ಅಷ್ಟಲಕ್ಷ್ಮಿಯರಿಗೆ ಪೂಜೆ ಸಲ್ಲಿಸಿದಷ್ಟು ಫಲ ಸಿಗುತ್ತದೆಂದು ಹೇಳುತ್ತಾರೆ. ಪೂಜೆಯಲ್ಲಿ ಹೊಸದಾದ  12 ಎಳೆ ದಾರಗಳಿಗೆ 12 ಗಂಟುಗಳನ್ನು ಹಾಕಿ, ಅದನ್ನು ಸ್ವಲ್ಪ ನೀರಿನಲ್ಲಿ ನೆನೆಸಿ ಅರಿಶಿನ ಹಚ್ಚಿ ದೇವಿಯ ಪಕ್ಕದಲ್ಲಿರಿಸಿ  ಈ ದಾರಗಳಿಗೆ ಅರಿಶಿನ, ಕುಂಕುಮ, ಹೂವು, ಪತ್ರೆಗಳಿಂದ ಪೂಜಿಸಿ, ನೈವೇದ್ಯ ಮಾಡುವರು. ರಮೆ, ಸರ್ವಮಂಗಳೆ, ಕಮಲವಾಸಿನೆ, ಮನ್ಮಥ ಜನನಿ, ವಿಷ್ಣುವಲ್ಲಭೆ, ಕ್ಷೀರಾಬ್ಧಿಕನ್ಯಕೆ, ಲೋಕಮಾತೆ, ಭಾರ್ಗವಿ, ಪದ್ಮಹಸ್ತೆ, ಪುಷ್ಪೆ, ತುಷ್ಟೆ ಮತ್ತು ವರಲಕ್ಷ್ಮಿ ಎಂಬ  ದ್ವಾದಶನಾಮಾವಳಿಯಿಂದ ಭಕ್ತಿ ಭಾವದಿಂದ ಉಚ್ಚರಿಸಿ ಪೂಜಿಸುವರು.


ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ  ಕಡಲೆಬೇಳೆಯಿಂದ ತಯಾರಿಸಿದ ಹಯಗ್ರೀವ, ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ.


ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಹೇಳುವ ಮಾತೆಂದರೆ, ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ತಾಂಡವವಾಡುತ್ತಾಳೆ ಎಂದು ಎಲ್ಲದಕ್ಕಿಂತ ಇಲ್ಲಿ ಭಕ್ತಿ ಹಾಗೂ ಶ್ರದ್ಧೆ ಮುಖ್ಯ.


ಈ ವರಮಹಾಲಕ್ಷ್ಮಿ ಹಬ್ಬದ ಮತ್ತೊಂದು ವಿಶೇಷತೆಯೇನೆಂದರೆ ಜಾತಿ, ಮತ, ಭೇದವಿಲ್ಲದೆ ಹಿಂದೂ ಧರ್ಮದ ಎಲ್ಲರೂ ಆ ತಾಯಿಯನ್ನು ವಿವಿಧ ರೀತಿಯಲ್ಲಿ ಪೂಜಿಸಿ ಅವಳನ್ನು ಆರಾಧಿಸುತ್ತಾರೆ. ಪೂಜೆಯ ನಂತರ ಶ್ರೀ ವರಮಹಾಲಕ್ಷ್ಮಿ ವ್ರತ ಕಥಾ ಶ್ರವಣ ಮಾಡಿದವರಿಗೆ ದಾರಿದ್ರ್ಯ ಕಳೆದು, ಆಯಸ್ಸು, ಆರೋಗ್ಯ, ಸಂಪತ್ತು, ಧನ, ಧಾನ್ಯಗಳೆಲ್ಲವೂ ಪ್ರಾಪ್ತಿಯಾಗುವುದೆಂಬ ನಂಬಿಕೆಯೂ ಇದೆ. ಎಷ್ಟೇ ಈ ನಮ್ಮ ಆಧುನಿಕ, ಪಾಶ್ಚಿಮಾತ್ಯ ಜೀವನ ನಮ್ಮನ್ನು ಆವರಿಸದರೂ ನಾವು ನಮ್ಮ ಸಂಪ್ರದಾಯ, ಪದ್ದತಿಗಳನ್ನು ಇನ್ನೂ ಉಳಿಸಿಕೊಂಡು ಬಂದಿದ್ದೇವೆ ಎನ್ನುವುದಕ್ಕೆ ಈ "ವರಮಹಾಲಕ್ಷ್ಮಿ" ಹಬ್ಬದ ಆಚರಣೆಯೇ ಸಾಕ್ಷಿ.


"ಸುವರ್ಣ ವೃದ್ಧಿಂ ಕುರು ಮೇ ಗೃಹೇ ಶ್ರೀ ,

ಸುಧಾನ್ಯ ವೃದ್ಧಿಂ ಕುರು ಮೇ ಗೃಹೇ ಶ್ರೀ,

ಕಲ್ಯಾಣ ವೃದ್ಧಿಂ ಕುರು ಮೇ ಗೃಹ ಶ್ರೀ,

ವಿಭೂತಿ ವೃದ್ಧಿಂ ಕುರು ಮೇ ಗೃಹ ಶ್ರೀ,


ನನ್ನ ಮನೆಯಲ್ಲಿ ಬಂಗಾರ ಹೆಚ್ಚಾಗಲಿ, ಓ ಲಕ್ಷ್ಮೀಯೇ,

ನನ್ನ ಮನೆಯಲ್ಲಿ ಧಾನ್ಯಗಳು ಹೆಚ್ಚಲಿ, ಓ ಲಕ್ಷೀ,

ನನ್ನ ಮನೆಯಲ್ಲಿ ಸಕಲ ರೀತಿಯ ಐಶ್ವರ್ಯವು 

ಹೆಚ್ಚಾಗಲಿ, ಓ ಲಕ್ಷ್ಮಿ,

ನನ್ನ ಮನೆಯಲ್ಲಿ ಸಮೃದ್ಧಿ ಹೆಚ್ಚಾಗಲಿ, ಓ ಲಕ್ಷ್ಮಿ"

ಎಂದು ಮನಸಾ ಪ್ರಾರ್ಥಿಸುತ್ತಾ.....


ಸಕಲರಿಗೂ ಸರ್ವ ಮಂಗಳೆಯಾದ ಶ್ರೀ ವರಮಹಾಲಕ್ಷ್ಮಿ ಸಕಲೇಶ್ವರ್ಯವನ್ನು ದಯಪಾಲಿಸಲಿ. ವರಮಹಾಲಕ್ಷ್ಮಿ ಶುಭ ಹಾರೈಕೆಗಳು.


-ಸೌಮ್ಯಸನತ್ 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top